ಆ್ಯಪ್ನಗರ

ಸೂಪರ್‌ ಮ್ಯಾಜಿಕ್‌: ಬೆಳಕಿನ ವಿರುದ್ಧ ವಕ್ರೀಭವನ

ನೀವು ಎಲ್ಲಿಯಾದರೂ ದಾರಿ ತಪ್ಪಿದರೆ ಗಾಜಿನ ಲೋಟದಲ್ಲಿ ನೀರು ಹಿಡಿದುಕೊಂಡಿರುವ ವ್ಯಕ್ತಿಗಳ ಬಳಿ ಮಾತ್ರ ಸರಿ ದಾರಿ ಯಾವುದು ಎಂದು ಕೇಳಬೇಡಿ...

Vijaya Karnataka 2 Sep 2018, 5:00 am
ನೀವು ಎಲ್ಲಿಯಾದರೂ ದಾರಿ ತಪ್ಪಿದರೆ ಗಾಜಿನ ಲೋಟದಲ್ಲಿ ನೀರು ಹಿಡಿದುಕೊಂಡಿರುವ ವ್ಯಕ್ತಿಗಳ ಬಳಿ ಮಾತ್ರ ಸರಿ ದಾರಿ ಯಾವುದು ಎಂದು ಕೇಳಬೇಡಿ. ಈ ರೀತಿ ಮಾಡಿದರೆ ನೀವು ಖಂಡಿತಾ ದಾರಿ ತಪ್ಪುವಿರಿ. ಇದಕ್ಕೆ ಕಾರಣವನ್ನು ಈ ಕೆಳಗಿನ ಪ್ರಯೋಗ ಮಾಡಿ ತಿಳಿದುಕೊಳ್ಳಿ.
Vijaya Karnataka Web Which_Way_Please


ಬೇಕಾಗುವ ಸಾಮಗ್ರಿ

ಗಾಜಿನ ಲೋಟ, ನೀರು, ಪೇಪರ್‌, ಸ್ಕೆಚ್‌ ಪೆನ್‌, ಟೇಬಲ್‌, ಸ್ನೇಹಿತ.

ಮಾಡುವ ವಿಧಾನ

1. ಈ ಚಿತ್ರದಲ್ಲಿ ತೋರಿಸಿರುವಂತೆ ಪೇಪರ್‌ ಮೇಲೆ ಎರಡು ಬಾಣದ ಗುರುತನ್ನು ಒಂದಕ್ಕೊಂದು ಸಮಾನಾಂತರವಾಗಿ ಬಿಡಿಸಿ. ಬಾಣಗಳ ತುದಿ ಒಂದೇ ದಿಕ್ಕಿನ ಕಡೆ ಇರುವಂತೆ ನೋಡಿಕೊಳ್ಳಿ.

2. ಗಾಜಿನ ಲೋಟಕ್ಕೆ ನೀರು ತುಂಬಿಸಿ ಟೇಬಲ್‌ ಮೇಲಿಡಿ. ನಿಮ್ಮ ಸ್ನೇಹಿತನ ಬಳಿ ಬಾಣದ ಗುರುತಿರುವ ಪೇಪರನ್ನು ನಿಧಾನವಾಗಿ ಗಾಜಿನ ಕೆಳಗೆ ಬರುವಂತೆ ಹಿಡಿಯಲು ಹೇಳಿ. ಇದರಲ್ಲಿರುವ ಎರಡನೇ ಬಾಣದ ಗುರುತು ಲೋಟದ ಹಿಂದೆ ಬರುವಂತೆ ನೋಡಿಕೊಳ್ಳಿ.

3. ನೀವು ಲೋಟದ ಮುಂದೆ ನಿಂತು ಲೋಟದ ಮೂಲಕ ಬಾಣದ ಗುರುತನ್ನು ನೋಡಿ. ಈ ರೀತಿ ಮಾಡಿದಾಗ ಗಾಜಿನ ಲೋಟದ ಹಿಂದಿರುವ ಬಾಣದ ಗುರುತು ವಿರುದ್ಧ ದಿಕ್ಕಿನಲ್ಲಿರುತ್ತದೆ!

ಕಾರಣ ಇಲ್ಲಿದೆ

ಬೆಳಕಿನಲ್ಲಿರುವ ವಿಶೇಷ ಗುಣ ವಕ್ರೀಭವನವೇ ಇದಕ್ಕೆ ಮುಖ್ಯ ಕಾರಣ. ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಚಲಿಸುವಾಗ ಬಾಗುವ ಪ್ರಕ್ರಿಯೆಯನ್ನೇ ವಕ್ರೀಭವನ ಎಂದು ಕರೆಯಲಾಗುತ್ತದೆ. ಇದು ಬೆಳಕಿನ ಪ್ರತಿಫಲನಕ್ಕಿಂತ ಭಿನ್ನವಾಗಿರುತ್ತದೆ. ಬೆಳಕು ಒಂದು ವಸ್ತುವಿಗೆ ಬಡಿದು ಹಿಂದಕ್ಕೆ ಬರುವುದನ್ನು ಪ್ರತಿಫಲನ ಎನ್ನುತ್ತೇವೆ. ಒಂದು ಮಾಧ್ಯಮದ ಅಣುಗಳು ಗಾಳಿಯ ಅಣುಗಳಿಗಿಂತ ತುಂಬಾ ಸಮೀಪವಾಗಿ ಒಂದಕ್ಕೊಂದು ಬೆಸೆದುಕೊಂಡಿರುವ ಕಾರಣ ವಕ್ರೀಭವನ ಉಂಟಾಗುತ್ತದೆ. ಇದರಿಂದ ಬೆಳಕಿಗೆ ನೀರು, ಗಾಜು ಅಥವಾ ಗಾಳಿಗಿಂತ ಸಾಂದ್ರತೆ ಹೆಚ್ಚಿರುವ ಯಾವುದೇ ವಸ್ತುಗಳಿಗೆ ಪ್ರವೇಶಿಸುವಾಗ ನೇರ ಪಥ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ.

ನೀವು ಗಾಜಿನ ಲೋಟದ ಹಿಂದಿನಿಂದ ಬಾಣದ ಗುರುತನ್ನು ನೋಡಿದಾಗ ಬಾಣದಿಂದ ಬೆಳಕು ಮೊದಲಿಗೆ ಗಾಳಿಯಿಂದ ಗಾಜಿಗೆ ಆಮೇಲೆ ನೀರಿಗೆ ಚಲಿಸುತ್ತದೆ. ಇದರರ್ಥ ಬೆಳಕು ಆಗಲೇ ಎರಡು ಬಾರಿ ಬಾಗಿರುತ್ತದೆ. ಅಂದರೆ ಗಾಳಿಯಿಂದ ಗಾಜಿಗೆ ಮತ್ತು ಗಾಜಿನಿಂದ ನೀರಿಗೆ ಬಾಗಿರುತ್ತದೆ. ಬಳಿಕ ಅದು ಗಾಜಿನ ಮುಂಭಾಗದಿಂದ ಹೊರ ಬಂದು ಗಾಳಿಗೆ ಬರುತ್ತದೆ. ಇದರಿಂದ ಬೆಳಕು ಮತ್ತೆ ಎರಡು ಸಲ ಬಾಗುತ್ತದೆ. ಈ ಬಾಗುವಿಕೆ ಮೊದಲ ಎರಡು ಬಾಗುವಿಕೆಗಿಂತ ಸಂಪೂರ್ಣ ವಿರುದ್ಧವಾಗಿರುತ್ತದೆ. ಅಂದರೆ ನೀರಿನಿಂದ ಗಾಜಿಗೆ ಮತ್ತು ಗಾಜಿನಿಂದ ಗಾಳಿಗೆ ಬಾಗುತ್ತದೆ. ಈ ವಿರುದ್ಧ ವಕ್ರೀಭವನದಿಂದ ನೀವು ಗಾಜಿನ ಹಿಂದಿರುವ ಬಾಣದ ಗುರುತನ್ನು ನೋಡಿದಾಗ ಅದು ವಿರುದ್ಧ ದಿಕ್ಕಿನಲ್ಲಿರುವಂತೆ ಕಾಣುತ್ತದೆ. ಈ ಕಾರಣಕ್ಕೆ ಗಾಜಿನ ಲೋಟದಲ್ಲಿ ನೀರು ಹಿಡಿದುಕೊಂಡು ನಿಂತಿರುವ ವ್ಯಕ್ತಿಯ ಬಳಿ ಸರಿ ದಾರಿ ಕೇಳಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ