ಹರೆಯದ ತಲ್ಲಣಗಳ ಅನಾವರಣ; ಗಂಟುಮೂಟೆ
ತೇಜು ಬೆಳವಾಡಿ,ನಿಶ್ಚಿತ್ ಕೊರೊಡಿ,ಸೂರ್ಯ ವಸಿಷ್ಠ
Vijaya Karnataka Web | 18 Oct 2019, 1:48 pm
* ಅವಿನಾಶ್ ಜಿ. ರಾಮ್
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು- ಎಚ್.ಎಸ್. ವೆಂಕಟೇಶಮೂರ್ತಿ ಅವರು ಬರೆದಿರುವ ಈ ಭಾವಗೀತೆಯಂತೆಯೇ 'ಗಂಟುಮೂಟೆ'ಯ ಕಥೆಯೂ ಇದೆ. ಹರೆಯದ ಅಮಲಿನಲ್ಲಿ ಉಂಟಾಗುವ ತವಕ ತಲ್ಲಣಗಳನ್ನು ನಿರ್ದೇಶಕಿ ರೂಪಾ ರಾವ್ ಮೊದಲ ಪ್ರಯತ್ನದಲ್ಲಿ ಅಚ್ಚುಕಟ್ಟಾಗಿ ತೆರೆಗಿಳಿಸುವ ಕೆಲಸ ಮಾಡಿದ್ದಾರೆ.
ಮೀರಾ (ತೇಜು) ಹೈಸ್ಕೂಲಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ. ಆಕೆಗೆ ಸಲ್ಮಾನ್ ಖಾನ್ ಎಂದರೆ, ಪಂಚಪ್ರಾಣ. ತನ್ನದೇ ಕ್ಲಾಸಿನ ಸಹಪಾಠಿ ಮಧು (ನಿಶ್ಚಿತ್) ನೋಡುವುದಕ್ಕೆ ಒಂಚೂರು ಸಲ್ಮಾನ್ ಥರನೇ ಇದ್ದಾನೆ ಎಂಬ ಕಾರಣಕ್ಕೆ ಆತನ ಮೇಲೆ ಆಕೆಗೆ ಪ್ರೀತಿ ಹುಟ್ಟುತ್ತದೆ. ಕೆಲವೇ ಕೆಲದಿನಗಳಲ್ಲಿ ಇಬ್ಬರ ಮಧ್ಯೆ ಒಂದು ಗಟ್ಟಿಯಾದ ಪ್ರೀತಿ ನೆಲೆಯೂರುತ್ತದೆ. ಮಧು ಹೇಳಿಕೊಳ್ಳುವಂತಹ ಬುದ್ಧಿವಂತನೇನಲ್ಲ. ಓದಿಗಿಂತ ಹರೆಯದ ಉನ್ಮಾದಗಳತ್ತಲೇ ಅವನ ಗಮನ ಹೆಚ್ಚು ಆಸಕ್ತಿ. ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ, ನಿರೀಕ್ಷೆ, ಗುರಿ ಏನೂ ಇಲ್ಲದೆ ಇಬ್ಬರು ಪ್ರಣಯ ಪಕ್ಷಿಗಳಂತೆ ಹಾರಾಡಿಕೊಂಡು ಇರುತ್ತಾರೆ. ಆದರೆ, ಮಧು ಓದಿನ ಕಡೆಗೆ ಗಮನ ನೀಡದೆ ಫೇಲ್ ಆಗುತ್ತಾನೆ. ಆನಂತರ ಮೀರಾ ಮತ್ತು ಮಧು ಒಂದಾಗುತ್ತಾರಾ? ಹರೆಯದ ಆರಂಭದಲ್ಲಿ ಹುಟ್ಟಿಕೊಂಡ ಈ ಪ್ರೇಮಕ್ಕೆ ಯಶಸ್ಸು ಸಿಗುತ್ತದಾ? ಅನ್ನೋ ಪ್ರಶ್ನೆಗಳ ಮೇಲೆ ಸಿನಿಮಾ ಸಾಗುತ್ತದೆ.
ಕನ್ನಡದಲ್ಲಿ ಈ ರೀತಿಯ ಹೈಸ್ಕೂಲ್ ಪ್ರೇಮ ಪ್ರಸಂಗಳಿರುವ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಆದರೆ, ರೂಪಾ ರಾವ್ 'ಗಂಟುಮೂಟೆ'ಯ ನಿರೂಪಣೆ ಮೂಲಕ ಗಮನಸೆಳೆಯುತ್ತಾರೆ. ಪ್ರತಿಯೊಬ್ಬರ ಶಾಲಾ ಜೀವನದಲ್ಲಿ ನಡೆದಿರಬಹುದಾದ ಸಣ್ಣ ಸಣ್ಣ ಸಂಗತಿಗಳನ್ನೇ ತೆರೆಮೇಲೆ ತಂದಿರುವುದು ಪ್ರೇಕಕ್ಷರನ್ನು ತಟ್ಟುತ್ತದೆ. 90ರ ದಶಕದಲ್ಲಿ ಕಥೆ ನಡೆಯುವುದರಿಂದ, ಆ ಕಾಲಘಟ್ಟವನ್ನು ತೆರೆಮೇಲೆ ತೋರಿಸುವುದರಲ್ಲಿ ರೂಪಾ ಬಹುತೇಕ ಯಶಸ್ಸು ಕಂಡಿದ್ದಾರೆ. ಇಡೀ ಸಿನಿಮಾ ನಾಯಕಿ ದೃಷ್ಟಿಕೋನದಲ್ಲಿ ಸಾಗುವುದು ವಿಶೇಷ. ಸಂಭಾಷಣೆ ಮತ್ತು ದೃಶ್ಯಗಳನ್ನು ಕಟ್ಟಿಕೊಟ್ಟಿರುವ ರೀತಿ ನೈಜತೆಗೆ ತುಂಬ ಹತ್ತಿರವಾಗಿದೆ. ಹರೆಯದಲ್ಲಿ ಉಂಟಾಗುವ ಗೊಂದಲಗಳು, ತಲ್ಲಣಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಆದರೆ, ಹಿನ್ನೆಲೆಯಲ್ಲಿ ಬರುವ ನಿರೂಪಣೆ ಕೆಲ ಬಾರಿ ತಾಳ್ಮೆ ಪರೀಕ್ಷೆ ಮಾಡುತ್ತದೆ. ಸಿನಿಮಾದ ಅವಧಿ, ಎರಡು ಗಂಟೆ ಮೀರದಿದ್ದರೂ, ಕೆಲವು ಕಡೆ ನಿಧಾನವಾಗಿ ಸಾಗಿದಂತಹ ಅನುಭವವಾಗುತ್ತದೆ. ಎಲ್ಲೆಂದರಲ್ಲಿ ಬರುವ ಮುತ್ತಿನ ದೃಶ್ಯಗಳು ಕೊಂಚ ಕಿರಿಕಿರಿ ಉಂಟು ಮಾಡುತ್ತವೆ.
ಮೀರಾ ಪಾತ್ರವನ್ನು ಅಕ್ಷರಶಃ ಜೀವಿಸಿದ್ದಾರೆ ತೇಜು ಬೆಳವಾಡಿ. ಮಧು ಪಾತ್ರದಲ್ಲಿ ನಿಶ್ಚಿತ್ ಉತ್ತಮವಾಗಿ ನಟಿಸಿದ್ದಾರೆ. ಉಳಿದಂತೆ, ಸಿನಿಮಾದಲ್ಲಿರುವ ಬಹುತೇಕ ಎಲ್ಲ ಕಲಾವಿದರು ಹೊಸಬರೇ. ಎಲ್ಲರು ಸಿಕ್ಕಿದ ಪಾತ್ರಗಳಿಗೆ ಅಮೋಘವಾಗಿ ಜೀವ ತುಂಬಿದ್ದಾರೆ. 'ಗಂಟುಮೂಟೆ'ಯ ದೊಡ್ಡ ಶಕ್ತಿ ಎಂದರೆ, ಅದು ಅಪರಾಜಿತ್ ಸ್ರಿಸ್ ಅವರ ಹಿನ್ನೆಲೆ ಸಂಗೀತ. ಸಹದೇವ್ ಕೆಲವಾಡಿ ಅವರ ಛಾಯಾಗ್ರಹಣ ಸಿನಿಮಾಕ್ಕೆ ಇನ್ನಷ್ಟು ಮೆರುಗು ತುಂಬಿದೆ. 90ರ ದಶಕದಲ್ಲಿ ಶಾಲೆಗಳಲ್ಲಿ ಕಲಿತವರಿಗೆ ಈ ಸಿನಿಮಾ ಒಂದು ಬಾರಿ ಆ ಕ್ಷಣಗಳನ್ನೆಲ್ಲ ನೆನಪಿಸುವುದಂತೂ ನಿಜ.
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು- ಎಚ್.ಎಸ್. ವೆಂಕಟೇಶಮೂರ್ತಿ ಅವರು ಬರೆದಿರುವ ಈ ಭಾವಗೀತೆಯಂತೆಯೇ 'ಗಂಟುಮೂಟೆ'ಯ ಕಥೆಯೂ ಇದೆ. ಹರೆಯದ ಅಮಲಿನಲ್ಲಿ ಉಂಟಾಗುವ ತವಕ ತಲ್ಲಣಗಳನ್ನು ನಿರ್ದೇಶಕಿ ರೂಪಾ ರಾವ್ ಮೊದಲ ಪ್ರಯತ್ನದಲ್ಲಿ ಅಚ್ಚುಕಟ್ಟಾಗಿ ತೆರೆಗಿಳಿಸುವ ಕೆಲಸ ಮಾಡಿದ್ದಾರೆ.
ಮೀರಾ (ತೇಜು) ಹೈಸ್ಕೂಲಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ. ಆಕೆಗೆ ಸಲ್ಮಾನ್ ಖಾನ್ ಎಂದರೆ, ಪಂಚಪ್ರಾಣ. ತನ್ನದೇ ಕ್ಲಾಸಿನ ಸಹಪಾಠಿ ಮಧು (ನಿಶ್ಚಿತ್) ನೋಡುವುದಕ್ಕೆ ಒಂಚೂರು ಸಲ್ಮಾನ್ ಥರನೇ ಇದ್ದಾನೆ ಎಂಬ ಕಾರಣಕ್ಕೆ ಆತನ ಮೇಲೆ ಆಕೆಗೆ ಪ್ರೀತಿ ಹುಟ್ಟುತ್ತದೆ. ಕೆಲವೇ ಕೆಲದಿನಗಳಲ್ಲಿ ಇಬ್ಬರ ಮಧ್ಯೆ ಒಂದು ಗಟ್ಟಿಯಾದ ಪ್ರೀತಿ ನೆಲೆಯೂರುತ್ತದೆ. ಮಧು ಹೇಳಿಕೊಳ್ಳುವಂತಹ ಬುದ್ಧಿವಂತನೇನಲ್ಲ. ಓದಿಗಿಂತ ಹರೆಯದ ಉನ್ಮಾದಗಳತ್ತಲೇ ಅವನ ಗಮನ ಹೆಚ್ಚು ಆಸಕ್ತಿ. ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ, ನಿರೀಕ್ಷೆ, ಗುರಿ ಏನೂ ಇಲ್ಲದೆ ಇಬ್ಬರು ಪ್ರಣಯ ಪಕ್ಷಿಗಳಂತೆ ಹಾರಾಡಿಕೊಂಡು ಇರುತ್ತಾರೆ. ಆದರೆ, ಮಧು ಓದಿನ ಕಡೆಗೆ ಗಮನ ನೀಡದೆ ಫೇಲ್ ಆಗುತ್ತಾನೆ. ಆನಂತರ ಮೀರಾ ಮತ್ತು ಮಧು ಒಂದಾಗುತ್ತಾರಾ? ಹರೆಯದ ಆರಂಭದಲ್ಲಿ ಹುಟ್ಟಿಕೊಂಡ ಈ ಪ್ರೇಮಕ್ಕೆ ಯಶಸ್ಸು ಸಿಗುತ್ತದಾ? ಅನ್ನೋ ಪ್ರಶ್ನೆಗಳ ಮೇಲೆ ಸಿನಿಮಾ ಸಾಗುತ್ತದೆ.
ಕನ್ನಡದಲ್ಲಿ ಈ ರೀತಿಯ ಹೈಸ್ಕೂಲ್ ಪ್ರೇಮ ಪ್ರಸಂಗಳಿರುವ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಆದರೆ, ರೂಪಾ ರಾವ್ 'ಗಂಟುಮೂಟೆ'ಯ ನಿರೂಪಣೆ ಮೂಲಕ ಗಮನಸೆಳೆಯುತ್ತಾರೆ. ಪ್ರತಿಯೊಬ್ಬರ ಶಾಲಾ ಜೀವನದಲ್ಲಿ ನಡೆದಿರಬಹುದಾದ ಸಣ್ಣ ಸಣ್ಣ ಸಂಗತಿಗಳನ್ನೇ ತೆರೆಮೇಲೆ ತಂದಿರುವುದು ಪ್ರೇಕಕ್ಷರನ್ನು ತಟ್ಟುತ್ತದೆ. 90ರ ದಶಕದಲ್ಲಿ ಕಥೆ ನಡೆಯುವುದರಿಂದ, ಆ ಕಾಲಘಟ್ಟವನ್ನು ತೆರೆಮೇಲೆ ತೋರಿಸುವುದರಲ್ಲಿ ರೂಪಾ ಬಹುತೇಕ ಯಶಸ್ಸು ಕಂಡಿದ್ದಾರೆ. ಇಡೀ ಸಿನಿಮಾ ನಾಯಕಿ ದೃಷ್ಟಿಕೋನದಲ್ಲಿ ಸಾಗುವುದು ವಿಶೇಷ. ಸಂಭಾಷಣೆ ಮತ್ತು ದೃಶ್ಯಗಳನ್ನು ಕಟ್ಟಿಕೊಟ್ಟಿರುವ ರೀತಿ ನೈಜತೆಗೆ ತುಂಬ ಹತ್ತಿರವಾಗಿದೆ. ಹರೆಯದಲ್ಲಿ ಉಂಟಾಗುವ ಗೊಂದಲಗಳು, ತಲ್ಲಣಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಆದರೆ, ಹಿನ್ನೆಲೆಯಲ್ಲಿ ಬರುವ ನಿರೂಪಣೆ ಕೆಲ ಬಾರಿ ತಾಳ್ಮೆ ಪರೀಕ್ಷೆ ಮಾಡುತ್ತದೆ. ಸಿನಿಮಾದ ಅವಧಿ, ಎರಡು ಗಂಟೆ ಮೀರದಿದ್ದರೂ, ಕೆಲವು ಕಡೆ ನಿಧಾನವಾಗಿ ಸಾಗಿದಂತಹ ಅನುಭವವಾಗುತ್ತದೆ. ಎಲ್ಲೆಂದರಲ್ಲಿ ಬರುವ ಮುತ್ತಿನ ದೃಶ್ಯಗಳು ಕೊಂಚ ಕಿರಿಕಿರಿ ಉಂಟು ಮಾಡುತ್ತವೆ.
ಮೀರಾ ಪಾತ್ರವನ್ನು ಅಕ್ಷರಶಃ ಜೀವಿಸಿದ್ದಾರೆ ತೇಜು ಬೆಳವಾಡಿ. ಮಧು ಪಾತ್ರದಲ್ಲಿ ನಿಶ್ಚಿತ್ ಉತ್ತಮವಾಗಿ ನಟಿಸಿದ್ದಾರೆ. ಉಳಿದಂತೆ, ಸಿನಿಮಾದಲ್ಲಿರುವ ಬಹುತೇಕ ಎಲ್ಲ ಕಲಾವಿದರು ಹೊಸಬರೇ. ಎಲ್ಲರು ಸಿಕ್ಕಿದ ಪಾತ್ರಗಳಿಗೆ ಅಮೋಘವಾಗಿ ಜೀವ ತುಂಬಿದ್ದಾರೆ. 'ಗಂಟುಮೂಟೆ'ಯ ದೊಡ್ಡ ಶಕ್ತಿ ಎಂದರೆ, ಅದು ಅಪರಾಜಿತ್ ಸ್ರಿಸ್ ಅವರ ಹಿನ್ನೆಲೆ ಸಂಗೀತ. ಸಹದೇವ್ ಕೆಲವಾಡಿ ಅವರ ಛಾಯಾಗ್ರಹಣ ಸಿನಿಮಾಕ್ಕೆ ಇನ್ನಷ್ಟು ಮೆರುಗು ತುಂಬಿದೆ. 90ರ ದಶಕದಲ್ಲಿ ಶಾಲೆಗಳಲ್ಲಿ ಕಲಿತವರಿಗೆ ಈ ಸಿನಿಮಾ ಒಂದು ಬಾರಿ ಆ ಕ್ಷಣಗಳನ್ನೆಲ್ಲ ನೆನಪಿಸುವುದಂತೂ ನಿಜ.