- ಪ್ರೇಮ ಪಿ.
ಎಲ್ಲ ಪ್ರದೇಶ, ಸರ್ವಕಾಲದಲ್ಲೂ ಕೊತ್ತಂಬರಿ ಸೊಪ್ಪಿಗೆ ಬೇಡಿಕೆ. ಖಾಧ್ಯ ಪದಾರ್ಥಗಳ ರುಚಿ ಹೆಚ್ಚಿಸುವ ಈ ಸೊಪ್ಪಿಗೆ ಬೆಲೆ ಇದ್ದೇ ಇದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುನಿಬಂಡೆಯ ರೈತ ಮಂಜುನಾಥ ಅವರು ಹಲವು ವರ್ಷಗಳಿಂದ ಕೊತ್ತಂಬರಿ ಸೊಪ್ಪು ಬೆಳೆಯುತ್ತಿದ್ದಾರೆ. ನೀರಾವರಿ ವ್ಯವಸ್ಥೆಯಿದ್ದರೆ ಸರ್ವಋುತುಗಳಲ್ಲೂ ಬೆಳೆಯಬಹುದಾದ ಬೆಳೆಯಿದು. ಕರಾವಳಿ ಕರ್ನಾಟಕದಲ್ಲಿ ಮಳೆಗಾಲದಲ್ಲಿ ಬೆಳೆಯುವುದು ಕಷ್ಟ. ರಾಜ್ಯಕ್ಕೆ ಬೇಕಾಗುವಷ್ಟು ಕೊತ್ತಂಬರಿ ಸೊಪ್ಪು ನಮ್ಮಲ್ಲಿ ಬೆಳೆಯುವುದಿಲ್ಲ. ಹೀಗಾಗಿ ಬೆಂಗಳೂರು ವ್ಯಾಪಾರಿಗಳು ತಮಿಳುನಾಡಿನಿಂದ ಪ್ರತಿನಿತ್ಯ ಸೊಪ್ಪು ಖರೀದಿಸುತ್ತಾರೆ. ಮಂಜುನಾಥ್ ಅವರು ವರ್ಷದಲ್ಲಿ ಎರಡು ಬಾರಿ ಕೊತ್ತಂಬರಿ ಸೊಪ್ಪು ಬೆಳೆಯುತ್ತಾರೆ. ನಲುವತ್ತೈದು ದಿನದ ಬೆಳೆ. ಭತ್ತ ಕಟಾವು ಆದ ನಂತರ 20 ಗುಂಟೆ ಗದ್ದೆಯನ್ನು ಉಳುಮೆ ಮಾಡಿಕೊಳ್ಳುತ್ತಾರೆ. ನಂತರ ಮಣ್ಣಿಗೆ 50 ಬುಟ್ಟಿಯಷ್ಟು ಕೊಟ್ಟಿಗೆ ಗೊಬ್ಬರದ ಹುಡಿ ಮಿಶ್ರಣ ಮಾಡುತ್ತಾರೆ. ಬಿತ್ತನೆ ಮಾಡಿದ ಕೊತ್ತಂಬರಿ ಬೀಜವನ್ನು ಗೆದ್ದಲು, ಇರುವೆಗಳು ತಿನ್ನುವುದನ್ನು ತಡೆಯಲು ಬೀಜವನ್ನು ಕಹಿ ಬೇವಿನ ಹಿಂಡಿಯ ನೀರಿನಲ್ಲಿ ಅರ್ಧ ತಾಸು ನೆನೆಸಿ ಬಳಿಕ ಬಿತ್ತುತ್ತಾರೆ. 20 ಗುಂಟೆಗೆ 15 ಕೆಜಿ ಬೀಜ ಬೇಕಾಗುತ್ತದೆ. ಕೋಲಾರದಿಂದ ಕೆ.ಜಿ. ಬೀಜಕ್ಕೆ 200 ರೂಪಾಯಿಯಂತೆ ಖರೀದಿಸಿ ತರುತ್ತಾರೆ. ಉಳುಮೆ ಮಾಡಿ ಒಂದೆರಡು ದಿನಗಳ ಕಾಲ ಭೂಮಿಯನ್ನು ಹಾಗೆ ಬಿಟ್ಟು ನಂತರ ಬೀಜ ಬಿತ್ತುತ್ತಾರೆ. 9 ದಿನದಲ್ಲಿ ಮೊಳಕೆ ಬರುತ್ತದೆ. ಮೂರು ದಿನಕ್ಕೊಂದು ಬಾರಿ ಮೂರು ತಾಸುಗಳ ಕಾಲ ಹನಿ ನೀರಾವರಿಯಲ್ಲಿ ನೀರುಣಿಸುತ್ತಾರೆ. ಗದ್ದೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಳೆಗಳು ಬಂದರೆ ಕೀಳುತ್ತಾರೆ. ಹದಿನೈದು ದಿನಕ್ಕೊಂದು ಬಾರಿಯಂತೆ ರಾಸಾಯನಿಕ ಗೊಬ್ಬರ ನೀಡುತ್ತಾರೆ. ರೋಗಗಳು ಬಾರದಂತೆ ಸೊಪ್ಪಿಗೆ ಎರಡು ಬಾರಿ ಔಷಧ ಸಿಂಪಡಿಸುತ್ತಾರೆ. ಎಲೆಗಳು ಮೃದುವಾಗಲು ಮತ್ತು ಹಸಿರಾಗಿ ಕಾಣಲು ಇನ್ನೊಂದು ಬದೆಯ ಔಷಧ ಸಿಂಪರಣೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮಂಜುನಾಥ್ ಮೊ.8971739096