ಆ್ಯಪ್ನಗರ

ಭದ್ರಾ ಅಚ್ಚುಕಟ್ಟಿನಲ್ಲಿ ಬಾಸುಮತಿ ಭತ್ತದ ಘಮಲು

ಸೋನಾ ಮಸೂರಿ ಭತ್ತವನ್ನೆ ಅವಲಂಬಿಸಿದ್ದ ಭದ್ರಾ ಅಚ್ಚುಕಟ್ಟಿನ ಕೆಲ ರೈತರು ಹೊಸ ಪ್ರಯೋಗಕ್ಕೆ ತೆರೆದುಕೊಳ್ಳುತ್ತಿದ್ದಾರೆ...

Vijaya Karnataka 26 Jun 2018, 5:00 am
- ಕುಂದೂರು ಪರಮೇಶ್‌ ಕಾರಿಗನೂರು
Vijaya Karnataka Web BLG-2506-2-52-DVR-23KRG1D


ಸೋನಾ ಮಸೂರಿ ಭತ್ತವನ್ನೆ ಅವಲಂಬಿಸಿದ್ದ ಭದ್ರಾ ಅಚ್ಚುಕಟ್ಟಿನ ಕೆಲ ರೈತರು ಹೊಸ ಪ್ರಯೋಗಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಚನ್ನಗಿರಿ ತಾಲೂಕು ಕಾರಿಗನೂರು ಗ್ರಾಮದ ರೈತನೊಬ್ಬರು ಬಾಸುಮತಿ ಭತ್ತ ಬೆಳೆದು ಗಮನ ಸೆಳೆದಿದ್ದಾರೆ.

ಜಯಾ, ಸಿಕ್ಸ್‌ಟಿಫೋರ್‌ ಬಳಿಕ ಸಣ್ಣ ಭತ್ತ, ಸೋನಾ ಮಸೂರಿ ತಳಿ ಬೆಳೆಯುತ್ತಿದ್ದ ರೈತರು ಒಂದಿಲ್ಲೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಾರಿಗನೂರಿನ ರೈತ ಚೈತನ್ಯ ಅವರು ಅರ್ಧ ಎಕರೆ ಜಮೀನಿನಲ್ಲಿ ಈ ಬಾರಿ ಬಾಸುಮತಿ ಭತ್ತ ಬೆಳೆದು ಯಶಸ್ವಿಯಾಗಿದಾರೆ.

ಆರ್‌ಎನ್‌ಆರ್‌, ಶ್ರೀರಾಮ್‌, ಜಯಶ್ರೀ, ಕಾವೇರಿ, ಬಿಪಿಟಿ5204 ತಳಿಯ ಸೋನಾಮಸೂರಿ ಭತ್ತವನ್ನೆ ನಾಟಿ ಮಾಡಿ ಬೆಳೆಯುತ್ತಿದ್ದ ಈ ಭಾಗದ ರೈತರು, ಉತ್ತರ ಭಾರತದ ಪಂಜಾಬ್‌, ಹರಿಯಾಣ, ಉತ್ತರಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಬಾಸುಮತಿ ಭತ್ತದ ಕಡೆ ವಾಲುತ್ತಿದ್ದಾರೆ. ಬಾಸುಮತಿ ತಳಿಯ ಘಮ ಮಧ್ಯಕರ್ನಾಟಕದಲ್ಲಿ ಬೀಸುವಂತೆ ಮಾಡಿದ್ದಾರೆ.

ಸಾಂಪ್ರದಾಯಿಕ ಪದ್ಧತಿ: ಸ್ಥಳೀಯ ತಳಿ ಭತ್ತದ ಬೆಳೆಗೆ ನೀಡಿದ ಉಪಚಾರವನ್ನೆ ಬಾಸುಮತಿಗೂ ಮಾಡಿದ್ದಾರೆ. ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಔಷಧ ಸಿಂಪಡಣೆ ಸೇರಿದಂತೆ ನಾಟಿ ಭತ್ತಕ್ಕೆ ಮಾಡಿದ ಉಪಚಾರವನ್ನೇ ಮಾಡಿದ್ದು, ವಿಶೇಷ ನಿಗಾ ತೋರಿಸಿಲ್ಲ. ಆದರೂ ಬಾಸುಮತಿ ಭತ್ತ ಉತ್ತಮವಾಗಿ ಬೆಳೆದಿದೆ. 14 ಚೀಲ ಭತ್ತ ಕೈಗೆ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಚೈತನ್ಯ ಮಾಹಿತಿ ನೀಡಿದರು.

ನೀರಾವರಿ ನಾಟಿ ಬಿಟ್ಟರೆ ಬೇರೆ ಪದ್ಧತಿಯಲ್ಲಿ ಭತ್ತ ಬೆಳೆದ ಅನುಭವ ಇವರಿಗೆ ಇರಲಿಲ್ಲ. ಆದರೆ, ಕಳೆದ ಮೂರು ಬೆಳೆಗೆ ನೀರಿನ ಅಭಾವ. ಹೀಗಾಗಿ ಕಳೆದ ಬಾರಿ ಕೂರಿಗೆ ಭತ್ತ ಬಿತ್ತಿ ಬೆಳೆ ಪಡೆದಿದ್ದಾರೆ.

ಇದಕ್ಕೂ ಮೊದಲು ಇಲ್ಲಿನ ರೈತರು ಮೆಕ್ಕೆಜೋಳ, ಸೂರ್ಯಕಾಂತಿ, ಅಲಸಂದೆ, ಕಡಲೆ ಬೆಳೆಯುತ್ತಿದ್ದರು. ಉಳಿದಂತೆ ಬೋರ್‌ವೆಲ್‌ ಇರುವ ರೈತರು ಅಡಕೆ ತೋಟ ಮಾಡಿ ಅಂತರಬೆಳೆಯಾಗಿ ತೋಟಗಾರಿಕೆ ಬೆಳೆ ಬೆಳೆಯುವ ಪರಿಪಾಠವಿದೆ. ಈ ಭೂಮಿಯಲ್ಲಿ ಕೂಡ ಬಾಸುಮತಿ ಭತ್ತ ಬೆಳೆಯಬಹುದು ಎಂಬುದನ್ನು ರೈತರು ತೋರಿಸಿದ್ದಾರೆ ಎನ್ನುತ್ತಾರೆ ರೈತ ಅಲ್ಲಮಪ್ರಭುಸ್ವಾಮಿ.

ಪಂಜಾಬ್‌ ಮೂಲದ ವ್ಯಕ್ತಿಯೊಬ್ಬರ ಸಲಹೆಯಂತೆ ಪ್ರಾಯೋಗಿಕವಾಗಿ ಬಾಸುಮತಿ ತಳಿಯ ಭತ್ತ ಬೆಳೆದಿದ್ದೇನೆ. ಮಾಮೂಲಿ ಅಥವಾ ಸಾಂಪ್ರದಾಯಿಕ ಕೃಷಿ ವಿಧಾನವನ್ನೇ ಅನುಸರಿಸಿದ್ದೇನೆ. ಉತ್ತಮವಾಗಿ ಬೆಳೆ ಬಂದಿದೆ ಎನ್ನುತ್ತಾರೆ ರೈತ ಚೈತನ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ