ಆ್ಯಪ್ನಗರ

Actor Chetan: 'ಆ ದಿನಗಳು' ಖ್ಯಾತಿಯ ನಟ ಚೇತನ್‌ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ

Chetan Ahimsa Controversy: 'ಆ ದಿನಗಳು' ಸಿನಿಮಾ ಖ್ಯಾತಿಯ ನಟ ಚೇತನ್ ಅವರು ಉರಿಗೌಡ, ನಂಜೇಗೌಡ ಅವರ ಹೆಸರನ್ನು ಪ್ರಸ್ತಾಪ ಮಾಡುತ್ತ ಹಿಂದುತ್ವದ ಬಗ್ಗೆ ಹೇಳಿದ್ದರು. ಚೇತನ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರ ಜೊತೆಗೆ ಚೇತನ್ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿದೆ. ಚೇತನ್ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪವಿದೆ. ಚೇತನ್ ಅವರನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Authored byಪದ್ಮಶ್ರೀ ಭಟ್ | Vijaya Karnataka Web 21 Mar 2023, 8:30 pm

ಹೈಲೈಟ್ಸ್‌:


  • ಉರಿಗೌಡ, ನಂಜೇಗೌಡ ಬಗ್ಗೆ ಹೇಳಿದ ನಟ ಚೇತನ್
  • ಹಿಂದುತ್ವದ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದ ಚೇತನ್
  • ಚೇತನ್ ಅವರನ್ನು ಬಂಧಿಸಿರುವ ಬೆಂಗಳೂರು ಪೊಲೀಸರು
  • ಚೇತನ್ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web chetan kumar
ಹಿಂದುತ್ವದ ಅವಹೇಳನ ಮಾಡಿದ್ದಾರೆ ಎಂಬ ಆರೋಪದಡಿ ನಟ ಚೇತನ್ ಅವರನ್ನು (Chetan) ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈಗ ಕೋರ್ಟ್ ಚೇತನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಎಂದು ಆದೇಶ ನೀಡಿದೆ.
ಚೇತನ್ ಅವರು ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುತ್ತಾರೆ. ಜಾತಿ ಜಾತಿಗಳ ನಡುವೆ ವೈಮನಸ್ಸು ಉಂಟು ಮಾಡಿ ಕೋಮುಗಲಭೆಗೆ ಪ್ರಚೋದನೆಯನ್ನು ನೀಡಿರುತ್ತಾರೆ. ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿರುತ್ತಾರೆ. ಇಂತಹ ಪ್ರಚೋದನಕಾರಿ ಹೇಳಿಕೆಯಿಂದ ವಿವಿಧ ಕೋಮುಗಳ ನಡುವೆ ಘರ್ಷಣೆಗೆ ಪ್ರೇರಣೆ ನೀಡಿರುವ ನಟ ಚೇತನ್ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ದೂರು ನೀಡಲಾಗಿದೆ.

ಶೇಷಾದ್ರಿಂಪುರಂ ಪೊಲೀಸರು ನಟ ಚೇತನ್‌ರನ್ನು ಬೆಂಗಳೂರಿನ 32ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಇದೇ ವೇಳೆ ಚೇತನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಚೇತನ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Chetan Kumar: ಹಿಂದುತ್ವದ ಬಗ್ಗೆ ಪೋಸ್ಟ್; ಪೊಲೀಸರಿಂದ ನಟ ಚೇತನ್ ಬಂಧನ

ಹಿಂದುತ್ವ ವಿರೋಧಿ ಪೋಸ್ಟ್‌ನ್ನು ಚೇತನ್ ಅವರೇ ಬರೆದಿದ್ದಾರೆ ಎನ್ನೋದಕ್ಕೆ ಸಾಕ್ಷಿ ಇಲ್ಲ. ಈ ಬಗ್ಗೆ ಪೊಲೀಸರು ಸುಳ್ಳು ಕೇಸ್ ದೂರು ದಾಖಲು ಮಾಡಿದ್ದಾರೆ. ಹೀಗಾಗಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಜಾಮೀನು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಚೇತನ್ ಪೋಸ್ಟ್ ಏನು?

ಸುಳ್ಳಿನ ಆಧಾರದ ಮೇಲೆ ಹಿಂದುತ್ವವನ್ನು ಕಟ್ಟಲಾಗಿದೆ.

ಸಾವರ್ಕರ್ ಹೇಳಿಕೆ: ಶ್ರೀರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತ ದೇಶ ಪ್ರಾರಂಭವಾಯಿತು- ಇದೊಂದು ಸುಳ್ಳು

1992ರಲ್ಲಿ: ಬಾಬ್ರಿ ಮಸೀದಿ ರಾಮನ ಜನ್ಮಭೂಮಿ-ಇದೊಂದು ಸುಳ್ಳು

ಈಗ 2023ರಲ್ಲಿ: ಉರಿಗೌಡ, ನಂಜೇಗೌಡರು ಟಿಪ್ಪುವನ್ನು ಕೊಂದರು-ಇದೊಂದು ಸುಳ್ಳು

ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು-ಸತ್ಯವೇ ಸಮಾನತೆ

Munirathna: 'ಉರಿಗೌಡ ನಂಜೇಗೌಡ' ಸಿನಿಮಾ ಮಾಡಲು ಮುಂದಾದ ಮುನಿರತ್ನ; ನಟ ಚೇತನ್ ಹೇಳಿದ್ದೇನು?

ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಕಾರ್ಯಕ್ರಮವೊಂದರಲ್ಲಿ ಉರೀಗೌಡ ಮತ್ತು ನಂಜೇಗೌಡ ಟಿಪ್ಪು ಸುಲ್ತಾನ್‌ಗೆ ಬುದ್ಧಿ ಕಲಿಸಿದರು ಎಂಬರ್ಥದಲ್ಲಿ ಹೇಳಿದ್ದರು. ಬಿಜೆಪಿಯು ಟಿಪ್ಪು ಸಾವಿಗೆ ಉರೀಗೌಡ ಮತ್ತು ನಂಜೇಗೌಡ ಕಾರಣ ಎಂದು ವಾದ ಮಾಡಿದರೆ, ಕಾಂಗ್ರೆಸ್ ಇವು ಕಾಲ್ಪನಿಕ ಪಾತ್ರಗಳು ಎಂದು ಹೇಳಿತ್ತು. ಈಗ ಚೇತನ್ ಅವರು ಈ ಬಗ್ಗೆ ಮಾತನಾಡುತ್ತ ಹಿಂದುತ್ವದ ಬಗ್ಗೆ ಈ ರೀತಿ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

"ಮೇ 2022 ರಲ್ಲಿ, ನಿರ್ಮಲಾನಂದ ಸ್ವಾಮೀಜಿ ಅವರು 'ನಾಡ ಗೀತೆಗೆ ಅಗೌರವ ತೋರಿದವರ' ವಿರುದ್ಧ ಶಿಕ್ಷಾರ್ಹ ಕ್ರಮವನ್ನು ಕೋರಿದ್ದರು-- ಇದು ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯ ಪ್ರಯತ್ನವಾಗಿದೆ. ಇಂದು ಅವರು ಕೋಮುವಾದಿ ಊರಿಗೌಡ-ನಂಜೇಗೌಡರ ಕಟ್ಟುಕಥೆಯನ್ನು ಪ್ರಶ್ನಿಸಿದ್ದಾರೆ; ಇದು ಇತಿಹಾಸವಲ್ಲ ಎಂದು ಅವರು ಸೂಚಿಸುವುದು ಒಳ್ಳೆಯ ನಡೆ" ಎಂದು ಚೇತನ್ ಪೋಸ್ಟ್ ಮಾಡಿದ್ದರು.

"ಉರಿಗೌಡ ಮತ್ತು ನಂಜೇಗೌಡರ ಸೃಷ್ಟಿ ಮತ್ತು ಚಿತ್ರಣವನ್ನು ಒಕ್ಕಲಿಗರ ಸಂಘ ವಿರೋಧಿಸುತ್ತದೆ. 2 ಕಾರಣಗಳು : 1. ಸ್ವಾತಂತ್ರ್ಯ ಹೋರಾಟಗಾರನನ್ನು (ಟಿಪ್ಪು) ಕೊಂದ ಖಳನಾಯಕರಾಗಲು ಬಯಸುವುದಿಲ್ಲ; 2. ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ವೈಮನಸ್ಸು ಸೃಷ್ಟಿಸಲು ಬಯಸುವುದಿಲ್ಲ. ಒಕ್ಕಲಿಗ ಲಾಬಿಗಳು ಜಾತಿ ಆಧಾರಿತ ವೋಟ್ ಬ್ಯಾಂಕ್ ಅನ್ನು ಹಿಂದುತ್ವಕ್ಕೆ ಕಳೆದುಕೊಳ್ಳಲು ಬಯಸದಿರುವುದು ಚುನಾವಣಾದಲ್ಲಿ ಕೂಡ ಒಂದು ಮುಖ್ಯ ಕಾರಣವಾಗಿದೆ" ಎಂದು ನಟ ಚೇತನ್ ಪೋಸ್ಟ್ ಮಾಡಿದ್ದಾರೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌