Please enable javascript.Jaya Mruthyunjaya Swamiji,Panchamasali Reservation: ಪಂಚಮಸಾಲಿ ಮೀಸಲಾತಿ ಹೋರಾಟ: ಸರ್ಕಾರಕ್ಕೆ ಜಯಮೃತ್ಯುಂಜಯ ಶ್ರೀ ಡೆಡ್‌ಲೈನ್ - panchamasali reservation jaya mruthyunjaya swamiji dead line to karnataka govt - Vijay Karnataka

Panchamasali Reservation: ಪಂಚಮಸಾಲಿ ಮೀಸಲಾತಿ ಹೋರಾಟ: ಸರ್ಕಾರಕ್ಕೆ ಜಯಮೃತ್ಯುಂಜಯ ಶ್ರೀ ಡೆಡ್‌ಲೈನ್

Edited byದಿಲೀಪ್ ಡಿ. ಆರ್. | Vijaya Karnataka 13 Oct 2022, 12:23 pm
Subscribe

Panchamasali Reservation: 2008, 2013 ಮತ್ತು 2018ರ ಚುನಾವಣೆಗಳಲ್ಲಿ ಸಮುದಾಯ ಬೆಂಬಲ ನೀಡಿದರೂ, ಪ್ರತಿಯಾಗಿ ಹಿತಾಸಕ್ತಿ ರಕ್ಷಣೆಯಾಗಲಿಲ್ಲ. ನವೆಂಬರ್‌ 2020ರಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧ ಬಳಿ ಉಪವಾಸ ಸತ್ಯಾಗ್ರಹದಿಂದ ಆರಂಭವಾದ ಮೀಸಲಾತಿ ಹಕ್ಕಿನ ಹೋರಾಟಕ್ಕೆ ಸ್ಪಂದನೆಯ ಭರವಸೆ ಸಿಕ್ಕಿದೆಯೇ ಹೊರತು, ಈಡೇರಿಲ್ಲ. ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿ 1 ವರ್ಷ 8 ತಿಂಗಳಾಗಿದ್ದು, ಈವರೆಗೆ ಏಕೆ ವರದಿ ಬಂದಿಲ್ಲ. ಈ ವಿಳಂಬವೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಮ್ಮ ಒಡಲಾಳದ ಬೇಸರವನ್ನು ತೋಡಿಕೊಂಡರು.

ಹೈಲೈಟ್ಸ್‌:

  • ಪಂಚಮಸಾಲಿಗೆ ಹಿಂದುಳಿದ ಪ್ರವರ್ಗ -2(ಎ) ಮೀಸಲು ಬೇಡಿಕೆ
  • ಸರಕಾರದ ಸ್ಪಷ್ಟ ನಿಲುವಿಗೆ ಆಗ್ರಹ
  • ಕೂಡಲೇ ಸರ್ವಪಕ್ಷ ಸಭೆ ಕರೆದು ಸ್ಪಷ್ಟ ಭರವಸೆ ನೀಡುವಂತೆ ಹಕ್ಕೊತ್ತಾಯ
jayamrutyunjaya
ಪಂಚಮಸಾಲಿ ಮೀಸಲಾತಿ ಹೋರಾಟ: ಸರ್ಕಾರಕ್ಕೆ ಜಯಮೃತ್ಯುಂಜಯ ಶ್ರೀ ಡೆಡ್‌ಲೈನ್
ಬೆಂಗಳೂರು: ಪರಿಶಿಷ್ಟರ ಮೀಸಲು ಪ್ರಮಾಣ ಹೆಚ್ಚಳದ ಬೆನ್ನಲ್ಲೇ ನಾನಾ ಸಮುದಾಯಗಳ ಮೀಸಲು ಸಂಬಂಧಿ ಹಕ್ಕೊತ್ತಾಯಗಳು ತೀವ್ರಗೊಂಡಿದ್ದು, ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ -2(ಎ)ಯಲ್ಲಿ ಸೇರ್ಪಡೆ ಮಾಡಬೇಕೆಂಬ ಬಹುದಿನಗಳ ಬೇಡಿಕೆ ವಿಚಾರದಲ್ಲಿ ಕೂಡಲೇ ಸರ್ವಪಕ್ಷ ಸಭೆ ಕರೆದು ಸ್ಪಷ್ಟ ಭರವಸೆ ನೀಡುವಂತೆ ಸರಕಾರದ ಮೇಲೆ ಒತ್ತಡ ಸೃಷ್ಟಿಯಾಗಿದೆ.
ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ಸೌಲಭ್ಯಕ್ಕಾಗಿ ಹಿಂದುಳಿದ ಪ್ರವರ್ಗ -3(ಬಿ) ಯಿಂದ ತೆಗೆದು ಪ್ರವರ್ಗ -2ಎಗೆ ಸೇರ್ಪಡೆ ಮಾಡುವ ಸಂಬಂಧ ಸರಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಅ.21 ರಂದು ಹುಕ್ಕೇರಿಯಲ್ಲಿ ಸಮುದಾಯದ ಲಕ್ಷ ಜನರ ಬೃಹತ್‌ ಸಮಾವೇಶ ನಡೆಯುತ್ತಿದ್ದು, ಅಷ್ಟರೊಳಗೆ ಸರಕಾರದ ತೀರ್ಮಾನ ಪ್ರಕಟವಾಗಬೇಕು. ತಪ್ಪಿದರೆ, ಕನಿಷ್ಠ 25 ಲಕ್ಷ ಜನರೊಟ್ಟಿಗೆ ವಿಧಾನಸೌಧ ಚಲೋ ಹೋರಾಟದ ತೀರ್ಮಾನವನ್ನು ಅದೇ ಸಮಾವೇಶದಲ್ಲಿ ಪ್ರಕಟಿಸಿ, ಮಾಡಿ ಇಲ್ಲವೇ ಮಡಿ ಹೋರಾಟ ಆರಂಭಿಸುವುದಾಗಿ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಬ್ಲಾಕ್ ಮೇಲ್ ಮಾಡ್ತಿದ್ದಾರೆ: ಕೆ.ಸಿ.ಪುಟ್ಟಸಿದ್ದಪ್ಪ
'ವಿಜಯ ಕರ್ನಾಟಕ' ಕಚೇರಿಗೆ ಬುಧವಾರ ಭೇಟಿ ನೀಡಿ ಸಂವಾದದಲ್ಲಿ ಪಾಲ್ಗೊಂಡ ಅವರು, 'ಸಮುದಾಯದ ನ್ಯಾಯಯುತವಾದ ಈ ಬೇಡಿಕೆ ವಿಚಾರದಲ್ಲಿ ಸರಕಾರದ ಸ್ಪಷ್ಟ ಭರವಸೆ ಬೇಕು. ಮಾಡುತ್ತೇವೆ ಅಥವಾ ಇಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಬೇಡಿಕೆ ಈಡೇರಿದರೆ ಸಿಎಂ ಬೊಮ್ಮಾಯಿ ಅವರಿಗೆ ವಜ್ರ, ಕಲ್ಲುಸಕ್ಕರೆಯೊಂದಿಗೆ ತುಲಾಭಾರ ಮಾಡಿ ಸನ್ಮಾನಿಸಿ, ಮಠದಲ್ಲಿ ಅವರ ಭಾವಚಿತ್ರ ಹಾಕುತ್ತೇವೆ. ಇಲ್ಲ ಎಂದಾದರೆ, ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಪಡೆದೇ ತೀರಲು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಇಳಿಯುತ್ತೇವೆ. ಸರಕಾರ ಕಾಲಕಾಲಕ್ಕೆ ನೀಡುತ್ತಾ ಬಂದಿರುವ ಕಾರಣಗಳನ್ನು ಮುಂದೆಯೂ ನಂಬಿಕೊಂಡು ಮತ್ತಷ್ಟು ಕಾಯಲು ಸಿದ್ಧರಿಲ್ಲ' ಎಂದು ಶ್ರೀಗಳು ಖಡಕ್ಕಾಗಿ ನುಡಿದರು.

ಸರಕಾರದ ವಿವೇಚನಾಧಿಕಾರ: 'ಕುಲಶಾಸ್ತ್ರೀಯ ಅಧ್ಯಯನ, ಆಯೋಗದ ವರದಿ ಅಥವಾ ಮತ್ತೊಂದು ಸಮುದಾಯದ ಬೇಡಿಕೆ ಈಡೇರಿಸುವ ಮಾತುಗಳು ಸಬೂಬು ಅಷ್ಟೇ. ಈ ಹಿಂದೆ ಬಿ. ಎಸ್‌. ಯಡಿಯೂರಪ್ಪ ಅವರು ನಮ್ಮದೇ ಸೋದರ ಸಮುದಾಯಗಳನ್ನು ಪ್ರವರ್ಗ -2(ಎ)ಗೆ ಸೇರ್ಪಡೆ ಮಾಡಿರಲಿಲ್ಲವೇ? ಆಗ ಅಗತ್ಯವಿಲ್ಲದ ಆಯೋಗದ ಅಧ್ಯಯನ ವರದಿಗಳು ಈಗ ಮಾತ್ರ ಬೇಕೆ? ಇದು ರಾಜ್ಯ ಸರಕಾರದ ವಿವೇಚನಾಕಾರಕ್ಕೆ ಸಂಬಂಧಿಸಿದ್ದು. ನಮ್ಮ ಹಕ್ಕೊತ್ತಾಯ ನ್ಯಾಯಬದ್ಧವಾಗಿದೆ. ಸರಕಾರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲೇಬೇಕು' ಎಂದು ಸರಕಾರಕ್ಕೆ ಸ್ವಾಮೀಜಿ ತಾಕೀತು ಮಾಡಿದರು.

Panchamasali reservation - ಮೀಸಲಾತಿಗೆ ಆಗ್ರಹಿಸಿ 21ರಂದು ಹುಕ್ಕೇರಿಯಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ
'ಹಿಂದುಳಿದ ಪ್ರವರ್ಗಗಳಲ್ಲಿ ಶೇ.32 ಮೀಸಲಾತಿ ಪ್ರಮಾಣವನ್ನು ರಾಜ್ಯ ಸರಕಾರವೇ ಸಮುದಾಯಗಳಿಗೆ ಹಂಚಿಕೆ ಮಾಡಿದೆ. ಈಗ ಬದಲಾವಣೆ ಮಾಡಲೂ ಸರಕಾರಕ್ಕೇ ಅಧಿಕಾರವಿದೆ. ಪ್ರವರ್ಗ -3(ಬಿ) ಯಲ್ಲಿ ಜಾತಿಗಳ ಸಂಖ್ಯೆ ಕಡಿಮೆ ಇದ್ದರೂ ಜನಸಂಖ್ಯೆ ಜಾಸ್ತಿ ಇದ್ದು, ಶೇ.6 ಮೀಸಲಾತಿ ಇದೆ. ಪ್ರವರ್ಗ -2ಯಲ್ಲಿ ಜಾತಿಗಳ ಸಂಖ್ಯೆ ಹೆಚ್ಚಿದ್ದರೂ ಜನಸಂಖ್ಯೆ ಕಡಿಮೆ ಇದ್ದು, ಶೇ.15 ಮೀಸಲಾತಿ ಇದೆ. ದೀಕ್ಷೆ ಲಿಂಗಾಯಿತ, ಗೌಡ ಲಿಂಗಾಯತ, ಮಲೆನಾಡು ಜಿಲ್ಲೆಗಳ ಮಲೆ ಲಿಂಗಾಯತ ಸೇರಿ 1 ಕೋಟಿ 25 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಪಂಚಮಸಾಲಿ ಲಿಂಗಾಯತ ಸಮುದಾಯ ಹೊಂದಿದೆ. ಮುಂದುವರಿದ ನಮ್ಮದೇ ಸೋದರ ಸಣ್ಣ ಪುಟ್ಟ ಜಾತಿಗಳಿಗೆ ಮೀಸಲಾತಿ ಸೌಲಭ್ಯ ಸಿಗುತ್ತಿದ್ದು, ಬಹುಸಂಖ್ಯಾತ ಪಂಚಮಸಾಲಿ ಸಮುದಾಯದ ಮಕ್ಕಳು ಮಾತ್ರವೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ' ಎಂದು ಸ್ವಾಮೀಜಿಯವರು ತಮ್ಮ ಹೋರಾಟದ ನಿರ್ಣಾಯಕ ಘಟ್ಟಕ್ಕೆ ಕಾರಣ ನೀಡಿದರು.

ಸಂಶಯಕ್ಕೆ ಎಡೆಮಾಡಿಕೊಟ್ಟ ವಿಳಂಬ: ಲಿಂಗಾಯತ ವಿಶಾಲ ಅರ್ಥದ ಸದ್ಭಳಕೆ ಮಾಡಿಕೊಂಡು ಬಹಳಷ್ಟು ಮಂದಿ ಅಧಿಕಾರ ಅನುಭವಿಸಿದರೇ ಹೊರತು, ಸಮುದಾಯದ ಹಿತಾಸಕ್ತಿಗೆ ಸ್ಪಂದಿಸಲಿಲ್ಲ. ಸಮುದಾಯದಿಂದ ಅಧಿಕಾರ ಪಡೆದು ತಮ್ಮ ನಿರ್ದಿಷ್ಟ ಒಳಪಂಗಡಕ್ಕೆ ಅನುಕೂಲ ಮಾಡಿಕೊಟ್ಟರು ಮತ್ತು ಬಹುಸಂಖ್ಯಾತ ಲಿಂಗಾಯತ ಪಂಚಮಸಾಲಿಗಳಿಗೆ ನ್ಯಾಯ ಕೊಡಲಿಲ್ಲ. ಲಿಂಗಾಯತ ಹೆಸರಿನಲ್ಲಿ ಮತ ಭಿಕ್ಷೆ ಕೇಳಿ ಅಧಿಕಾರ ಪಡೆದವರು ಸಮುದಾಯದ ಹಿತ ಕಾಯಲಿಲ್ಲ. 2008, 2013 ಮತ್ತು 2018ರ ಚುನಾವಣೆಗಳಲ್ಲಿ ಸಮುದಾಯ ಬೆಂಬಲ ನೀಡಿದರೂ, ಪ್ರತಿಯಾಗಿ ಹಿತಾಸಕ್ತಿ ರಕ್ಷಣೆಯಾಗಲಿಲ್ಲ. ನವೆಂಬರ್‌ 2020ರಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧ ಬಳಿ ಉಪವಾಸ ಸತ್ಯಾಗ್ರಹದಿಂದ ಆರಂಭವಾದ ಮೀಸಲಾತಿ ಹಕ್ಕಿನ ಹೋರಾಟಕ್ಕೆ ಸ್ಪಂದನೆಯ ಭರವಸೆ ಸಿಕ್ಕಿದೆಯೇ ಹೊರತು, ಈಡೇರಿಲ್ಲ. ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿ 1 ವರ್ಷ 8 ತಿಂಗಳಾಗಿದ್ದು, ಈವರೆಗೆ ಏಕೆ ವರದಿ ಬಂದಿಲ್ಲ. ಈ ವಿಳಂಬವೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ' ಎಂದು ಜಯಮೃತ್ಯುಂಜಯ ಸ್ವಾಮೀಜಿ ತಮ್ಮ ಒಡಲಾಳದ ಬೇಸರವನ್ನು ತೋಡಿಕೊಂಡರು.


ಕೂಡಲ ಸಂಗಮದಿಂದ ಬೆಂಗಳೂರು ಅರಮನೆ ಮೈದಾನದ ವರೆಗೆ ಪಾದಯಾತ್ರೆ ನಡೆದಿದ್ದು, ಮೀಸಲಾತಿಗಾಗಿ ನಡೆದ ದೊಡ್ಡ ಸಮಾವೇಶ ಇದಾಗಿದೆ. ಒತ್ತಡ ಸೃಷ್ಟಿಯಾದಾಗ ಭರವಸೆ ನೀಡಿ, ಬಳಿಕ ಮುಂದೂಡುವ ವಿಳಂಬ ಧೋರಣೆಯಿಂದ ಸಮುದಾಯಕ್ಕೆ ವಂಚನೆಯಾಗಿದೆ. ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರು ಸಮುದಾಯದ ಬೇಡಿಕೆ ಈಡೇರಿಸುವ ಖಚಿತ ಭರವಸೆ ನೀಡಿದ್ದರು. ಈಗ ಅವರ ಉತ್ತರಾಧಿಕಾರಿಯಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಸ್ಪಷ್ಟ ಮತ್ತು ಅಂತಿಮ ತೀರ್ಮಾನವನ್ನಷ್ಟೇ ಸಮುದಾಯ ಎದುರು ನೋಡುತ್ತಿದೆ. ಅ.21ರ ಹುಕ್ಕೇರಿ ಸಮಾವೇಶದೊಳಗೇ ಹೌದು ಅಥವಾ ಇಲ್ಲ ಎಂಬುದು ಇತ್ಯರ್ಥವಾಗಬೇಕು' ಎಂದು ಸ್ವಾಮೀಜಿ ಅಂತಿಮ ಗಡುವು ನೀಡಿದರು.
ದಿಲೀಪ್ ಡಿ. ಆರ್.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ