ಆ್ಯಪ್ನಗರ

ಉಪೇಂದ್ರ & ಗುರುಕಿರಣ್‌ಗೆ 'A' ಚಿತ್ರದಲ್ಲಿ ಯಶಸ್ಸು ಸಿಗಲು ಕಾರಣವಾಗಿದ್ದ ಎಸ್‌ಪಿ ಬಾಲಸುಬ್ರಹ್ಮಣ್ಯಂ!

ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಸಂಗೀತ ನಿರ್ದೇಶಕ ಗುರುಕಿರಣ್‌ ಅವರಿಗೆ ಅನೇಕ ಸುಮಧುರ ನೆನಪುಗಳಿವೆ. ಅದರಲ್ಲೂ 'A' ಚಿತ್ರದ ಗೀತೆಗೆ ಎಸ್‌ಪಿಬಿ ಧ್ವನಿಯಾಗಿದ್ದನ್ನು ಅವರು ತುಂಬ ಧನ್ಯತಾಭಾವದಿಂದ ನೆನಪಿಸಿಕೊಳ್ಳುತ್ತಾರೆ.

Vijaya Karnataka Web 26 Sep 2020, 10:47 am
ಮಹಾನ್‌ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್‌ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಸಂಗೀತದ ಬಗ್ಗೆ ಗುರುಕಿರಣ್‌ಗೆ ಆಸಕ್ತಿ ಹುಟ್ಟಲು ಕಾರಣರಾದವರಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೂಡ ಒಬ್ಬರು. ಮಂಗಳೂರಿನಲ್ಲಿ ನಡೆಯುತ್ತಿದ್ದ ಎಸ್‌ಪಿಬಿ ಅವರ ಸಂಗೀತ ಕಾರ್ಯಕ್ರಮಕ್ಕೆ ಹೋಗಲು ಗುರುಕಿರಣ್‌ ಕಾಲೇಜಿಗೆ ಚಕ್ಕರ್‌ ಹಾಕುತ್ತಿದ್ದರಂತೆ!
Vijaya Karnataka Web ಗುರುಕಿರಣ್‌, ಎಸ್‌ಪಿ ಬಾಲಸುಬ್ರಹ್ಮಣ್ಯಂ, ಉಪೇಂದ್ರ


'ನಾನು ಚಿತ್ರರಂಗದಲ್ಲಿ ಹೊಸಬನಾಗಿದ್ದೆ. ಆಗ ಅವರು ನನ್ನ ಮತ್ತು ಉಪೇಂದ್ರ ಕಾಂಬಿನೇಷನ್‌ನ 'A' ಸಿನಿಮಾದ 'ಮಾರಿ ಕಣ್ಣು ಹೋರಿ ಮ್ಯಾಗೆ..' ಹಾಡಿಗೆ ಧ್ವನಿಯಾದರು. ಆ ಸಿನಿಮಾ ರಿಲೀಸ್‌ ಆಗುವುದಕ್ಕೂ ಮುನ್ನವೇ ಸಾಂಗ್‌ ಸೂಪರ್‌ ಹಿಟ್‌ ಆಯಿತು. ಡಿಸೆಂಬರ್‌ನಲ್ಲಿ ಹಾಡು ಬಿಡುಗಡೆ ಆಗಿ ಜನಮನ ಗೆದ್ದಿತ್ತು. ನಂತರ ಜನವರಿಯಲ್ಲಿ ಸಿನಿಮಾ ರಿಲೀಸ್‌ ಆಯಿತು. ಆ ಚಿತ್ರದ ಯಶಸ್ಸಿಗೆ ಆ ಗೀತೆ ತುಂಬ ದೊಡ್ಡ ಸಹಾಯ ಮಾಡಿತು' ಎಂದು ನೆನಪಿಸಿಕೊಳ್ಳುತ್ತಾರೆ ಗುರುಕಿರಣ್‌. ಉಪೇಂದ್ರ ಅವರಿಗೆ ಹೀರೋ ಆಗಿ ಅದು ಮೊದಲ ಚಿತ್ರವಾಗಿತ್ತು.

ಒಂದೇ ದಿನದಲ್ಲಿ 12ಕ್ಕೂ ಅಧಿಕ ಹಾಡುಗಳನ್ನು ಎಸ್‌ಪಿಬಿ ರೆಕಾರ್ಡ್‌ ಮಾಡುತ್ತಿದ್ದರು ಎಂಬ ಮಾತುಗಳನ್ನು ಕೇಳಿ ಗುರುಕಿರಣ್‌ ಅಚ್ಚರಿ ವ್ಯಕ್ತಪಡಿಸುತ್ತಾರೆ. 'ಅಂಥ ಮಹಾನ್‌ ವ್ಯಕ್ತಿಗೆ ಮಾತ್ರ ಅದೆಲ್ಲ ಸಾಧ್ಯ. ಭಾಷೆ, ಹಾಡು ಮತ್ತು ರಾಗಗಳು ಅವರಿಗೆ ಒಲಿದಿದ್ದವು. ಅಂತಹ ಮತ್ತೊಬ್ಬ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ' ಎಂದಿದ್ದಾರೆ ಗುರುಕಿರಣ್‌. ಇನ್ನು, ಗುರುಕಿರಣ್‌ ಅವರ ವೃತ್ತಿಜೀವನದ ಸೂಪರ್‌ ಹಿಟ್‌ ಸಿನಿಮಾಗಳಾದ 'ಆಪ್ತಮಿತ್ರ' , 'ಆಪ್ತರಕ್ಷಕ' ಚಿತ್ರದಲ್ಲೂ ಎಸ್‌ಪಿಬಿ ಹಾಡಿದ ಗೀತೆಗಳು ದೊಡ್ಡಮಟ್ಟದಲ್ಲಿ ಹಿಟ್‌ ಆಗಿದ್ದವು.

also read: ಕೆ. ಕಲ್ಯಾಣ್‌ ಅವರಿಂದ ಆಣೆ ಮಾಡಿಸಿಕೊಂಡಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ! ಯಾವ ಕಾರಣಕ್ಕೆ?

ಆ.5ರಂದು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಎಸ್‌ಪಿಬಿ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಸೆ. 25ರಂದು ಮಧ್ಯಾಹ್ನ ಕೊನೆಯುಸಿರೆಳೆದರು. ಅವರ ಅಗಲಿಕೆಯಿಂದ ಸಿನಿಮಾ ಸಂಗೀತಲೋಕ ಬಡವಾಗಿದೆ. ನೆಚ್ಚಿನ ಗಾಯಕನ ನಿಧನಕ್ಕೆ ಕೋಟ್ಯಂತರ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಇಳಯರಾಜ, ಹಂಸಲೇಖ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

also read: SPB Died: ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ! ಶಾಶ್ವತವಾಗಿ ಹಾಡು ನಿಲ್ಲಿಸಿದ ಲೆಜೆಂಡರಿ ಗಾಯಕ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌