ಆ್ಯಪ್ನಗರ

ಸರ್ಕಾರಿ ಗ್ರೂಪ್‌ ಸಿ ಹುದ್ದೆಗಳ ನೇಮಕ: ಪರೀಕ್ಷೆ ಮಾದರಿ, ಪಠ್ಯಕ್ರಮ ಮಾಹಿತಿ ಇಲ್ಲಿದೆ..

Group C Non Technical Post Selection Process: ಕರ್ನಾಟಕದಲ್ಲಿ ನೂತನ ಸರ್ಕಾರ ರಚನೆ ಆಗಿದೆ. ಹೊಸ ಸರ್ಕಾರದಲ್ಲಿ ಹೊಸ ನೇಮಕಾತಿಗಳ ಸಾಧ್ಯತೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಗ್ರೂಪ್‌ ಸಿ ಹುದ್ದೆಗಳಿಗೂ ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿವೆ. ಆದ್ದರಿಂದ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗ್ರೂಪ್‌ ಸಿ ನಾನ್‌ ಟೆಕ್ನಿಕಲ್‌ ಹುದ್ದೆಗಳ ಪರೀಕ್ಷೆ ಮಾದರಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ.

Vijaya Karnataka Web 18 Jul 2023, 4:17 pm
Vijaya Karnataka Web karnataka government group c non technical jobs exam pattern syllabus study tips
ಸರ್ಕಾರಿ ಗ್ರೂಪ್‌ ಸಿ ಹುದ್ದೆಗಳ ನೇಮಕ: ಪರೀಕ್ಷೆ ಮಾದರಿ, ಪಠ್ಯಕ್ರಮ ಮಾಹಿತಿ ಇಲ್ಲಿದೆ..
ಕರ್ನಾಟಕ ಸರ್ಕಾರವು ವಿವಿಧ ಹುದ್ದೆಗಳ ನೇಮಕಾತಿಗೆ ನಿಧಾನವಾಗಿ ಚಾಲನೆ ನೀಡುತ್ತಿದೆ. ಅವುಗಳ ಪೈಕಿ ಪೊಲೀಸ್‌ ಇಲಾಖೆ ಹುದ್ದೆಗಳು, ರಸ್ತೆ ಸಾರಿಗೆ ನಿಗಮದ ಹುದ್ದೆಗಳು, ಕೆಎಎಸ್‌ ಹುದ್ದೆಗಳು. ಕೆಲವು ಹುದ್ದೆಗಳಿಗೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದರೆ, ಇನ್ನೂ ಕೆಲವು ಹುದ್ದೆಗಳಿಗೆ ವೃಂದ ಮತ್ತು ಮೀಸಲಾತಿ ನಿಯಮಗಳ ಆಧಾರದಲ್ಲಿ ಹುದ್ದೆಗಳ ವಿಂಗಡಣೆ, ಇತರೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದಿಂದ ಗ್ರೂಪ್‌ ಸಿ ನಾನ್‌ ಟೆಕ್ನಿಕಲ್ ಹುದ್ದೆಗಳು ಭರ್ತಿ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯ ಪರೀಕ್ಷೆ ಮಾದರಿ ಹೇಗಿರುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.

ಗ್ರೂಪ್‌ ಸಿ ಹುದ್ದೆ ನೇಮಕಾತಿ ಪ್ರಾಧಿಕಾರಗಳು ಯಾವುವು?

ಸಾಮಾನ್ಯವಾಗಿ ಕರ್ನಾಟಕ ಸರ್ಕಾರದ ಗ್ರೂಪ್‌ ಸಿ ನಾನ್‌ ಟೆಕ್ನಿಕಲ್ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತದೆ. ಆದರೆ ಕೆಲವು ಇಲಾಖೆಯ ವಿಶೇಷ ನೇಮಕಾತಿ ಸಂದರ್ಭದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹ ಅಧಿಸೂಚಿಸಿ, ನೇಮಕ ಪ್ರಕ್ರಿಯೆ ನಡೆಸುವ ಸಾಧ್ಯತೆಗಳಿರುತ್ತವೆ.

ಗ್ರೂಪ್‌ ಸಿ ಹುದ್ದೆ ಪರೀಕ್ಷೆ ಮಾದರಿ ಹೇಗಿರುತ್ತದೆ?

ಕರ್ನಾಟಕ ಗ್ರೂಪ್‌ ಸಿ ನಾನ್‌ ಟೆಕ್ನಿಕಲ್ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ 2 ಪತ್ರಿಕೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ. ಅವುಗಳೆಂದರೆ..
ಪತ್ರಿಕೆ -1 : ಸಾಮಾನ್ಯ ಪತ್ರಿಕೆ (ಪರೀಕ್ಷಾ ಸಮಯ 01:30 ಗಂಟೆ)
ಪತ್ರಿಕೆ -2 : ಸಂವಹನ ಪತ್ರಿಕೆ (ಪರೀಕ್ಷಾ ಸಮಯ 02 ಗಂಟೆ)
ಪ್ರತಿ ಪ್ರಶ್ನೆ ಪತ್ರಿಕೆ 100 ಅಂಕಗಳಿಗೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಸಂವಹನ ಪತ್ರಿಕೆಯು ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಗಣಕಯಂತ್ರ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊಂದಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು, ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.

ಗ್ರೂಪ್‌ ಸಿ ಹುದ್ದೆ ಪರೀಕ್ಷೆ ಕುರಿತ ವಿಶೇಷ ಸೂಚನೆ

ಸ್ಪರ್ಧಾತ್ಮಕ ಪರೀಕ್ಷೆಗಳು ಎರಡು ಮಟ್ಟದ್ದಾಗಿರುತ್ತದೆ. ಪದವಿ ವಿದ್ಯಾರ್ಹತೆಯುಳ್ಳ ಹುದ್ದೆಗಳಿಗೆ ಒಂದು ಪರೀಕ್ಷೆ ಇರುತ್ತದೆ. ಪದವಿ ಪೂರ್ವ ವಿದ್ಯಾರ್ಹತೆಯುಳ್ಳ ಹುದ್ದೆಗಳಿಗೆ ಒಂದು ಪರೀಕ್ಷೆ ಇರುತ್ತದೆ. ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಹತೆಯುಳ್ಳ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎರಡೂ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ.
ಪದವಿ ಹಂತದ ಎಷ್ಟೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಒಂದೇ ಪರೀಕ್ಷೆ ಬರೆಯಬೇಕಾಗುತ್ತದೆ. ಹಾಗೂ ಈ ಪರೀಕ್ಷೆಯ ಫಲಿತಾಂಶವನ್ನು ಎಲ್ಲಾ ಹುದ್ದೆಗಳಿಗೂ ಪರಿಗಣಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿರುತ್ತವೆ?

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ / ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲಬುರ್ಗಿ, ಹಾಗೂ ಆಯೋಗವು ನಿಗದಿಪಡಿಸುವ ಇತರೆ ಯಾವುದೇ ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು.
ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿರುತ್ತದೆ.

ಭರ್ಜರಿ ಗುಡ್‌ ನ್ಯೂಸ್‌: ಶೀಘ್ರದಲ್ಲೇ ಕೆಎಎಸ್ ಹುದ್ದೆಗಳಿಗೆ ಅಧಿಸೂಚನೆ!

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ

ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನವೆಂದು ರಾಜ್ಯ ಸರ್ಕಾರದಿಂದ ಘೋಷಿಸಲ್ಪಟ್ಟ ಇತರೆ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಿಂತ ಮೇಲ್ಮಟ್ಟದ ಯಾವುದೇ ಪರೀಕ್ಷೆಯಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಅಥವಾ ದ್ವಿತೀಯ ಭಾಷೆಯಾಗಿ ಅಥವಾ ಐಚ್ಛಿಕ ವಿಷಯವಾಗಿ ಅಥವಾ ಮೇಲಿನ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತೇರ್ಗಡೆಯಾಗಿರುವ ಅಥವಾ ಕೆಪಿಎಸ್‌ಸಿ ಈ ಹಿಂದೆ ನಡೆಸಲ್ಪಟ್ಟ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲಿ ಅಂತಹವರಿಗೆ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಒಂದು ವೇಳೆ ಈ ಯಾವುದೇ ಪರೀಕ್ಷೆಗಳು, ತರಗತಿಗಳಲ್ಲಿ ಕನ್ನಡ ಭಾಷೆ ವ್ಯಾಸಂಗ ಮಾಡದಿದ್ದಲ್ಲಿ, 150 ಅಂಕಗಳಿಗೆ ನಡೆಸುವ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯನ್ನು ತೆಗೆದುಕೊಳ್ಳುಬೇಕು. ಕನಿಷ್ಠ 50 ಅಂಕಗಳನ್ನು ಪಡೆದು ಪಾಸ್ ಆಗಲೇಬೇಕು. ಆದರೆ ಈ ಅಂಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.

ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಹೇಗೆ ಓದಬೇಕು? ಏನು ಓದಬೇಕು?., ಇಲ್ಲಿದೆ ಸಲಹೆ..

ಸಿದ್ಧತೆ ಹೇಗೆ?

ಸಾಮಾನ್ಯ ಪತ್ರಿಕೆಗೆ ಅಭ್ಯರ್ಥಿಗಳು ಕನಿಷ್ಠ 6ನೇ ತರಗತಿ ಇಂದ 12 ನೇ ತರಗತಿವರೆಗಿನ ಶಾಲಾ ಪಠ್ಯಗಳನ್ನು ಓದಿಕೊಳ್ಳಬೇಕು. ಶಾರ್ಟ್‌ ನೋಟ್ಸ್‌ ಮಾಡುವ ಮೂಲಕ ಆಗಾಗ ಪುನರಾವರ್ತನೆ ಮಾಡಿಕೊಳ್ಳಬೇಕು. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯ ಪ್ರತಿ ಮಾಸಿಕ ನಿಯತಕಾಲಿಕೆಗಳನ್ನು ಓದುವುದು, ದಿನನಿತ್ಯ ಪತ್ರಿಕೆಗಳನ್ನು ಓದುವ ಮೂಲಕ ಸಾಮಾನ್ಯ ಪತ್ರಿಕೆಗೆ ಸಿದ್ಧತೆ ನಡೆಸಬೇಕು.
​ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಗಣಕಯಂತ್ರ ಜ್ಞಾನಕ್ಕೆ ವಿಷಯವಾರು ವಿಶೇಷ ಬುಕ್‌ಗಳನ್ನು ಖರೀದಿಸಿ ಓದಿಕೊಳ್ಳಬಹುದು. ಈ ಕುರಿತು ಹೆಚ್ಚಿನ ಜ್ಞಾನಕ್ಕಾಗಿ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದಲ್ಲಿ, ತಯಾರಿ ಸುಲಭವಾಗುತ್ತದೆ.

ಮೊದಲ ಜಾಬ್‌ನಲ್ಲಿ ಸಂಬಳ ಮಾತುಕತೆ ಹೇಗಿರಬೇಕು? ಯಾವೆಲ್ಲಾ ಅಂಶಗಳನ್ನು ಪರಿಗಣಿಸಬೇಕು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ