ಆ್ಯಪ್ನಗರ

ಮಾವಿನ ತೋಟದ ಬದುಕಿನಲ್ಲಿ ನೆಮ್ಮದಿ

ನಾನು ಪೂರ್ಣಾವಧಿ ರೈತನಲ್ಲ ಆದರೂ ಕೃಷಿಯಲ್ಲಿ ಖುಷಿ ಕಾಣುತ್ತಿದ್ದೇನೆ

Vijaya Karnataka 23 May 2018, 5:00 am
ನಾನು ಪೂರ್ಣಾವಧಿ ರೈತನಲ್ಲ. ಆದರೂ ಕೃಷಿಯಲ್ಲಿ ಖುಷಿ ಕಾಣುತ್ತಿದ್ದೇನೆ.
Vijaya Karnataka Web BLG-1504-2-52-MANGO


ನಗರದ ಉದ್ಯೋಗದ ಜತೆ ವಾರಾಂತ್ಯದಲ್ಲಿ ಕೃಷಿ ಚಟುವಟಿಕೆ. ತೋಟ ಇರುವುದು ಗಿಳಲಗುಂಡಿ ಸಮೀಪದ ಚನ್ನಕೊಪ್ಪದಲ್ಲಿ. ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಒಂದು ಗ್ರಾಮ. ನನ್ನ ಹೆಸರು ಎಂ.ಎಸ್‌.ದೇವರಾಜ ಗೌಡ.

ಇಲ್ಲಿ ಮಾವಿನ ಗಿಡವನ್ನು ನೆಟ್ಟದ್ದು 2002ರಲ್ಲಿ. ಸಾಗರ ತೋಟಗಾರಿಕೆ ಇಲಾಖೆ ಕಚೇರಿಯಿಂದ 120 ಗಿಡಗಳನ್ನು ಖರೀದಿಸಿದ್ದೇನೆ. ಒಂದು ಕಸಿ ಗಿಡದ ದರ 20 ರೂಪಾಯಿ. ಎಕರೆಗೆ 30 ಗಿಡದಂತೆ (ಗಿಡದಿಂದ ಗಿಡಕ್ಕೆ 40 ಅಡಿ ಅಂತರದಲ್ಲಿ) ಸುಮಾರು 120 ಗಿಡವನ್ನು 4 ಎಕರೆ ಭೂಮಿಯಲ್ಲಿ ಬೆಳೆಸಿದ್ದೇನೆ. ಗಿಡ ನಾಟಿ ಮಾಡಲು 2 ಅಡಿ ಕುಳಿ ತೆಗೆಸಿ ಅದಕ್ಕೆ ಕೊಟ್ಟಿಗೆ ಗೊಬ್ಬರ, ಸ್ವಲ್ಪ ಕೋಳಿ ಗೊಬ್ಬರ ಮತ್ತು ಡಿಎಪಿ ಮಿಶ್ರಣ ಮಾಡಿ ಗಿಡ ನೆಟ್ಟಿದ್ದೇನೆ. ಗಿಡ ನೆಟ್ಟು 2ನೇ ವರ್ಷಕ್ಕೆ ಹೂವು ಬಂದಿತ್ತು. ಆದರೆ 2 ಮತ್ತು 3ನೇ ವರ್ಷದ ಹೂವನ್ನು ಮುರಿದು ಹಾಕಿದ್ದೇನೆ. ಗಿಡನೆಟ್ಟು 3 ವರ್ಷ ಬಾವಿಯಿಂದ ನೀರನ್ನು ಸೇದಿ ಹಾಕಿ 3 ವರ್ಷ ಸಾಕಿದ್ದೇನೆ. ಗಿಡಗಳ ವೆಚ್ಚ, ನಾಟಿ ಮತ್ತು ನಿರ್ವಹಣೆ ಎಲ್ಲ ಸೇರಿ ಸುಮಾರು 15 ಸಾವಿರ ರೂ. ಖರ್ಚಾಗಿದೆ.

ಫಸಲು ಗುತ್ತಿಗೆ:
ಕಳೆದ ವರ್ಷ ಅಂದರೆ, 2016-17ನೇ ಸಾಲಿನಲ್ಲಿ ಸುಮಾರು 24 ಕ್ವಿಂಟಾಲ್‌ಅಂದರೆ (2.5 ಟನ್‌) ಮಾವಿನ ಕಾಯಿ ಸಿಕ್ಕಿದೆ. 75 ಸಾವಿರ ರೂ.ಗೆ ಫಸಲು ಗುತ್ತಿಗೆ ಕೊಟ್ಟಿದೆ. ಗುತ್ತಿಗೆ ಪಡೆದ ಭದ್ರಾವತಿಯ ಏಜೆಂಟ್‌ರು ಮಾವಿನ ಕಾಯ್ಲಿ ಕೊಯ್ಲು ಮಾಡಿ, ಗಾತ್ರಕ್ಕೆ ಅನುಗುಣವಾಗಿ ವಿಂಗಡಿಸಿ ಪ್ಯಾಕ್‌ ಮಾಡಿ ಮಾರಾಟ ಮಾಡುತ್ತಾರೆ. ಬಾದಾಮಿ, ಮಲ್ಲಿಕಾ, ರಸಪುರಿ ತಳಿಗಳಿಗೆ ಉತ್ತಮ ಬೆಲೆ ಇದ್ದು ಹೊರಗಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ತೋತಾಪುರಿ ಹಾಗೂ ಉಪ್ಪಿನಕಾಯಿಗೆ ಬಳಸುವ ಮಾವಿನ ಕಾಯಿಯನ್ನು ಶಿವಮೊಗ್ಗದಲ್ಲಿ ಮಾರಾಟ ಮಾಡುತ್ತಾರೆ. 16 ವರ್ಷದ ಗಿಡಗಳು ನೆಲದಿಂದ 40 ಅಡಿ ಎತ್ತರ 40 ಅಡಿ ಸುತ್ತಳತೆಯಲ್ಲಿ ಬೆಳೆದಿವೆ. 3 ವರ್ಷ ಈ ಗಿಡಗಳನ್ನು ಸಾಕಿದ್ದು ಬಿಟ್ಟರೆ ಇನ್ನು ಮುಂದೆ ನನಗೆ ಹೆಚ್ಚಿನ ಖರ್ಚು ಇಲ್ಲ. ಔಷಧ ಹೊಡೆಯುವುದು ಪ್ರಮುಖ ಕೆಲಸ. ಈ ವರ್ಷ 1 ಲಕ್ಷ ರೂಪಾಯಿಗೆ ಫಸಲು ಗುತ್ತಿಗೆ ಕೊಟ್ಟಿದ್ದೇನೆ.

ನನ್ನ ನಗರದ ಉದ್ಯೋಗದ ಜೀವನಕ್ಕಿಂತ ಮಾವಿನ ತೋಟದ ಜೀವನವೇ ಖುಷಿ ನೀಡುತ್ತದೆ. ಪ್ರತಿ ಭಾನುವಾರ ಮಾವಿನ ತೋಟಕ್ಕೆ ತೆರಳುತ್ತೇನೆ. ನಾನು ಮಾವಿನ ಗಿಡ ಹಾಕಿರುವ ಪ್ರಮುಖ ಕಾರಣ ನನ್ನ ಹೊಲದಲ್ಲಿ ಮತ್ತು ಅಕ್ಕಪಕ್ಕದ ಜಾಗದಲ್ಲಿ ಕೊಳವೆ ಬಾವಿ ಕೊರೆಯಿಸದರೂ ನೀರು ಬರುತ್ತಿಲ್ಲ. ಹೀಗಾಗಿ ಅಡಕೆ ತೋಟದ ಬದಲು 120 ಮಾವು, 40 ಸಪೋಟ ಮತ್ತು 2,500 ಸಾಗುವಾನಿ ಮತ್ತು ರಸ್ತೆ ಪಕ್ಕದಲ್ಲಿ ಎರಡೂ ಕಡೆ 270 ಅಶೋಕ ಮರಗಳನ್ನು ಬೆಳೆಸಿದ್ದೇನೆ. ಶಿವಮೊಗ್ಗ- ಬಿ.ಎಚ್‌. ರಸ್ತೆಯಿಂದ ತೋಟಕ್ಕೆ ಭೇಟಿ ನೀಡುವುದೇ ನೆಮ್ಮದಿಯ ಸಂಗತಿ. ತೋಟದಲ್ಲಿ ಬೆಳೆದಿರುವ 2880 ಗಿಡಗಳು ನಮ್ಮ ಕುಟುಂಬದ ಉಸಿರು.

ಹೆಚ್ಚಿನ ಮಾಹಿತಿಗೆ ಮೊ. 9880710719

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ