ಬನ್ನೇರುಘಟ್ಟ ರಸ್ತೆಯು ಹೊಸ ವಸತಿ ತಾಣವಾಗಿ ಬದಲಾಗುತ್ತಿದೆ. ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳು ಈ ರಸ್ತೆ ಪ್ರದೇಶದ ಸಮೀಪದಲ್ಲಿರುವುದು ಇದಕ್ಕೆ ಮುಖ್ಯ ಕಾರಣ. ಐಟಿಪಿಬಿ ಮತ್ತು ವೈಟ್ಫೀಲ್ಡ್ಗೆ ಪರ್ಯಾಯವಾಗಿ ಈ ಪ್ರದೇಶ ಬೆಳೆಯುತ್ತಿದ್ದು, ರಿಯಾಲ್ಟಿ ಹೂಡಿಕೆಗೆ ಭವಿಷ್ಯದಲ್ಲಿ ಉತ್ತಮ ಲಾಭ ತಂದುಕೊಡುವ ಎಲ್ಲಾ ಲಕ್ಷಣ ತೋರಿಸುತ್ತಿದೆ.
ಬೆಂಗಳೂರು ಬೆಳೆದಂತೆಲ್ಲಾ ಹೊಸ ವಸತಿ ಮತ್ತು ವಾಣಿಜ್ಯ ಪ್ರದೇಶಗಳು ಉದ್ಭವಿಸುತ್ತಿವೆ. ಇದಕ್ಕೆ ಬನ್ನೇರುಘಟ್ಟ ರಸ್ತೆ ಕೂಡ ಹೊರತಲ್ಲ. ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳ ಕಚೇರಿಗಳಿಗೆ ಸಮೀಪದಲ್ಲಿರುವುದು ಬನ್ನೇರು ಘಟ್ಟ ರಸ್ತೆ ಹೊಸ ವಸತಿ ಪ್ರದೇಶವಾಗಿ ಹೊರ ಹೊಮ್ಮಲು ನೆರವಾಗಿದೆ.
ಐಟಿ ಬಲ
ದಕ್ಷಿಣ ಬೆಂಗಳೂರಿನಲ್ಲಿ ಆಕ್ಸೆಂಚರ್, ಎಚ್ಎಸ್ಬಿಸಿ, ಒರಾಕಲ್, ಹನೀವೆಲ್ ಸೇರಿದಂತೆ ಹಲವು ಬಹು ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳಿವೆ. ಇವುಗಳಿಗೆ ಬನ್ನೇರುಘಟ್ಟ ರಸ್ತೆಯ ವಸತಿ ಪ್ರದೇಶಗಳು ಸಮೀಪದಲ್ಲಿವೆ. ಹೀಗಾಗಿ ವೈಟ್ಫೀಲ್ಡ್ನ ಐಟಿಪಿಬಿಗೆ ಪರ್ಯಾಯವಾಗಿ ಇತ್ತ ಐಟಿ ಕಂಪನಿಗಳು ಗಮನ ಹರಿಸುತ್ತಿವೆ. ಇಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೇರಿದಂತೆ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಸಾಕಷ್ಟಿವೆ. ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳ ಡೇಕೇರ್ ಕೇಂದ್ರಗಳು ಕೂಡ ಇವೆ. ಈ ಮೂಲಕ ಉದ್ಯೋಗಿಗಳಿಗೆ ಮಕ್ಕಳನ್ನು ಬಿಟ್ಟು ಹೋಗಲು ನೆರವಾಗುತ್ತದೆ.
ಮೂಲಭೂತ ಸೌಕರ್ಯ
ಕನಿಷ್ಠವೆಂದರೂ ಇಲ್ಲಿ ಮೂರು ಪ್ರತಿಷ್ಠಿತ ಅತ್ಯಾಧುನಿಕ ಆಸ್ಪತ್ರೆಗಳಿವೆ. ಈ ಮೂಲಕ ನಿವಾಸಿಗಳ ಆರೋಗ್ಯ ಕಾಳಜಿಯೂ ಸುಗಮವಾಗುತ್ತದೆ. ರಸ್ತೆಗಳು ಅಗಲವಾಗಿದ್ದು, ವಿಸ್ತಾರವಾದ ಭೂಮಿ ಸಿಗುತ್ತದೆ. ಇದರಿಂದ ಗೇಟೆಡ್ ಮನೆಗಳನ್ನು ಕಟ್ಟಲು ಸಾಧ್ಯವಾಗಿದೆ. ಇದು ಕೂಡ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇನ್ನು ಬನ್ನೇರುಘಟ್ಟ ರಸ್ತೆಯುದ್ದಕ್ಕೂ ಹಲವಾರು ಮಾಲ್ಗಳು, ಹ್ಯಾಂಗ್ಔಟ್, ವಿಂಡೋ ಶಾಪಿಂಗ್ ಲಭ್ಯವಿದೆ. ಜೆಪಿ ನಗರ, ಬಿಟಿಎಂ ಲೇಔಟ್ ಕೂಡ ಇಲ್ಲಿಗೆ ಸಮೀಪದಲ್ಲಿದೆ. ಇನ್ನು ದೇವಾಲಯ, ಮಸೀದಿ, ಚರ್ಚ್ಗಳಂತಹ ಪ್ರಾರ್ಥನಾ ಸ್ಥಳಗಳು ಕೂಡ ಇಲ್ಲಿ ಸಾಕಷ್ಟಿದ್ದು, ಇದು ಕೂಡ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.
ಸುಗಮ ಸಂಚಾರ
ಇಲ್ಲಿ ಸಾಕಷ್ಟು ಫ್ಲೈಓವರ್ಗಳಿರುವುದರಿಂದ ಟ್ರಾಫಿಕ್ ಸಮಸ್ಯೆಯೂ ಅಷ್ಟೇನೂ ಬಾಧಿಸುವುದಿಲ್ಲ. ಇಲೆಕ್ಟ್ರಾನಿಕ್ ಸಿಟಿ ಮತ್ತು ಐಟಿಪಿಎಲ್ಗೆ ಸಾಕಷ್ಟು ಸಾರ್ವಜನಿಕ ಸಾರಿಗೆ ಬಸ್ ಸೌಲಭ್ಯವೂ ಇದೆ. ಹೀಗಾಗಿ ಅಲ್ಲಿ ಉದ್ಯೋಗ ಮಾಡುವವರು ಇಲ್ಲಿಯೇ ಮನೆ ಮಾಡಲು ಬಯಸುತ್ತಾರೆ. ಇದಲ್ಲದೆ ವೈಟ್ಫೀಲ್ಡ್, ಸಿವಿ ರಾಮನ್ ನಗರಗಳಂತಹ ಐಟಿ ಕೇಂದ್ರಗಳಿಗೆ ಹವಾನಿಯಂತ್ರಿತ ಬಸ್ಗಳ ವ್ಯವಸ್ಥೆಯೂ ಇದ್ದು, ಪ್ರಯಾಣ ಸುಖಕರವಾಗಿ ಸಾಗುವಂತೆ ಮಾಡಿದೆ. ಇಷ್ಟಲ್ಲದೆ ವೀಕೆಂಡ್ ಹಾಟ್ ಸ್ಪಾಟ್ ಆಗಿ ಕೂಡ ಈ ಭಾಗ ಪ್ರವರ್ಧಮಾನಕ್ಕೆ ಬರುತ್ತಿದೆ. ಮುಖ್ಯವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಡೇ ಸಫಾರಿ, ಬೈಕಿಂಗ್ ಸ್ಪೋರ್ಟ್ಸ್ಗೆ ಅವಕಾಶ ಇರುವುದು ಇದಕ್ಕೆ ಮುಖ್ಯ ಕಾರಣ. ಒಟ್ಟಿನಲ್ಲಿ ಬನ್ನೇರುಘಟ್ಟ ರಸ್ತೆ ಭವಿಷ್ಯದಲ್ಲಿ ಇನ್ನಷ್ಟು ಪ್ರಗತಿ ಕಾಣುವುದರಲ್ಲಿ ಅನುಮಾನವಿಲ್ಲ. ಈ ಮೂಲಕ ಈಗ ಮಾಡಿದ ಹೂಡಿಕೆಗೆ ಮುಂದಿನ ದಿನಗಳಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.