-ಪ್ರಕಾಶ್ ಕೆ.ನಾಡಿಗ್
ಹಿಂದೆ ಕಾಡಿನ ಪ್ರಾಣಿಗಳು ಹಾಗೂ ನಾಡಿನ ಜನರೆಲ್ಲಾ ಬಹಳ ಅನ್ಯೋನ್ಯದಿಂದ ಬದುಕುತ್ತಿದ್ದರು. ಆಗ ಆನೆ ಕಾಡಿನ ರಾಜನಾಗಿತ್ತು. ಅದು ಪ್ರಜೆಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿತ್ತು. ಒಂದು ದಿನ ರಾಜ ಆನೆಗೆ ಕೆರೆ ನದಿ ಹಳ್ಳಗಳಿಗೂ ಒಬ್ಬ ರಾಜನನ್ನು ನೇಮಿಸಬೇಕೆಂಬ ಯೋಚನೆ ಬಂತು. ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆ ಕೊಡಲು ಯಾರಾದರೂ ಒಬ್ಬರು ಜವಾಬ್ದಾರಿಯುತ ವ್ಯಕ್ತಿ ಬೇಕು. ಮಳೆಯ ಮುನ್ಸೂಚನೆ ಕೊಟ್ಟರೆ ಜನರು ಬಿತ್ತನೆ ಮಾಡಲು ಪೂರ್ವತಯಾರಿ ಮಾಡಿಕೊಳ್ಳುತ್ತಾರೆ ಎಂಬ ಆಲೋಚನೆ ಬಂತು. ಅಂತೆಯೇ ತನ್ನ ಸೇವಕ ಹುಂಜವನ್ನು ಕರೆದು ನದಿ, ಕೆರೆ, ಹಳ್ಳಗಳಿಗೆ ರಾಜನಾಗಲು ಆರ್ಹತೆಯಿರುವವರು ಹಾಗೂ ಇಚ್ಛೆಯುಳ್ಳವರು ನಾಳೆ ಬೆಳಗ್ಗೆ ಅರಮನೆಯ ಮುಂದಿನ ಅಂಗಳದ ಹತ್ತಿರ ಜಮಾಯಿಸಬೇಕೆಂದು ಡಂಗುರ ಸಾರಿಸಿತು.
ಬೆಳಗ್ಗೆ ತಿಂಡಿ ತಿಂದ ನಂತರ ಆನೆ ಹೊರಗೆ ಬಂದು ನೋಡಿದರೆ, ಕಾಡಿನ ಏಲ್ಲಾ ಪ್ರಾಣಿಗಳು ಜಲರಾಜನಾಗಲು ತಾಮುಂದು ನಾಮುಂದು ಎಂದು ಮನೆ ಮುಂದೆ ಜಮಾಯಿಸಿದ್ದವು. ಅದರಲ್ಲಿ ಮಂಗ, ಬೆಕ್ಕು, ಆಮೆ, ಬಾತುಕೋಳಿ ಅಲ್ಲದೇ ಏಡಿ ಕೂಡ ಬಂದಿತ್ತು. ಆನೆ ಅಲ್ಲಿ ಬಂದಿದ್ದ ಪ್ರಾಣಿಗಳ ಬಳಿ ಬಂದು ಅವುಗಳಿಗೆ ಜಲರಾಜನಾಗಲು ಇರುವ ಅರ್ಹತೆಯನ್ನು ಅಳೆಯಲಾರಂಬಿಸಿತು.
ಮೊದಲು ಬೆಕ್ಕಿನ ಬಳಿ ಬಂದ ಅನೆ ಹೇಳಿತು: 'ನಿನಗೆ ನೀರೆಂದರೆ ಭಯ, ಮಳೆ ಬಂದರೆ ಸಾಕು ಬೆಚ್ಚಗಿನ ಜಾಗವನ್ನು ಹುಡುಕಿಕೊಂಡು ಓಡುತ್ತಿ, ಹಾಗಾಗಿ ನಿನಗೆ ಜಲರಾಜನಾಗುವ ಅರ್ಹತೆ ಇಲ್ಲ!' ಎಂದಿತು. ನಂತರ ಮಂಗನ ಬಳಿ ಬಂದ ಆನೆ, 'ನೀನು ಯಾವಾಗಲೂ ಆಟದಲ್ಲೇ ಮುಳುಗಿರುತ್ತಿಯಾ, ನಿನಗೆ ಮರೆವೂ ಸ್ವಲ್ಪ ಜಾಸ್ತಿ, ನಿನ್ನ ಆಟದಲ್ಲಿ ಮೈಮರೆತು ನಿನ್ನ ಕರ್ತವ್ಯವನ್ನು ಮರೆಯಬಹುದೆಂಬ ಭಯ ನನಗೆ, ಹಾಗಾಗಿ ನೀನು ಸಹ ಈ ಸ್ಥಾನಕ್ಕೆ ಯೋಗ್ಯನಲ್ಲ' ಎಂದಿತು. ಮುಂದಿನ ಸರದಿ ಬಾತುಕೋಳಿಯದು. 'ನೀನು ನೀರಿನಲ್ಲಿಯೇ ಇರುವುದನ್ನು ಇಷ್ಟಪಡುತ್ತಿಯಾ, ಅದರೆ ನಿನ್ನ ಪಾದ ಚಪ್ಪಟೆಯಾಗಿದೆ, ನಿನಗೆ ವೇಗವಾಗಿ ಓಡಲು ಆಗುವುದಿಲ್ಲ, ಅಲ್ಲದೇ ನಿನ್ನ ಧ್ವನಿಯೂ ಕ್ಷೀಣ. ಹಾಗಾಗಿ ನೀನು ಸಹ ಈ ಸ್ಥಾನಕ್ಕೆ ಯೋಗ್ಯನಲ್ಲ ಎಂದಿತು.
ಏಡಿಯ ಕಡೆ ತಿರುಗಿ, 'ಓ ನನ್ನ ಏಡಿಯೆ, ನಿನ್ನನ್ನು ಹೇಗೆ ಜಲರಾಜನನ್ನಾಗಿ ಮಾಡುವುದು? ನಿನಗೆ ತಲೆಯೇ ಇಲ್ಲ! ನಾನು ಹೇಗೆ ನಿನಗೆ ಕಿರೀಟವನ್ನು ತೊಡಿಸಲಿ? ರಾಜನಾದವನು ಕಿರೀಟ ಹಾಕಿಕೊಳ್ಳಲೇ ಬೇಕು, ಹಾಗಾಗಿ ನೀನು ಈ ಸ್ಥಾನಕ್ಕೆ ಯೋಗ್ಯನಲ್ಲ!' ಎಂದಿತು.
ಕೊನೆಗೆ ರಾಜನಾಗಲು ಬಂದವರಲ್ಲಿ ಉಳಿದದ್ದು ಒಂದು ಮಿಡತೆ ಮತ್ತು ಕಪ್ಪೆ ಮಾತ್ರ, ಇವರಿಬ್ಬರನ್ನು ನೋಡಿದ ರಾಜ ಆನೆ ಒಂದು ನಿಮಿಷ ಸೊಂಡಿಲಿನಿಂದ ತಲೆ ಕೆರೆದುಕೊಂಡು, 'ಗೆಳೆಯರೆ, ಉಳಿದಿರುವ ಇವರಿಬ್ಬರಿಗೂ ಓಳ್ಳೆಯ ಧ್ವನಿ ಇದೆ ಎಂಬುದರಲ್ಲಿ ಹಾಗೂ ಇಬ್ಬರೂ ಈ ಕೆಲಸವನ್ನು ಚೆನ್ನಾಗಿ ಮಾಡಬಲ್ಲಿರಿ ಎಂಬುದರಲ್ಲಿ ಎರಡು ಮಾತಿಲ್ಲ!ಆದರೆ ನಿಮ್ಮಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದು ತೋಚುತ್ತಿಲ್ಲ್ಲ'!ಎಂದಾಗ ಮಧ್ಯೆ ಬಾಯಿ ಹಾಕಿದ ಹುಂಜ ಇವರಿಬ್ಬರಿಗೂ ಓಟದ ಸ್ಪರ್ಧೆಯನ್ನು ಏರ್ಪಡಿಸೋಣ, ಎಂದಾಗ ಎಲ್ಲಾರೂ ಅದೇ ಸರಿ ಎಂಬ ನಿರ್ಧಾರಕ್ಕೆ ಬಂದರು. ರಾಜನೂ, 'ಹಾಗೆಯೇ ಆಗಲಿ, ಸ್ಪರ್ಧೆ ಇಲ್ಲಿಂದ ಪ್ರಾರಂಭವಾಗುತ್ತದೆ, ಯಾರು ಮೊದಲು ನದಿತೀರವನ್ನು ತಲುಪುತ್ತಾರೋ ಅವರೇ ಗೆದ್ದಂತೆ ಹಾಗೂ ಅವರಿಗೆ ಕೆರೆನದಿ ಹಳ್ಳಗಳಿಗೆ ರಾಜನಾಗುತ್ತಾರೆ ಎಂದಿತು.
ಹುಂಜ ರೆಡಿ, ಸ್ಟೆಡಿ ಸ್ಟಾರ್ಟ್ ಎಂದಿದ್ದೆ ತಡ ಮಿಡತೆ ಮತ್ತು ಕಪ್ಪೆ ಓಡಲಾರಂಬಿಸಿದರು, ಮಿಡತೆ ಚಿಮ್ಮುತ್ತ ಚಿಮ್ಮುತ್ತಾ ಸಾಗಿದರೆ ಕಪ್ಪೆ ತನ್ನ ಬಲವನ್ನೇಲ್ಲಾ ಬಳಸಿ ಹಿಂಬದಿ ಪಾದದಿಂದ ನೆಗೆಯುತ್ತಾ ತಾಮುಂದು ನಾಮುಂದು ಎಂದು ಸಾಗಿತು. ಮಿಡತೆ ಕಪ್ಪೆಗಿಂತ ಒಂದು ಹೆಜ್ಜೆ ಮುಂದೆಯೇ ಇತ್ತು. ಅದರೆ ಒಂದು ಹಂತದಲ್ಲಿ ಮಿಡತೆ ನಿಂತುಬಿಟ್ಟಿತು, ಕಾರಣ ಅದರ ಮುಂದೆ ದೊಡ್ಡನೆಯ ಕೆಸರುಗುಂಡಿ ಇತ್ತು, ಹಿಂದಿನವಾರ ಸುರಿದ ಮಳೆಯಿಂದ ಅದು ಕೆಸರಿನಿಂದ ತುಂಬಿತ್ತು, ಅದರಲ್ಲಿ ಓಡುವುದು ಮಿಡತೆಗೆ ಕಷ್ಟವೆನಿಸಿತು. ಅಷ್ಟರಲ್ಲಿ ಹಿಂದೆ ಬಂದ ಕಪ್ಪೆ ಚಂಗನೆ ಕೆಸರಿನ ಮೇಲೆ ನೆಗೆದು ಮುಂದೆ ಹೋಗಿಯೇ ಬಿಟ್ಟಿತು. ಮಿಡತೆಯೂ ಸಹ ಅಗಿದ್ದು ಆಗಲಿ ಎಂದು ಕಪ್ಪೆಯನ್ನು ಹಿಂಬಾಲಿಸಿತು, ಅದರೆ ಕೆಸರಿನಲ್ಲಿ ಓಡಲು ಅಗದೇ ಒದ್ದಾಡತೊಡಗಿತು, ಅಷ್ಟರಲ್ಲಿ ಕಪ್ಪೆ ನದಿಯ ತೀರವನ್ನು ತಲುಪಿತ್ತು. ಕಪ್ಪೆಯನ್ನು ರಾಜ ಮತ್ತು ಅಲ್ಲಿ ನೆರೆದಿದ್ದ ಎಲ್ಲಾ ಪ್ರಾಣಿಗಳು ಅಭಿನಂದಿಸಿದರು. ರಾಜ ಕಪ್ಪೆಯನ್ನು ಕೆರೆನದಿಹಳ್ಳಗಳ ರಾಜನೆಂದು ಘೋಷಿಸಿದನಲ್ಲದೇ ಕಪ್ಪೆಯನ್ನು ಉದ್ದೇಶಿಸಿ ಇನ್ನು ಮುಂದೆ ನೀನು ಜನರಿಗೆ ಮಳೆಯ ಮುನ್ಸುಚನೆಯನ್ನು ಕೊಡಬೇಕು, ಇದರಿಂದ ರೈತಾಪಿ ಜನರು ಬೆಳೆ ಬೆಳೆಯಲು ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ ಎಂದಿತು. ಇಂದಿಗೂ ಮಳೆಗಾಲದ ಪ್ರಾರಂಭವಾಗುತ್ತದೆ ಎನ್ನುವಾಗ ಕಪ್ಪೆಗಳು ವಟರ್ ವಟರ್ ಎಂದು ಕೂಗುತ್ತವೆ.