ಆ್ಯಪ್ನಗರ

ಅರ್ಜುನನ ಬೆನ್ನ ಮೇಲಿನ ಜಂಬೂ ಸವಾರಿಗೆ ಇವರೇ 'ಆಧಾರ ಸ್ತಂಭ'

ಕಳೆದ 15 ದಿನಗಳಿಂದಲೂ ಅರಮನೆಯ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದ ಪ್ರಾಂಗಣದಲ್ಲಿ ಹಿರಿಯ ಮಾವುತರಾದ ಪಾಷಾ ಹಾಗೂ ಝಕಾವುಲ್ಲರವರು ಗಾದಿ, ನಾಮ್ದಾ ತಯಾರಿಕೆಯಲ್ಲಿ ತೊಡಗಿದ್ದಾರೆ.

Vijaya Karnataka 7 Oct 2019, 8:21 pm

ಮೈಸೂರು: ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ. ಈ ಮೆರವಣಿಗೆಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಅರ್ಜುನ ಆನೆ ಹೊರಲಿದೆ. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಬೆನ್ನ ಮೇಲಿನ ಗಾದಿ ಹಾಗೂ ನಾಮ್ದ. ಇದೊಂಥರಾ ಅಂಬಾರಿಯ ಆಧಾರ ಸ್ತಂಭ.
Vijaya Karnataka Web dasara-elephant jambu savari


ಕಳೆದ 15 ದಿನಗಳಿಂದಲೂ ಅರಮನೆಯ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದ ಪ್ರಾಂಗಣದಲ್ಲಿ ಹಿರಿಯ ಮಾವುತರಾದ ಪಾಷಾ ಹಾಗೂ ಝಕಾವುಲ್ಲರವರು ಗಾದಿ, ನಾಮ್ದಾ ತಯಾರಿಕೆಯಲ್ಲಿ ತೊಡಗಿದ್ದಾರೆ.

ಮೈನವಿರೇಳಿಸುವ ಸಮರಕಲೆ ವಜ್ರಮುಷ್ಠಿ ಕಾಳಗದ ಹಿಂದಿನ ವಿಶೇಷ ಕಥೆ

ಈ ಆನೆಯ ಗಾದಿಯನ್ನು ತಯಾರಿಸಲು ವಿಶೇಷ ತರಬೇತಿಯನ್ನು ಅನುಭವಿ ಕೆಲಸಗಾರರು ಹೊಂದಿರಬೇಕು. ಈ ಕೆಲಸಕ್ಕಾಗಿಯೇ ನೇಮಕಗೊಂಡಿರುವ ಝಕಾವುಲ್ಲಾ ಮತ್ತು ಪಾಷಾ 1971ರಿಂದಲೂ ಈ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರೂ ಕುಟುಂಬದ ಹಿರಿಯರಿಂದ ಈ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ನೂರಾರು ವರ್ಷದಿಂದ ಇವರ ಕುಟುಂಬಸ್ಥರು ಈ ಕೆಲಸ ಮಾಡುತ್ತಿದ್ದು, ಅದು ಇವರ ತಲೆಮಾರಿನಲ್ಲೂ ಮುಂದುವರಿದಿರುವುದು ವಿಶೇಷ.



ಆನೆಯ ಬೆನ್ನ ಮೇಲೆ ಹೊರಲು 5 ಅಡಿ ಅಗಲ, 6 ಅಡಿ ಉದ್ದ ಗಾದಿ ತಯಾರಾಗುತ್ತದೆ. ಈ ಗಾದಿಯ ಮಧ್ಯ ಭಾಗದಲ್ಲಿ 1 ಅಡಿ ಅಗಲ ಚೌಕಾಕೃತಿಯ ರಂಧ್ರ ಮಾಡಲಾಗುತ್ತದೆ. ಇದೇ ರಂಧ್ರದಲ್ಲಿ ಆನೆಯ ಬೆನ್ನಿನ ಮೂಳೆ ಸೇರುವುದರಿಂದ ಅಂಬಾರಿ ಸಮತಟ್ಟಾಗಿ ಕೂರಲು ಅನುಕೂಲವಾಗುತ್ತದೆ.

ಈ ಗಾದಿಗಳ ತಯಾರಿಕೆ ವೇಳೆ ಜೊಂಡು ಹುಲ್ಲು ಬಳಸಲಾಗುತ್ತದೆ. ಈ ಗಾದಿ ಹಾಗೂ ನಾಮ್ದ ತಯಾರಿಕೆಗೆ 20 ದಿನದ ಮುಂಚಿತವಾಗಿಯೇ ವಿವಿಧ ಕೆರೆಯಲ್ಲಿ ಬೆಳೆದಿರುವ ಹುಲ್ಲನ್ನು ಕಿತ್ತು ತಂದು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಹುಲ್ಲು ಮೃದುವಾಗಿದ್ದು, ಮೊದಲು ಈ ಜೊಂಡು ಹುಲ್ಲನ್ನು ಸುರುಳಿಯಾಕಾರದಲ್ಲಿ ಸುತ್ತಿ ಗೋಣಿ ಚೀಲದಲ್ಲಿ ಜೋಡಿಸಿ ಹೊಲಿಯುತ್ತಾರೆ. ಅಂತಿಮವಾಗಿ ಇದಕ್ಕೆ ಗಾದಿಯ ರೂಪ ಕೊಟ್ಟು ತಯಾರಿಸಲಾಗುತ್ತದೆ. ಇದರ ಮೇಲೆ ದಪ್ಪದಾದ ನಾಮ್ದವನ್ನು ಇಡುತ್ತಾರೆ.



ಹೀಗೆ ಒಂದು ಗಾದಿಯನ್ನು ಹಾಗೂ ನಾಮ್ದಾ ತಯಾರಿಕೆಗೆ ಮೂರು-ನಾಲ್ಕು ದಿನಗಳು ಬೇಕಾಗುತ್ತದೆ. ಒಟ್ಟಾರೆ ಈ ಎರಡೂ ಅಂದಾಜು 300 ಕೆ.ಜಿ ತೂಕವಿರುತ್ತದೆ. ಹೀಗೆ ಹುಲ್ಲಿನಿಂದ ಗಾದಿಯನ್ನು ತಯಾರಿಸಿ ಆನೆಯ ಮೇಲಿಟ್ಟರೆ ಸ್ಪಂಜಿನಂತ ಅನುಭವ ಆನೆಯದ್ದಾಗುತ್ತದೆ. ಇದರಿಂದ ಅಂಬಾರಿಯ ತೂಕ ಆನೆಗಳ ಬೆನ್ನಿನ ಮೇಲೆ ನೇರವಾಗಿ ಬೀಳುವುದು ತಪ್ಪುತ್ತದೆ. ಒಟ್ಟಾರೆ ಗಾದಿ ಹಾಗೂ ನಾಮ್ದದ ಸಹಾಯದಿಂದಲೇ ಸುಸೂತ್ರವಾಗಿ ಜಂಬೂಸವಾರಿ ನಡೆಯಲು ಸಾಧ್ಯವೆಂದು ಹೇಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ