ಆ್ಯಪ್ನಗರ

ವಾಸ್ತವದಲ್ಲಿ ಬದುಕಲು ಕಲಿಯಿರಿ

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಘಟನೆ ಇದು. ಜಪಾನಿನ ಸೈನಿಕರಿಗೆ ಅಮೆರಿಕದ ಸೇನೆ ತಮ್ಮ ಮೇಲೆ ಆಕ್ರಮಣ ಮಾಡಲಿದೆ ಎಂಬುದು ಖಚಿತವಾಗಿತ್ತು. ಯಾವುದೇ ಕ್ಷಣದಲ್ಲಿಯಾದರೂ ಅಮೆರಿಕ ಸೇನೆ ಆಗಮಿಸಿ, ನಮ್ಮನ್ನು ಸೋಲಿಸಲಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅವರು ಜೀವ ಭಯದಿಂದ ತತ್ತರಿಸಿದರು.

Vijaya Karnataka 15 Apr 2019, 5:00 am
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಘಟನೆ ಇದು. ಜಪಾನಿನ ಸೈನಿಕರಿಗೆ ಅಮೆರಿಕದ ಸೇನೆ ತಮ್ಮ ಮೇಲೆ ಆಕ್ರಮಣ ಮಾಡಲಿದೆ ಎಂಬುದು ಖಚಿತವಾಗಿತ್ತು. ಯಾವುದೇ ಕ್ಷಣದಲ್ಲಿಯಾದರೂ ಅಮೆರಿಕ ಸೇನೆ ಆಗಮಿಸಿ, ನಮ್ಮನ್ನು ಸೋಲಿಸಲಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅವರು ಜೀವ ಭಯದಿಂದ ತತ್ತರಿಸಿದರು. ಎಲ್ಲರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಶಿಬಿರದಲ್ಲಿಯೇ ಗಾಭರಿಯಿಂದ ಅವಿತು ಕುಳಿತಿದ್ದರು.
Vijaya Karnataka Web personality development tips for job seekers
ವಾಸ್ತವದಲ್ಲಿ ಬದುಕಲು ಕಲಿಯಿರಿ


ಆದರೆ ಆ ಶಿಬಿರದ ಬಾಗಿಲನ್ನು ಅಮೆರಿಕ ಸೇನೆಯವರು ಬಂದು ಮುಚ್ಚಿರಲಿಲ್ಲ. ಈ ಸೈನಿಕರನ್ನು ಬಂಧಿಸಿ ಕೂಡಿ ಹಾಕಿರಲೂ ಇಲ್ಲ. ಆದರೆ ಅವಿತು ಕುಳಿತವರಿಗೆ ಶಿಬಿರದ ಬಾಗಿಲು ತೆರೆದಿದೆ ಎಂಬುದೇ ಗೊತ್ತೇ ಇರಲಿಲ್ಲ. ಶಿಬಿರದ ಬಾಗಿಲು ಹಾಕಿರಬೇಕೆಂದುಕೊಂಡು ಅವರೆಲ್ಲಾ ಬಂಧಿಗಳಾಗಿಯೇ ಇದ್ದುಬಿಟ್ಟಿದ್ದರು.

ಶಿಬಿರದ ಬಾಗಿಲು ಹಾಕಿಲ್ಲವೆಂಬುದು ಗೊತ್ತಿದ್ದ ಸೈನಿಕರು ಮಾತ್ರ ಪರಾರಿಯಾಗಿದ್ದರು. ಶಿಬಿರದಲ್ಲಿರುವ ನಮ್ಮನ್ನು ಬಂಧಿಸಲಾಗಿದೆ. ನಾವು ಶಿಬಿರದಲ್ಲಿ ಸಿಕ್ಕಿಕೊಂಡಿದ್ದೇವೆ ಎಂದುಕೊಂಡವರು ಇನ್ನೂ ಬಂಧಿಗಳಾಗಿಯೇ ಉಳಿದುಬಿಟ್ಟಿದ್ದರು.

ಮಾರನೇಯ ದಿನ ಅಮೆರಿಕ ಸೇನೆಯ ಯೋಧರು ಆಗಮಿಸಿ, ' ನೀವು ಈಗಾಗಲೇ ಬಂಧಮುಕ್ತರಾಗಿದ್ದೀರಿ. ನಿಮ್ಮನ್ನು ಯಾರೂ ಕೂಡಿ ಹಾಕಿರಲಿಲ್ಲ. ದಯಮಾಡಿ ಹೊರಬನ್ನಿ' ಎಂದು ಘೋಷಿಸಿದರು. ಆಗ ಶಿಬಿರದಲ್ಲಿಯೇ ಉಳಿದುಕೊಂಡಿದ್ದವರಿಗೆ ತಾವು ಶಿಬಿರದಲ್ಲಿ ಸಿಕ್ಕಿಹಾಕಿಕೊಂಡರಿಲಿಲ್ಲ ಎಂಬುದು ಮನವರಿಕೆಯಾಗಿತ್ತು!

****

ನಿಮಗೆ ಈ ಘಟನೆ ಓದಿದಾಗ ಆನೆಯನ್ನು ಸಣ್ಣ ಹಗ್ಗದಿಂದ ಕಟ್ಟಿಹಾಕುವುದು ನೆನಪಾಗಿರಬೇಕು. ಅದು ಕೂಡ ಸಣ್ಣ ಹಗ್ಗದಿಂದ ಕಟ್ಟಿಹಾಕಿದ್ದರೂ, ದೊಡ್ಡ ಸರಪಳಿಯಿಂದಲೇ ಬಂಧಿಸಿಟ್ಟಿದ್ದಾರೆ ಎಂದು ಕೊಂಡು ಸುಮ್ಮನಿರುತ್ತದೆ. ಹೀಗೆ ನಮ್ಮಲ್ಲಿ ಅನೇಕರು ವಾಸ್ತವವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಬದುಕುತ್ತಿರುತ್ತೇವೆ. ಕೆಲವರಿಗಂತೂ ನಮ್ಮ ಮನೆಯ ನಾಲ್ಕು ಗೋಡೆಗಳ ಆಚೆ ಏನು ನಡೆಯುತ್ತದೆ ಎಂಬುದೂ ತಿಳಿದಿರುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಬಂಧಿಗಳಾಗಿಬಿಟ್ಟಿರುತ್ತಾರೆ. ಇದೇ ರೀತಿ ಮನಸ್ಸಿನಲ್ಲಿಯೂ ಬಂಧಿಗಳಾಗಿರುವವರೂ ಇದ್ದಾರೆ. ಈ ಬಂಧನ ಎಂಬುದು ಕೇವಲ ಮಾನಸ್ಸಿನ ಸ್ಥಿತಿ. ಜಗತ್ತು ಮತ್ತು ಜೀವನದ ಬಗೆಗಿನ ಜ್ಞಾನ ಸೀಮಿತವಾಗಿಬಿಟ್ಟಿರುತ್ತದೆ.

ಬಾವಿಯಲ್ಲಿನ ಕಪ್ಪೆಯಂತೆಯೇ ಬದುಕುವುದರಲ್ಲಿಯೇ ಜನರು ಖುಷಿಪಡುತ್ತಾರೆ. ವಿಶಾಲವಾದ ಜಗತ್ತಿದೆ ಎಂಬುದನ್ನು ತಿಳಿಯಲು ಕೂಡಾ ಅವರಿಗೆ ಇಷ್ಟವಿರುವುದಿಲ್ಲ. ಸಮುದ್ರ ತಲುಪಲು ಪ್ರಯತ್ನವನ್ನೇ ಮಾಡುವುದಿಲ್ಲ. ಬಹುತೇಕ ವೇಳೆ ನಾವು ಜೀವನದಲ್ಲಿ ಎದುರಾಗುವ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳುವುದಿಲ್ಲ. ಒಂದು ರೀತಿಯ ಕಂಪೋರ್ಟ್‌ ಜೋನ್‌ನಲ್ಲಿ ತಮ್ಮಷ್ಟಕ್ಕೆ ತಾವು ಇದ್ದುಬಿಟ್ಟಿರುತ್ತೇವೆ. ಅಂದಹಾಗೆ ವಾಸ್ತವ ಎಂದರೇನು ಗೊತ್ತೇ, ಸರಳವಾಗಿ ಹೇಳುವುದಾದರೆ ಅದು ನಿಮ್ಮ ಅನುಭವ ಅಷ್ಟೆ. ನಿಮ್ಮ ಸುತ್ತ ಮುತ್ತ ಏನೆಲ್ಲಾ ನಡೆಯುತ್ತದೆಯೋ ಅದೆಲ್ಲವೂ ವಾಸ್ತವ. ಒಂದು ವೇಳೆ ಅದು ವಾಸ್ತವ ಆಗಿರದಿದ್ದರೆ ಕನಸು!

ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೂ ವಾಸ್ತವದಲ್ಲಿ ಬದುಕುವುದನ್ನು ಕಲಿಯಬೇಕು. ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತಿದೆ? ನನ್ನ ಮುಂದೆ ಯಾವೆಲ್ಲಾ ಅವಕಾಶಗಳಿವೆ? ಮುಂದೆ ನಾನೇನೂ ಮಾಡಬಹುದು? ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವುದನ್ನು ಕಲಿಯಬೇಕು.

ಯಾವುದೇ ಪರೀಕ್ಷೆಯನ್ನು ಕಟ್ಟುವಾಗ ನಿಮಗೆ ನೀವೇ ಲೆಕ್ಕಾಚಾರಗಳನ್ನು ಹಾಕಿಕೊಂಡು ನಿಮ್ಮ ಸುತ್ತ ಕೋಟೆ ಕಟ್ಟಿಕೊಳ್ಳಬೇಡಿ. ಮುಕ್ತವಾಗಿರಿ, ಈ ಪರೀಕ್ಷೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ದೃಢ ಸಂಕಲ್ಪ ಮಾಡಿ, ಪರೀಕ್ಷೆಗೆ ಸಿದ್ಧತೆಯನ್ನು ಆರಂಭಿಸಿ. ಈ ಪರೀಕ್ಷೆಯಲ್ಲಿ ಅಕ್ರಮ ನಡೆಯಬಹುದು..., ದುಡ್ಡು ಕೊಟ್ಟವರನ್ನೇ ನೇಮಕ ಮಾಡಿಕೊಳ್ಳಬಹುದು... ಹೀಗೆ ನೀವೇ ಊಹೆ ಮಾಡಿಕೊಂಡು ಬಂಧನಕ್ಕೊಳಗಾಗಬೇಡಿ. ಏನೇ ನಡೆದರೂ ಅದನ್ನು ಎದುರಿಸುತ್ತೇನೆ. ನನ್ನ ಪ್ರಯತ್ನವನ್ನು ನಾನು ಮಾಡಿಯೇ ತೀರುತ್ತೇನೆ ಎಂದು ಮುನ್ನುಗ್ಗಿ. ಆಗ ಅನ್ಯಾಯ ನಡೆಯುತ್ತಿದ್ದರೆ ಅದನ್ನು ಪ್ರತಿಭಟಿಸುವ ಧೈರ್ಯ ಕೂಡ ನಿಮಗೆ ಬರುತ್ತದೆ.

'ನನ್ನಿಂದ ಇದು ಸಾಧ್ಯವಾಗದು' ಎಂಬುದು ಒಂದು ಬಂಧನ. ಇದು ಆನೆಯನ್ನು ಸರಪಳಿಯಲ್ಲ, ಹಗ್ಗದಿಂದ ಕಟ್ಟಿಹಾಕಿದಂತೆ. ನೀವು ಈ ಬಂಧನದಿಂದ ಹೊರಬಂದಾಗ ಮಾತ್ರ ಆಕಾಶದಷ್ಟು ಅವಕಾಶ ನಿಮ್ಮ ಮುಂದಿರುತ್ತದೆ, ಮರೆಯಬೇಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ