ಪ್ರೀತಿಯ ಪರಿಯೇ ಹಾಗೆ. ಆ ಜೀವದ ಕುರಿತು ಹೇಳುವುದಕ್ಕೆ ಆಗಸದಷ್ಟು ವಿಷಯವಿದೆ ಅನಿಸುತ್ತದೆ, ಆದರೆ ಪದಗಳೇ ಸಿಗದಂತಹ ಪರದಾಟ. ಆದರೂ ನಿಮ್ಮ ಪ್ರೀತಿಯ ಜೀವದ ಕುರಿತು ಒಂದಷ್ಟು ಬರೆದು ಕಳುಹಿಸಿದ ಎಂಬ ಕೋರಿಗೆ ಅಸಂಖ್ಯ ಓದುಗರು ಸ್ಪಂದಿಸಿದ್ದಾರೆ. ಅವುಗಳಲ್ಲಿ ಆಯ್ದ ಬರಹಗಳು ಇಲ್ಲಿವೆ.
ಪದಗಳೇ ಸಿಗುತ್ತಿಲ್ಲ, ಗೆಳತಿ. ಹೌದು. ನಿನ್ನನ್ನು ನೋಡಿದಾಕ್ಷ ಣ ಆಕರ್ಷಿತನಾದೆ. ಒಡನೆಯೇ ಗಾಢವಾದ ಪ್ರೇಮದಲ್ಲಿ ಮುಳುಗಿದೆ. ನಿನ್ನ ಸುಂದರ ವದನ, ನಿನ್ನ ನೋಟ, ನಿನ್ನ ಮೃದು ಮುಗುಳ್ನಗೆ, ಬಳುಕುವ ಮಾಟವಾದ ಶರೀರ, ವಯ್ಯಾರದ ನಿನ್ನ ನಡೆ ನೋಡುತ್ತ ನಾನೆಲ್ಲೋ ತೇಲಿ ಹೋದ ಅನುಭವ. ಏನೆಂದು ಹೇಳಲಿ, ಹೇಗೆ ವರ್ಣಿಸಲಿ? ನಿನ್ನ ಮಧುರ ಕಂಠದಲ್ಲಿ ನನ್ನೊಡನೆ ಮೊದಲ ಬಾರಿಗೆ ಮಾತನಾಡಿದಾಗ ಮೂಡಿದ್ದು ಪದಗಳಲ್ಲ, ವಾಕ್ಯಗಳಲ್ಲ, ಸುಮಧುರ ಸಂಗೀತವೆನಿಸಿತು. ಮಾತು ಮುಗಿದು ಬೀಳ್ಕೊಡುವಾಗೊಮ್ಮೆ ಸಂಕೋಚದಿಂದ ಹಸ್ತಲಾಘವಕ್ಕೆ ಕೈ ನೀಡಿದಾಗ ನೀ ಕೊಟ್ಟ ಸ್ಪರ್ಶಕ್ಕೆ ವಿದ್ಯುದಾಘಾತಕ್ಕೆ ಸಿಲುಕಿದಂತವನಾದೆ. ಅಷ್ಟು ಮೃದುವಾದ ಹಸ್ತದಿಂದ ಅಂತಹ ಬಿಸಿ ಉದ್ಭವವಾಯಿತಲ್ಲ. ಅದೇ ಅಚ್ಚರಿ. ನನ್ನ ಮನ ನಿನ್ನಲ್ಲಿ ಲೀನವಾಯಿತು. ನಾ ಅದನ್ನು ಬಿಡಿಸಿ ಹೇಳದಾದೆ.
ಗೋಪಿವಲ್ಲಭ
ಅವಳು ನನಗೆ ತುಂಬ ಇಷ್ಟ, ಯಾಕೆಂದರೆ ಅವಳು ನಿರಾಭರಣ ಸುಂದರಿ. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ನೋಡುವ ವಿಶಾಲ ಮನೋಭಾವ. ಅದು ಬೇಕು, ಇದು ಬೇಕು, ಹಾಗೆ ಇರಬೇಕು, ಹೀಗೆ ಇರಬೇಕು ಅನ್ನೋ ಹಠ ಇಲ್ಲದೆ ಇರೋದರಲ್ಲೆ ಸುಖ, ಸಂತೋಷಪಡುವ ಗುಣ. ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನಂತಹ ಕಡುಬಡವನನ್ನು (ಒಳ್ಳೆ ಬಟ್ಟೆ ಇರಲಿಲ್ಲ) ನಂಬಿ ಎಲ್ಲರನ್ನು ಬಿಟ್ಟು ಬಂದ ಗಟ್ಟಿ ಪ್ರೀತಿ. ಅದಕ್ಕೆ ನಾನು ಅವಳನ್ನು ಪ್ರಾಣಕ್ಕಿಂತ ಹೆಚ್ಚಾಗಿ, ಸಾಯೋ ತನಕ ಪ್ರೀತಿಸುತ್ತೇನೆ.
ಪ್ರಸನ್ನಕುಮಾರ್
ಅವನೊಂಥರಾ ಮಲ್ಟಿಪಲ್ ಪರ್ಸನಾಲಿಟಿ. ಒಂದಿನ ರಾತ್ರಿ ಕನಸಲ್ಲಿ ಕಾಡುವ ಕಳ್ಳ ಪ್ರೇಮಿಯಾದರೆ ಇನ್ನೊಂದಿನ ರಾತ್ರಿ ಜ್ವರದ ಬಳಲಿಕೆಯಲ್ಲಿದ್ದ ನನ್ನನ್ನು ನಿದ್ದೆಗೆಟ್ಟು ಕಾಯುವ ಅಮ್ಮನಾಗ್ತಾನೆ. ಸಂಜೆ ಆಫೀಸಿನ ಬಾಗಿಲಲ್ಲಿ ಕಾದು ನನ್ನ ಜೋಪಾನವಾಗಿ ಮನೆಗೆ ತಲುಪಿಸಿ ಅಪ್ಪನ ನೆನಪಿಸ್ತಾನೆ. ಆಫೀಸಿನ ಕೆಲಸದ ತಲೆಬುಡ ಅರ್ಥವಾಗದಿದ್ದಾಗ ಹಣೆ ಮೇಲೆ ಪುಟಾಣಿ ಪೆಟ್ಟು ಕೊಟ್ಟು ಅರ್ಥ ಮಾಡಿಸಿ ಗುರುವಾಗುವ ಮುದ್ದು ಕೋತಿ ಅದು. ಅತಿ ಪ್ರೀತಿ ಬಂದಾಗ ಮಡಿಲಿಗೆ ಒರಗಿ ಪುಟ್ಟ ಮಗುವಾಗ್ತಾನೆ, ನನ್ನಪ್ಪ ಅಮ್ಮನ ಕಂಗಳಲ್ಲಿನ ವೃದ್ಧಾಪ್ಯದ ಭಯಕ್ಕೆ ನಾನಿದ್ದೀನಿ ಎನ್ನುವ ಮಗನಾಗ್ತಾನೆ. ನಾ ನೋವಲ್ಲಿದ್ದಾಗ ಕಪಿ ಚೇಷ್ಟೆ ಮಾಡಿ ಕಣ್ಣೀರಲ್ಲೂ ನಗಿಸುವ ವಿದೂಷಕ ಆಗ್ತಾನೆ, ಕಷ್ಟಕ್ಕೆ ಕಬ್ಬಿಣದ ಹೆಗಲಾಗ್ತಾನೆ. ಎಲ್ಲದಕ್ಕಿಂತ ಹೆಚ್ಚಾಗಿ ಜಗತ್ತಿನ ಅತ್ಯದ್ಭುತ ಗೆಳೆಯ ನನ್ನವನು. ಪ್ರೀತಿಗೆ ಇಷ್ಟೇನಾ ಕಾರಣಗಳು ಅಂತ ಯೋಚಿಸುತ್ತಿರುವಾಗಲೇ ಇನ್ನೊಂದಿಷ್ಟು ಕಾರಣಗಳ ರಾಶಿ ತಂದು ಗುಡ್ಡೆ ಹಾಕಿರ್ತಾನೆ. ಇಷ್ಟು ದಿನ ಹೇಳುತ್ತಿದ್ದದ್ದನ್ನೇ ಮತ್ತೆ ಹೇಳ್ತೀನಿ ಕಣೋ, ನೀನು ಅಂದ್ರೆ ಆಕಾಶದಷ್ಟು ಇಷ್ಟ ನಂಗೆ.
ಕೃತ್ತಿಕಾ ಹೆಚ್.ಜಿ
ಮರಳುಗಾಡಿನಂತಾಗಿದ್ದ ಬದುಕಿನಲ್ಲಿ ಮತ್ತೆ ಕಾರಂಜಿ ಮೂಡಿಸಿದವ. ಉತ್ಸಾಹ ಕಳೆದುಕೊಂಡು ಬದುಕಿದ್ದು ಸತ್ತಂತಿದ್ದ ಎನ್ನ ಜೀವನದಲ್ಲಿ ಮತ್ತೆ ತರಂಗ ಎಬ್ಬಿಸಿದವ. ವಿಧವೆಯಾಗಿ ಬಣ್ಣವನ್ನೇ ಮರೆತಿದ್ದ ನನಗೆ ಕಾಮನಬಿಲ್ಲಿನ ಬಣ್ಣ ತೋರಿಸಿದವ. ನನ್ನ ನಾಡಿಯನ್ನು ಮತ್ತೆ ಮಿಡಿಯುವಂತೆ ಮಾಡಿದವ. ಸುಂದರ ಕನಸನ್ನು ಕಾಣಲು ದಾರಿ ತೋರಿದವ. ಸುರಕ್ಷಿತ ಆಸರೆ ನೀಡಿ, ಅಪ್ಪ, ಅಮ್ಮನಾಗಿ ಪೊರೆಯುತ್ತಿರುವ ನಿನ್ನ ಪ್ರೀತಿಯನ್ನು ಬಣ್ಣಿಸಲು ನನ್ನಲ್ಲಿ ಪದಗಳೇ ಇಲ್ಲ.
ಕಾವ್ಯ ವೆಂಕಟರೆಡ್ಡಿ
ನನ್ನ ಹುಡುಗ ಅಂದ್ರೆ ನಂಗೆ ಸಿಕ್ಕಾಪಟ್ಟೆ ಇಷ್ಟ. ಅವನೊಂದಿಗಿದ್ರೆ ಟೈಮ್ ಹೋಗೋದೆ ಗೊತ್ತಾಗಲ್ಲ. ಅವನಲ್ಲಿರುವ ಅಮ್ಮನ ಪ್ರೀತಿ, ಅಪ್ಪನ ಕಾಳಜಿ, ಸ್ನೇಹಿತನಂತೆ ಸಲಹೆ ನೀಡುವ ಗುಣ ನನಗಿಷ್ಟ. ನನ್ನೆಲ್ಲಾ ಚೇಷ್ಟೆಗಳನ್ನು ಸಮಾಧಾನದಿಂದ ಸ್ವೀಕರಿಸುತ್ತಾನೆ. ಅಂತಹ ಹುಡುಗನನ್ನು ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೆ. ಪ್ರೀತಿಯ ಹುಚ್ಚು ಹಿಡಿಸಿದವ ಅವನೇ.
ರಮ್ಯಾ
ಈವರೆಗೂ ನಾನು ಕಂಡಿಲ್ಲ ನನ್ನ ತವರು ದಾರಿ, ಅಮ್ಮನಿಲ್ಲದ ಬದುಕು ಹಿಡಿದಿತ್ತು ಕವಲು ದಾರಿ, ದಾರಿಯಲ್ಲಿ ಸಿಕ್ಕ ಗೆಳೆಯ ಅಪ್ಪಿ ಕೈ ಹಿಡಿದ. ಎಂಥಾ ಕಷ್ಟ ಬಂದ್ರೂ ಬದುಕಲ್ಲಿ ಕೈ ಬಿಡದೇ ಹೋದ. ಅದು ಬೇರಾರೂ ಅಲ್ಲ, ನನ್ನ ಸಂಗಾತಿ. ಇವನು ಸಂಗಾತಿ ರೂಪದಲ್ಲಿರೋ ಅಮ್ಮ ಅಂದ್ರೂ ತಪ್ಪಾಗೋಲ್ಲ. ಒಂದಷ್ಟು ಕೋಪ, ಒಂದಷ್ಟು ಹಠ, ಗಂಡ ಅನ್ನೋ ದರ್ಪ ಇದ್ರೂ ಎಂದೂ ಪ್ರೀತಿ ಕಡಿಮೆ ಮಾಡಿಲ್ಲ. ಬದುಕಲ್ಲಿ ಕಳೆದುಕೊಂಡಿದ್ದೆಲ್ಲವನ್ನೂ ಅವನೊಬ್ಬನೇ ಮಡಿಲಿನಲ್ಲಿ ತುಂಬಿಸಿಕೊಟ್ಟವ. ಗರ್ಭಿಣಿ ಆದಾಗ ಕೈಯಲ್ಲಿ ವಾಂತಿ ಹಿಡಿದು ಹೆಂಡತಿಗೆ ಕಷ್ಟ ಆಗದಹಾಗೆ ನೋಡಿಕೊಳ್ಳೋದು ಕೇವಲ ಸಿನಿಮಾದ ಹೀರೋ ಮಾತ್ರ ಅಂದುಕೊಂಡಿದ್ದೆ. ಆದ್ರೆ ನನ್ನ ಗಂಡನೂ ಹೀರೋ ಅನ್ನೋದು ನಿರೂಪಿಸಿದ್ದ. ಮಗಳು ಹುಟ್ಟಿದಾಗ ತಾಯೊಬ್ಬಳು ಬಳಿ ನಿಂತು ಮಾಡಬಹುದೆಲ್ಲವನ್ನೂ ಯಾವ ಅಸಹ್ಯವೂ ಇಲ್ಲದೇ ಮಾಡಿ ತಾಯಿಯಾಗಿದ್ದ. ಅಂದಿನಿಂದ ಇಂದಿನವರೆಗೂ ನಾನು ಅವನನ್ನ ಕರೆಯೋದೆ ಅಮ್ಮ ಅಂತ. ಹೆತ್ತವಳು ಇಲ್ಲದಿದ್ರೆ ಏನಂತೆ ನನ್ನ ಗಂಡನೇ ಅಮ್ಮ. ಅವನೇ ಎಲ್ಲಾ. ಅವನನ್ನು ಮೀರಿದ್ದು ಏನೂ ಇಲ್ಲ.
ಮೇರಿ ಐಕ್ಯತಾ
--------------------------------------
ಪ್ರೀತಿ ಎನ್ನುವ ಪದಗಳು ನನ್ನ ಮನಸ್ಸಿನಲ್ಲಿ ಬಂದ ತಕ್ಷ ಣ ಕಣ್ಣಿನÜ ಮುಂದೆ ಬರುವ ಚಿತ್ರ ನೀವು ಮಾತ್ರ. ಬರೀ ಒಬ್ಬ ಗಂಡನಾಗಿ ಮಾತ್ರವಲ್ಲದೆ, ತಂದೆಯಾಗಿ, ಗೆಳೆಯನಾಗಿ, ಪ್ರೇಮಿಯಾಗಿ ನನ್ನ ಎಲ್ಲ ಆವಶ್ಯಕತೆಗಳನ್ನು ಪೂರೈಸಿದ್ದೀರಿ. ಎಲ್ಲಕ್ಕಿಂತ ಹೆಚ್ಚಾಗಿ ನಾನು ತಾಯಿಯಾದಾಗ ನನ್ನ ತಾಯಿಯ ಜಾಗದಲ್ಲಿ ನಿಂತು ಆರೈಕೆ ಮಾಡಿದ ಆ ದಿನಗಳನ್ನು ನಾನು ಎಂದಿಗೂ ಮರೆಯಲಾರೆ. ನನ್ನ ಜೀವನದ ಎಲ್ಲ ದಿನಗಳನ್ನು ಪ್ರೀತಿಯಿಂದ ತುಂಬಿದ ನಿಮಗೆ ಧನ್ಯವಾದಗಳು.
ಭವ್ಯಾ
ನಲವತ್ತರ ಹರಯದಲ್ಲೂ, ಇಪ್ಪತ್ತರ ಸವಿನೆನಪನ್ನ ಮೆಲುಕು ಹಾಕುವಂತೆ ಮಾಡಿದ ಮೋಡಿಗಾರ... ಊಟಿ, ಕೊಡೈಕೆನಾಲ್ ಅಂತ ಸುತ್ತುವಾಗ ಕೊರೆವ ಚಳಿಯಲ್ಲೂ ಬೆವರುವಂತೆ ಬಿಸಿಯಪ್ಪುಗೆಯಲ್ಲಿ ಜಗವನ್ನೇ ಮರೆಸಿ ಬೆವರಿಳಿಸಿದ್ದನಲ್ಲ, ಇಪ್ಪತ್ತು ವರ್ಷ ಕಳೆದದ್ದೇ ತಿಳಿಯಲಿಲ್ಲವಲ್ಲ, ನಡೆದಾಡುವಾಗ ನಿನ್ನ ಕೈ ನವಿರಾಗಿ ಸೋಕಿದಾಗ ಮೈಯ್ಯಲ್ಲೆನೋ ರೋಮಾಂಚನ. ಅದು ನಿನಗೂ ಹೊಸದಿರಬಹುದು. ಆದರೆ ಆ ಸ್ವರ್ಗದ ಬಾಗಿಲಿಗೆ ನನ್ನ ಕರೆದೊಯ್ದ ನಿನ್ನ ಆಲಿಂಗನಕ್ಕೆ ನನ್ನ ಜೀವನವನ್ನೆ ಮುಡಿಪಿಟ್ಟು ನಿನ್ನಲ್ಲೊಂದಾದ ಮೇಲೆ ಮುದ್ದಾದ ಎರಡು ವಂಶ ಕುಡಿಗಳಿಗೆ ಜೀವವನ್ನು ಗ್ರಹಿಸುವ ಭಾಗ್ಯ ನನ್ನದಾಯಿತು. ಇಂದಿಗೂ ನೀನು ದುಡಿದು ಬರುವಾಗ ನಿನ್ನ ದಾರಿ ಕಾಯುವ ಕಾಯಕವೇ ಬಲು ಸೊಗಸು ನನ್ನ ನಲ್ಲ ರವಿ.
ಉಮಾ ರವೀಂದ್ರ
ನನ್ನಂಥ ಪರಮ ದರಿದ್ರನ ಆಸೆಯ ಭಿಕ್ಷಾ ಪಾತ್ರೆಯೊಳಕ್ಕೆ ಅದೆಲ್ಲಿಂದ ಬಂದು ಬಿದ್ದೆಯೇ ಹುಡುಗಿ? ನೀನು ಬಂದಾಗಲೆಲ್ಲ ಜೊತೆಗೊಂದು ವಸಂತ ಮಾಸವನ್ನು ಕರೆದುಕೊಂಡು ಬಂದಿದ್ದಿಯಾ. ನೀನು ಮರೆಯಾದಾಗಲೆಲ್ಲ ಮೌನ ಆಷಾಢ. ನಿನ್ನ ದೇಹಕ್ಕೆ ಯೌವನ ಕಾಲಿಕ್ಕಿದ ನಿಮಿಷದಿಂದ ನಿನ್ನೊಂದಿಗೆ ನಾನಿದ್ದೀನಿ. ಒಮ್ಮೆ ನೀನು ಹಿತವಾಗಿ ಬೆಚ್ಚಿ ಬಿದ್ದದ್ದು ನಿನ್ನ ಕೆನ್ನೆ, ಬೆನ್ನಿಗೆ ನನ್ನ ಉಸಿರು ತಾಕಿದಾಗಲೇ. ನನಗೆ ನಿನ್ನನ್ನು ಹಿತವಾಗಿ ತೋಯಿಸುವ ತುಂತುರು ಮಳೆಯಾಗುವ ಆಸೆ.
ಎಂ. ಮಹೇಶ್
ಕಶ್ಯಪ್, ಐ ಲವ್ ಯೂ, ಇದನ್ನು ಮದುವೆಯಾಗಿ ಎಂಟು ವರ್ಷವಾದರೂ ಹೇಳಿಲ್ಲ. ಹೇಳಿದರೇ ಪ್ರೀತಿಯಿದೆ ಎಂದರ್ಥವಲ್ಲ. ಹೇಳದ ಮಾತನ್ನು ಅರ್ಥ ಮಾಡಿಕೊಂಡವರೇ ಪ್ರೇಮಿಗಳು. ಯಜಮಾನರು ಕಾಲೇಜಿನಲ್ಲಿ ಛೇಡಿಸಿದ್ದಕ್ಕೆ ಜೀವನ ಪರ್ಯಂತ ನಾನು ಛೇಡಿಸುತ್ತೇನೆಂದರೂ, ಮನಸ್ಸಿನಲ್ಲಿ ನಾನೇ ತುಂಬಿರುವೆನೆಂದು ಗೊತ್ತು. ಅದರಲ್ಲಿ ನಮ್ಮ ಪೋಷಕರು ಮತ್ತು ನಮ್ಮ ಇಬ್ಬರು ಮಕ್ಕಳೂ ತುಂಬಿದ್ದಾರೆ. ನಮ್ಮ ಪ್ರೀತಿ ಹಂಚಿದರೂ ನಮ್ಮ ಮನಸ್ಸು, ಹೃದಯ ಹಾಗೂ ಚಿಂತನೆ ಒಂದೇ ಎಂದರೆ ತಪ್ಪೇನಿಲ್ಲ. ನನ್ನ ಜೀವ ನೀವು...
ಅರ್ಚನಾ ಕಶ್ಯಪ್
ಪ್ರೀತಿಗಾಗಿ ಸಾಲದು ಪದ ಐವತ್ತು. ಪ್ರೀತಿಯ ಗುಟ್ಟು ಹೇಳುವೆ ಇವತ್ತು. ನೋಡಲು ಬಂದರು ಆವತ್ತು. ಅವ್ರಿಗೆ ಆಗ ವಯಸ್ಸು ಮೂವತ್ತು. ಆ ಮುಗುಳ್ನಗುವಿಗೆ ಕೊಟ್ಟೆನು ಮನಸ್ಸು ಆ ಹೊತ್ತು. ಅಯ್ಯೋ, ಹಾಗೆ ಇರುವರು ಇವತ್ತು. ಪ್ರೀತಿಯ ಮುಗುಳ್ನಗೆ ಹೀಗೆ ಇರಲಿ ಯಾವತ್ತು. ಅವ್ರ ಕಣ್ಣುಗಳೇ ನನ್ನ ಜಗತ್ತು. ಅವ್ರ ಪ್ರೀತಿಯಲ್ಲಿ ಮುಳುಗಿರುವೇ ಇವತ್ತು. ನನಗಾಗೇ ಅವ್ರ ತಾಯಿ ಕೊಟ್ಟಳು ಹೆತ್ತು. ಅವ್ರು ಅಮೂಲ್ಯವಾದ ಮುತ್ತು. ತೋರುವರು ಭಾರಿ ಶಿಸ್ತು, ಗತ್ತು. ಹಿಂದೆ ಮುಂದೆ ಹಾಕುವರು ನನಗೇ ಸುತ್ತು. ಎಲ್ಲರಿಗೂ ಕೊಡುವರು ಕೈತುತ್ತು. ಆ ಕೈಗಳಿಗೆ ದಿನವೂ ಕೊಡುವೆ ನಾ ಮುತ್ತು. ಅವ್ರ ಹೆಸ್ರನ್ನ ಹೇಳಲೂ ನಾಚಿಕೆ ಇವತ್ತು. ನಮ್ಮೀ ಪ್ರೀತಿ ಹೀಗೆ ಇರ್ಲಿ ಯಾವತ್ತು.
ರೇಖಾ ವಿಜಯ್
ಇಷ್ಟ, ನೀ ನನಗೆ ಇಷ್ಟ. ನಗುಮೊಗದವನು ಎಂತಲ್ಲ, ಮಾತು ಮಧುರ ಎಂತಲ್ಲ, ಮೊಗ ಸುಂದರ ಎಂತಲ್ಲ, ನೀ ಬುದ್ಧಿವಂತ ಎಂತಲೂ ಅಲ್ಲ, ಈ ಹೃದಯ ಮಿಡಿಯುವುದು ನಿನಗಾಗಿ ಮಾತ್ರ ಎಂದಿಷ್ಟ, ನಿತ್ಯ ನಿರಂತರ ಸೊಗಸು ನಿನ್ನಾಸೆ, ನಿನ್ನ ತೋಳೇ ನನಗೆ ಒತ್ತಾಸೆ, ಕ್ಷ ಣಗಳಿಗೂ ಮೀರಿದ ಭವ ಭಾವದಾಸೆ, ಬಯಸಿದ ಭಾಗ್ಯ ಕೈಗೆಟುಕಿದೆ ನೀನೆ ನನ್ನಾಸೆ, ನೀ ಎಂದರೆ ಬಹಳ ಇಷ್ಟ, ನೀನಿಲ್ಲದಿದ್ದರೆ ದೊಡ್ಡ ಕಷ್ಟ.
ಸವಿತಾ ಬಿ.ಆರ್
ನನ್ನವರು ಎಂದಿಗೂ ಹಾಗೇ, ಅವರಲ್ಲಿನ ಒಳಗಿನ ಒಲವು ಪದಗಳಲ್ಲಿ ವ್ಯಕ್ತವಾಗುವುದೇ ಇಲ್ಲ. ನನ್ನ ಬಗೆಗಿನ ಅವರ ತೀವ್ರವಾದ ಪ್ರೀತಿ ನನ್ನ ಅರಿವಿಗೆ ಬಂದಿದ್ದು ನಾನು ಸಾವಿನ ಮನೆಯ ಕದ ಬಡಿದಾಗಲೇ! ಬಾಕಿಯಂತೆ ಸಣ್ಣಪುಟ್ಟ ಖರ್ಚುಗಳಿಗೇ ಉಗ್ರಾವತಾರ ತಾಳುತ್ತಿದ್ದ ಇವರು ಲಕ್ಷ ಗಳೆಷ್ಟೇ ಖರ್ಚಾಗಲಿ ನೀನು ಚಿಂತಿಸಬೇಡ, ನಾನಿದ್ದೇನೆ, ನೀನು ಜೀವದಿಂದಿರು ಸಾಕು ಎಂದಾಗ ಪ್ರತಿಕ್ರಿಯಿಸಲು ನನ್ನಲ್ಲಿ ಪದಗಳೇ ಸಿಗಲಿಲ್ಲ. ಇವರ ಹೂ ಮನವನ್ನು ಅರಿಯಲು ನನಗೆ ದಶಕಗಳೇ ಬೇಕಾದವೇ? ನಾನಿನ್ನು ಬದುಕುತ್ತೇನೆ, ಬದುಕಲೇಬೇಕು ಕೇವಲ ಅವರಿಗಾಗಿ, ಅವರ ಒಳಿತಿಗಾಗಿ.
ಶ್ಯಾಮಲಾ ಹೆಚ್.ಆರ್