ಆ್ಯಪ್ನಗರ

ಶ್ರಾವಣಕ್ಕೆ 2 ಸ್ಪೆಷಲ್ ರೆಸಿಪಿ

ಹಬ್ಬಗಳ ಸಂಭ್ರಮ ಹೊತ್ತು ತರಲು ಶ್ರಾವಣ ಬಂದಾಗಿದೆ. ಶ್ರಾವಣ ತಿಂಗಳಿನಿಂದಲೇ ಮನೆಯಲ್ಲಿ ಹಬ್ಬದ ಅಡುಗೆಗಳು ಶುರುವಾಗುತ್ತದೆ, ಇಲ್ಲಿದೆ ನೋಡಿ 2 ಶ್ರಾವಣ ರೆಸಿಪಿ.

Vijaya Karnataka Web 1 Aug 2019, 11:41 am
ಹಬ್ಬಗಳ ಆರಂಭಕ್ಕೆ ಶ್ರಾವಣ ಮಾಸ ಮುನ್ನುಡಿಯಾಗುತ್ತಿದೆ. ಪ್ರತಿದಿನವೂ ಹಬ್ಬ. ಭೀಮನ ಅಮಾವಾಸ್ಯೆ, ವರಮಹಾಲಕ್ಷ್ಮಿ ನಾಗರಪಂಚಮಿ, ಶ್ರಾವಣ ಸೋಮವಾರ, ಶ್ರಾವಣ ಶನಿವಾರ ಹೀಗೆ ಸಾಲು ಸಾಲು ಹಬ್ಬಗಳು ಬರುತ್ತವೆ. ಈ ಹಬ್ಬಕ್ಕೆ ವಿಶೇಷ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯವಾಗಿಸಲು ಮನೆಯಲ್ಲೇ ಶುಚಿರುಚಿಯಾಗಿ ತಯಾರಿಸಬಹುದು.
Vijaya Karnataka Web shravana recipe


ಕರ್ಜಿಕಾಯಿ

ಬೇಕಾಗುವ ಸಾಮಗ್ರಿ: ಮೈದಾಹಿಟ್ಟು ಒಂದು ಬಟ್ಟಲು, ಚಿಟಿಕೆ ಉಪ್ಪು, ಎರಡು ಚಮಚ ತುಪ್ಪ, ಕಡ್ಲೆ ಒಂದು ಬಟ್ಟಲು, ಕೊಬ್ಬರಿತುರಿ, ಸಕ್ಕರೆಪುಡಿ, ಏಲಕ್ಕಿ ಪುಡಿ, ಗಸಗಸೆ, ಎಳ್ಳು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಗಸಗಸೆಯನ್ನು ಸ್ವಲ್ಪ ಹುರಿದು ಪುಡಿ ಮಾಡಿಕೊಳ್ಳಿ. ಮೈದಾಹಿಟ್ಟಿಗೆ ಚಿಟಿಕೆ ಉಪ್ಪು , ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ. ಇದನ್ನು ಚೆನ್ನಾಗಿ ನಾದಿ ಹದಿನೈದು ನಿಮಿಷ ಮುಚ್ಚಿಡಿ. ಕಡ್ಲೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಸಕ್ಕರೆಪುಡಿ,ಕೊಬ್ಬರಿತುರಿ, ಗಸಗಸೆ, ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಸರಿಯಾಗಿ ಹೊಂದಿಕೊಳ್ಳುವಂತೆ ಚೆನ್ನಾಗಿ ಬೆರೆಸಿ. ಇದನ್ನು 'ಹೂರಣ' ಎನ್ನುತ್ತಾರೆ.

ನಾದಿಸಿಟ್ಟ ಮೈದಾಹಿಟ್ಟಿನನಿಂದ ಸಣ್ಣ ಉಂಡೆ ಮಾಡಿಕೊಂಡು, ಅದನ್ನು ಪೂರಿಯಂತೆ ಲಟ್ಟಿಸಿ. ಆ ಪೂರಿಯೊಳಗೆ ಕಡ್ಲೆ ಮಿಶ್ರಣದ ಹೂರಣವನ್ನು ಒಂದೆರಡು ಚಮಚ ತುಂಬಿ, ಪೂರಿಯನ್ನು ಅರ್ಧ ಭಾಗಕ್ಕೆ ಮಡಿಸಿ, ಅದರ ಎರಡು ಬದಿಯ ಅಂಚುಗಳನ್ನು ಒಟ್ಟಿಗೆ ಹಿಡಿದು ಅದುಮಿ , ಸರಿಯಾಗಿ ಎಲ್ಲಾ ಕಡೆಯೂ ಮುಚ್ಚಿ. ಚೆನ್ನಾಗಿ ಆಕಾರ ಬರುವಂತೆ ಮಾಡಲು ಅಂಚಿನ ತುದಿ ಭಾಗವನ್ನುತೆಗೆದುಬಿಡಿ. ಹೂರಣ ಕಾಣುವಂತಿದ್ದರೆ ಅದನ್ನು ಎಣ್ಣೆಯಲ್ಲಿ ಕರಿಯುವಾಗ ಬಿಟ್ಟುಕೊಳ್ಳುತ್ತದೆ. ಈ ರೀತಿ ತಯಾರಿಸಿದ ಕಡುಬುಗಳನ್ನು ಕಾದಿರುವ ಎಣ್ಣೆಯಲ್ಲಿ ಹಾಕಿ, ಸರಿಯಾದ ಉರಿಯಲ್ಲಿ ಎರಡು ಬದಿ ಹೊಂಬಣ್ಣ ಬರುವವರೆಗೆ ಕರಿಯಿರಿ.

ಅರಸಿನ ಎಲೆ ಕಡುಬು

ನಾಗರಪಂಚಮಿಗೆ ಕರಾವಳಿ ಭಾಗದಲ್ಲಿ ವಿಶೇಷವಾಗಿ ತಯಾರಿಸುತ್ತಾರೆ.

ಬೇಕಾಗುವ ಸಾಮಾಗ್ರಿಗಳು: ಅರಸಿನ ಎಲೆ ಹತ್ತು ಅಕ್ಕಿ ಒಂದುಕಪ್‌, ತೆಂಗಿನ ತುರಿ ಅರ್ಧ ಕಪ್‌, ಬೆಲ್ಲ ಒಂದು ಕಪ್‌, ಏಲಕ್ಕಿಪುಡಿ ಸ್ವಲ್ಪ.

ತಯಾರಿಸುವ ವಿಧಾನ: ನೆನೆಸಿಟ್ಟ ಅಕ್ಕಿಯೊಂದಿಗೆ ತೆಂಗಿನ ತುರಿ ಸೇರಿಸಿ ದೋಸೆ ಹಿಟ್ಟಿಗಿಂತ ಸ್ವಲ್ಪ ಹೆಚ್ಚು ದಪ್ಪವಾಗಿ ರುಬ್ಬಿಕೊಳ್ಳಿ. ತೆಂಗಿನ ತುರಿ, ಬೆಲ್ಲ, ಏಲಕ್ಕಿ ಸೇರಿಸಿ ಹೂರಣ ತಯಾರಿಸಿಟ್ಟುಕೊಳ್ಳಿ.ರುಬ್ಬಿಟ್ಟುಕೊಂಡಿದ್ದ ಅಕ್ಕಿ ಹಿಟ್ಟನ್ನು ತೆಳುವಾಗಿ ತೊಳೆದಿಟ್ಟ ಅರಸಿನ ಎಲೆ ಮೇಲೆ ಸವರಿ. ಹೂರಣವನ್ನು ಎಲೆ ಮೇಲೆ ಹಾಕಿ ಮಡಚಿ ಹಬೆಯಲ್ಲಿ ಬೇಯಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ