ಆ್ಯಪ್ನಗರ

'ಗಾನ ಗಂಧರ್ವ' ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ವೆಂಟಿಲೇಟರ್‌ನಲ್ಲಿ ಮುಂದುವರಿದ ಚಿಕಿತ್ಸೆ

ಜನಪ್ರಿಯ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ.

Vijaya Karnataka Web 21 Aug 2020, 7:55 pm
ಗಾನ ಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ದೇಶಾದ್ಯಂತ ಕೋಟ್ಯಾನುಕೋಟಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಆತ್ಮೀಯರು, ಸಿನಿಪ್ರಿಯರು, ಚಿತ್ರರಂಗದ ಗಣ್ಯರು ಆತಂಕದಲ್ಲಿದ್ದಾರೆ. ಶುಕ್ರವಾರ (ಆ.21) ಕೂಡ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಗುರುವಾರದ ಸ್ಥಿತಿಯೇ ಇಂದು ಕೂಡ ಮುಂದುವರಿದಿದ್ದು, ಆರೋಗ್ಯ ಸ್ಥಿರವಾಗಿದೆ. ಈ ಕುರಿತು ಎಸ್‌ಪಿಬಿ ಪುತ್ರ ಚರಣ್‌ ಮಾಹಿತಿ ನೀಡಿದ್ದಾರೆ.
Vijaya Karnataka Web singer sp balasubrahmanyam health condition is stable
'ಗಾನ ಗಂಧರ್ವ' ಎಸ್‌ಪಿ ಬಾಲಸುಬ್ರಹ್ಮಣ್ಯಂಗೆ ವೆಂಟಿಲೇಟರ್‌ನಲ್ಲಿ ಮುಂದುವರಿದ ಚಿಕಿತ್ಸೆ


'ಆಸ್ಪತ್ರೆಯ ವೈದ್ಯರು ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಆದರೆ, ನಿನ್ನೆಯಂತೆಯೇ ಇಂದು ಕೂಡ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ. ಆಸ್ಪತ್ರೆಯ ಹೆಲ್ತ್ ಬುಲೆಟಿನ್‌ನಲ್ಲಿ ಆರೋಗ್ಯ ಗಂಭೀರ ಎಂಬ ಪದ ಬಳಸುವ ಬದಲು ಸ್ಥಿರ ಎಂದು ಹೇಳಿದ್ದಾರೆ. ಅದರರ್ಥ ತಂದೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದಲ್ಲ. ನಾವು ವೈದ್ಯಕೀಯ ತಂಡದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ನಮ್ಮ ತಂದೆಯ ಆರೋಗ್ಯಕ್ಕಾಗಿ ಎಲ್ಲೆಡೆ ಪ್ರಾರ್ಥನೆ ಮಾಡುತ್ತಿದ್ದೀರಿ. ನಮ್ಮ ಕುಟುಂಬದ ಪರವಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಅವರು ಗುಣಮುಖರಾಗಲು ತುಂಬ ಸಮಯ ಬೇಕು. ಆದರೆ, ಖಂಡಿತ ಗುಣಮುಖರಾಗಲಿದ್ದಾರೆ ಎಂಬ ನಂಬಿಕೆ ಇದೆ' ಎಂದು ಚರಣ್ ಹೇಳಿದ್ದಾರೆ.

ಇದಕ್ಕೂ ಮೊದಲು ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲಾಗಿತ್ತು. 'ಎಸ್‌ಪಿಬಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವೆಂಟಿಲೇಟರ್‌ನಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ನಮ್ಮ ಆಸ್ಪತ್ರೆಯ ನುರಿತ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ಗಮನವಿರಿಸಿದೆ' ಎಂದು ಮಾಹಿತಿ ನೀಡಿದೆ. ಇನ್ನು, ದೇಶಾದ್ಯಂತ ಅಭಿಮಾನಿಗಳಿಂದ ಎಸ್‌ಪಿಬಿ ಆರೋಗ್ಯಕ್ಕಾಗಿ ಪ್ರಾರ್ಥನೆ ಮುಂದುವರಿದಿದೆ. ಗುರುವಾರ (ಆ.20) ಸಂಜೆ 6 ಗಂಟೆಗೆ ಎಸ್‌ಪಿಬಿ ಹಾಡುಗಳನ್ನು ಹಾಡುವ ಮೂಲಕ ಪ್ರಾರ್ಥನೆ ಮಾಡಲಾಗಿತ್ತು.

ರಜನಿಕಾಂತ್, ಎ.ಆರ್. ರೆಹಮಾನ್, ಕಮಲ್‌ ಹಾಸನ್, ಇಳೆಯರಾಜ, ಚಿರಂಜೀವಿ ಸೇರಿದಂತೆ ಅನೇಕರು ಎಸ್‌ಪಿಬಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಸ್ಯಾಂಡಲ್‌ವುಡ್‌ ಶಿವರಾಜ್‌ಕುಮಾರ್‌, 'ನನ್ನ ಮೊದಲ ಸಿನಿಮಾದಿಂದಲೂ ಅಸಂಖ್ಯ ಹಾಡುಗಳಿಗೆ ನೀವು ಧ್ವನಿ ನೀಡಿದ್ದೀರಿ. ಅಂದಿನಿಂದಲೂ ನಾನು ನಿಮಗೆ ಅಭಿಮಾನಿ ಆಗಿದ್ದೇನೆ. ನೀವು ಬೇಗ ಗುಣಮುಖರಾಗಿ ಬಂದು ಎಲ್ಲರ ಸಿನಿಮಾಗಳಿಗೆ ಹಾಡುತ್ತೀರಿ ಎಂಬುದು ನನಗೆ ತಿಳಿದಿದೆ' ಎಂದು ಅವರು ಹೇಳಿದ್ದಾರೆ.

ಎಸ್‌ ಪಿ ಬಾಲಸುಬ್ರಹ್ಮಣ್ಯಂ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಸರಿಗಮಪ ತಂಡ

ಆಗಸ್ಟ್ 5ರಂದು ಎಸ್‌ಪಿಬಿ ಅವರಿಗೆ ಕೊರೊನಾ ವೈರಸ್‌ ಪಾಸಿಟಿವ್ ಇರುವುದು ಗೊತ್ತಾಗಿತ್ತು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆಗಸ್ಟ್ 13ರಿಂದ ಆರೊಗ್ಯ ಸ್ಥಿತಿ ಗಂಭೀರವಾಗಿತ್ತು. ಸದ್ಯ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಎಸ್‌ಪಿಬಿಗೆ ಅಂತಾರಾಷ್ಟ್ರೀಯ ತಜ್ಞರಿಂದ ಚಿಕಿತ್ಸೆ! ಅಭಿಮಾನಿಗಳಿಂದ ವಿಶ್ವಾದ್ಯಂತ ಸಂಗೀತ ಪ್ರಾರ್ಥನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌