ಆ್ಯಪ್ನಗರ

ವಾರಾಂತ್ಯ ಎಂಜಾಯ್ ಮಾಡಲು ಭೇಟಿ ಕೊಡಿ ಜಯಮಂಗಲಿ ವನ್ಯಧಾಮ

ವಾರಾಂತ್ಯವನ್ನು ಎಂಜಾಯ್ ಮಾಡಲು ಕೃಷ್ಣಮೃಗ ವನ್ಯಧಾಮಕ್ಕೆ ಭೇಟಿ ನೀಡಿ ಇದು ಪ್ರವಾಸ ಪ್ರಿಯರ ಆಕರ್ಷಣೀಯ ತಾಣವೆಂದೆನಿಸಿದೆ. ನೂರಾರು ಕೃಷ್ಣಮೃಗಗಳು , ನವಿಲು, ಮೊಲಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.

Vijaya Karnataka 28 May 2019, 8:52 am
ಸಿರಾಜ್ ಅಹಮದ್ ಕೆ. ಎ ಕೊಡಿಗೇನಹಳ್ಳಿ
Vijaya Karnataka Web Black deer


ಕಣ್ಣು ಹಾಯಿಸಿದಷ್ಟು ವಿಸ್ತಾರ, ಸುತ್ತಲೂ ಹರಡಿದ ಬೆಟ್ಟದ ಸಾಲುಗಳ ನಡುವೆ ಸುಳಿದು ಬಂದು ಮೈ ಸೋಂಕುವ ತಂಗಾಳಿ, ಆಳೆತ್ತರ ಸೀಮೆ ಜಾಲಿ ಮರಗಳ ನಡುವೆ ಸಮಯ ಕಳೆದಿದ್ದೇ ಗೊತ್ತಾಗುವುದಿಲ್ಲ. ತುಮಕೂರು ಜಿಲ್ಲೆಯ ಗಡಿಭಾಗದ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಕೇಂದ್ರದಿಂದ ಸುಮಾರು ಏಳು ಕಿಮೀ ದೂರದ ಬಯಲು ಸೀಮೆ ಪ್ರದೇಶದಲ್ಲಿ ಈ ಅಪರೂಪವೆನಿಸುವ ಸುಂದರ ತಾಣವಿದೆ. ಅದುವೇ ಜಯಮಂಗಲಿ ಕೃಷ್ಣಮೃಗ ವನ್ಯಧಾಮ. ಇಲ್ಲಿಗೆ ಬರುವ ಪ್ರವಾಸಿಗರು ದೇವರತೋಪಿನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ರೆಡ್ಡಿಹಳ್ಳಿ ಮಾರ್ಗವಾಗಿ ಜಯಮಂಗಲಿ ಕೃಷ್ಣಮೃಗ ವನ್ಯಧಾಮ ತಲುಪಬಹುದು.

ವೀಕೆಂಡ್ ಬಂತೆಂದರೆ ಸಾಕು. ಬೆಂಗಳೂರಿನ ಬಹುಪಾಲು ಪರಿಸರ ಪ್ರೇಮಿಗಳು ರಾಜಧಾನಿಯನ್ನು ಬಿಟ್ಟು ರಜೆಯನ್ನು ಎಂಜಾಯ್ ಮಾಡಲು ಇಲ್ಲಿಗೆ ಬರುವುದು ಸಹಜ. ಜಯಮಂಗಲಿ ನದಿ ಕಣ್ಣಂಚಿನಲ್ಲಿರುವ ಪ್ರಕೃತಿ ಸೊಬಗಿನ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮವು ಪ್ರವಾಸಿ ಪ್ರಿಯರ ಆಕರ್ಷಣೀಯ ತಾಣ, ನೂರಾರು ಕೃಷ್ಣಮೃಗಗಳು, ನವಿಲು, ಮೊಲಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.

ವನ್ಯಧಾಮವು ಸರಿ ಸುಮಾರು 900 ಎಕರೆ ಇದ್ದು, ವನ್ಯಮೃಗ ಸರ್ವೆ 2014ರ ಅನ್ವಯ 750ಕ್ಕೂ ಹೆಚ್ಚು ಜಿಂಕೆಗಳು ಇಲ್ಲಿವೆ. ಕೃಷ್ಣಮೃಗ, ನವಿಲು, ಕಾಡುಹಂದಿ, ತೋಳ, ಮುಂಗುಸಿ, ಅಳಿಲು, ಕಾಡುಬೆಕ್ಕು, ಕಡವೆ, ಮೊಲ, ಗಿಳಿ, ಬಾವಲಿ, ಕಂದು, ಹಾಗೂ ಬಿಳಿ ಬೆಳವ, ಮಿಂಚುಳ್ಳಿ, ಬುಲ್‌ಬುಲ್, ಮುನಿಯ, ಚಂದ್ರಮುಕುಟ, ಕಲ್ಲು ಗುಬ್ಬಚ್ಚಿ, ಗಿಡುಗ ಹಾಗೂ ಅಪರೂಪದ ಚಿಟ್ಟೆಗಳ ಕಲರವ ಕಾಣಸಿಗುತ್ತದೆ.


ವನ್ಯಧಾಮದಲ್ಲಿ ವಸಂತ ಮಾಸ ಬಂದಿತೆಂದರೆ ಇಲ್ಲಿನ ಸುತ್ತಲಿನ ಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ಈ ವೇಳೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಸೂಕ್ತ ಕೊಠಡಿ ವ್ಯವಸ್ಥೆ ಹಾಗೂ ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದು ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಬೆಳಗ್ಗೆ 8 ರಿಂದ 9 ಗಂಟೆಯ ಸಮಯದಲ್ಲಿ ಹಾಗೂ ಸಂಜೆರ ನಂತರ ಕೃಷ್ಣಮೃಗಗಳು ನೋಡಲು ಹಿಂಡು ಹಿಂಡಾಗಿ ಸಿಗುತ್ತವೆ.

ಏನೆಲ್ಲ ನೋಡಬಹುದು?

ಬೆಂಗಳೂರಿನಿಂದ ಬರುವಾಗ ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೀರಯೋಧರ ಕರ್ನಾಟಕ ಜಲಿಯನ್ ವಾಲಾಬಾಗ್ ನೋಡಬಹುದು. ಅಲ್ಲಿಂದ 22 ಕಿಮೀ ಕೊಡಿಗೇನಹಳ್ಳಿಗೆ ಬಂದರೆ ಚಿಕ್ಕವಿಧುರಾಶ್ವತ್ಥದಲ್ಲಿ 101 ದೇವತೆಗಳ ವಿಶೇಷ ದೇವಸ್ಥಾನ ಕಾಣಿಸುತ್ತದೆ. ನಂತರ ಇಲ್ಲಿಂದ 2 ಕಿಮೀ ಜಯಮಂಗಲಿ ಸೇತುವೆ ಮೂಲಕ ನೇರವಾಗಿ ತೆರಳಿದರೆ ಐತಿಹಾಸಿಕ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮೂಲಕ ವನ್ಯಧಾಮ ತಲುಪಬಹುದು.

ಶೀಘ್ರದಲ್ಲೇ ನೀಲಗಿರಿ ಮುಕ್ತ

ಈ ಭಾಗದಲ್ಲಿ ಸುಮಾರು 1300 ಅಡಿ ಬೋರ್ ಕೊರೆಸಿದರೂ ನೀರು ಸಿಗುವುದು ಹಗಲು ಕನಸು. ವನ್ಯಧಾಮದ ಫಲವತ್ತತೆ ಕಾಪಾಡಲು ಹಾಗೂ ಪರಿಸರಕ್ಕೆ ಹಾನಿಯಾಗಿರುವ ನೀಲಗಿರಿ ಮರಗಳನ್ನು ಹಂತ ಹಂತವಾಗಿ ತೆರವು ಮಾಡಲಾಗುತ್ತಿದೆ. ನೀಲಗಿರಿಗೆ ಬದಲಾಗಿ ವನ್ಯಜೀವಿಗಳಿಗೆ ಆಹಾರವಾಗುವಂತಹ ಪರ್ಯಾಯ ಗಿಡ, ಮರ ಬೆಳೆಯಲು ಆಲ, ಬಸರಿ, ಬೇವು, ಹತ್ತಿ ಸೇರಿದಂತೆ ಒಟ್ಟು 1000 ಗಿಡಗಳನ್ನು ಬೆಳೆಸಲು ಇಲಾಖೆ ನಿಶ್ಚಯಿಸಿದೆ.

ಹಂತ ಹಂತವಾಗಿ ವನ್ಯಧಾಮವನ್ನು ಅಭಿವೃದ್ಧಿಗೊಳಿಸುತ್ತಿದ್ದೇವೆ. ಮುಂದೆ ಹುಲ್ಲು ಬೆಳೆಯಲು ಸ್ಟ್ರಿಂಕ್ಲರ್ ವ್ಯವಸ್ಥೆ ಮಾಡಲಾಗುವುದು. ವನ್ಯಜೀವಿಗಳಿಗೆ ತೊಂದರೆಯಾಗದಂತೆ ಪ್ರವಾಸಿಗರಿಗೂ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದೇವೆ. ಪ್ರವಾಸಿ ಕೇಂದ್ರವನ್ನಾಗಿಸಲು ಅನುದಾನದ ಪ್ರಸ್ತಾವನೆ ಇಲಾಖೆ ಮುಂದಿಟ್ಟಿದ್ದೇವೆ
- ಮಧುಗಿರಿ ಆರ್‌ಎಫ್ಒ ಚಿನ್ನಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ