ಆ್ಯಪ್ನಗರ

ಇಂಥ ಸಿನಿಮಾ ನಟರನ್ನು ಜನರು ಆರಾಧಿಸಬೇಕೇ? ಜಗ್ಗೇಶ್‌ ಕೊಟ್ಟ ಅನುಭವದ ಉತ್ತರ ಇಲ್ಲಿದೆ ನೋಡಿ...

ತೆರೆಮೇಲೆ ಹೀರೋ ಆಗಿ ಕಾಣುವ ಎಷ್ಟೋ ಕಲಾವಿದರು ವೈಯಕ್ತಿಕ ಬದುಕಿನಲ್ಲಿ ಬೇರೆಯದೇ ಮುಖ ಇಟ್ಟುಕೊಂಡಿರುತ್ತಾರೆ. ಇಂಥವರನ್ನೆಲ್ಲ ಜನರು ಆರಾಧಿಸಬೇಕೇ ಎಂಬ ಪ್ರಶ್ನೆಗೆ ಜಗ್ಗೇಶ್‌ ಉತ್ತರ ನೀಡಿದ್ದಾರೆ.

Vijaya Karnataka Web 5 Sep 2020, 8:55 am
ಸಿನಿಮಾ ಕಲಾವಿದರನ್ನು ಮಾದರಿಯಾಗಿ ಸ್ವೀಕರಿಸುವ ರೂಢಿ ಮೊದಲಿನಿಂದಲೂ ಇದೆ. ಆದರೆ ಎಲ್ಲಾ ಕಲಾವಿದರು ಇಂಥ ಗೌರವಕ್ಕೆ ಪಾತ್ರರಾಗಿರುತ್ತಾರೆ ಎನ್ನಲು ಆಗದು. ಅದರಲ್ಲೂ ಈಗ ಚಂದನವನದಲ್ಲಿ ಡ್ರಗ್ಸ್‌ ದಂಧೆಯ ಕರಾಳ ಮುಖ ಬಯಲಾಗುತ್ತಿದ್ದು, ಸಿನಿಮಾ ನಟ-ನಟಿಯರ ಮೇಲೆ ಜನರು ಅನುಮಾನದ ದೃಷ್ಟಿ ಬೀರುವಂತಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ನಟ ಜಗ್ಗೇಶ್‌ ಅವರಿಗೆ ಒಂದು ಪ್ರಶ್ನೆ ಎತ್ತಿದ್ದಾರೆ.
Vijaya Karnataka Web ಜಗ್ಗೇಶ್‌


'ಸಿನಿಮಾ ನಟರನ್ನು ಅನುಸರಿಸುವುದು ಅಂದರೆ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವುದು ಸರೀನಾ..? ತಪ್ಪಾ..? ದಯವಿಟ್ಟು ರಿಪ್ಲೈ ಮಾಡಿ ತುಂಬಾನೇ ಗೊಂದಲದಲ್ಲಿ ಇದ್ದೀನಿ' ಎಂದು ಟ್ವಿಟರ್‌ನಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ 'ನವರಸ ನಾಯಕ' ಜಗ್ಗೇಶ್‌ ತುಂಬ ಸಮಂಜಸ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ವರ್ಷಗಳ ಅನುಭವದ ಆಧಾರದಿಂದ ಸೂಕ್ತವಾದ ಉತ್ತರವೇ ಜಗ್ಗೇಶ್‌ ಕಡೆಯಿಂದ ಬಂದಿದೆ.

'ಕೆಲವು ಕಲಾವಿದರನ್ನು ಚಪ್ಪಾಳೆಗಾಗಿ 2 ಘಂಟೆ ಬಳಸಿ, ಆನಂದಿಸಿ, ಮರೆತುಬಿಡಿ! ನಿಜವಾಗಿ ನೀವು ಅನುಸರಿಸಬೇಕಿರುವುದು ನಿಮ್ಮ ವಂಶದ ಹಿರಿಯರ ಹಾಗು ತಂದೆ-ತಾಯಿ ಶ್ರಮವನ್ನು. ನಿಮ್ಮ ಮುಂದಿನ ಬದುಕಿನ ಗೆಲುವಿಗೆ ಬೇಕಿರುವ ಜ್ಞಾನವನ್ನು. ನಿಮ್ಮ ವೈಯಕ್ತಿಕ ಕಷ್ಟಕ್ಕೆ ಯಾವ ಕಲಾವಿದರು ನನ್ನನ್ನೂ ಸೇರಿ ಬಂದು ಭುಜಕೊಡರು. ಕಾರಣ, ಅವರವರ ಬದುಕಿನ ಮೇಲೆ ಅವರ ಗಮನವಿರುತ್ತದೆ' ಎಂದು ಉತ್ತರಿಸಿದ್ದಾರೆ ಜಗ್ಗೇಶ್‌.

also read: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ಕಳಂಕ: ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಜಗ್ಗೇಶ್‌ ಹೇಳಿದ್ದು ಯಾರಿಗೆ?

ತುಂಬ ಕಷ್ಟಪಟ್ಟು ಬೆಳೆದು ಬಂದವರು ಎಂದಿಗೂ ಡ್ರಗ್ಸ್‌ ಸೇವನೆಯಂತಹ ಕೆಟ್ಟ ಹಾದಿ ತುಳಿಯುವುದಿಲ್ಲ ಎಂಬುದು ಜಗ್ಗೇಶ್‌ ಅಭಿಪ್ರಾಯ. ಆ ಬಗ್ಗೆ ಅವರು ಇತ್ತೀಚೆಗಷ್ಟೇ ಟ್ವೀಟ್‌ ಮಾಡಿದ್ದರು. '30 ಸಿನಿಮಾದಲ್ಲಿ ನಟಿಸಿದರೂ ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು, ಕೊಟ್ಟ ತಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿ ಸೀಮೆಎಣ್ಣೆಗೆ ಕ್ಯೂ ನಿಂತವರು ನಾವು. ಇಂದು 2 ಸಿನಿಮಾಗೆ ಕುಬೇರನ ಮಕ್ಕಳು! ಹೇಗೆ ಇಂಥ catch ನನಗೆ 57 ವರ್ಷಕ್ಕೂ ಅರ್ಥವಾಗಿಲ್ಲ. ಇದೆ 2015ರಿಂದ ಮೋಜು ಮಸ್ತಿ ಕುಸ್ತಿ ಸಿನಿಮಾ ಜೀವನ. ಅಂದು ಒಂದು ಮಾತಿಗೆ ಅಳುತ್ತಿದ್ದೆವು' ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

also read: ಸಂಭಾವನೆಗಾಗಿ ಭಿಕ್ಷುಕರಂತೆ ನಿರ್ಮಾಪಕರ ಮನೆ ಮುಂದೆ ಕಾದಿದ್ದೆವು: ನಟ ಜಗ್ಗೇಶ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌