ಸ್ಯಾಂಡಲ್ವುಡ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ ಶಿವರಾಜ್ಕುಮಾರ್ ಸಹ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ವಿಭಿನ್ನ ಕಥಾ ಹಂದರದ ಈ ಸಿನಿಮಾದ ಬಗ್ಗೆ ನಿರ್ದೇಶಕರು ಲವಲವಿಕೆಗೆ ಮಾಹಿತಿ ನೀಡಿದ್ದಾರೆ.
ಸ್ಯಾಂಡಲ್ವುಡ್ನ ಸಿಕ್ಕಾಪಟ್ಟೆ ಬಿಝಿ ನಟ ಯಾರು ಎಂದು ಯಾರನ್ನು ಕೇಳಿದರೂ ಸುಲಭವಾಗಿ ಹೇಳಬಲ್ಲ ಹೆಸರು ಹ್ಯಾಟ್ರಿಕ್ ಹೀರೋ ‘ಶಿವಣ್ಣ’. ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಂಡು ನಿರಂತರವಾಗಿ ಕೆಲಸ ಮಾಡುವುದು ಶಿವರಾಜ್ಕುಮಾರ್ ಅವರ ಶೈಲಿ. ಈಗಷ್ಟೇ ‘ಬೈರಾಗಿ’ ಸಿನಿಮಾ ಮುಗಿಸಿರುವ ಶಿವರಾಜ್ಕುಮಾರ್ ಅವರೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹೊಸದಾಗಿ ಒಪ್ಪಿಕೊಂಡಿರುವ ಈ ಸಿನಿಮಾವನ್ನು ಆರ್ ಜೈ ಎಂಬವರು ನಿರ್ದೇಶನ ಮಾಡುತ್ತಿದ್ದಾರೆ. ಉಪೇಂದ್ರ ನಟಿಸಿರುವ ‘ಬುದ್ಧಿವಂತ- 2’ ಸಿನಿಮಾವನ್ನು ಇದೇ ಆರ್ ಜೈ ನಿರ್ದೇಶನ ಮಾಡಿದ್ದಾರೆ. ಸದ್ಯ ಆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಶಿವಣ್ಣನ ಸಿನಿಮಾ ಆರ್ ಜೈಗೆ ಎರಡನೇ ಸಿನಿಮಾವಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿರುವುದು ಶಿವರಾಜ್ಕುಮಾರ್ ಕರಿಯರ್ ಗ್ರಾಫ್ನಲ್ಲಿ ಗಮನಾರ್ಹ.
ನಿರ್ದೇಶಕ ಆರ್ಜೈ ಹೇಳಿದ್ದೇನು?
‘20 ದಿನಗಳ ಹಿಂದಷ್ಟೇ ನಾನು ಶಿವಣ್ಣ ಅವರಿಗೆ ಕಥೆ ಹೇಳಿದ್ದೆ. ಅವರಿಗೆ ಬಹಳ ಇಷ್ಟವಾಗಿ ಒಪ್ಪಿಕೊಂಡಿದ್ದಾರೆ. ಸಂದೇಶ ಇರುವಂತಹ, ರೆಟ್ರೋ ಸ್ಟೈಲ್ನ ಸಿನಿಮಾವಿದು. 1970ರ ಕಾಲಘಟ್ಟದಲ್ಲಿ ರೌಡಿಸಂ ಹಿನ್ನೆಲೆಯ ಸಿನಿಮಾ ಇದಾಗಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳಿಗಾಗಿ ಬೇರೆ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರು ಹಿನ್ನೆಲೆಯನ್ನಿಟ್ಟುಕೊಂಡು ಈ ಕಥೆ ಬರೆಯಲಾಗಿದೆ. ಈ ಸಿನಿಮಾಗೆ ನೈಜ ಘಟನೆಗಳಿಂದ ಸ್ಫೂರ್ತಿ ದೊರೆತಿದೆ’ ಎಂದು ಹೇಳಿದರು ನಿರ್ದೇಶಕ ಜೈ.
ಸಿನಿಮಾಗಾಗಿ ಸೆಟ್
‘ಇಡೀ ಸಿನಿಮಾ ಮೇಕಿಂಗ್ ರೆಟ್ರೋ ಸ್ಟೈಲ್ನಲ್ಲಿ ಇದೆ. ಅದಕ್ಕಾಗಿ ಬೆಂಗಳೂರಿನ ಮಿನರ್ವ ಮಿಲ್, ಎಚ್ಎಂಟಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸೆಟ್ ಹಾಕುತ್ತೇವೆ. ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿಯೂ ಒಂದು ಸೆಟ್ ಹಾಕುವ ಬಗ್ಗೆ ಪ್ಲಾನ್ ಇದೆ. ಜತೆಗೆ ನಮ್ಮ ಕಥೆಗೆ ಹೊಂದಿಕೊಳ್ಳುವಂತಹ ರಿಯಲ್ ಜಾಗಗಳಲ್ಲಿಯೂ ಶೂಟ್ ಮಾಡುವ ಪ್ಲಾನ್ ಇದೆ. ಈ ಸಿನಿಮಾಗೆ ಆರ್. ಕೇಶವ್ ಎಂಬವರು ಬಂಡವಾಳ ಹೂಡುತ್ತಿದ್ದು, ಬಿಗ್ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾವಾಗುತ್ತದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕರು.
‘ಜೇಮ್ಸ್’ನಲ್ಲಿ ಒಂದಾದ ರಾಜ್ ಪುತ್ರರು: ಈಡೇರಿದ ಪಾರ್ವತಮ್ಮ ರಾಜ್ಕುಮಾರ್ ಕನಸು
ಟೈಟಲ್ ಲಾಂಚ್ ಯಾವಾಗ?
‘ಫೆಬ್ರವರಿ ತಿಂಗಳಿನಲ್ಲಿ ಫಸ್ಟ್ ಲುಕ್ ಮತ್ತು ಟೈಟಲ್ ಲಾಂಚ್ ಮಾಡಲು ಪ್ಲಾನ್ ಮಾಡಿಕೊಂಡಿದ್ದು, ಅದಾದ ನಂತರ ಚಿತ್ರೀಕರಣದ ದಿನಾಂಕವನ್ನು ಅನೌನ್ಸ್ ಮಾಡುತ್ತೇವೆ. ತಂತ್ರಜ್ಞರ ವಿವರನ್ನು ಸಹ ಫಸ್ಟ್ ಲುಕ್ ಲಾಂಚ್ ದಿನವೇ ತಿಳಿಸುತ್ತೇನೆ. ಕಲಾವಿದರಾರಯರು ಎಂಬ ವಿವರಗಳೂ ಸದ್ಯದಲ್ಲೇ ಬಹಿರಂಗಗೊಳ್ಳಲಿವೆ’ ಎಂದು ಹೇಳಿದರು ಜೈ.
'ಭರ್ಜರಿ ಆ್ಯಕ್ಷನ್ ಜತೆಗೆ ಸಮಾಜಕ್ಕೆ ಬೇಕಾದ ಸಂದೇಶ ಸಹ ಸಿನಿಮಾದಲ್ಲಿರುತ್ತದೆ. ಎಲ್ಲ ಭಾಷೆಗಳಿಗೂ ಸೂಕ್ತವಾಗುವಂತಹ ಕಥೆ ಆದ್ದರಿಂದ ಇದನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ' ಎಂದಿದ್ದಾರೆ ನಿರ್ದೇಶಕ ಆರ್ ಜೈ.
ಸಾಲು ಸಾಲು ಸಿನಿಮಾಗಳು
ಶಿವರಾಜ್ಕುಮಾರ್ ಅವರ ಕೈಯಲ್ಲಿಈಗ ‘ವೇದ’, ಹೊಸ ನಿರ್ದೇಶಕ ಕೊಟ್ರೇಶ್ ಅವರ ಸಿನಿಮಾ, ಯೋಗರಾಜ್ ಭಟ್ಟರ ಚಿತ್ರ ಹೀಗೆ ಹಲವು ಸಿನಿಮಾಗಳಿವೆ. ಸದ್ಯ ‘ವೇದ’ ಸಿನಿಮಾದ ಚಿತ್ರೀಕರಣದಲ್ಲಿ ಶಿವರಾಜ್ಕುಮಾರ್ ತೊಡಗಿಸಿಕೊಂಡಿದ್ದಾರೆ. ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ‘ವೇದ’ ಚಿತ್ರೀಕರಣದ ನಂತರ ಯೋಗರಾಜ್ ಭಟ್ ಸಿನಿಮಾ ಆರಂಭವಾಗಲಿದೆ.