ಆ್ಯಪ್ನಗರ

ದರ್ಗಾದಲ್ಲಿ ನಡೆಯುತ್ತೆ ಆನೆಗಳಿಗೆ ಪೂಜೆ: ದಸರಾದಲ್ಲೊಂದು ಭಾವೈಕ್ಯತೆಯ ಸಂದೇಶ

ನಾಡಹಬ್ಬ ದಸರಾ ಭಾವೈಕ್ಯತೆ ಸಾರುವ ಹಬ್ಬವೂ ಹೌದು. ಜಾತಿ ಧರ್ಮ ಮೀರಿ ಎಲ್ಲಾ ಸಮುದಾಯದ ಜನರೂ ದಸರಾವನ್ನು ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ಧಾರ್ಮಿಕ ಸೌಹಾರ್ದತೆಗೊಂದು ಸಾಕ್ಷಿ ಇಲ್ಲಿದೆ.

Vijaya Karnataka Web 8 Oct 2019, 12:39 pm
ಮೈಸೂರು : ನಾಡಹಬ್ಬ ದಸರಾ ಕರುನಾಡಿಗರ ಹಬ್ಬ. ಜಾತಿ, ಧರ್ಮ ಮೀರಿ ಜನಸಮೂಹ ಮೈಸೂರು ದಸರಾದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ದಸರಾದಲ್ಲೊಂದು ಭಾವೈಕ್ಯತೆಯ ಸಂದೇಶವಿದೆ . ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ಯಾವುದೇ ಅಡ್ಡಿ ಆತಂಕ ಎದುರಾಗದಿರಲಿ ಎಂಬ ಕಾರಣಕ್ಕಾಗಿ ಮೈಸೂರಿನ ದರ್ಗಾವೊಂದರಲ್ಲಿ ಪೂಜೆ ಸಲ್ಲಿಸುವ ಪರಂಪರೆ ಚಾಲ್ತಿಯಲ್ಲಿದೆ.
Vijaya Karnataka Web dargah (1)


ಮೈಸೂರಿನ ದೇವರಾಜ ಮೊಹಲ್ಲಾದ ಕೃಷ್ಣವಿಲಾಸ ರಸ್ತೆಯಲ್ಲಿ ಹಜರತ್ ಇಮಾಮ್ ಶಾ ದರ್ಗಾವಿದೆ. ನಾಡಹಬ್ಬ ದಸರಾಗೂ ಈ ದರ್ಗಾಗೂ ಅವಿನಾಭಾವ ಸಂಬಂಧವಿದೆ. ಬಹು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯದಂತೆ ಜಂಬೂಸವಾರಿಗೂ ಮುನ್ನ ಈ ದರ್ಗಾದಲ್ಲಿ ಆನೆಗಳಿಗೆ ವಿಶೇಷ ಪೂಜೆ ನಡೆಯುತ್ತದೆ.

ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಜಯಘೋಷ ಹರ್ಷೋದ್ಘಾರದ ನಡುವೆ ಅಂಬಾರಿ ಹೊತ್ತು ಆನೆ ಮುನ್ನಡೆಯುತ್ತದೆ. ಜಂಬೂಸವಾರಿ ದಿನ ಬೆಳಗ್ಗೆ ಅರಮನೆ ಆವರಣದಿಂದ ದಸರಾ ಆನೆಗಳ ಮಾವುತರು ಅರಣ್ಯ ಇಲಾಖೆ ವಾಹನದಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪ್ರಸಾದ ತಂದು ಆನೆಗಳಿಗೆ ತಿನ್ನಿಸಿ ಜಂಬೂ ಸವಾರಿಗೆ ತೆರಳುತ್ತಾರೆ. ಜಂಬೂ ಸವಾರಿ ಮುನ್ನಾ ದಿನ ಮೈಸೂರಿನ ದೇವರಾಜ ಮೊಹಲ್ಲಾದ ಕೃಷ್ಣವಿಲಾಸ ರಸ್ತೆಯಲ್ಲಿರುವ ಹಜರತ್ ಇಮಾಮ್ ಶಾ ಬಳಿಯ ದರ್ಗಾದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆಯ ಸಂದೇಶವನ್ನು ಸಾರಲಾಗುತ್ತದೆ.

ಕೊನೆಯ ಬಾರಿ ಅಂಬಾರಿ ಹೊರಲಿರುವ ಅರ್ಜುನ, ಯಾರಾಗಲಿದ್ದಾರೆ ಮುಂದಿನ ಕ್ಯಾಪ್ಟನ್?

80 ವರ್ಷದ ಹಿಂದೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಯೊಂದು ಜಂಬೂ ಸವಾರಿಗೆ 15 ದಿನ ಇರುವಾಗಲೇ ಹಠಾತ್ತನೆ ಅನಾರೋಗ್ಯಕ್ಕೀಡಾಗಿತ್ತು. ಇದರಿಂದ ಕಂಗೆಟ್ಟ ಮಾವುತ ಕೃಷ್ಣವಿಲಾಸ ರಸ್ತೆಯಲ್ಲಿರುವ ಈ ದರ್ಗಾಗೆ ಬಂದು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದರ್ಗಾ ದಲ್ಲಿದ್ದ ಧರ್ಮಗುರುಗಳು ತಾಯತ ನೀಡಿ ಅನಾರೋಗ್ಯಕ್ಕೀಡಾದ ಆನೆಗೆ ಕಟ್ಟುವಂತೆ ಸೂಚಿಸಿದ್ದಾರೆ . ಹಾಗೆ ಮಾಡಿದ್ದರಿಂದ ಆ ಆನೆ ಒಂದೇ ದಿನದಲ್ಲಿ ಚೇತರಿಸಿಕೊಂಡು ಜಂಬೂ ಸವಾರಿಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿತು. ಹಾಗಾಗಿ ಜಂಬೂಸವಾರಿ ಮುನ್ನಾ ದಿನದಂದು ಆನೆಗಳ ಮಾವುತರು ಈ ದರ್ಗಾಕ್ಕೆ ಕರೆತಂದು ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತರು. ಆಂದಿನಿಂದಲೂ ಈ ಪರಂಪರೆ ಇಂದಿನವರೆಗೂ ಮುನ್ನಡೆದಿದೆ .

ದಸರಾ ಅಂತಿಮ‌ ಸಿದ್ಧತೆಗಳು ನೂರರಷ್ಟು ಪೂರ್ಣ : ಬಿ.ಎಸ್ ಯಡಿಯೂರಪ್ಪ

ಮಾವುತರು ದರ್ಗಾಕ್ಕೆ ಬಂದು ಸಿಹಿ ಬೂಂದಿ, ಸುಗಂಧಯುಕ್ತ ಗಂಧದ ಕಡ್ಡಿಯನ್ನು ದರ್ಗಾದಲ್ಲಿರುವ ಧರ್ಮಗುರುಗಳಿಗೆ ನೀಡುತ್ತಾರೆ. ಇದನ್ನು ಅಲ್ಲಿನ ದರ್ಗಾದಲ್ಲಿರುವ ಧರ್ಮಗುರುಗಳು ದೇವರಿಗೆ ಸಮರ್ಪಿಸಿ ಇವರಿಗೆ ನೀಡುತ್ತಾರೆ. ದರ್ಗಾದಲ್ಲಿರುವ ಐದನೇ ತಲೆಮಾರಿನ ಗುರುವಾಗಿರುವ ಮೊಹಮ್ಮದ್ ನಕೀವುಲ್ಲಾ ಅವರು ಕಳೆದ 15 ವರ್ಷಗಳಿಂದ ಆನೆಗಳಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.

ಮಾವುತರು ತಂದಿದ್ದನ್ನು ಪಡೆದು ನೈವೇದ್ಯ ಮಾಡಿ ಜಂಬೂ ಸವಾರಿಯ ಎಲ್ಲಾ ಆನೆಗಳಿಗೂ ತಮ್ಮ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಲು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ನವಿಲುಗರಿಯನ್ನು ಆನೆಗಳ ಮೇಲೆ ಚುಮುಕಿಸುತ್ತಾರೆ. ನಂತರ ಎಲ್ಲಾ ಮಾವುತರಿಗೆ ನಿಂಬೆಹಣ್ಣು ನೀಡಿ ದೃಷ್ಟಿ ತೆಗೆದು ಆನೆಗಳ ಕಾಲಿನಿಂದ ತಿಳಿಸುವಂತೆಯೂ ಸೂಚಿಸುತ್ತಾರೆ. ಬಳಿಕ ಎಲ್ಲಾ ಆನೆಗಳು ಅರಮನೆಗೆ ಹಿಂತಿರುಗುತ್ತವೆ. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಸಂಪ್ರದಾಯ ದಸರಾದಲ್ಲಿ ಧಾರ್ಮಿಕ ಸೌಹಾರ್ದತೆ ಹಾಗೂ ಐಕ್ಯತಾ ಭಾವಕ್ಕೆ ಒಂದು ಉದಾಹರಣೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ