ನಾನು ಅಶ್ವಿನಿ . 'ಅಲಕಾ ಆಮ್ಲ ಪ್ರೊಡೆಕ್ಟ್' ಅಂಗಡಿ ತಕ್ಕೊಂಡು ಕುಂತಿರೊ ಹಿಂದ್ ಒಂದು ಕತೀನ ಅದ.
ನಮ್ಮ ತ್ವಾಟದಾಗ ಭರಪೂರ್ ನೆಲ್ಲಿಕಾಯಿ ಬೆಳೆದ್ರೂ ಮಾರಾಟದ ತೊಂದರಿ. ನನ್ನ ಗಂಡ ಅಖಿಲ್ ಸರದೇಶಪಾಂಡೆ. ಹೊಲ ಮಾಡುದರಾಗ ಬಾಳ ಇಂಟರೆಸ್ಟ್. ಸುಮ್ಮನ ಒಕ್ಕಲತನ ಮಾಡುದಲ್ಲ. ಹೊಸಾದೇನಾದರೂ ಮಾಡಬೇಕ ಅನ್ನೋರು. ನೆಲ್ಲಿ ಸಸಿಗಳನ್ನ ತಂದು ಹೊಲದಾಗ ಹಚ್ಚಬೇಕಂತ ಅಖಿಲ್ ಮನಸ್ಸು ಮಾಡಿದರು. ಇದಕ್ಕ ಕಾರಣರಾದೋರು ರಾಮದುರ್ಗ ಫಾರೆಸ್ಟ್ ಆಫೀಸರ್ ಕೆ.ಜಿ. ಮಂಜುನಾಥ. 1988ರೊಳಗ 3.5 ಎಕರೆ ಹೊಲದೊಳಗ 20 ಅಡಿಗೆ ಒಂದರಂತೆ ಎಕರೆಗೆ 110 ಸಸಿ ನೆಡಿಸಿದ್ರು. ಮುಂದ 1990 ರೊಳಗ ಮತ್ತ ಒಂದೂವರೆ ಎಕರೆ ಒಳಗ ನೇರಳೆ ಹಣ್ಣಿನ ಗಿಡಗೋಳ ಜೊತಿಗೆ ನೆಲ್ಲಿ ಗಿಡ ಹಾಕಿದ್ವಿ. ತ್ವಾಟದ ನಡಬರಕ ಬಾಳಿ ಗಿಡಗೋಳ್ನ ಹಾಕಿದ್ವಿ. ಬಾಳಿ ಸಸಿಗೋಳಿಗ್ ನೀರ ಬಿಡುದರಿಂದ ನೆಲ್ಲಿ ಗಿಡಗೊಳಿಗೂ ನೀರ ಸಿಗತಿತ್ತ. ಹೀಂಗಾಗಿ 5 ಎಕರಿ ಜಮೀನ್ಯಾಗ 500 ಗಿಡ ನೆಲ್ಲಿ ಬೆಳೆಸಿದ್ವಿ. ಆದರ ಈ ಗಿಡದಾಗ ಒಳ್ಳೆ ಫಲ ಕಾಣಬೇಕಾದರ 5 ವರ್ಷ ಹಿಡೀತು. ಕೊಟ್ಟಿಗಿ ಗೊಬ್ಬರ, ನೀರು ಕೊಟ್ವಿ. ನಾವ್ ಕಷ್ಟಪಡೂದನ್ನ ನೋಡಿ ಜನ ಅನ್ನೋರು; ''ಗುಡ್ಡಗಾಡದಾಗ ಬೆಳ್ಯೋ ಈ ನೆಲ್ಲಿಕಾಯಿ ಗಿಡ ತಂದ ಹಚ್ಚ್ಯಾರ. ಏನ್ ಹುಚ್ಚರ ಲೆಖ್ಖ ಅಂತೀನಿ'' ಅನ್ನೋ ಮಾತಾಡತ್ತಿದ್ದರು. ಮುಂದ ಹಾಂಗ ಆತಬಿಡರಿ ನಮ್ಮ ಬದುಕ. ಹುರುಪಿನಿಂದ ನೆಲ್ಲಿ ಹಾಕಿದ್ದೆನೋ ಖರೇ. ಮೊದಲನೆ ವರ್ಷ ಅಂದರ 1992-93 ರೊಳಗ 30 ಕ್ವಿಂ. ಆತ ನೋಡರಿ. ಮುಂದಿನ ವರ್ಷ 100 ಕ್ವಿಂಟಾಲ್ ಮ್ಯಾಲ ಆತ. ಅದರ ಮುಂದಿನ ವರ್ಷ 150 ಕ್ವಿಂಟಾಲ್. 1996-97 ರೊಳಗ 280 ಕ್ವಿಂಟಲ್ ಆಗಿದ್ದೇನೂ ಸಂತೋಷ ಆತರೀ. ಆದರ ನಮಗ ಮಾರ್ಕೆಟ್ ಸಮಸ್ಯಾ. ನವೆಂಬರ್ ತಿಂಗಳಿಂದ ಫೆಬ್ರವರಿ ನಾಲ್ಕು ತಿಂಗಳ ಕಾಲ ಫಸಲು ಬರತದ.
ಲಿಂಬಿ ಗಾತ್ರದ ನೆಲ್ಲಿ: ಗಿಡದಾಗ ನೆಲ್ಲಿಕಾಯಿ ಸುರಿದದ್ದ ನೋಡಿದರ ಎಂತವರಾದರೂ ಆಶ್ಚರ್ಯ ಆಗಬೇಕ. ಅಂಗೈಯಾಗ ಹಿಡಿದರ ಕೈ ತುಂಬುವಂಗ ಇರತದ! ನೋಡಾಕ ಥೇಟ್ ಲಿಂಬಿಹಣ್ಣ! ಆದರ ಮಾರಾಟ ಬಾಳ ತ್ರಾಸ ಆತು. ರಾಮದುರ್ಗದಾಗ ಇದನ್ನ ಮಾರಾಟ ಮಾಡೂದ ವಜ್ಜ ಆತು. ಹೊರಗಿನ ಮಾರ್ಕೆಟ್ದಾಗೂ ಏನೂ ರೇಟ್ ಬರಲಿಲ್ಲ. ಮಹಾರಾಷ್ಟ್ರದ ಕೆಲವು ಕಂಪನಿಗಳು ಚವನ್ಪ್ರಾಶ್ ಮತ್ತು ಬ್ಯಾರೆಬ್ಯಾರೆ ಆಯುರ್ವೇದ ಔಷಧ ತಯಾರ ಮಾಡಾಕ ನಮ್ಮ ನೆಲ್ಲಿಕಾಯಿ ತಗೋಳ್ತಾರ. ಆದರೂ ಬೆಳೆದ ಎಲ್ಲ ನೆಲ್ಲಿಕಾಯಿ ಮಾರಾಟ ಮಾಡುದ ಅಷ್ಟ ಸರಳ ಆಗಲಿಲ್ಲ. ಬಾಳಿಹಣ್ಣು, ಚಿಕ್ಕು ತಿಂದಂಗ ನೆಲ್ಲಿಕಾಯಿ ತಿನ್ನುದಿಲ್ಲ ನೋಡ್ರಿ. ಕರಪತ್ರ ಮಾಡಿಸಿ ನೆಲ್ಲಿಕಾಯಿ ಪ್ರಚಾರ ಮಾಡಿದ್ರೂ ಉಪಯೋಗಕ್ಕ ಬರಲಿಲ್ಲ. ಇದರಿಂದ ಬ್ಯಾಸರಾಗಿ ನನ್ನ ಗಂಡ ಇಡೀ ನೆಲ್ಲಿ ತ್ವಾಟಾನ ತಗದ ಬಿಡೋ ವಿಚಾರ ಮಾಡಿದ್ದರು. ಕೊನಿಗೆ ಒಂದು ನಿರ್ಧಾರಕ್ಕ ಬಂದ್ನಿ. ಏನಾದರೂ ಮಾಡಬೇಕಂತ. ಮಹಾರಾಷ್ಟ್ರದ ಸಾವಂತವಾಡಿ ಕಡೀಗೆಲ್ಲ ಹೋಗಿ ಕಾಡು ಬೆಳೆಗಳಾದ ನೆಲ್ಲಿ, ಕೋಕಂ ಹಣ್ಣು ಸಂಸ್ಕರಣಾ ಮಾಡುವಂತ ಕಾರ್ಖಾನಿಗಳಿಗೆಲ್ಲ ಹೋಗಿಬಂದೆ. ಆದರ ಎಲ್ಲೂ ನನಗೆ ನೆಲ್ಲಿ ಮೌಲ್ಯವರ್ಧನೆ ಮಾಡೋದರ ಬಗ್ಗೆ ಸರಿಯಾದ ಮಾತಿ ಸಿಗಲೇ ಇಲ್ಲ. ಇದರಿಂದ ಬಾಳ ನಿರಾಸೆ ಆತು. ಆದರೂ, ಇದರ ಬಗ್ಗೆ ಏನರ ಕೋರ್ಸ್ ಅದಾವನ ಅಂತ ಕೇಳ್ಕೊಂಡೆ. ಧಾರವಾಡದ ಕೃಷಿ ವಿಶ್ವದ್ಯಾಲಯ ಮತ್ತು ಗೃಹ ವಿಜ್ಞಾನ ಕಾಲೇಜಿನೊಳಗ ಸ್ವಲ್ಪ ಟೈಮ್ದೊಳಗ ಮುಗಿವಂತ ಕೋರ್ಸ್ ಮಾಡಿದೆ. ಬಾಗಲಕೋಟ ಸ್ಟೆಪ್ದಾಗ ಟ್ರೇನಿಂಗ್ ತಗೊಂಡೆ. ಮೈಸೂರಕ್ಕ ಹೋಗಿ ಸಿಎಫ್ಟಿಆರ್ಐ ಒಂದು ಕೋರ್ಸ್ ಮಾಡಿದೆ. ಸ್ವಲ್ಪಮಟ್ಟಿನ ತಾಂತ್ರಿಕತೆ ಬಗ್ಗೆ ತಿಳಿತ ಹೊರತು ಪೂರ್ಣ ಪ್ರಮಾಣ ಜ್ಞಾನ ಪಡೆದಂಗಾಗಲಿಲ್ಲ. ಎಲ್ಲಿಯೂ ನನಗ ನೆಲ್ಲಿಕಾಯಿ ಸಂಸ್ಕರಿಸೋದರ ಬಗ್ಗೆನ ಪೂರ್ಣ ಮಾತಿ ಸಿಗಲೇ ಇಲ್ಲ. ಸೀದಾ ತಾಲೂಕು ಕೈಗಾರಿಕಾ ಕೇಂದ್ರಕ್ಕ ಹೋದೆ. ಅಲ್ಲಿರೋ ಆಫೀಸರ್ ಜೊತಿ ನಾನು ಯಾವ ರೀತಿ ಉದ್ಯೋಗ ಮಾಡಬೇಕು ಅನ್ನುದರ ಬಗ್ಗೆ ಚರ್ಚೆ ಮಾಡಿದೆ. ಅವರು ನನಗ ಮನಿ ಒಳಗ ಕೂತ ಕೆಲಸ ಮಾಡೋದರ ಬಗ್ಗೆ ಸಲಹೆ ನೀಡಿದರು. ಮಾರ್ಕೆಟ್ದೊಳಗ ಹೊಸದಾಗಿರೋ ನೆಲ್ಲಿ ಪೊ›ಡೆಕ್ಟ್ ಮಾಡಲಿಕ್ಕೆ ಸಲಹೆ ನೀಡಿದರು. ವಿಜ್ಞಾನಿಗಳ ಮಾರ್ಗದರ್ಶನ ತಗೊಂಡೆ.
ಆರು ಬಗೆಯ ಉತ್ಪನ್ನಗಳು: 1995-96 ರೊಳಗ ಆಮ್ಲಾ ಮುರಬ್ಬ ತಯಾರ ಮಾಡಿದೆ. ನಂತರ ಅಲ್ಲಿಂದ ಇಲ್ಲಿಯತನಕ ಆಮ್ಲಾದಿಂದ ಮುರಬ್ಬ, ಉಪ್ಪಿನಕಾಯಿ, ಪೌಡರ್, ಅಡಿಕೆ, ಕ್ಯಾಂಡಿ ಮತ್ತು ಸಿರಪ್ ಹೀಂಗ ಆರು ತರಹದ ಉತ್ಪನ್ನಗಳನ್ನು ತಯಾರು ಮಾಡಿದ್ದೀನಿ. ಈಗ ಸಕ್ಕರಿ ಇರಲಾರದ ನೆಲ್ಲಿ ಸಿರಪ್ ತಯಾರ ಮಾಡಿ ಮಾರಾಕತ್ತೀನಿ. ನಾನೇನೋ ನೆಲ್ಲಿಕಾಯಿಂದ ತಿನ್ನುವಂತ ಪದಾರ್ಥಗಳನ್ನ ಮಾಡಿದೆ. ಆದರ ಅವುಗಳನ್ನು ಮಂದಿಗೆ ಹ್ಯಾಂಗ ತೋರಿಸೋದು. ಆಗ ಎಲ್ಲೆಲ್ಲಿ ಜಾತ್ರಿ, ಕೃಷಿ ಮೇಳ, ಉತ್ಸವ ನಡಿತಾವ ಅಲ್ಲಲ್ಲಿ ನಾನೇ ಸ್ವತಃ ಹೋಗಿ ಮಂದಿಗೆ ನೆಲ್ಲಿಕಾಯಿ ಪದಾರ್ಥಗಳ ರುಚಿನೂ ತೋರಿಸಿ ನೆಲ್ಲಿಕಾಯಿ ಮಹತ್ವದ ಬಗ್ಗೆನೂ ಹೇಳ್ತಾ ಬಂದೆ. ಹೀಂಗ ಪ್ರಚಾರ ಮಾಡ್ತಾ ನನ್ನ ನೆಲ್ಲಿಕಾಯಿ ವ್ಯಾಪಾರ ಬೆಳೆಸಿದ್ನಿ. ಯಾವಾಗ ನನ್ನ ತ್ವಾಟದಾಗ ಬೆಳದ ಹಣ್ಣು ಮತ್ತು ನೆಲ್ಲಿಕಾಯಿಗಳಿಗೆ ಬೆಲಿ ಬಂತೋ ಆಗ ನಾನು ಒಂದ ಕಡಿಗೆ ಒಂದು ಅಂಗಡಿ ಚಾಲು ಮಾಡಿದ್ನಿ. ನೆಲ್ಲಿಕಾಯಿ ಉತ್ಪನ್ನ ಮಾಡಾಕ ಚಾಲೂ ಮಾಡಿದ್ನೊ ಆಗ ಬಂದ ಸಮಸ್ಯೆ ಅವುಗಳ ಒಳಗಿನ ಬೀಜ ತೆಗೆದು ಹೋಳು ಮಾಡುವುದು. ಇದಕ್ಕಾಗಿ ವರ್ಷದ ನಾಲ್ಕು ತಿಂಗಳು 25 ಜನ ಈ ಕೆಲಸ ಮಾಡತಿದ್ದರು. ಅದಕ ಏನಾದರೂ
ಮಾಡಬೇಕಂತ ವಿಚಾರ ಮಾಡಿ ನೆಲ್ಲಿಕಾಯಿ ಕತ್ತರಿಸೋ ಯಂತ್ರವನ್ನು ಸಾವಂತವಾಡಿ ಒಳಗ ನಾವೇ ಹೇಳಿ ಮಾಡಿಸಿದೆವು. ಇದರಿಂದ ಕೆಲಸ ಹಗುರಾತು. ಆದರೂ ಸೀಜನ್ನದಾಗ ನೆಲ್ಲಿಕಾಯಿ ಉತ್ಪನ್ನಗಳನ್ನ ಮಾಡೋವಾಗ ಕೆಲಸಗಾರರು ಬೇಕಾಗುತ್ತೆ. ಹೀಗಿದೆ ನೋಡ್ರಿ. ಬೆಳೆದ ನೆಲ್ಲಿಕಾಯಿ ಮೌಲ್ಯ ವರ್ಧನೆ ಮಾಡಿ ಮಾರುಕಟ್ಟೆಗೆ ಸಾಗಿಸಿದ ನಮ್ಮ ಸಾಹಸದ ಕತಿ.
ಹೆಚ್ಚಿನ ಮಾಹಿತಿಗೆ ಮೊ. 9845782824
(ನಿರೂಪಣೆ: ಡಾ. ಉಮಾ ಅಕ್ಕಿ. ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ)