ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗೆ ಮತ್ತೆ ಜೀವ ಬಂದಿದೆ. ಕೇಂದ್ರ ಸರಕಾರದ 'ಭಾರತ್ ಮಾಲಾ' ಯೋಜನೆಯಡಿ ಇದಕ್ಕೆ ನೆರವು ಸಿಗುವ ಭರವಸೆ ಸಿಕ್ಕಿದ್ದು, ಈ ಮೂಲಕ ಪಿಆರ್ಆರ್ ಹಾದು ಹೋಗುವ ಪ್ರದೇಶಗಳಲ್ಲಿ ರಿಯಾಲ್ಟಿ ಹೂಡಿಕೆ ಭವಿಷ್ಯದಲ್ಲಿ ಭಾರೀ ಲಾಭ ತಂದುಕೊಡುವ ನಿರೀಕ್ಷೆ ಹುಟ್ಟಿಸಿದೆ.
ರಾಜ್ಯ ಸರಕಾರವು ಸಂಚಾರ ದಟ್ಟಣೆ ನಿವಾರಣೆ ಹಾಗೂ ನಗರ ಪ್ರಗತಿ ವಿಕೇಂದ್ರೀಕರಣದ ಉದ್ದೇಶದಿಂದ ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಹೊಸೂರು ರಸ್ತೆ, ದೊಡ್ಡ ಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ, ಹೇಸರಘಟ್ಟ ರಸ್ತೆ, ಹೊಸಕೋಟೆ-ಆನೇಕಲ್ ರಸ್ತೆ, ವೈಟ್ಫೀಲ್ಡ್ ಮತ್ತು ಸರ್ಜಾಪುರ ರಸ್ತೆಗಳ ನಡುವೆ ಸಂಪರ್ಕ ಕಲ್ಪಿಸುವ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣ ಪ್ರಸ್ತಾಪವನ್ನು ರಾಜ್ಯ ಸರಕಾರ ಮುಂದಿಟ್ಟಿತ್ತು. ಆದರೆ ಭೂ ಸ್ವಾಧೀನ ಮತ್ತು ಬೃಹತ್ ನಿರ್ಮಾಣ ವೆಚ್ಚದ ಹಿನ್ನೆಲೆಯಲ್ಲಿ ಅದು ನೆನೆಗುದಿಗೆ ಬಿದ್ದಿತ್ತು.
ಯೋಜನೆಗೆ ಮರು ಜೀವ
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ 'ಭಾರತ್ ಮಾಲಾ' ಯೋಜನೆಯನ್ನು ಪ್ರಕಟಿಸಿದ್ದಾರೆ. ಇದು ನನೆಗುದಿಗೆ ಬಿದ್ದಿರುವ ನಗರದ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ಅನುಷ್ಠಾನದ ಕುರಿತು ಹೊಸ ಭರವಸೆ ಮೂಡಿಸಿದೆ. ಭಾರತ್ ಮಾಲಾ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ 83,677 ಕಿ.ಮೀ. ಉದ್ದದ ರಸ್ತೆಗಳನ್ನು 6.92 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. ಇದರಲ್ಲಿ ಬೆಂಗಳೂರು, ಬೆಳಗಾವಿ ಮತ್ತು ಚಿತ್ರದುರ್ಗಗಳಲ್ಲಿ ವರ್ತುಲ ರಸ್ತೆ ನಿರ್ಮಾಣ ಕೂಡ ಸೇರಿದೆ ಎಂದವರು ತಿಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಭಾರತ್ ಮಾಲಾ ಯೋಜನೆಯಡಿ ಪಿಆರ್ಆರ್ ಯೋಜನೆ ಕೈಗೆತ್ತಿಕೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. 100 ಮೀಟರ್ ಅಗಲದ ಪಿಆರ್ಆರ್ ನಿರ್ಮಾಣಕ್ಕೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತಾದರೂ, ಭೂ ಸ್ವಾಧೀನ ವಿಚಾರದಲ್ಲಿ ಎದುರಾದ ಸಮಸ್ಯೆಯಿಂದ ಯೋಜನೆ ಇನ್ನೂ ಅನುಷ್ಠಾನದ ಹಂತಕ್ಕೆ ಬಂದೇ ಇಲ್ಲ ಎನ್ನುವುದು ಇಲ್ಲಿ ಸ್ಮರಣಾರ್ಹ.
ಪರಿಹಾರ ನೀಡಿಕೆ ಗೊಂದಲ
ರಸ್ತೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳುವಾಗ ರೈತರಿಗೆ ನೀಡಬೇಕಾದ ನಗದು ಪರಿಹಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಬಹು ದೊಡ್ಡ ತಲೆನೋವಾಗಿ ಕಾಡುತ್ತಿತ್ತು. ಇದನ್ನು ನಿವಾರಿಸುವ ನಿಟ್ಟಿನಲ್ಲಿ 100 ಮೀಟರ್ ಬದಲು 75 ಮೀಟರ್ಗೆ ರಸ್ತೆಯ ಅಗಲವನ್ನು ಇಳಿಯಲು ಬಿಡಿಎ ಯೋಜನೆಯಲ್ಲಿ ಮಾರ್ಪಾಡು ಮಾಡಿತ್ತು. ಈ ಮೂಲಕ ಉಳಿದ 25 ಮೀಟರ್ ಜಾಗವನ್ನು ಅಭಿವೃದ್ಧಿ ಪಡಿಸಿ ಭೂಮಿ ಕಳೆದುಕೊಂಡ ರೈತರಿಗೆ ಮರಳಿಸಲು ಮುಂದಾಗಿತ್ತು. ಈ ಪರಿಷ್ಕೃತ ಯೋಜನೆಗೆ ರಾಜ್ಯ ಸಚಿವ ಸಂಪುಟವು ಈಗಾಗಲೇ ತಾತ್ವಿಕ ಒಪ್ಪಿಗೆಯನ್ನೂ ನೀಡಿದೆ. ಆದರೆ, ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ಯೋಜನೆ ಜಾರಿ ವಿಳಂಬವಾಗಿತ್ತು.
ಹೆಚ್ಚಿನ ನಿರ್ಮಾಣ ವೆಚ್ಚ
ಪಿಆರ್ಆರ್ ಯೋಜನೆಗೆ ಮೊದಲ ಬಾರಿ ಅಧಿಸೂಚನೆ ಹೊರಡಿಸುವಾಗ ಅಂದಾಜು ವೆಚ್ಚ 500 ಕೋಟಿ ಇದ್ದರೆ, 2013ರಲ್ಲಿ ಇದು 5,000 ಕೋಟಿ ರೂ.ಗಳಿಗೆ ಏರಿಕೆ ಆಗಿತ್ತು. ಈಗ ಪರಿಷ್ಕೃತ ಅಂದಾಜಿನ ಪ್ರಕಾರ 11,950 ಕೋಟಿ ರೂ. ಬೇಕಾಗುತ್ತದೆ. ಇದರಲ್ಲಿ ರಸ್ತೆ ನಿರ್ಮಾಣಕ್ಕೆ 3,850 ಕೋಟಿ ರೂ. ಮತ್ತು ಭೂ ಸ್ವಾಧೀನಕ್ಕೆ ನೀಡಬೇಕಾದ ಪರಿಹಾರ ಧನದ ಮೊತ್ತ 8,100 ಕೋಟಿ ರೂ. ಆಗಲಿದೆ. ರಸ್ತೆ ನಿರ್ಮಾಣಕ್ಕೆ ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಈಗಾಗಲೇ 3,850 ಕೋಟಿ ರೂ. ಸಾಲ ನೀಡಲು ಆಸಕ್ತಿ ತೋರಿದೆ. ಆದರೂ ಉಳಿದ ಮೊತ್ತವನ್ನು ಭರಿಸಲು ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲೇ ಇಲ್ಲ.
ಈ ಹಿನ್ನೆಲೆಯಲ್ಲಿ ಭಾರತ್ ಮಾಲಾ ಯೋಜನೆಯಡಿ ಇದಕ್ಕೂ ಅನುದಾನ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ಬಿಡಿಎ ಚಿಂತನೆ ನಡೆಸಿದೆ. ಈ ಬಗ್ಗೆ ಕೇಂದ್ರ ಸರಕಾರದಿಂದ ಔಪಚಾರಿಕ ಪ್ರಸ್ತಾವದ ನಿರೀಕ್ಷೆ ನಮ್ಮದು ಎಂದು ಮಹೇಂದ್ರ ಜೈನ್ ತಿಳಿಸಿದ್ದಾರೆ.
ಹಸ್ತಾಂತರಕ್ಕೆ ರಾಜ್ಯ ಸಿದ್ಧ
ಪಿಆರ್ಆರ್ ಯೋಜನೆಗೆ 100 ಮೀಟರ್ ಅಗಲದ ಜಾಗ ಅಗತ್ಯವಿದೆ. ಇದನ್ನು ಸ್ವಾಧೀನ ಪಡಿಸಿಕೊಂಡು, 25 ಮೀಟರ್ ಜಾಗದಲ್ಲಿ ಆದಾಯ ತರುವ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಯನ್ನು ಸರಕಾರ ಪರಿಶೀಲಿಸುತ್ತಿದೆ. ಈ ಮೂಲಕ ಒಟ್ಟಾರೆ ನಿರ್ಮಾಣ ವೆಚ್ಚದ ಹೊರೆಯನ್ನು ಇಳಿಸಿಕೊಳ್ಳುವುದು ಸರಕಾರದ ಉದ್ದೇಶ. ಇದರ ಜೊತೆಗೆ ಯೋಜನೆಗೆ ಎಷ್ಟು ಪ್ರಮಾಣದಲ್ಲಿ ಸಹಾಯಧನ ನೀಡಿದರೂ ಸ್ವಾಗತಾರ್ಹ ಎಂದು ಸರಕಾರದ ಉನ್ನತ ಮೂಲಗಳು ಸ್ವಷ್ಟಪಡಿಸಿವೆ. ಒಂದು ವೇಳೆ ಕೇಂದ್ರ ಸರಕಾರವೇನಾದರೂ ಶೇ. 100ರಷ್ಟು ಅನುದಾನ ಒದಗಿಸಿದರೆ ಆಗ ಇಡೀ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಥವಾ ಕೇಂದ್ರ ಸೂಚಿಸಿದ ನಿರ್ದಿಷ್ಟ ಸಂಸ್ಥೆಗೆ ಹಸ್ತಾಂತರಿಸಲು ರಾಜ್ಯ ಸರಕಾರದ ಅಭ್ಯಂತರವಿಲ್ಲ ಎಂದು ಮೂಲಗಳು ಹೇಳಿವೆ.