- ಕೋಡಕಣಿ ಜೈವಂತ ಪಟಗಾರ
ಹಿಂಗಾರು ಬಂತೆಂದರೆ ಈ ರೈತರ ಹೊಲದಲ್ಲಿ ಬಣ್ಣ ಬಣ್ಣಗಳ ತೆನೆಯ ವೈವಿಧ್ಯ ಜೋಳಗಳ ತೆನೆಗಳು ತೂಗುತ್ತವೆ. ಕೇವಲ ಕೊಟ್ಟಿಗೆ ಗೊಬ್ಬರ ಬಳಸಿ, ಕನಿಷ್ಠ ವೆಚ್ಚದಲ್ಲಿ ದೇಸಿ ಜೋಳದ ಬೇಸಾಯ ಮಾಡುವುದು ಈ ರೈತರ ರೂಢಿ.
ಸುಧಾರಿತ ತಳಿಯ ಜೋಳಗಳು ಲಗ್ಗೆ ಇಟ್ಟ ನಂತರ ದೇಸಿ ತಳಿ ಜೋಳಗಳು ಕಣ್ಮರೆಯಾಗಿ ಹಲವು ವರ್ಷಗಳೇ ಆಗಿವೆ. ಮುಂಗಾರು ಹಾಗೂ ಹಿಂಗಾರಿಗೆ ಪ್ರತ್ಯೇಕ ತಳಿಗಳನ್ನು ಹೊಂದಿರುವ ಕೆಂಪು ಹಾಗೂ ಬಿಳಿ ಬಣ್ಣದ ಜೋಳಗಳು ಇದು ಅಪರೂಪ. ಮುಂಗಾರಿನಲ್ಲಿ ಮಳೆಯಾಶ್ರಯದಲ್ಲಿ, ಹಿಂಗಾರಿನಲ್ಲಿ ತೇವದ ಆಧಾರದಲ್ಲಿಯೇ ಬೆಳೆದು ನಿಂತು ಉತ್ತಮ ಇಳುವರಿ ನೀಡಬಲ್ಲ ಅಪರೂಪದ ತಳಿಯ ಜೋಳಗಳು ಅಂದಿನ ಕಾಲದ ಅದ್ಭುತ ಬೆಳೆ ಗಳಾಗಿದ್ದವು. ಅಂಥ ದೇಸಿ ತಳಿಯನ್ನು ಜತನದಿಂದ ಬೆಳೆಸುತ್ತಿದ್ದಾರೆ ಧಾರವಾಡದ ಮುಗಳಿ ಗ್ರಾಮದ ಮಡಿವಾಳಪ್ಪ ಹನುಮಂತಪ್ಪ ತೋಟಗಿ.
ಅಪರೂಪವಾಗುತ್ತಿರುವ ಬೀಜ ವೈವಿಧ್ಯ ಸಂಗ್ರಹ ತಮ್ಮಲ್ಲಿರಬೇಕು ಎನ್ನುವ ಹಂಬಲ ಇವರದು. ಇಪ್ಪತ್ತು ಬಗೆಯ ಜವಾರಿ ತಳಿಯ ಜೋಳಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಹಿಂಗಾರಿ ಹಾಗೂ ಮುಂಗಾರಿ ತಳಿ ಜೋಳ ಇವರ ಹೊಲದಲ್ಲಿ ಪ್ರತಿವರ್ಷ ವೈಭವ ಮೆರೆಯುತ್ತವೆ.
ಅವರದು ನಾಲ್ಕು ಎಕರೆ ಹದಿಮೂರು ಗುಂಟೆ ಎರೆಮಣ್ಣಿನ ಭೂಮಿ. ಪರಿಸರ ಮಿತ್ರ ಎರೆಹುಳಗಳು ಜಮೀನಿನಲ್ಲಿ ಯತೇಚ್ಚ. ಅಪಾಯಕಾರಿ ಹುಳ, ಹುಪ್ಪಡಿಗಳು, ಬೆಳೆ ಹಾಳು ಗೆಡುವಬಲ್ಲ ಕೀಟ -ರೋಗಗಳಿಗೆ ಇವರ ಭೂಮಿಯಲ್ಲಿ ಪ್ರವೇಶವಿಲ್ಲ. ಕಾರಣ ರೋಗ ನಿರೋಧಕ ಗುಣ ಹೊಂದಿರುವ ನಾಟಿ ತಳಿಗಳು ಮಾತ್ರ ಹೊಲದಲ್ಲಿರುವುದು. ಹಾಗಾಗಿ ರೋಗ ಮುಕ್ತ ಕೃಷಿಯಲ್ಲಿ ಮಡಿವಾಳಪ್ಪ ಪರಿಣತಿ ಸಾಧಿಸಿದ್ದಾರೆ.
ಬಿತ್ತನೆ ಪದ್ಧತಿ: ಮುಂಗಾರಿನಲ್ಲಿ ಶೇಂಗಾ, ಸೋಯಾಬಿನ್ ಬಿತ್ತನೆ ಮಾಡುವ ಇವರು ಕಟಾವು ಮುಗಿಯುತ್ತಿದ್ದಂತೆ ಎತ್ತಿನ ಕುಂಟೆಯಲ್ಲಿ ಭೂಮಿ ಹರಗಿ ಒಂದು ವಾರ ಬಿಟ್ಟು ಇನ್ನೊಮ್ಮೆ ಕುಂಟೆಯಲ್ಲಿ ಮಣ್ಣನ್ನು ಸಾಪ್ ಮಾಡುತ್ತಾರೆ. ಮಣ್ಣಿನ ಹೆಂಟೆಗಳಿದ್ದಲ್ಲಿ ಹುಡಿಗೊಳಿಸುತ್ತಾರೆ. ಕಸ ಕಡ್ಡಿಗಳು ಇರದಂತೆ ಭೂಮಿಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳುತ್ತಾರೆ. ಮುಂಗಾರಿ ಬಿತ್ತನೆ ಪೂರ್ವ ಮೇ ತಿಂಗಳ ವೇಳೆಗೆ ಎಕರೆಗೆ ಒಂದು ಟ್ರ್ಯಾಕ್ಟರ್ನಂತೆ ತಿಪ್ಪೆಗೊಬ್ಬರ ಏರಿಸುತ್ತಾರೆ. ಇದನ್ನು ಹೊರತು ಪಡಿಸಿದರೆ ಮತ್ಯಾವ ಗೊಬ್ಬರವನ್ನೂ ಒಂದು ವರ್ಷದ ವರೆಗೆ ಹಾಕುವುದಿಲ್ಲ. ಕನಿಷ್ಠ ಗೊಬ್ಬರದ ಬಳಕೆ, ಭೂಮಿಯ ತಾಕತ್ತಿನ ಸಂಪೂರ್ಣ ಉಪಯೋಗ ಇವರ ಬೇಸಾಯದ ವಿಶೇಷತೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಂಗಾರು ಕೃಷಿಯ ಬೆಳೆ ಕೊಯ್ಲು ಸಂಪನ್ನಗೊಂಡಿರುತ್ತದೆ. ಕೂಡಲೇ ಹಿಂಗಾರು ಬೆಳೆಯ ಪೂರ್ವ ಸಿದ್ಧತೆ ಆರಂಭ. ಎತ್ತಿನಕುಂಟೆಯಿಂದ ಹರಗಿ ಎರಡು ದಿನ ಭೂಮಿಯನ್ನು ಬಿಸಿಲುಣ್ಣಲು ಬಿಡುತ್ತಾರೆ. ಪುನಃ ಎತ್ತಿನ ಕೂರಿಗೆಯಿಂದ ಬೀಜ ಬಿತ್ತುತ್ತಾರೆ. ಇಪ್ಪತ್ತು ವಿಧದ ಜೋಳದ ತಳಿಗಳು ಗುಂಟೆ ಲೆಕ್ಕದಲ್ಲಿ ಒಂದರ ನಂತರ ಒಂದರಂತೆ ಸಾಲಿನಲ್ಲಿ ಬಿತ್ತನೆಗೊಳ್ಳುತ್ತದೆ.
ಸಾಲಿನಿಂದ ಸಾಲಿಗೆ ಇಪ್ಪತ್ತು ಇಂಚು, ಕಾಳಿನಿಂದ ಕಾಳಿಗೆ ಹನ್ನೆರಡು ಇಂಚು ಅಂತರದಲ್ಲಿ ಬಿತ್ತನೆ ಮಾಡುತ್ತಾರೆ. ಜೋಳ ಬಿತ್ತನೆ ಮಾಡಿದ ಏಳು ದಿನಕ್ಕೆ ಮೊಳಕೆ ಎದ್ದೇಳುತ್ತದೆ. ಜವಾರಿ ತಳಿಯ ಅಚ್ಚನೆಯ ಹಸಿರು ಸಾಲು ಕಣ್ಣಿಗೆ ಮುದ ನೀಡುತ್ತದೆ. ಒಂದು ಮಳೆ ಸೋಕಿದರೂ ಸಾಕು ಗಿಡಗಳ ನಡುವಿನ ಬೆಳೆಯುವ ಸ್ಪಧೆæರ್ ವೇಗ ಪಡೆದುಕೊಳ್ಳುತ್ತದೆ. ಮೂವತ್ತನೆಯ ದಿನಕ್ಕೆ ಕಳೆ ನಿಯಂತ್ರಣಕ್ಕೆ ಎಡೆಕುಂಟೆ ಹೊಡೆಯುತ್ತಾರೆ. ಸಾಲಿನ ನಡುವೆ ಮಣ್ಣು ಸಡಿಲಗೊಳ್ಳುವುದರೊಂದಿಗೆ ಬೆಳೆ ಅಬ್ಬರಿಸಿ ಬೆಳೆಯಲು ಕುಂಟೆ ಹೊಡೆತ ಬಲ ಒದಗಿಸಿಕೊಡುತ್ತದೆ. ಗಿಡಗಳ ಬುಡದ ಎರಡೂ ಬದಿಯಲ್ಲಿ ಮಣ್ಣು ಏರಿಸಿಕೊಡುವುದರಿಂದ ಮಣ್ಣಿನ ತೇವ ಬುಡದ ಬೇರುಗಳನ್ನು ತಂಪುಗೊಳಿಸುತ್ತದೆ. ಕಾಳು ಕಟ್ಟಲು ಬೇಕಾದ ತಾಕತ್ತಿಗೆ ಬಲ ನೀಡಿದಂತಾಗುತ್ತದೆ. ನಲವತ್ತೈದನೆಯ ದಿನ ಎರಡನೆಯ ಬಾರಿಕುಂಟೆ ಹೊಡೆದರೆ ಕೆಲಸ ಮುಗಿಯಿತು. ಕೊಯ್ಲಿಗೆ ಹೊಲದತ್ತ ಧಾವಿಸಿದರೂ ಸಾಕು. ಆರು ಅಡಿಗಳಿಗೂ ಎತ್ತರವಾಗಿ ಬೆಳೆದು ನಿಂತಿರುವ ಜೋಳದ ಬೆಳೆ ಬಿತ್ತಿದ ರೈತನಿಗೆ ಉತ್ತಮ ಪ್ರತಿಫಲ ಕೊಡಲು ತೆನೆ ಹೊತ್ತು ನಿಂತಿರುತ್ತದೆ. ತೆನೆಯ ಗಾತ್ರ ಒಂದಕ್ಕಿಂತ ಇನ್ನೊಂದು ವಿಭಿನ್ನ. ಕಣ್ ಸೆಳೆಯುವ ಬಣ್ಣ, ಕಾಳಿನ ವೈಭವ.
ಮೂರೂವರೆ ತಿಂಗಳ ಬೆಳೆ: ಜವಾರಿ ತಳಿಯ ಜೋಳ ಮೂರೂವರೆ ತಿಂಗಳಿಗೆ ಕಟಾವಿಗೆ ಬರುತ್ತದೆ. ಗಿಡಗಳನ್ನು ಬುಡ ಕತ್ತರಿಸಿ ಎರಡು ದಿನ ಹೊಲದಲ್ಲಿ ಬಿಟ್ಟಿರುತ್ತಾರೆ. ತೆನೆ ಒಣಗಿದ ನಂತರ ತೆನೆ ಕತ್ತರಿಸಿ ತಳಿವಾರು ಪ್ರತ್ಯೇಕ ಸಂಗ್ರಹಿಸಿಡುತ್ತಾರೆ. ಯಂತ್ರದ ಸಹಾಯದಿಂದ ಕಾಳು ಪ್ರತ್ಯೇಕಿಸಿ ತೇವವಾಗದಂತೆ ಸಂಗ್ರಹಿಸಿಟ್ಟರೆ ಎಷ್ಟು ವರ್ಷವಾದರೂ ಹಾಳಾಗದಂತೆ ಸಂಗ್ರಹಿಸಿ ಇಡಬಹುದು. ಕಟಾವು ಮಾಡಿದ ಬೆಳೆಯನ್ನು ಮಾರಾಟ ಮಾಡಲು ಮಡಿವಾಳಪ್ಪರಿಗೆ ತೊಂದರೆಯಿಲ್ಲ. ಇವರಲ್ಲಿ ವೈವಿಧ್ಯರೀತಿಯ ಜೋಳದ ಬೆಳೆ ಇರುವುದು ಹೆಚ್ಚಿನವರಿಗೆ ತಿಳಿದಿದೆ.ಹೆಚ್ಚಿನ ಗ್ರಾಹಕರು ದೂರವಾಣಿ ಕರೆ ಮಾಡಿ ಧಾನ್ಯಕ್ಕಾಗಿ ಮುಂಚಿತವಾಗಿ ಬೇಡಿಕೆ ಇಟ್ಟಿರುತ್ತಾರೆ. ಬೀಜಕ್ಕಾಗಿ ಒಯ್ಯುವ ರೈತರೂ ಹಲವರಿದ್ದು ಕೊಯ್ಲು ಮುಗಿಯುವ ಮುನ್ನ ಇವರ ಹೊಲದಲ್ಲಿನ ಜೋಳ ಮಾರುಕಟ್ಟೆಯ ಭಾಗ್ಯ ಕಂಡುಕೊಂಡಿರುತ್ತದೆ.
ಹೆಚ್ಚಿನ ಮಾಹಿತಿಗೆ ಮೊ. 9741966650