ಆ್ಯಪ್ನಗರ

Puneeth: 'ಸಾಮ್ರಾಟನೊಬ್ಬನ ಸರಳತೆ ಕಂಡು ನಿಜಕ್ಕೂ ಆಶ್ಚರ್ಯವಾಯಿತು..'- ಸಂಭಾಷಣೆಕಾರ ಮಾಸ್ತಿ

ಪುನೀತ್‌ ರಾಜ್‌ಕುಮಾರ್‌ ಅಗಲಿ 2 ವರ್ಷಗಳು ಉರುಳಿವೆ. ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ಸಂಭಾಷಣೆಕಾರ ಮಾಸ್ತಿ ಅಪ್ಪು ಜತೆಗಿನ ಒಡನಾಟದ ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Vijaya Karnataka Web 29 Oct 2023, 8:09 am
ಮಾಸ್ತಿ, ಸಂಭಾಷಣೆಕಾರ
Vijaya Karnataka Web salaga movie dialogue writer maasthi writes about puneeth rajkumar
Puneeth: 'ಸಾಮ್ರಾಟನೊಬ್ಬನ ಸರಳತೆ ಕಂಡು ನಿಜಕ್ಕೂ ಆಶ್ಚರ್ಯವಾಯಿತು..'- ಸಂಭಾಷಣೆಕಾರ ಮಾಸ್ತಿ

ಅಪ್ಪು ಅವರು ಹೊಸ ಸಿನಿಮಾ ಮಾಡ್ತಿದಾರಂತೆ... ಅಪ್ಪು ಸಾರ್‌ ಸಿನಿಮಾ ಡೈರೆಕ್ಟರ್‌ ಅವರಂತೆ... ಅಪ್ಪು ಅವರ ಹಿರೋಯಿನ್‌ ಫಿಕ್ಸ್‌ ಆದ್ರಂತೆ. ಅಪ್ಪು ಅವರ ಪಾತ್ರ ಇಂತಹದ್ದಂತೆ... ಹೀಗೆ ಅಪ್ಪು ಅವರು ಸಿನಿಮಾದಲ್ಲಿ ನಟಿಸಲಿ, ಜಾಹೀರಾತಿನಲ್ಲೇ ನಟಿಸಲಿ, ಹಾಡಲಿ, ಕುಣಿಯಲಿ, ಹೋಟೆಲ್‌ಗೆ ಹೋಗಲಿ, ದೇವಸ್ಥಾನಕ್ಕೆ ಹೋಗಲಿ, ಸೈಕ್ಲಿಂಗ್‌ ಮಾಡಲಿ, ಟ್ರೆಕ್ಕಿಂಗ್‌ ಹೋಗಲಿ.. ಏನೇ ಮಾಡಿದ್ರು ಅದು ಅವರ ಅಭಿಮಾನಿಗಳ ಪಾಲಿಗೆ ಹಬ್ಬ! ಅವರ ಪ್ರತಿ ಆಗುಹೋಗನ್ನೂ ಹಿಂಬಾಲಿಸುತ್ತಿದ್ದರು.

ಅಭಿಮಾನ ಅಂದ್ರೆ ಹೀಗೆಲ್ಲಇರುತ್ತಾ ಅನ್ನೋ ಹಾಗೆ ಸದಾ ಅವರಿದ್ದಲ್ಲಿ ಒಂದು ಗುಂಪು ರಚನೆಯಾಗುತ್ತಿತ್ತು! ಅದು ಅವರು ಬಿಸಿಲಿನಲ್ಲಿ ನಿಂತಿದ್ರೆ ಅವರ ನೆರಳೂ ಕಾಣದ ಹಾಗೆ, ಮಳೆಯಲ್ಲಿ ನಿಂತರೆ ಬಟ್ಟೆಯ ಒಂದಿಂಚೂ ನೆನೆಯದ ಹಾಗೆ, ಚಳಿಯಲ್ಲಿ ನಿಂತರೆ ಬೆವರು ತೊಟ್ಟಿಕ್ಕುವ ಹಾಗೆ! ಮುತ್ತುವುದು ಅಂದ್ರೆ ಅಂತಿಂಥ ಬಗೆಯಲ್ಲಲ್ಲ, ಬೆಲ್ಲಕ್ಕೆ ಇರುವೆಗಳು ಮುತ್ತುವ ಹಾಗೆ. ಅಭಿಮಾನದ ಪರಾಕಾಷ್ಠೆಯದು!

​ಇದು ಅದೃಷ್ಟವಲ್ಲ ದುರದೃಷ್ಟ

ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಿ ಲೈಫ್‌ಲೈನ್‌ ನೀಡುತ್ತಿದ್ದ ಅಪ್ಪುವಿಗೆ ಆ ದೇವರು ಒಂದೂ ಲೈಫ್‌ ಲೈನ್‌ ನೀಡದೇ ತನ್ನೊಂದಿಗೆ ಕರೆದೊಯ್ದಿದ್ದು ದೊಡ್ಡ ವಿಪರ್ಯಾಸ ಅನ್ನಿಸಿತು! ಚಿತ್ರರಂಗದ ಪ್ರತಿಯೊಬ್ಬ ಬರಹಗಾರನಿಗೂ ಪುನೀತ್‌ರವರಿಗೊಂದು ಕಥೆ ಬರೆಯಬೇಕು, ಅವರ ಚಿತ್ರಕ್ಕೆ ಸಂಭಾಷಣೆ ಬರೆಯಬೇಕು ಅನ್ನೋ ಮಹದಾಸೆ ಇರುತ್ತದೆ. ಯಾರಾದರೂ ಅವರ ಬಗ್ಗೆ ಬರೆದು ಕೊಡಿ ಎಂದರೂ ಅದೊಂದು ಸಂಭ್ರಮದ ವಿಚಾರವೇ ಸರಿ. ನನಗೀಗ ಅವರ ಬಗ್ಗೆ ಬರೆಯಲು ಅವಕಾಶ ಸಿಕ್ಕಿದೆ. ಆದರೆ ಇದು ಅದೃಷ್ಟವಲ್ಲ ದುರದೃಷ್ಟ, ಸಂಭ್ರಮವಲ್ಲ. ಸೂತಕ ಇದಕ್ಕೆ ಕಾರಣ.

ಪುನೀತ್ ರಾಜ್‌ಕುಮಾರ್ ಪುಣ್ಯ ಸ್ಮರಣೆ; 30 ಸಾವಿರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

​ಅಪ್ಪು ಸರ್ ನನ್ನ ಬಾಲ್ಯದ ಹೀರೋ

ಒಮ್ಮೆ ಪುನೀತ್‌ ಅವರ ಮ್ಯಾನೇಜರ್‌ ಕರೆ ಮಾಡಿ, 'ನಾಳೆ ರಾಕ್‌ಲೈನ್‌ ಸ್ಟುಡಿಯೋಗೆ ನೀವು ಬರಲು ಸಾಧ್ಯವೆ? ಅಪ್ಪು ಅವರು ನಿಮ್ಮ ಜತೆ ಮಾತನಾಡಬೇಕಂತೆ' ಎಂದರು. ನಾನು ಖಂಡಿತ ಬರುತ್ತೇನೆ ಎಂದು ಸಮಯಕ್ಕೆ ಸರಿಯಾಗಿ ಹೋದೆ. ಹುಡುಗನೊಬ್ಬ ಕ್ಯಾರವ್ಯಾನಿನ ಬಾಗಿಲು ತೆರೆದು ಒಳಬಿಟ್ಟ. ಒಳ ಹೋಗುತ್ತಿದ್ದಂತೆ ಅಲ್ಲಿ ಕುಳಿತಿದ್ದ ಪುನೀತ್‌ ರಾಜ್‌ಕುಮಾರ್‌ ಖುದ್ದು ಎದ್ದು ಅಪ್ಪಿಕೊಂಡು ಬರಮಾಡಿಕೊಂಡರು. ಸಾಮ್ರಾಟನೊಬ್ಬನ ಸರಳತೆ ಕಂಡು ನಿಜಕ್ಕೂ ಆಶ್ಚರ್ಯವಾಯಿತು. ತುಂಬು ಆಪ್ತತೆಯಿಂದ ಜೊತೆಯಲ್ಲಿ ಕೂರಿಸಿಕೊಂಡು ತಿಂಡಿ ತಿನ್ನಿಸಿ ಕಾಫಿ ಕುಡಿಸಿ ಸರಿ ಸುಮಾರು ಮುಕ್ಕಾಲು ತಾಸು 'ಟಗರು' ಸಿನಿಮಾ ಸಂಭಾಷಣೆ ಬಗ್ಗೆ ಮಾತಾಡಿದರು. ನಿಮ್ಮ ಜೊತೆ ಕೆಲಸ ಮಾಡಬೇಕೆಂದು ಹೇಳಿದರು! 'ಹಾಗೇನಾದ್ರೂ ಸಾಧ್ಯವಾದ್ರೆ ಅದು ನನ್ನ ಅದೃಷ್ಟವಲ್ಲದೆ ಮತ್ತೇನಿಲ್ಲ. ನೀವು ನನ್ನ ಬಾಲ್ಯದ ಹೀರೋ. ನಾನು ಸಣ್ಣವನಿದ್ದಾಗಿನಿಂದಲೂ ನಿಮ್ಮನ್ನು ಸ್ಫೂರ್ತಿ ಅಂದುಕೊಂಡವನು' ಎಂದು ನನ್ನ ಮನದ ಮಾತನ್ನು ತಿಳಿಸಿದೆ. ಭೇಟಿಯ ನಂತರ ಇನ್ನೊಂದೆರಡು ದಿನದಲ್ಲಿ ನಿಮಗೆ ಫೋನ್‌ ಮಾಡ್ತೀವಿ ಅಂತ ಹೇಳಿದರು. ನಂತರ ಹೇಗೆ ಬಂದಿದ್ದೀರಾ, ಡ್ರಾಪ್‌ ಮಾಡಿಸ್ಲಾ ಎಂದರು. ತೊಂದರೆ ಇಲ್ಲ, ಹೊರಡ್ತೀನಿ ಅಂತ ಹೇಳಿ ಅಲ್ಲಿಂದ ಬಂದೆ.

Puneeth: 'ಅಪ್ಪು ಸರ್ ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ'- ನಟ ಶೈನ್ ಶೆಟ್ಟಿ

​ನಿರ್ದೇಶಕ ವೆಟ್ರಿಮಾರನ್‌ ಜತೆ ಸಿನಿಮಾ

ಪುನೀತ್‌ ಅವರು ಹೇಳಿದಂತೆ ಎರಡು ದಿನಗಳಲ್ಲಿ ಮತ್ತೆ ಕರೆ ಬಂತು. ಈ ಬಾರಿ ಸದಾಶಿವನಗರದ ಮನೆಗೆ ಹೋಗುವಂತೆ ಕರೆ ಬಂದಿತ್ತು. ನನಗಲ್ಲಿ ಮತ್ತೊಂದು ಆಶ್ಚರ್ಯ ಎದುರಾಯಿತು. ಅಪ್ಪು ಜತೆ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್‌ ಕುಳಿತಿದ್ದರು. ಅವರಿಗೆ ನನ್ನನ್ನು ಪರಿಚಯಿಸಿದರು. ಪುನೀತ್‌ ಅವರಿಗೆ ವೆಟ್ರಿಮಾರನ್‌ ಸಿನಿಮಾ ಮಾಡುವ ಬಗ್ಗೆ ಅಲ್ಲಿ ಚರ್ಚೆಯಾಗುತ್ತಿತ್ತು. ಅದರ ಸಂಭಾಷಣೆ ಕೆಲಸ ನಾನು ಮಾಡಬೇಕು ಎಂಬುದು ಅಪ್ಪು ಸರ್‌ ಆಸೆಯಾಗಿತ್ತು. ಅದನ್ನು ವೆಟ್ರಿಮಾರನ್‌ಗೂ ಅಪ್ಪು ಹೇಳಿದರು. ಆದರೆ ಅದ್ಯಾಕೋ ಆ ಸಿನಿಮಾ ಸೆಟ್ಟೇರಲಿಲ್ಲ. ನನಗೆ ಪುನೀತ್‌ರ ಸಿನಿಮಾಗೆ ಕೆಲಸ ಮಾಡುವ ಭಾಗ್ಯ ಸಿಗಲಿಲ್ಲ. ಆದರೆ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಫ್ಯಾಮಿಲಿ ಪ್ಯಾಕ್‌' ಚಿತ್ರಕ್ಕೆ ಸಂಭಾಷಣೆ ಬರೆಯುವ ಅವಕಾಶ ದೊರೆಯಿತು.

ಪುನೀತ್ ಪುಣ್ಯಸ್ಮರಣೆ; 'ದೊಡ್ಮನೆ' ಅಭಿಮಾನಿಗಳಿಗೆ ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ

​ನಮಗೆ ಪವರ್‌ ಕಂಡುಹಿಡಿದಿದ್ದು ಮಾತ್ರ ನಮ್‌ ಅಣ್ಣಾವ್ರೇ

ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬಕ್ಕೆ ನನ್ನ ಫೇಸ್‌ಬುಕ್‌ ಖಾತೆಯಲ್ಲಿ, 'ಜಗತ್ತಿಗೆ ಕರೆಂಟ್‌ ಕಂಡುಹಿಡಿದಿದ್ದು ವಿಜ್ಞಾನಿಗಳೇ ಇರಬಹುದು. ಆದ್ರೆ ನಮಗೆ ಪವರ್‌ ಕಂಡುಹಿಡಿದಿದ್ದು ಮಾತ್ರ ನಮ್‌ ಅಣ್ಣಾವ್ರೇ' ಎಂದು ಹಾಕಿದ ಪೋಸ್ಟ್‌ ಗೆಳೆಯರ ಮೂಲಕ ಅವರನ್ನು ತಲುಪಿ ಅಪ್ಪು ಅವರು ಖುಷಿಯಾಗಿದ್ದರು ಎಂಬುದು ತಿಳಿದಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಇದರ ಜತೆಗೆ ಯಾವುದೇ ಸಿನಿಮಾ ಸೆಟ್‌ನಲ್ಲಿ, ಸುದ್ದಿಗೋಷ್ಠಿಗಳಲ್ಲಿ ಸಿಕ್ಕರೂ, 'ಮಾಸ್ತಿ ಹೇಗಿದ್ದೀರಾ.. ಸಿನಿಮಾದ ಆ ಡೈಲಾಗ್‌ ಚೆನ್ನಾಗಿದೆ ಈ ಡೈಲಾಗ್‌ ಚೆನ್ನಾಗಿದೆ' ಎನ್ನುತ್ತಿದ್ದರು. 'ಸಲಗ' ಸಿನಿಮಾ ಪ್ರಿ-ರಿಲೀಸ್‌ ಈವೆಂಟ್‌ನಲ್ಲಿ ಸಿಕ್ಕಾಗಲೂ ಅವರು ಮಾತನಾಡಿದರು. ಅವರ ಅಗಲಿಕೆಯಿಂದ ಅಪ್ಪು ಸರ್‌ ಸಿನಿಮಾಗೆ ಸಂಭಾಷಣೆ ಬರೆಯಬೇಕು ಎನ್ನುವ ಆಸೆ ಮನದಲ್ಲಿ ಹಾಗೇ ಉಳಿಯುವಂತಾಯಿತು.

ಕಾವೇರಿ ನದಿಯಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ ತರ್ಪಣ ಬಿಟ್ಟ ನಟ ವಿನೋದ್ ರಾಜ್

Video-'ದೊಡ್ಮನೆ' ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಿದ ಡಾ. ರಾಜ್ ಕುಟುಂಬ

Video-ಪುನೀತ್ ಪುಣ್ಯಸ್ಮರಣೆ: ಅಭಿಮಾನಿ ದೇವರುಗಳಿಗೆ ಊಟ ಬಡಿಸಿದ ಶಿವಣ್ಣ, ರಾಘಣ್ಣ, ಅಶ್ವಿನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌