ಆ್ಯಪ್ನಗರ

ಕಾಳು ಬೆಳೆದು ಬಾಳು ಕಂಡ ನಾರಪ್ಪ

ಕಾಳು ಬೆಳೆದು ಬಾಳು ಕಂಡ ನಾರಪ್ಪ

Vijaya Karnataka 30 May 2018, 5:00 am
- ಎಂ.ಎನ್‌. ಅಹೋಬಳಪತಿ ಚಿತ್ರದುರ್ಗ
Vijaya Karnataka Web BLG-2505-2-52-CTD-11CTD3B


ಅಡಕೆ ತೋಟದಲ್ಲಿ ಬಾಳೆ, ಕೋಕೊ, ಕಾಳು(ಕರಿ) ಮೆಣಸನ್ನು ಅಂತರ ಬೆಳೆಯಾಗಿ ಬೆಳೆಯುವ ಪರಿಪಾಠ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ.

ಬಯಲು ಸೀಮೆ ಭಾಗದ ರೈತರು ಮುಖ್ಯ ಬೆಳೆಯಾಗಿ ಬಾಳೆ ಬೆಳೆಯುತ್ತಾರಾದರೂ ನೀರಿನ ಕೊರತೆಯಿಂದ ಬಹಳಷ್ಟು ಜನ ಕೈ ಬಿಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸಮೀಪದ ಹೆಗ್ಗೆರೆ ಗ್ರಾಮದ ರೈತ ನಾರಪ್ಪ ಎರಡು ಮುಕ್ಕಾಲು ಎಕರೆ ವ್ಯಾಪ್ತಿಯ ಅಡಕೆ ತೋಟದಲ್ಲಿ ಕಾಳುಮೆಣಸು ಬೆಳೆದು ಯಶಸ್ವಿಯಾಗಿದ್ದಾರೆ. ಬಯಲು ಸೀಮೆ ಭಾಗದಲ್ಲಿ ಅಡಕೆ ತೋಟ ಬೆಳೆಸಿ- ಕಾಳು ಮೆಣಸು ಬೆಳೆದದ್ದು ವಿಶೇಷವೇ ಸರಿ. ಈ ರೈತರ ತೋಟದ ವ್ಯಾಪ್ತಿ ಚಿಕ್ಕದಾದರೂ ತೋಟವನ್ನು ಒಂದು ಸುತ್ತು ಹಾಕಿದಾಗ ಮಲೆನಾಡಿನ ಅಡಕೆ ತೋಟ ನೋಡಿದಂತೆಯೇ ಆಗುತ್ತದೆ.

ಮೂರನೇ ವರ್ಷಕ್ಕೆ ಬೆಳೆ: ''ಐದು ವರ್ಷದ ಹಿಂದೆ ಚನ್ನಗಿರಿ ಬಳಿಯ ನನ್ನ ಅಳಿಯನ ತೋಟದಲ್ಲಿ ಕಾಳು ಮೆಣಸು ಬೆಳೆದದ್ದು ನೋಡಿದೆ. ಅಲ್ಲಿಂದ ಬಳ್ಳಿ ತಂದು ನಮ್ಮ ಅಡಕೆ ತೋಟದಲ್ಲಿ ಬೆಳೆಸಿದೆ. ಬಳ್ಳಿ ಖರೀದಿ- ನಾಟಿ ವೆಚ್ಚ ಬಿಟ್ಟು ಬೇರೆ ಯಾವುದಕ್ಕೂ ಹಣ ಖರ್ಚಾಗಿಲ್ಲ. ನಾಟಿ ಮಾಡಿದ ಮೂರನೇ ವರ್ಷಕ್ಕೆ ಬೆಳೆ ಬಂತು'' ಅಂದಿನ ದಿನಗಳನ್ನು ನೆನೆಯುತ್ತಾರೆ ರೈತ ನಾರಪ್ಪ.

''ನಂತರ ಚಿಕ್ಕಮಗ ಳೂರಿನಿಂದಲೂ ಕಾಳು ಮೆಣಸಿನ ಸಸಿ ತಂದು ನಾಟಿ ಮಾಡಿದೆವು. ಅಡಕೆ ಮರಕ್ಕೆ ಸಸಿ ಕಚ್ಚುವವರೆಗೆ ಸ್ವಲ್ಪ ಕಷ್ಟ. ಆನಂತರ ಅದರ ಪಾಡಿಗೆ ಅದು ಬೆಳೆಯುತ್ತದೆ. ಈ ಬೆಳೆಯಿಂದ ರೈತರಿಗೆ ಬೇರಾವ ರೀತಿಯಲ್ಲೂ ತೊಂದರೆ ಇಲ್ಲ'' ಎನ್ನುತ್ತಾರೆ ನಾರಪ್ಪ.

''ಎತ್ತರಕ್ಕೆ ಬೆಳೆದ ಅಡಕೆ ಮರಗಳು ಕಾಳು ಮೆಣಸಿನ ಬಳ್ಳಿ ನೆಡಲುಸೂಕ್ತ. ಮೆಣಸಿನ ಗಿಡ ನೆಡುವಾಗ ಅಡಕೆ ಮರದಿಂದ ಒಂದು ಅಡಿ ಅಂತರ ಕಾಯ್ದುಕೊಳ್ಳಬೇಕು. ಕಾಳು ಮೆಣಸಿಗೆ ಹೆಚ್ಚು ನೀರು ಬೇಕು ಎನ್ನುವ ತಪ್ಪು ಗ್ರಹಿಕೆ ಕೆಲ ರೈತರಲ್ಲಿದೆ. ಈ ಬೆಳೆಗೆ ನೀರು ಜಾಸ್ತಿಯಾಗುವಂತೆಯೂ ಇಲ್ಲ, ಕಡಿಮೆ ಆಗುವಂತೆಯೂ ಇಲ್ಲ. ನೀರು ನಿಲ್ಲುವ ಜಾಗದಲ್ಲಿ ಮೆಣಸಿನ ಬೆಳೆಯುವುದಿಲ್ಲ. ಮಲೆನಾಡಿನ ತೋಟದಲ್ಲಿ ನೀರು ನಿಲ್ಲದಂತೆ ಕಾಲುವೆ ಮಾಡಿರುತ್ತಾರೆ. ಆದರೆ, ಬಯಲು ಸೀಮೆಯಲ್ಲಿ ಕಾಲುವೆ ನಿರ್ಮಿಸುವ ಅಗತ್ಯ ಇಲ್ಲ'' ಬೆಳೆಯ ಮಾಹಿತಿ ನೀಡುತ್ತಾರೆ.

ಅನುಕೂಲ ಹಲವು:
ಅಡಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುವ ಬಾಳೆಗೆ ಕಾಳು ಮೆಣಸಿಗಿಂತ ಹೆಚ್ಚು ನೀರು ಬೇಕು. ಖರ್ಚೂ ಜಾಸ್ತಿ. ಆದರೆ, ಕಾಳು ಮೆಣಸು ದೀರ್ಘಾವದಿ ಬೆಳೆ. ಒಮ್ಮೆ ನಾಟಿ ಮಾಡಿದರೆ 35 ರಿಂದ 40 ವರ್ಷ ಇರುತ್ತದೆ. ಒಣಗಿ ಉದುರುವ ಮೆಣಸಿನ ಎಲೆಯಿಂದ ಮಣ್ಣಿಗೆ ಮುಚ್ಚಿಗೆ ಗೊಬ್ಬರವೂ ಆಗುತ್ತದೆ. ಬಳ್ಳಿಯ ನೆರಳು ಮರವನ್ನು ಹಾಗೂ ಮಣ್ಣನ್ನು ಬಿಸಿಲಿನಿಂದ ರಕ್ಷಿಸುತ್ತದೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ ಎಂದು ಅವರು ಹೇಳುತ್ತಾರೆ. ಮೆಣಸಿನ ಬಳ್ಳಿ ಎತ್ತರಕ್ಕೆ ಬೆಳೆಯದಂತೆ ಕಟ್‌ ಮಾಡುತ್ತಾರೆ. ವರ್ಷಕ್ಕೊಮ್ಮೆ ಒಂದು ಒಳ್ಳಿಗೆ 10 ಕೆಜಿ ಗೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಒಂದು ರೀತಿಯ ಪೌಡರ್‌ ಅನ್ನು ಮೇ ತಿಂಗಳಲ್ಲಿ ನೀರಿನ ಜತೆ ಸಿಂಪರಣೆ ಮಾಡುತ್ತಾರೆ. ಇದರಿಂದ ಹೂವು ಚೆನ್ನಾಗಿ ಬಿಡುತ್ತದೆ. ಕಾಳು ಮೆಣಸು ಜನವರಿ ತಿಂಗಳಿಂದ ಕೊಯ್ಲಿಗೆ ಬರುತ್ತದೆ. ಈ ವೇಳೆಯಲ್ಲಿ ಕಾರ್ಮಿಕರಿಗೆ ಹೆಚ್ಚು ಕೆಲಸ ಇರಲ್ಲ. ಹೀಗಾಗಿ ಕೊಯ್ಲಿಗೆ ಕಾರ್ಮಿಕರ ಸಮಸ್ಯೆ ಹೆಚ್ಚೇನೂ ಇಲ್ಲ. ಮರಕ್ಕೆ ಏಣಿ ಹಾಕಿ ಹಣ್ಣಾದ ಕಾಳು ಮೆಣಸಿನ ಗೊಂಚಲು ಕೊಯ್ಲು ಮಾಡುತ್ತಾರೆ. ಅಡಕೆ ಗೊನೆ ಇಳಿಸುವಾಗ ಮೆಣಸಿನ ಬಳ್ಳಿ ಮುರಿದರೂ ಪುನಃ ಚಿಗುರುತ್ತದೆ. ಅಡಕೆಯೊಂದನ್ನೇ ನಂಬಿ ಕೃಷಿ ಮಾಡುವ ಬದಲು ಕಾಳುಮೆಣಸನ್ನು ಅಂತರ ಬೆಳೆಯಾಗಿ ಬೆಳೆಯುವುದು ಒಳಿತು ಎಂಬುದು ಅವರು ಅಭಿಮತ.

1200 ಬಳ್ಳಿಗಳು: ಮೊದಲ ಕೊಯ್ಲಿನಲ್ಲಿ (ಬಳ್ಳಿ ನಾಟಿ ಮಾಡಿದ 3ನೇ ವರ್ಷ) 88 ಕೆಜಿ ಕಾಳು ಮೆಣಸು ಸಿಕ್ಕಿದೆ. ಈ ವರ್ಷ 6 ಕ್ವಿಂಟಾಲ್‌ನಷ್ಟು ಈಗಾಗಲೇ ಕೊಯ್ಲು ಆಗಿದೆ. 1,700 ಅಡಕೆ ಮರಕ್ಕೆ ಬಳ್ಳಿ ನಾಟಿ ಮಾಡಿದ್ದೆ. ಅವುಗಳಲ್ಲಿ 1200 ಬಳ್ಳಿಗಳು ಉಳಿದುಕೊಂಡಿವೆ. ಒಂದು ಬಳ್ಳಿಯಲ್ಲಿ ಸರಾಸರಿ 3ರಿಂದ 4 ಕೆಜಿ ಕಾಳು ಮೆಣಸು ಸಿಗುತ್ತಿದೆ. ಕಳೆದ ಬಾರಿ ಕ್ವಿಂಟಾಲ್‌ಗೆ 50 ಸಾವಿರ ರೂ. ಸಿಕ್ಕಿತ್ತು. ಈಗ 35 ಸಾವಿರ ದರವಿದೆ ಎನ್ನುತ್ತಾರೆ ರೈತ ನಾರಪ್ಪ.

ಹೆಚ್ಚಿನ ಮಾಹಿತಿಗೆ ರೈತ ನಾರಪ್ಪ ಅವರ ಮೊ.9986328511

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ