'ವೈಕುಂಠಪುರ'ದಲ್ಲಿ ಪಕ್ಕಾ ಫ್ಯಾಮಿಲಿ ಡ್ರಾಮಾ! ಅಲಾ ವೈಕುಂಠಪುರಮುಲೋ

ಅಲ್ಲು ಅರ್ಜುನ್‌,ಪೂಜಾ ಹೆಗ್ಡೆ,ಟಬು,ಜಯರಾಮ್‌,ಸಚಿನ್,ಮುರಳಿ ಶರ್ಮಾ,ಸುಶಾಂತ್‌
Telugu, Family, Drama, Action2 Hrs 45 Min
ಕ್ರಿಟಿಕ್‌ ರೇಟಿಂಗ್3.0/5ಓದುಗರ ರೇಟಿಂಗ್4/5
ಅವಿನಾಶ್ ಜಿ. ರಾಮ್ | Vijaya Karnataka Web 12 Jan 2020, 1:54 pm
ತೆಲುಗು ಚಿತ್ರರಂಗದಲ್ಲಿ ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್ ತಮ್ಮದೇ ಆದ ಛಾಪವನ್ನು ಹೊಂದಿದ್ದಾರೆ. ಸಿನಿಮಾ ಮೇಕಿಂಗ್‌ನಲ್ಲಿ ಅವರದ್ದೇ ಆದ ಸ್ಟೈಲ್‌ ಇದೆ. ಎಲ್ಲೋ ಇರುವ ಕಥಾನಾಯಕ ತನ್ನ ನೆಲೆಯನ್ನು ಹುಡುಕಿಕೊಂಡು ಬರುವುದು. ಅಲ್ಲಿರುವ ಸಮಸ್ಯೆಗಳಿಗೆ ತನ್ನದೇ ಮಾದರಿಯಲ್ಲಿ ಪರಿಹಾರ ಹುಡುಕುವುದು. ಈ ರೀತಿ ಸಿನಿಮಾದ ಮುಖ್ಯ ಪಾತ್ರಗಳು, ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಬರುವುದು ಅವರ 'ಅತ್ತಾರಿಂಟಿಕಿ ದಾರೇದಿ', 'ಅಜ್ಞಾತವಾಸಿ' ಸೇರಿದಂತೆ ಅವರ ಬಹುತೇಕ ಎಲ್ಲ ಸಿನಿಮಾಗಳಲ್ಲೂ ಇದೆ. ಹಾಗಾದರೆ, 'ಅಲಾ ವೈಕುಂಠಪುರಮುಲೋ' ಚಿತ್ರದ ಕಥೆಯೇನು? ಈ ಮೇಲಿನ ಸಿನಿಮಾಗಳಿಗಿಂತ ಭಿನ್ನವಾಗೇನು ಇಲ್ಲ! ಆದರೆ, ಮನರಂಜನೆಗಂತೂ ಒಂಚೂರು ಮೋಸವಿಲ್ಲ.

ತನ್ನ ತಂದೆ ವಾಲ್ಮೀಕಿಯಿಂದ (ಮುರಳಿ ಶರ್ಮಾ) ಪದೇಪದೆ ಬೈಯಿಸಿಕೊಳ್ಳುವುದೇ ಬಂಟುಗೆ (ಅಲ್ಲು ಅರ್ಜುನ್) ಕಾಯಕವಾಗಿರುತ್ತದೆ. ಬಂಟು ಏನು ಮಾಡಿದರೂ ತಂದೆಗೆ ತಪ್ಪು ಕಾಣುತ್ತದೆ. ಇದರಿಂದ ಬಂಟು ಬೇಸತ್ತಿರುತ್ತಾನೆ. ವಾಲ್ಮೀಕಿ ಕೆಲಸ ಮಾಡುತ್ತಿರುವ ಮಾಲೀಕರ ಮನೆಗೆ ಬಂಟು ಹೋಗುವಂತಿಲ್ಲ. ತನ್ನ ಮಗನಿಗೆ ಪದೇಪದೆ ಬೈಯುವ ವಾಲ್ಮೀಕಿಗೆ ತನ್ನ ಮಾಲೀಕರ ಮಗನ (ಸುಶಾಂತ್) ಕಂಡರೆ ಅಪಾರ ಪ್ರೀತಿ. ಸ್ವಂತಃ ಮಗನನ್ನು ಕಂಡರೆ ಬೇಸರಿಸುವ ವಾಲ್ಮೀಕಿಗೆ ತನ್ನ ಮಾಲೀಕರ ಪುತ್ರನ ಮೇಲೆ ಯಾಕಷ್ಟು ಪ್ರೀತಿ? ಅದಕ್ಕೂ ಕಾರಣವಿರುತ್ತದೆ. ಇಡೀ ಸಿನಿಮಾದ ಜೀವಾಳವೇ ಅದು. ಅದೇನು ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು!

ಫ್ಯಾಮಿಲಿ ಡ್ರಾಮಾ, ಪಂಚಿಂಗ್ ಹಾಗೂ ಅರ್ಥಗರ್ಭೀತ ಸಂಭಾಷಣೆ ಬರೆಯುವುದರಲ್ಲಿ ತ್ರಿವಿಕ್ರಮ್ ಪರಿಣಿತರು. ಆ ಕೆಲಸವನ್ನು 'ಅಲಾ ವೈಕುಂಠಪುರಮುಲೋ'ದಲ್ಲೂ ಮುಂದುವರಿಸಿದ್ದಾರೆ. ತಮ್ಮದೇ ಹಿಂದಿನ 'ಅತ್ತಾರಿಂಟಿಕಿ ದಾರೇದಿ' ಸಿನಿಮಾದ ಬಹುತೇಕ ಛಾಯೆಯನ್ನು ಈ ಸಿನಿಮಾದಲ್ಲೂ ಉಳಿಸಿದ್ದಾರೆ. ಅಲ್ಲಿ ಅತ್ತೆ-ಅಳಿಯನ ಮಧ್ಯೆ ಸೆಂಟಿಮೆಂಟ್ ಇಟ್ಟಿದ್ದ ಅವರು, ಈ ಬಾರಿ ತಂದೆ-ಮಗನ ಸೆಂಟಿಮೆಂಟ್‌ಗೆ ಮೋರೆ ಹೋಗಿದ್ದಾರೆ. ತ್ರಿವಿಕ್ರಮ್‌ರ ಈ ಕೆಲ ಹಿಂದಿನ ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಗೆಲುವು ಸಾಧಿಸಿರಲಿಲ್ಲ. ಹಾಗಾಗಿ, ಈ ಬಾರಿ ಮನರಂಜನೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ.

ಫ್ಯಾಮಿಲಿ ಡ್ರಾಮಾ, ಲವ್, ಕಾಮಿಡಿ, ಫೈಟ್‌ ಹೀಗೆ ಪ್ರತಿಯೊಂದು ವಿಭಾಗವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇದೆಲ್ಲದರ ನಡುವೆ ಚಿತ್ರದ ಅವಧಿ ಕಡೆ ಚೂರು ಗಮನ ನೀಡಿದ್ದರೆ ಒಳಿತಿತ್ತು. ಸಿನಿಮಾದ ತೂಕವನ್ನು ಮತ್ತೊಂದು ಹಂತ ಹೆಚ್ಚು ಮಾಡಿರುವುದು ಸಂಗೀತ ನಿರ್ದೇಶಕ ಎಸ್‌. ಥಮನ್‌. ಅವರ ಸಂಗೀತ ಸಂಯೋಜನೆಯ ಅಷ್ಟೂ ಹಾಡುಗಳು ಗುನುಗುವಂತಿವೆ. ಅದಕ್ಕೆ ಪೂರಕವಾಗಿ ಪಿ.ಎಸ್‌. ವಿನೋದ್ ಛಾಯಾಗ್ರಹಣ 'ವೈಕುಂಠಪುರ'ದ ಸೊಗಸನ್ನು ಮತ್ತಷ್ಟು ಅಂದಗೊಳಿಸಿದೆ.

ಇಡೀ ಸಿನಿಮಾವನ್ನು ಅಲ್ಲು ಅರ್ಜುನ್‌ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಎಮೋಷನ್ಸ್ ಸೀನ್ ಆಗಲಿ, ಕಾಮಿಡಿ ದೃಶ್ಯಗಳೇ ಆಗಲಿ ಸಲೀಸಾಗಿ ನಟಿಸಿದ್ಧಾರೆ. ಸ್ಟೈಲೀಶ್‌ ಸ್ಟಾರ್ ಎಂದೇ ಖ್ಯಾತರಾಗಿರುವ ಅವರು, ಹಾಡು ಮತ್ತು ಫೈಟ್‌ಗಳಲ್ಲಿ ಅದನ್ನು ಸಮರ್ಥವಾಗಿ ಸಾಬೀತು ಮಾಡಿದ್ದಾರೆ. ಸರಿಸುಮಾರು ಎರಡು ವರ್ಷಗಳಿಂದ ಕಾದಿದ್ದ ಅವರ ಅಭಿಮಾನಿಗಳಿಗೆ ಈ ಸಿನಿಮಾ ರಂಜಿಸುವುದು ಖಚಿತ. ಪೂಜಾ ಹೆಗ್ಡೆ ಪಾತ್ರಕ್ಕೆ ಹೆಚ್ಚಿನ ಸ್ಕೋಪ್‌ ಇಲ್ಲದಿದ್ದರೂ, ಸಿಕ್ಕಿದ ಪಾತ್ರ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮುರುಳಿ ಶರ್ಮಾ, ಜಯರಾಮ್‌, ಸಚಿನ್‌, ಟಬು, ಉತ್ತಮವಾಗಿ ನಟಿಸಿದ್ದಾರೆ. ಚಿತ್ರಮಂದಿರದಾಚೆಗೂ ನೆನಪಿನಲ್ಲುಳಿಯುತ್ತಾರೆ. ಆದರೆ, ಖಳ ಪಾತ್ರ ಮಾಡಿರುವ ಸಮುದ್ರಖಣಿ ಪ್ರತಿಭೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಧ್ಯತೆಗಳಿದ್ದವು.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಸಿನಿಮಾ ವಿಮರ್ಶೆ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌