ಆ್ಯಪ್ನಗರ

ಈರುಳ್ಳಿ ಇಲ್ಲದ ಅಡುಗೆ

ಪ್ರತಿದಿನದ ಅಡುಗೆಗೆ ಅಗತ್ಯವಾಗಿ ಬೇಕಿರುವ ಈರುಳ್ಳಿಯ ಬೆಲೆ ಗಗನಕ್ಕೇರಿದೆ...

Vijaya Karnataka 21 Sep 2019, 5:00 am
ಪ್ರತಿದಿನದ ಅಡುಗೆಗೆ ಅಗತ್ಯವಾಗಿ ಬೇಕಿರುವ ಈರುಳ್ಳಿಯ ಬೆಲೆ ಗಗನಕ್ಕೇರಿದೆ. ಈ ಕಾರಣ ಜನರು ಈರುಳ್ಳಿ ಇಲ್ಲದೆಯೂ ಈರುಳ್ಳಿಯಂಥ ರುಚಿ ಬರುವ ಅಡುಗೆಯತ್ತ ಮುಖ ಮಾಡುತ್ತಿದ್ದಾರೆ.
Vijaya Karnataka Web onion-5


ಬಬಿತಾ ಎಸ್‌.

ಅಡುಗೆ ಮನೆಯ ಅವಿಭಾಜ್ಯ ಅಂಗ ಈರುಳ್ಳಿ. ಪಲ್ಯ, ಸಾರು, ಹುಳಿ, ಬಿಸಿ ಬೇಳೆಭಾತ್‌, ಮಸಾಲೆ ದೋಸೆ, ಈರುಳ್ಳಿ ದೋಸೆ, ಈರುಳ್ಳಿ ಪಕೋಡ, ಚಿತ್ರಾನ್ನ, ರಾಯತ, ಕೋಸಂಬರಿ, ಬಿರಿಯಾನಿ, ಮಾಂಸಾಹಾರ ಹೀಗೆ ಎಲ್ಲದಕ್ಕೂ ಈರುಳ್ಳಿ ಬೇಕೇ ಬೇಕು. ಈರುಳ್ಳಿ ಇಲ್ಲದೆ ಅಡುಗೆಯೇ ಸಾಧ್ಯವಿಲ್ಲವೇನೊ ಎನ್ನುವಷ್ಟರ ಮಟ್ಟಿಗೆ ಈರುಳ್ಳಿ ಭಾರತೀಯರ ಆಹಾರ ಸಂಸ್ಕೃತಿಯಲ್ಲಿದೆ. ಕೆಲವು ಕಡೆ ರೊಟ್ಟಿ, ಚಪಾತಿ ನೆಂಚಿಕೊಳ್ಳಲು ಕೂಡ ಈರುಳ್ಳಿಯೊಂದಿದ್ದರೆ ಸಾಕು. ಬಗೆ ಬಗೆಯ ಖಾದ್ಯಗಳ ಮಧ್ಯೆಯೂ ಒಂದು ಸ್ಲೈಸ್‌ ಈರುಳ್ಳಿ ತಿನ್ನುವ ಅಭ್ಯಾಸ ಕೆಲವರಿಗಿದೆ.

ಔಷಧೀಯ ಗುಣ

ಕೆಲವರಿಗೆ ಈರುಳ್ಳಿ ಇಲ್ಲದ ಅಡುಗೆ ರುಚಿಸದಿದ್ದರೆ ಇನ್ನು ಕೆಲವರಿಗೆ ಅದರ ಕಟು ಪರಿಮಳ ಮತ್ತು ರುಚಿ ಆಗಿಬರಲ್ಲ. ಆದರೆ ಈರುಳ್ಳಿ ಹಲವಾರು ಔಷಧೀಯ ಗುಣಗಳ ಆಗರವಾಗಿದೆ. ಮಕ್ಕಳಿಂದ ಹಿಡಿದು ಎಲ್ಲಾವಯೋಮಾನದವರಿಗೂ ಈರುಳ್ಳಿ ಸೇವನೆ ಒಳ್ಳೆಯದು. ವಿಟಮಿನ್‌ ಮತ್ತು ಖನಿಜಾಂಶಭರಿತವಾಗಿರುವ ಈರುಳ್ಳಿಯಲ್ಲಿವಿಟಮಿನ್‌ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅತ್ಯಂತ ಪ್ರಬಲ ಆ್ಯಂಟಿಆಕ್ಸಿಡೆಂಟ್‌ ಆಗಿರುವ ಇದು ದೇಹದ ಜೀವಕೋಶಗಳನ್ನು ರಕ್ಷಿಸುತ್ತದೆ. ಇದರಲ್ಲಿರುವ ಬಿ ವಿಟಮಿನ್‌ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಲ್ಲಿಮತ್ತು ಕೆಂಪು ರಕ್ತಕಣಗಳ ಉತ್ಪಾದನೆಯಲ್ಲಿಪ್ರಮುಖ ಪಾತ್ರ ವಹಿಸುತ್ತದೆ.

ಈರುಳ್ಳಿಗೆ ಪರ್ಯಾಯ

ತುಸು ಖಾರ ಮತ್ತು ಕಟು ಪರಿಮಳದ ಈರುಳ್ಳಿಯನ್ನು ಯಾವ ಖಾದ್ಯಕ್ಕೆ ಬಳಸಬಹುದು ಎಂಬುದರ ಮೇಲೆ ಅದಕ್ಕೊಂದು ಪರ್ಯಾಯ ಕಂಡುಕೊಳ್ಳಬಹುದು. ಉದಾಹರಣೆಗೆ ಮಸಾಲೆ ದೋಸೆಯ ಪಲ್ಯಕ್ಕಾದರೆ ಕ್ಯಾಬೇಜ್‌ ಅನ್ನು ಈರುಳ್ಳಿಯಂತೆ ಉದ್ದಕ್ಕೆ ತೆಳ್ಳಗೆ ಹೆಚ್ಚಿ ಚೆನ್ನಾಗಿ ಹುರಿದು ಬಳಸಿದರೆ ಮಾಮೂಲು ಆಲೂ ಪಲ್ಯದಂತೆಯೇ ಇರುತ್ತದೆ. ಈರುಳ್ಳಿ ದೋಸೆಗಾದರೆ ಕ್ಯಾಬೇಜನ್ನು ಸಣ್ಣಗೆ ಹೆಚ್ಚಿ ದೋಸೆ ಹಿಟ್ಟನ್ನು ಕಾವಲಿಗೆ ಸುರಿದು ಅದರ ಮೇಲೆ ಹಾಕಿ ಚೆನ್ನಾಗಿ ರೋಸ್ಟ್‌ ಮಾಡಿದರೆ ಈರುಳ್ಳಿ ದೋಸೆಗಿಂತಲೂ ಸೂಪರ್‌ ರುಚಿ ಬರುತ್ತದೆ.

ಬಡೆಸೋಂಪಿನ ಗೆಡ್ಡೆಯೂ ಬೆಸ್ಟ್‌

ಅಡುಗೆಗೆ ಈರುಳ್ಳಿಯಂಥ ಪರಿಮಳವೇ ಬೇಕಿದ್ದರೆ ಬಡೆಸೋಂಪಿನ ಎಳೆ ಗೆಡ್ಡೆಗಳು ಉತ್ತಮ. ಇದು ಈರುಳ್ಳಿಯಂಥ ಪರಿಮಳವನ್ನೇ ಬೀರುತ್ತದೆ. ಇದನ್ನು ಬೇಯಿಸುವಾಗ ಬಳಸುವುದಕ್ಕಿಂತ ಮೊದಲೇ ಹೆಚ್ಚಿ ಒಣಗಿಸಿ ಬೇಕೇಂದಾಗ ಅಡುಗೆಗೆ ಬಳಸಬಹುದು. ಈರುಳ್ಳಿಯ ಬದಲು ಕೊತ್ತಂಬರಿ ಸೊಪ್ಪನ್ನು ಸ್ವಲ್ಪ ಹೆಚ್ಚಿಗೆ ಬಳಸಿದರೆ ಈರುಳ್ಳಿಯ ಕೊರತೆಯನ್ನು ಸರಿತೂಗಿಸಿಕೊಳ್ಳಬಹುದು. ಈರುಳ್ಳಿಯ ಕಟು ರುಚಿ ಬೇಕಿದ್ದರೆ ಮೂಲಂಗಿ ತುಣುಕುಗಳನ್ನು ಬೆಸ್ಟ್‌ ಆಪ್ಷನ್‌.

ಅಲಂಕಾರಕ್ಕೆ ಇದಿರಲಿ

ಕೆಲವು ಖಾದ್ಯಗಳನ್ನು ಈರುಳ್ಳಿಯ ದುಂಡನೆಯ ಸ್ಲೈಸ್‌, ಸಣ್ಣಗೆ ಹೆಚ್ಚಿದ ತುಣುಕುಗಳಿಂದ ಅಲಂಕರಿಸಿ ಸವ್‌ರ್‍ ಮಾಡಲಾಗುತ್ತದೆ. ಇದಕ್ಕೂ ಪರ್ಯಾಯವಿದೆ. ಈರುಳ್ಳಿಯ ಬದಲು ಈರುಳ್ಳಿ ಗಿಡ, ಸ್ಟ್ರಿಂಗ್‌ ಆನಿಯನ್‌, ಬಡೇಸೋಂಪಿನ ಗೆಡ್ಡೆ, ಬೆಲ್‌ ಪೆಪ್ಪರ್ಸ್, ಕ್ಯಾಬೇಜ್‌ಗಳನ್ನು ಫುಡ್‌ ಡೆಕೋರ್‌ಗೆ ಬಳಸಬಹುದು. ಈರುಳ್ಳಿ ಗಿಡ ಎಳೆ ಕಾಂಡವನ್ನು ಸಣ್ಣದಾಗಿ ಹೆಚ್ಚಿ ಖಾದ್ಯ ಮೇಲೆ ತೆಳುವಾಗಿ ಹರಿಡಿಸಿ. ತುಸು ಬೆಳ್ಳುಳ್ಳಿಯಂತೆ ಪರಿಮಳ ಬೀರುವ ಸ್ಟ್ರಿಂಗ್‌ ಆನಿಯನ್‌ ಅನ್ನು ಸಲಾಡ್‌ ಮೇಲೆ ಉದುರಿಸಲು ಬಳಸಬಹುದು. ಈರುಳ್ಳಿ ಸ್ಲೈಸ್‌ನ ಬದಲು ಬಡೇಸೋಂಪಿನ ಗೆಡ್ಡೆಯ ಸ್ಲೈಸ್‌, ಕೆಂಪು ಮತ್ತು ಹಳದಿ ಬಣ್ಣಗಳ ಬೆಲ್‌ ಪೆಪ್ಪರ್‌ ಸ್ಲೈಸ್‌ಗಳನ್ನು ಅಲಂಕಾರಕ್ಕೆ ಬಳಸಿದರೆ ಆ ಖಾದ್ಯ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ಮಾಂಸಾಹಾರದ ಕೆಲವು ಖಾದ್ಯಗಳನ್ನು ಕರಿದ ಈರುಳ್ಳಿಯ ತುಣುಕುಗಳಿಂದ ಅಲಂಕರಿಸಲಾಗುತ್ತದೆ. ಇದರ ಬದಲು ಕ್ಯಾಬೇಜ್‌ನ ತೆಳ್ಳನೆಯ ತುಣುಕುಗಳನ್ನು ಚೆನ್ನಾಗಿ ಹುರಿದು ಅಲಂಕರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ