1. ನಮ್ಮ ಜಮೀನು ನಮ್ಮದು ಕೆಂಪು ಮಣ್ಣಿನ ನೆಲ. ಇದರಲ್ಲಿ ಎರಡು ಎಕರೆ ಮೇಲ್ಮಟ್ಟದಲ್ಲಿದ್ದು ಕಲ್ಲಿನಿಂದ ಕೂಡಿದೆ. ಈ ಹೊಲದಲ್ಲಿ ಗಿಡಗಳು 5 ಅಡಿ ಬೆಳೆದಿವೆ. ಇನ್ನು ಅಂದಾಜು 1 ಎಕರೆ ಜಮೀನಿನಲ್ಲಿ ಗಿಡಗಳು ಬೆಳೆಯುತ್ತಿಲ್ಲ. ಈ ಜಮೀನು ಮೃದು ನೆಲ. ಇಲ್ಲಿ ಗಿಡ ನೆಡುವುದಕ್ಕೂ ಮೊದಲು ಹೈಬ್ರೀಡ್ ಜೋಳ ಬೆಳೆಯುತ್ತಿದ್ದೆ. ಭೂಮಿ ಸುಧಾರಿಸಲು ಏನು ಮಾಡಬೇಕು?
-ರಾಘವೇಂದ್ರ ಕಬಾಡಿ ಹಾವೇರಿ
ಹೆಬ್ಬೇವು ಎಲ್ಲ ವಿಧವಾದ ಮಣ್ಣಿನಲ್ಲಿ ಬೆಳೆಯುತ್ತದೆಯಾದರೂ ಆಳವಾದ, ಫಲವತ್ತತೆವುಳ್ಳ ಉಸುಕು ಮಿಶ್ರಿತ ಕೆಂಪು ಜಮೀನಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ನಿಮ್ಮ ಭೂಮಿಯ 1 ಎಕರೆ ಪ್ರದೇಶದಲ್ಲಿ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳಲು ಭೂಮಿಯ ಕೆಳ ಪದರ ಕಾರಣ ಇರಬಹುದು. ಹಾಸುಗಲ್ಲು ಭೂಮಿಯ ಕೆಳಗೆ ಇದ್ದರೆ ಏನೂ ಮಾಡುವಂತಿಲ್ಲ. ಈಗ ಇದ್ದಂತಹ ಗಿಡಗಳಿಗೆ ತಿಪ್ಪೆಗೊಬ್ಬರ / ಎರೆಹುಳು ಗೊಬ್ಬರ ಹೇರಳವಾಗಿ ಕೊಟ್ಟು ಬೆಳೆಸುವುದು ಸೂಕ್ತ. ಒಮ್ಮೆ ತಜ್ಞರಿಂದ ನಿಮ್ಮ ಹೊಲಕ್ಕೆ ಬೇಟಿ ಮಾಡಿಸಿ ನಿಖರವಾದ ಕಾರಣ ಗುರುತಿಸಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ತಾವು ಒಮ್ಮೆ ಶಿರಸಿಯ ಅರಣ್ಯ ಕಾಲೇಜಿನ, ಡೀನ್ ಡಾ. ಎಸ್. ಜೆ. ಪಾಟೀಲ ಅವರನ್ನು ಸಂಪರ್ಕಿಸಿ. ಮೊ. 9448495318.
2. ನಮ್ಮ ತೋಟದ ಅಡಕೆ ಮರಗಳಿಗೆ ಸುಮಾರು 19 ವರ್ಷ. ಎಲ್ಲ ಮರಗಳು ತಲೆಯ ಗರಿ ಮುರುಟಿ -ಒಣಗಿ ಹೋಗುತ್ತಿವೆ. ಸುತ್ತ ಮುತ್ತ ಬಹುತೇಕ ಎಲ್ಲ ತೋಟಗಳಲ್ಲೂ ಇದೇ ಸಮಸ್ಯೆ. ಇಲ್ಲಿ ಹೊಸ ಅಡಕೆ ಸಸಿಗಳನ್ನು ನೆಟ್ಟು ಪುನಃ ತೋಟ ಮಾಡುವ ಪ್ರಯತ್ನ ಎಲ್ಲ ರೈತರದು. ನಮ್ಮ ಸಮಸ್ಯೆಗೆ ಪರಿಹಾರ ಏನು?
- ಪಾರ್ವತಮ್ಮ, ಹುಣಸೆಕಟ್ಟೆ ಭದ್ರಾವತಿ
ತಮ್ಮ ಭಾಗದಲ್ಲಿ ಅಡಕೆ ತೋಟದ ಸಮಸ್ಯೆಗೆ ಪರಿಹಾರವಾಗಿ ಸಮಗ್ರ ಪೋಷಕಾಂಶ ನಿರ್ವಹಣೆ ಮಾಡಬಹುದು. ಅಡಕೆ ಮರಗಳಿಗೆ ಕ್ರೌನ್ ಚೋಕಿಂಗ್ (ಮುಕುಟ ಬಂದಾಗುವಿಕೆ) ಅಥವಾ ಕ್ರೌನ್ ಬಾಗುವಿಕೆ ಎಂಬ ರೋಗ ಬಂದಿರಬಹುದು. ಇದು ಮುಖ್ಯವಾಗಿ ಸುಣ್ಣ (ಕ್ಯಾಲ್ಸಿಯಂ), ಬೋರಾನ್ ಜೊತೆಗೆ ಸತುವಿನ ಕೊರತೆಯಿಂದ ಆಗಬಹುದು. ಮಳೆಗಾಲಕ್ಕಿಂತ ಮೊದಲು ಮತ್ತು ಅಡಕೆ ಕಟಾವು ಆದ ನಂತರ ಹೀಗೆ 2 ಬಾರಿ ಪ್ರತಿ ಗಿಡಕ್ಕೆ ಪ್ರತಿ ಸಾರಿ 100 ಗ್ರಾಂ ಸಾರಜನಕ, 20 ಗ್ರಾಂ ರಂಜಕ ಮತ್ತು 70 ಗ್ರಾಂ ಪೊಟ್ಯಾಷ ಒದಗಿಸುವ ರಸಗೊಬ್ಬರ ಕೊಡಿ. ಮುಂಗಾರಿಗೆ ತಪ್ಪದೆ ಪ್ರತಿ ಗಿಡಕ್ಕೆ 20 ಕಿಲೋ ಕೊಟ್ಟಿಗೆ ಗೊಬ್ಬರ ಕೊಡಿ. ಅದೇ ರೀತಿ 25 ಗ್ರಾಂ ಬೊರಾನ್, 50 ಗ್ರಾಂ ಸತುವಿನ ಸಲ್ಪೇಟ್ ಮತ್ತು 1 ಕಿಲೋ ಕೃಷಿ ಸುಣ್ಣ ಒದಗಿಸಬೇಕಾಗುತ್ತದೆ. ಕೂಡಲೇ ಪರಿಹಾರ ಆಗುವುದು ಕಷ್ಟ. ತಾವು ಒಮ್ಮೆ ಕೃಷಿ ವಿಜ್ಞಾನ ಕೇಂದ್ರ ನವಿಲೆ ಫಾರ್ಮ್, ಶಿವಮೊಗ್ಗ ಇಲ್ಲಿಗೆ ಭೇಟಿ ನೀಡಿ.
3. ಒಂದು ಎಕರೆ ಕಪ್ಪು ಮಣ್ಣಿನ ಭೂಮಿಯಿದೆ. ಜೂನ್ ತಿಂಗಳಿಂದ ಸುಮಾರು ಐದು ತಿಂಗಳು ಕಾಲುವೆ ನೀರು ಇರುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಳೆಯಬೇಕು ಎಂದುಕೊಂಡಿದ್ದೇನೆ. ಒಳ್ಳೆಯ ತಳಿ, ಬೇಸಾಯ ಕ್ರಮ ಮತ್ತು ಉತ್ಪಾದನೆಯ ಪ್ರಮಾಣ ತಿಳಿಸಿ.
- ಬಸವರಾಜ ಜಿ. ಬಿರಾದಾರ, ಹುಣಸಗಿ - ಸುರಪುರ
ಈರುಳ್ಳಿಯಲ್ಲಿ ಮುಂಗಾರಿಗಾಗಿ ಅರ್ಕಾ ಕಲ್ಯಾಣ, ಅರ್ಕಾ ನಿಕೇತನ, ನಾಸಿಕ ರೆಡ್, ಅಗ್ರಿ ಪೌಂಡ್ ಡಾರ್ಕ ರೆಡ್ ಮತ್ತು ಭೀಮಾಸುಪರ್ ತಳಿಗಳನ್ನು ಬಳಸಬಹುದು. ಹಿಂಗಾರಿಗಾಗಿ ಅರ್ಕಾ ನಿಕೇತನ, ಅರ್ಕಾ ಪಿಂತಾಂಬರ, ಅಗ್ರಿ ಪೌಂಡ ಲೈಟ್ ರೆಡ್ ಮತ್ತು ಭೀಮಾಶಕ್ತಿ ಇವುಗಳನ್ನು ಬೆಳೆಯಬಹುದು. ಸಂಕರಣ ತಳಿಗಳಾದ ಅರ್ಕಾ ಕೀರ್ತಿಮಾನ ಮತ್ತು ಅರ್ಕಾ ಲಾಲಿಮ್ ಈ ತಳಿಗಳನ್ನು ಮಳೆಗಾಲ ಮತ್ತು ಚಳಿಗಾಲಗಳೆರಡರಲ್ಲಿಯೂ ಬೆಳೆಯಬಹುದು. ಈ ಸಂಕರಣ ತಳಿಯಿಂದ ಎಕರೆಗೆ 20 ಟನ್ ಇಳುವರಿ ಪಡೆಯಬಹುದು. ಬೆಳ್ಳುಳ್ಳಿ ಬೆಳೆಯಲ್ಲಿ ಫಾವ್ರಿ ಮತ್ತು ರಾಜಲ್ಲಿ ಗಡ್ಡೆ ತಳಿಗಳಿವೆ. ಈರುಳ್ಳಿ ಸುಮಾರು 140-145 ದಿನಗಳಲ್ಲಿ ಕಟಾವಾಗುತ್ತದೆ. ಈರುಳ್ಳಿ ಎಕರೆಗೆ 8-10 ಟನ್ ಮತ್ತು ಬೆಳ್ಳುಳ್ಳಿ 3-3.5 ಟನ್ ಉತ್ಪಾದಿಸಬಹುದು. ಈರುಳ್ಳಿಯನ್ನು 3 ವಿಧಗಳಲ್ಲಿ ಬಿತ್ತನೆ ಮಾಡಬಹುದು. ಸಸಿ ಮಾಡುವುದು, ಕೊರಿಗೆ ಬಿತ್ತನೆ ಮತ್ತು ಗಡ್ಡೆ ನಾಟಿ ಮಾಡುವುದು. ಈರುಳ್ಳಿಯು ಮೇಲ್ಮಟ್ಟದ ಬೇರಿನ ಬೆಳೆಯಾದುದರಿಂದ ಕಳೆಗಳಿಂದ ಮುಕ್ತವಾಗಿರುವುದು ಸೂಕ್ತ. ಈರುಳ್ಳಿ ಬಿತ್ತನೆ ನಂತರ ಪೆಂಡಿಮೆಥಾಲಿಯನ್ 4 ಮಿ.ಲೀ. ಪ್ರತಿ ಲೀ. ನೀರಿಗೆ ಸೇರಿಸಿ ಮಣ್ಣಿನಲ್ಲಿ ತೇವಾಂಶ ಇರುವಾಗ ಸಿಂಪರಣೆ ಮಾಡಬೇಕು. ಈರುಳ್ಳಿ ಸಸಿಗಳನ್ನು ನಾಟಿಮಾಡಿದ ತಕ್ಷಣ ಎಕರೆಗೆ 800 ಮಿ.ಲೀ ಬ್ಯೂಟಾಕ್ಲೋರ್ (50 ಇ.ಸಿ.) 400 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಿ, ನಾಟಿ ಮಾಡಿದ 30 ದಿನಗಳ ನಂತರ ಎಕರೆಗೆ 440 ಮಿ.ಲೀ. ಅಕ್ಸಿಪೋರೋಫೆನ್ (23.5 ಇ.ಸಿ.) 400 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಿರಿ. ಕಳೆನಾಶಕವನ್ನು ಸಿಂಪಡಿಸುವಾಗ ಭೂಮಿಯಲ್ಲಿ ಸಾಕಷ್ಟು ತೇವಾಂಶವಿರಬೇಕು. ಥ್ರಿಫ್ಸ್ ನುಸಿ ಮತ್ತು ನೇರಳೆ ಎಲೆ ಮಚ್ಚೆ ರೋಗದ ಹತೋಟಿಗಾಗಿ 0.3 ಗ್ರಾಂ ಅಸಿಟಮಾಪ್ರೀಡ್ ಅಥವಾ ಥಯೋಮೆಥಾಕ್ಸಾಮ್ + 1 ಮಿ.ಲೀ. ಹೆಕ್ಸಾಕೋನಾಜೇಲ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಿ. ಈರುಳ್ಳಿ ಬಿತ್ತಿದ 50 ದಿನಗಳ ನಂತರ 2 ಮಿ.ಲೀ ಮಿರಾಕ್ಯುಲಾನ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಅಥವಾ ಕೃಷಿ ವಿಜ್ಞಾನ ಕೇಂದ್ರ ರದ್ದೆವಾಡಗಿ, ಜೇವರಗಿ ಇವರನ್ನು ಭೇಟಿ ಮಾಡಿ. ದೂ. 08442-290108, ಮೊ. 9480696348
4. ಮಳೆಯಾಶ್ರಿತ ಕಪ್ಪು ಭೂಮಿಯಲ್ಲಿ ಗರಿಕೆ ಮತ್ತು ಜೇಕು ನಿರ್ಮೂಲನೆ ಹೇಗೆ ಮಾಡಬೇಕು?
- ಶಿವಾನಂದ ಬಿ. ಕುಂದಗೋಳ ಧಾರವಾಡ
ಕರಿಕೆ ಮತ್ತು ಜೇಕು ಇವು ಬಹು ಸಮಸ್ಯಾತ್ಮಕ ಕಳೆಗಳು. ಭೌತಿಕ ಮತ್ತು ಬೇಸಾಯ ಕ್ರಮಗಳಿಂದ ಪರಿಣಾಮಕಾರಿ ಹತೋಟಿ ಕಷ್ಟ. ಮುಂಗಾರಿ ಮಳೆ ಆದ ನಂತರ ಕರಿಕೆ/ ಜೇಕು 10-15 ಸೆಂ.ಮೀ ಎತ್ತರವಾಗಿ ಬೆಳೆದು ಹಚ್ಚ ಹಸಿರು ಆಗಿದ್ದಾಗ 10-15 ಮಿಲಿ
ಗ್ಲೆ ಪೋಸೇಟ್ 41 ಎಸ್ಎಲ್ ಮತ್ತು ಯೂರಿಯಾ 20 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಡಬ್ಲು.ಎಫ್.ಎಸ್ 40 ಅಥವಾ ವಿ.ಎಲ್.ವಿ 200 ನಾಝಲ್ ಬಳಸಿ. ಕೈಚಾಲಿತ ಪಂಪಿನಿಂದ ಚೆನ್ನಾಗಿ ಸಿಂಪರಿಸಬೇಕು. ಇತ್ತಿತ್ತಲಾಗಿ ಗ್ಲೆ ಪೋಸೇಟ್ ಶೇ -71 (ಹರಳು) ಲಭ್ಯವಿದೆ. ಇದನ್ನು 6 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು. ಯೂರಿಯಾ ಬೆರೆಸುವ ಅಗತ್ಯ ಇಲ್ಲ. 2ನೇ ಸಿಂಪರಣೆಯನ್ನು ಮೊದಲನೇ ಸಿಂಪರಣೆ ನಂತರ 3 ತಿಂಗಳ ನಂತರ ಪುನಃ ಚಿಗುರಿ ಹುಲುಸಾಗಿ ಬೆಳೆದ ಕರಿಕೆಯ ಮೇಲೆ ಮಾತ್ರ ಸಿಂಪರಣೆ ಮಾಡಬೇಕು. ಮೂರನೆಯ ಹಾಗೂ ಕೊನೆಯ ಸಿಂಪರಣೆಯನ್ನು ಎಲ್ಲೆಲ್ಲ್ಲಿ ಕರಿಕೆ ಚಿಗುರಿ ಹುಲುಸಾಗಿ ಬೆಳೆದಿದೆಯೋ ಅಲ್ಲಿ ಮಾತ್ರ ಸಿಂಪರಣೆ ಮಾಡಬೇಕು. ಸಿಂಪರಣೆ ಮಾಡುವಾಗ ಯಾವುದೇ ಬೆಳೆಗಳಿಗೆ ತಗುಲದಂತೆ ಎಚ್ಚರಿಕೆ ವಹಿಸಬೇಕು.