ಆ್ಯಪ್ನಗರ

ಕೃಷಿ ಪ್ರಶ್ನೋತ್ತರ

ಕೃಷಿ ಪ್ರಶ್ನೋತ್ತರ

Vijaya Karnataka 18 Dec 2018, 5:00 am
1.ನಮ್ಮ ತೋಟದಲ್ಲಿರುವ ಕರಿಬೇವಿನ ಗಿಡಗಳಿಗೆ ಹುಳು ಹಿಡಿದಿದೆ. ಎಲೆ ಉಪಯೋಗಿಸಲು ಆಗುತ್ತಿಲ್ಲ. ಗಿಡಗಳು ಹಾಳಾಗುತ್ತಿವೆ. ಇದಕ್ಕೆ ಯಾವ ಗೊಬ್ಬರ ಹಾಕಬೇಕು ? ಯಾವ ಔಷಧ ಸಿಂಪರಣೆ ಮಾಡಬೇಕು ತಿಳಿಸಿ.
Vijaya Karnataka Web benagii


- ಮಂಜು ಸಿ.ಕೆ., ಮೈಸೂರು

ಕರಿಬೇವು ನಾಟಿ ಮಾಡಿದ 1ನೇ, 2ನೇ ಮತ್ತು 3ನೇ ವರ್ಷಕ್ಕೆ ಕ್ರಮವಾಗಿ ಪ್ರತಿ ಗಿಡಕ್ಕೆ 50 : 25 : 25, 150 : 37 : 37 ಮತ್ತು 300 : 50 : 50 ಗ್ರಾಂ ಸಾರಜನಕ, ರಂಜಕ, ಪೋಟ್ಯಾಷ್‌ ಒದಗಿಸುವ ರಸಗೊಬ್ಬರ ಬಳಸಬೇಕಾಗುತ್ತದೆ. ಇದನ್ನು ಸಮವಾಗಿ ನಾಲ್ಕು ಕಂತುಗಳಲ್ಲಿ ಅಂದರೆ ಪ್ರತಿ ಮೂರು ತಿಂಗಳಿಗೆ ಒಂದರಂತೆ ಕೊಡಬೇಕು. ಮುಂಗಾರಿಗೆ ಪ್ರತಿ ಎಕರೆಗೆ 10 ಟನ್‌ ಕೊಟ್ಟಿಗೆ ಗೊಬ್ಬರವನ್ನು ಕೊಡಬೇಕು. ಕರಿಬೇವಿಗೆ ಹೇನು, ಎಲೆ ತಿನ್ನುವ ಕೀಡೆ, ಹಿಟ್ಟು ತಿಗಣೆ ಮತ್ತು ಎಲೆ ಚುಕ್ಕೆ ರೋಗದ ಬಾಧೆ ಕಾಣಿಸುತ್ತದೆ. ಇದರ ಹತೋಟಿಗಾಗಿ 2 ಮಿ.ಲೀ. ಮೆಲಾಥಿಯಾನ್‌ 50 ಇಸಿ + 1 ಗ್ರಾಂ ಕಾರ್ಬನ್‌ಡೈಜಿಂ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪರಿಸಿರಿ. ಸಿಂಪರಣೆ ಮಾಡಿದ 15 ದಿನಗಳ ನಂತರವೇ ಕಟಾವು ಮಾಡಬೇಕು.


2. ಎರೆ ಭೂಮಿಯಲ್ಲಿ ಅಡಕೆ ಬೆಳೆ ಬೆಳೆಯಬಹುದೇ ?

- ದಿನೇಶ್‌, ಹೊಳೆಸಿಗೆರೆ


ಅಡಕೆ ಬೆಳೆಯಲು ನೀರು ಬಸಿದು ಹೋಗುವ ಕೆಂಪುಗೋಡು, ಜಂಬಟ್ಟಿಗೆ ಅಥವಾ ಮೆಕ್ಕಲುಗೋಡು ಮಣ್ಣು ಇದ್ದರೆ ಅತ್ಯುತ್ತಮ. ನೀರು ನಿಲ್ಲುವ ಜೌಗು ಮತ್ತು ಸವಳು ಮಣ್ಣಿನ ಪ್ರದೇಶಗಳು ಅಡಿಕೆ ಬೆಳೆಗೆ ಯೋಗ್ಯವಲ್ಲ. ಮಣ್ಣಿನ ರಸಸಾರ 6 ರಿಂದ 7 ಸೂಕ್ತ. ಎರೆ ಭೂಮಿಯಲ್ಲಿ ಸೂಕ್ತ ನೀರು ನಿಲ್ಲದ ಹಾಗೆ ಬಸಿಗಾಲುವೆ ಅಳವಡಿಸಿ ಬೆಳೆಯಬಹುದು.


3. ನಾಲ್ಕು ಎಕರೆ ಜಮೀನಿದೆ. ಅದರಲ್ಲಿ 2 ಜಮೀನು ಅರೆ ನೀರಾವರಿ (ಎರೆ/ಕಪ್ಪು ಮಣ್ಣು). ಉಳಿದ 2 ಎಕರೆ (ಮರಳು ಮಿಶ್ರಿತ ಕೆಂಪು ಮಣ್ಣು) ಮಳೆ ಆಧಾರಿತ. ಇಂಥ ಭೂಮಿಗೆ ಯಾವ ಬೆಳೆ ಸೂಕ್ತ. ಜಾನುವಾರು ಸಾಕಣೆ ಮಾಡುವ ವಿಚಾರವೂ ಇದೆ. ತರಬೇತಿ ಎಲ್ಲಿ ಸಿಗುತ್ತದೆ ?

- ಶಿವಕುಮಾರ ಕೆ., ಕಬ್ಬೂರು-ಚಿಕ್ಕೊಡಿ

ಅರೆ ನೀರಾವರಿಯಲ್ಲಿ ಕಡಲೆ, ಗೋದಿ, ಗೋವಿನ ಜೋಳ ಮತ್ತು ಇತರೇ ತರಕಾರಿ ಬೆಳೆಗಳನ್ನು ಬೆಳೆಯಬಹುದು. ಮಳೆ ಆಧಾರಿತ ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಮುಂಗಾರಿನಲ್ಲಿ ಸಜ್ಜೆ + ತೊಗರಿ, ಸಿರಿಧಾನ್ಯ ಬೆಳೆಗಳಾದ ನವಣೆ, ಸಾವೆ ಬೆಳೆಯನ್ನು ಬೆಳೆಯಬಹುದು. ಇಲ್ಲವೇ ತೊಗರಿ + ನವಣೆ, ಮಿಶ್ರ ಬೆಳೆ ಪದ್ಧತಿ ಅನುಸರಿಸಬಹುದು.


4. ಮಹಾಗನಿ ಮರ ಬೆಳೆಯುವ ವಿಧಾನ ತಿಳಿಸಿ. ಎಷ್ಟು ವರ್ಷಕ್ಕೆ ಕಟಾವು ಮಾಡಬಹುದು ? ಸಸಿಗಳು ಎಲ್ಲಿ ಸಿಗುತ್ತವೆ ?

-ಮೋಹನ್‌, ಕಡೂರು


ಮಹಾಗನಿ ನೇರವಾಗಿ ಹಾಗೂ ತೀವ್ರವಾಗಿ ಬೆಳೆಯುವ ಮರವಾಗಿದ್ದು, ಕೆಂಪು ಮಿಶ್ರಿತ ಮಣ್ಣಿನಲ್ಲಿ 4/4 ಮೀ ಅಂತರದಲ್ಲಿ ಬೆಳೆಯುವುದು ಸೂಕ್ತ. ಈ ಮರವು ಸುಮಾರು 15-20 ವರ್ಷಕ್ಕೆ ಕಟಾವಿಗೆ. ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಾವು ಕಡೂರಿನ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ. ದೂ. 08267-221033.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ