ಆ್ಯಪ್ನಗರ

ಎಸ್‌ಪಿಬಿ ಅಗಲಿಕೆ: ಭಾವುಕರಾಗಿ ಮನದ ಮಾತು ಹಂಚಿಕೊಂಡ ಗಾಯಕಿ ಎಸ್‌. ಜಾನಕಿ

ಭಾರತೀಯ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ. ಅವರೊಂದಿಗೆ ಸಾವಿರಾರು ಹಾಡುಗಳನ್ನು ಹಾಡಿರುವವರು ಎಸ್‌. ಜಾನಕಿ. ಇದೀಗ ಅಗಲಿದ ತಮ್ಮ ಸ್ನೇಹಿತನ ಬಗ್ಗೆ ಜಾನಕಿ ಮಾತನಾಡಿದ್ದಾರೆ.

Vijaya Karnataka Web 28 Sep 2020, 2:07 pm
ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡು ಭಾರತೀಯ ಚಿತ್ರರಂಗ ಬಡವಾಗಿದೆ. ಸೆ.25ರಂದು ಅವರು ಇಹಲೋಕ ತ್ಯಜಿಸಿದರು. ಅವರ ಅಗಲಿಕೆ ಅಸಂಖ್ಯಾ ಅಭಿಮಾನಿಗಳಿಗೆ ನೋವು ತಂದಿದೆ. ಅವರ ಆತ್ಮೀಯರಿಗೆ ಅಪಾರ ದುಃಖ ನೀಡಿದೆ. ಹಿರಿಯ ಗಾಯಕಿ ಎಸ್‌. ಜಾನಕಿ ಅವರಿಗೂ ಎಸ್‌ಪಿಬಿ ಅಗಲಿಕೆ ತೀವ್ರ ನೋವುಂಟು ಮಾಡಿದೆ. ಎಸ್‌. ಜಾನಕಿ ಅವರ ಮೇಲೆ ಎಸ್‌ಪಿಬಿ ಅವರಿಗೆ ಅಪಾರವಾದ ಗೌರವ ಇತ್ತು. ಎಸ್‌ಪಿಬಿ ಹಾಡುವುದನ್ನು ಕಂಡ ಜಾನಕಿ ಅವರು, 'ನೀನು ಸಿನಿಮಾದಲ್ಲಿ ಹಾಡು' ಎಂದು ಮೊದಲ ಬಾರಿಗೆ ಸಲಹೆ ನೀಡಿದ್ದರು. ನಂತರದ ದಿನಗಳಲ್ಲಿ ಸಾವಿರಾರು ಹಿಟ್ ಹಾಡುಗಳನ್ನು ಇಬ್ಬರು ಜೊತೆಗೆ ಹಾಡಿದ್ದಾರೆ.
Vijaya Karnataka Web veteran singer s janaki speaks about late singer sp balasubrahmanyam
ಎಸ್‌ಪಿಬಿ ಅಗಲಿಕೆ: ಭಾವುಕರಾಗಿ ಮನದ ಮಾತು ಹಂಚಿಕೊಂಡ ಗಾಯಕಿ ಎಸ್‌. ಜಾನಕಿ


ಇದೀಗ ಎಸ್‌ಪಿಬಿ ನಿಧನದ ಎರಡು ದಿನಗಳ ಬಳಿಕ ಜಾನಕಿ ಅವರು ಮನದ ನೋವನ್ನು ಹೊರಹಾಕಿದ್ದಾರೆ. 'ನಿನ್ನೆ-ಮೊನ್ನೆ ಮಾತನಾಡಬೇಕು ಎಂದುಕೊಂಡೆ, ಮಾತಾಡಿದ್ರೆ ಅಳು ಬರ್ತಾ ಇದೆ. ಅದಕ್ಕೆ ಮಾತಾಡಲಿಲ್ಲ. ಈಗ ಸ್ವಲ್ಪ ಸಮಾಧಾನ ಮಾಡಿಕೊಂಡು ಮಾತನಾಡುತ್ತಿದ್ದೇನೆ' ಎಂದು ಎಸ್‌. ಜಾನಕಿ ಭಾವುಕರಾಗಿ ನುಡಿದಿದ್ದಾರೆ. ಜೊತೆಗೆ ಒಂದಷ್ಟು ಹಳೆಯ ನೆನಪುಗಳನ್ನು ಹೇಳಿಕೊಂಡಿದ್ದಾರೆ.

​ಅವರ ಆತ್ಮಕ್ಕೆ ಶಾಂತಿ ಸಿಗಲಿ

'ನನ್ನ ಸಂಗೀತ ನಿರ್ದೇಶನದಲ್ಲಿ ಅವರು ಹಾಡಿದ್ದಾರೆ. ಅವರ ಸಂಗೀತ ನಿರ್ದೇಶನದಲ್ಲಿ ನಾನು ಹಾಡಿದ್ದೇನೆ. ಅವರು ಕನ್ನಡ ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ. ನಾನು ಅದರಲ್ಲಿಯೂ ಹಾಡಿದ್ದೇನೆ. ಈ ಥರ ನಾವು ತುಂಬ ಕ್ಲೋಸ್ ಆಗಿದ್ದೆವು. ಕೊನೆಗೆ ಅವರು ಆಸ್ಪತ್ರೆಗೆ ಹೋದರು. ಇವಾಗ ಬರ್ತಾರೆ, ಅವಾಗ ಬರ್ತಾರೆ ಅಂದುಕೊಳ್ಳುತ್ತಲೇ ಇದ್ದೆ. ಆದರೆ, ಅವರು ಹಾಗೇ ಹೋಗಿಬಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಮನೆಯಲ್ಲಿ ಎಲ್ಲರೂ ಚೆನ್ನಾಗಿರಲಿ' ಎಂದಿದ್ದಾರೆ ಎಸ್‌. ಜಾನಕಿ. ಸಿನಿಮಾರಂಗದಲ್ಲಿನ ಇಬ್ಬರ ನಡುವಿನ ಅನ್ಯೋನ್ಯತೆಯನ್ನು ಹೇಳಿಕೊಂಡಿರುವ, ಜಾನಕಿ ಅವರು ಭಾವುಕರಾಗಿದ್ದಾರೆ.

SPB Died: ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ! ಶಾಶ್ವತವಾಗಿ ಹಾಡು ನಿಲ್ಲಿಸಿದ ಲೆಜೆಂಡರಿ ಗಾಯಕ!

​ಸಿನಿಮಾದಲ್ಲಿ ಹಾಡು ಎಂದಿದ್ದೆ!

'ನೆಲ್ಲೂರು ಹತ್ರ ಗೂಡೂರು ಅನ್ನೋ ಊರಲ್ಲಿ ಒಂದು ಸ್ಪರ್ಧೆಯಿತ್ತು. ಅಲ್ಲಿ ಗೆದ್ದವರಿಗೆ ಬಹುಮಾನ ಕೊಡುವುದಕ್ಕೆ ನನ್ನನ್ನು ಕರೆದಿದ್ದರು. ಅಲ್ಲಿಯೇ ಮೊದಲ ಬಾರಿಗೆ ಆ ಹುಡುಗ ಎಸ್‌ಪಿ ಬಾಲಸುಬ್ರಹ್ಮಣ್ಯಂನನ್ನು ನಾನು ನೋಡಿದ್ದು. ಗೆದ್ದವರಿಂದ ಹಾಡಿಸಿದರು. ಬಾಲಸುಬ್ರಹ್ಮಣ್ಯಂ ತುಂಬ ಚೆನ್ನಾಗಿ ಹಾಡಿದ. ಯಾರನ್ನೂ ಕಾಪಿ ಮಾಡದೇ, ದೇವರು ನೀಡಿದ ತನ್ನದೇ ಒರಿಜಿನಲ್ ವಾಯ್ಸ್‌ನಲ್ಲಿ ತುಂಬ ಚೆನ್ನಾಗಿ ಹಾಡಿದ. ಅವನು ಹಾಡೋದನ್ನು ಕಂಡು, 'ನೀನು ಸಿನಿಮಾದಲ್ಲಿ ಹಾಡು. ನಿನಗೆ ಬ್ರಹ್ಮಾಂಡವಾಗಿ ಒಳ್ಳೆಯ ಹೆಸರು ಬರುತ್ತದೆ' ಎಂದು ಹೇಳಿದ್ದೆ. ಅದನ್ನು ಅವನು ಎಲ್ಲ ಸ್ಟೇಜ್ ಮೇಲೆ ಹೇಳುತ್ತಲೇ ಇದ್ದ. 'ಜಾನಕಿ ಅಮ್ಮ ಹೇಳಿದ್ದರಿಂದಲೇ ನಾನು ಬಂದೆ' ಅಂತ..' ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ ಎಸ್. ಜಾನಕಿ.

ಉಪೇಂದ್ರ & ಗುರುಕಿರಣ್‌ಗೆ 'A' ಚಿತ್ರದಲ್ಲಿ ಯಶಸ್ಸು ಸಿಗಲು ಕಾರಣವಾಗಿದ್ದ ಎಸ್‌ಪಿ ಬಾಲಸುಬ್ರಹ್ಮಣ್ಯಂ!

​ಎಸ್‌ಪಿಬಿಗೆ ಪ್ರತಿಭೆ, ದೇವರ ದಯೆ ಇತ್ತು!

'ನಾವು ಎಷ್ಟೋ ಜನರಿಗೆ ಹೇಳಿರುತ್ತೇವೆ. ಹಾಗಂತ ಎಲ್ಲರೂ ಬರ್ತಾರೇನೂ? ಅವರಿಗೆ ಟ್ಯಾಲೆಂಟ್ ಇತ್ತು, ಅದೃಷ್ಟ ಇತ್ತು, ದೇವರ ದಯೆ, ಬಂದರು ಅಷ್ಟೇ. ನಾನು ಹೇಳಿದೆ ಅಂತ ಬರಲಿಲ್ಲ. ಬಾಲಸುಬ್ರಹ್ಮಣ್ಯಂ ಚೆನ್ನೈಗೆ ಬಂದಮೇಲೆ ನಾವಿಬ್ಬರು ಸೇರಿ ಎಷ್ಟು ಡ್ಯುಯೆಟ್ ಸಾಂಗ್ ಹಾಡಿದ್ದೇವೆ ಗೊತ್ತಾ? ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಹಾಡಿದ್ದೇವೆ. ಅದರಲ್ಲೂ ಕನ್ನಡದಲ್ಲಿ ಎಷ್ಟು ಒಳ್ಳೆಯ ಡ್ಯುಯೆಟ್ ಸಾಂಗ್ ಹಾಡಿದ್ದೇವೆ. ಸಾವಿರಾರು ಗೀತೆಗಳನ್ನು ಹಾಡಿದ್ದೇವೆ. ಮಲಯಾಳಂ, ಹಿಂದಿ ಕೂಡ ಹಾಡಿದ್ದೇವೆ. ನಾವು ಫ್ರೆಂಡ್ಲಿ ಆಗಿ ಇರ್ತಿದ್ವಿ. ಕೋ ಸಿಂಗರ್‌ ಆ ಥರ ಅಲ್ಲ. ಹಾಡುಗಳ ರೆಕಾರ್ಡಿಂಗ್‌ನಲ್ಲಿ ಜಗಳ ಮಾಡ್ತಿದ್ವಿ, ಗಲಾಟೆ ಮಾಡ್ತಿದ್ವಿ, ಮಕ್ಕಳ ಹಾಗೆ ಜಗಳ ಮಾಡಿಕೊಂಡು, ಮತ್ತೆ ಒಂದಾಗುತ್ತಿದ್ದೆವು' ಎಂದು ಅವರು ಹೇಳಿದ್ದಾರೆ

SPB Funeral: ನಾದಲೀನರಾದ ಎಸ್‌ಪಿ ಬಾಲಸುಬ್ರಹ್ಮಣ್ಯಂ! ಫಾರ್ಮ್‌ಹೌಸ್‌ನಲ್ಲಿ ನೆರವೇರಿದ ಅಂತ್ಯಕ್ರಿಯೆ

​ಮೈಸೂರಿನಲ್ಲೇ ಕೊನೆಯ ಕಾರ್ಯಕ್ರಮ

'ನಾವಿಬ್ಬರು ಸಂಗೀತದ ಜೊತೆಗೆ ಆಟ ಆಡಿದ್ದೇವೆ. 'ನೀನ್ ಚೆನ್ನಾಗ್ ಹಾಡ್ತಿಯಾ, ನಾನ್ ಚೆನ್ನಾಗ್ ಹಾಡ್ತಿಯಾ..' ಅನ್ನೋ ಥರ ಹಾಡ್ತಾ ಇದ್ವಿ. ಮೂರು ತಿಂಗಳ ಹಿಂದೆ ಮೈಸೂರಿನಲ್ಲಿ ಒಂದು ಕಾರ್ಯಕ್ರಮ ನಡೆದಿತ್ತು. ಆಗ ಬಾಲಸುಬ್ರಹ್ಮಣ್ಯಂ ಬಂದಿದ್ದರು. ಕಾರ್ಯಕ್ರಮ ಮುಗಿಸಿ, ಮರುದಿನ ನಮ್ಮ ಮನೆಗೆ ಬಂದು, ನನ್ನ ಹತ್ರ, ನನ್ನ ಮಗನ ಹತ್ರ ತುಂಬ ಮಾತನಾಡಿದ್ದರು. ಮೊಬೈಲ್‌ ಅಲ್ಲಿ ಹಾಡುಗಳನ್ನು ಕೇಳಿಸಿ, ಇಲ್ಲೇ ತುಂಬ ಹೊತ್ತು ಇದ್ದು, ಊಟ ಮಾಡಿ ಹೋದರು. ಕಾಕತಾಳೀಯವೆಂದರೆ, ನಾನು ಕೊನೇ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಮೈಸೂರಿನಲ್ಲಿ. ಬಾಲಸುಬ್ರಹ್ಮಣ್ಯಂ ಕೂಡ ಕೊನೇ ಕಾರ್ಯಕ್ರಮವನ್ನು ಮೈಸೂರಿನಲ್ಲೇ ಮಾಡಿದ್ದ' ಎಂದಿದ್ದಾರೆ ಎಸ್‌. ಜಾನಕಿ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಪ್ರತ್ಯೇಕ ವಿಡಿಯೋಗಳನ್ನು ಮಾಡಲಾಗಿದೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಎಸ್‌ಪಿಬಿಗೆ ಧ್ವನಿಯಾಗಿದ್ದರು ಡಾ. ರಾಜ್‌! 'ಮುದ್ದಿನ ಮಾವ' ಚಿತ್ರಕ್ಕೆ ಹಾಡುವಾಗ ಅಣ್ಣಾವ್ರು ಏನು ಹೇಳಿದ್ರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌