ಆ್ಯಪ್ನಗರ

ನವೀನ್ ಸಜ್ಜು ಬರ್ತಡೇಗೆ ಸುದೀರ್ಘ ಪತ್ರ ಬರೆದ 'ಸಲಗ' ಸಿನಿಮಾ ಖ್ಯಾತಿಯ ದುನಿಯಾ ವಿಜಯ್!

ಇಂದು ಬಿಗ್‌ ಬಾಸ್ ಕನ್ನಡ ಸೀಸನ್ 6 ರನ್ನರ್‌ ಅಪ್, ಗಾಯಕ ನವೀನ್ ಸಜ್ಜು ಅವರಿಗೆ ಹುಟ್ಟಿದ ಹಬ್ಬದ ಸಂಭ್ರಮ. ಹೀಗಾಗಿ ಇವರ ಬಗ್ಗೆ 'ಸಲಗ' ಸಿನಿಮಾದ ನಟ ದುನಿಯಾ ವಿಜಯ್ ಅವರು ಶುಭ ಕೋರಿದ್ದಾರೆ.

Vijaya Karnataka Web 27 Jul 2020, 2:37 pm
ಇಂದು ಗಾಯಕ ನವೀನ್ ಸಜ್ಜು ಅವರಿಗೆ ಹುಟ್ಟುಹಬ್ಬದ ಸಂಭ್ರಮ. 'ಥಮ ಥಮ ಥಮ ತಮಟೆ' ಹಾಡಿನ ಮೂಲಕ ಖ್ಯಾತಿ ಪಡೆದಿದ್ದ ನವೀನ್ ಸಜ್ಜು ಅವರು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. 'ಬಿಗ್ ಬಾಸ್ ಕನ್ನಡ ಸೀಸನ್ 6'ರಲ್ಲಿ ಭಾಗವಹಿಸಿದ್ದ ನವೀನ್ ಸಜ್ಜು 99 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು, ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಹಲವರಿಗೆ ನವೀನ್ ಸಜ್ಜು ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂಬ ಆಸೆಯಿತ್ತು. ಈ ಮನೆಯಲ್ಲಿ ಇದ್ದಷ್ಟು ದಿನ ತುಂಬ ಚೆನ್ನಾಗಿ ಆಟ ಆಡುತ್ತ, ಎಲ್ಲರ ಜೊತೆ ನವೀನ್ ಬೆರೆತಿದ್ದರು. ಇವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟ ದುನಿಯಾ ವಿಜಯ್ ಅವರು ನವೀನ್ ಸಜ್ಜು ಅವರ ಬರ್ತಡೇಗೆ ಸುದೀರ್ಘವಾದ ಪತ್ರ ಬರೆದು ಶುಭಾಶಯ ಕೋರಿದ್ದಾರೆ.
Vijaya Karnataka Web salaga movie fame duniya vijay wishes to naveen sajju on his birthday
ನವೀನ್ ಸಜ್ಜು ಬರ್ತಡೇಗೆ ಸುದೀರ್ಘ ಪತ್ರ ಬರೆದ 'ಸಲಗ' ಸಿನಿಮಾ ಖ್ಯಾತಿಯ ದುನಿಯಾ ವಿಜಯ್!


ನವೀನ್‌ ಸಜ್ಜುಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ದುನಿಯಾ ವಿಜಯ್ ಬರೆದ ಪತ್ರ ಇಲ್ಲಿದೆ!
ನವೀನ್ ಸಜ್ಜು ಎಲ್ಲರಿಗೂ ಗಾಯಕನಾದರೆ ನನಗೆ ತುಂಬ ಆತ್ಮೀಯ ಸ್ನೇಹಿತ. ಲಾಕ್‌ಡೌನ್ ಬಳಿಕ ಇತ್ತೀಚೆಗಷ್ಟೇ ಸೋಶಿಯಲ್ ಡಿಸ್ಟೆನ್ಸ್ ಇಟ್ಟುಕೊಂಡು ಭೇಟಿಯಾದೆವು. ಡಿಸ್ಟೆನ್ಸ್ ಏನಿದ್ದರೂ ದೇಹಗಳಿಗೆ ಹೊರತು ಮನಸುಗಳಿಗಲ್ಲವಲ್ಲ? ಹಾಗಾಗಿ ಹಳೆಯ ದಿನಗಳನ್ನು ಮೆಲುಕು ಹಾಕಿದೆವು. ಮುಂದೆ ಏನು ಎನ್ನುವುದು ನಮ್ಮ ಕೈಯ್ಯಲ್ಲಿಲ್ಲ. ಆದರೆ ಆ ಹುಡುಗನ ಫ್ಲ್ಯಾಷ್ ಬ್ಯಾಕ್ ಕುರಿತಾದ ಮಾತು ಕೇಳುವಾಗ ನನಗೆ ಕಣ್ಣಲ್ಲಿ ನೀರು ಬಂತು. ಯಾಕೆಂದರೆ ಆತ ಬೆಳೆದು ಬಂದ ದಾರಿಯಲ್ಲಿ ಅಷ್ಟೊಂದು ಕಷ್ಟಗಳನ್ನು ಅನುಭವಿಸಿದ್ದಾನೆ. ಆದರೆ ಇಂದು ಆತ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಬೆಳೆದಿದ್ದಾನೆ.

"ಒಳಿತು ಮಾಡು ಮನುಷ್ಯ.. ನೀನು ಇರೋದು ಮೂರು ದಿವಸಾ.." ಹಾಡು ಆತನ ಮೂಲಕ ನೀವು ಕೂಡ ಕೇಳಿರುತ್ತೀರ. ಪಲ್ಲವಿ ಶುರುವಾಗುತ್ತಲೇ ನಮಗೆ ಹಾಡಿನ ಸರಿಗಮಪದನಿಸ ಮರೆಯುತ್ತದೆ. ಯಾಕೆಂದರೆ ನಮ್ಮ ಮನಸು ಹಾಡಿನೊಂದಿಗೆ ಬೆರೆಯುತ್ತದೆ. ಅದಕ್ಕೆ ಕಾರಣ ಆ ಹಾಡಿನಲ್ಲಿ ಜೀವನದ ಅರ್ಥವಿದೆ. ಹಾಡುವ ನವೀನ್ ಕಂಠದಲ್ಲಿ ಎಲ್ಲ ಅನುಭವಗಳ ಪರಮಾರ್ಥವಿದೆ! ಗಾಯಕನಾಗಿಯೇ ಹಳೆಯ ನೋವುಗಳನ್ನೆಲ್ಲ ಮಾಯ ಮಾಡುತ್ತಾನೆ. ಆತನಿಗೆ ಇನ್ನೂ ದೊಡ್ಡ ಯಶಸ್ಸು ಸಿಗಬೇಕು.

Also Read-ಹುಟ್ಟುಹಬ್ಬದ ದಿನವೇ ವಿವಾದ ಮೈಮೇಲೆಳೆದುಕೊಂಡ ದುನಿಯಾ ವಿಜಯ್; ಅದು ತಲ್ವಾರ್ ವಿಚಾರಕ್ಕೆ!!!

ನನಗಂತೂ ಆತ ನಮ್ಮನೆ ಮಗನಂತೆ ಅನಿಸುತ್ತಾನೆ. ಒಂದು ರೀತಿ ಆತ ನನಗೆ ತಮ್ಮನಂತೆ. ನನ್ನದೇ `ಕನಕ' ಚಿತ್ರದ ಮೂಲಕ ಸಂಗೀತ ನಿರ್ದೇಶಕನಾದ. ಇದೀಗ `ಸಲಗ' ಚಿತ್ರದ ಸಂಗೀತ ನಿರ್ದೇಶನದಲ್ಲಿಆತನದೂ ಪಾಲಿದೆ. ನಾನು ಬರೆದು ನವೀನ್ ಹಾಡಿರುವ `ಸೂರಿ ಅಣ್ಣಾ..' ಗೀತೆ ಈಗಾಗಲೇ ಜನಪ್ರಿಯವಾಗಿದೆ. ನಾನು ಸಲಗ ಆದರೆ ಆತ ನನ್ನ ಬಳಗ. ಅಂಥ ನವೀನನಿಗೆ ಸಾಗುವ ದಾರಿಯಲ್ಲೆಲ್ಲ ಯಶಸ್ಸು ಸಿಗುತ್ತಿರಲಿ ಎಂದು ಆತನಿಗೆ ಜನ್ಮದಿನದ ಸಂದರ್ಭದಲ್ಲಿ ಪ್ರೀತಿ ಪೂರ್ವಕವಾಗಿ ಹಾರೈಸುತ್ತೇನೆ.

Also Read-ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಕುರಿತ ಇಂಟರೆಸ್ಟಿಂಗ್ ವಿಚಾರಗಳಿವು !

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌