'ಬಾಗಿಲು ಏಕೆ ತಟ್ಟಬೇಕು/ ವಿನ್ಸೆಂಟ್?'/ ಕಾಫಿ ತಂದವನನ್ನು ಕೇಳಿದೆ/ 'ಒಳಗಿರುವವರ ಗೌರವ,/ ಹೊರಗೆ ನಿಂತವರ ಮರ್ಯಾದೆ/ ಅಲ್ಲವೇ ಸಾರ್' ಎಂದವನನ್ನು/ ಪಿಳಪಿಳ ನೋಡುತ್ತಾ ಕುಳಿತೆ - ಇದು ಕೆ.ನಲ್ಲತಂಬಿ ಅವರ ಕೋಶಿ'ಸ್ ಕವಿತೆಗಳ ಗುಚ್ಛದ ಒಂದು ಸಿಪ್. ಇಲ್ಲಿನ ವಿನ್ಸೆಂಟ್ ಹೊಸಬನಲ್ಲ. ವಿವೇಕ ಶಾನಭಾಗ್ ಕಥಾಸಂಕಲನ 'ಘಾಚರ್ ಗೋಚರ್'ನ ವಿನ್ಸೆಂಟ್, ನಲ್ಲತಂಬಿ ಸಂಕಲನದ ತುಂಬೆಲ್ಲ ತುಂಬಿಕೊಂಡಿದ್ದಾನೆ. ಕಾಫಿ ಕಷಾಯಕ್ಕೆ ಬದುಕಿನ ಸತ್ಯಗಳನ್ನು ಬೆರೆಸಿದ್ದಾನೆ. ಕೋಶಿ'ಸ್ ಅನ್ನೋ ಕಾಫಿಹೌಸ್ನಲ್ಲಿ ಕಾಫಿ ಟೇಬಲ್ ಮುಂದೆ ಕೂತು, ಕಾಫಿ ಘಮಲಿಗೆ ಮೂಗಿನೊಂದಿಗೆ ಮೈಮನ ಅರಳಿಸಿ ಜಗದ ಬೀಜಗಣಿತದಿಂದ ಕಳಚಿಕೊಳ್ಳುವ ಅವಕಾಶ ಇಲ್ಲುಂಟು. ಶಾನಭಾಗ್ರ ವಿನ್ಸೆಂಟ್ ಅಷ್ಟು ಮಾತನಾಡುವುದಿಲ್ಲ. ಅವನ ಮೌನವೇ ನೂರು ಮಾತು, ಸಾವಿರ ಉತ್ತರ. ಆದರೆ, ನಲ್ಲತಂಬಿ ಕವಿತೆಗಳಲ್ಲಿ ಬರುವ ವಿನ್ಸೆಂಟ್ ತುಸು ಭಿನ್ನ. ಆದರೂ, ವಾಚಾಳಿಯಲ್ಲ. ಝೆನ್ ಗುರುವಿನಂತೆ ಬೆಳಕಿನ ಬೀಜಗಳನ್ನು ಬಿತ್ತುತ್ತಾನೆ. ಹೀಗಾಗಿಯೇ ಕಾಫಿ ಟೇಬಲ್ನಲ್ಲಿ ದಕ್ಕಿದ ಸತ್ಯಗಳೆಂದು ತಮ್ಮ ಕವಿತೆಗಳನ್ನು ನಲ್ಲತಂಬಿ ಕರೆದುಕೊಂಡಿದ್ದಾರೆ. ಇದೊಂದು ಕಾಫಿ ಅಧ್ಯಾತ್ಮ.
ಶಾನಭಾಗ್ರ ವಿನ್ಸೆಂಟ್, ನಲ್ಲತಂಬಿ ದೆಸೆಯಿಂದಾಗಿ ನಿಮ್ಮವನೇ ಆಗಿ ಬಿಡುತ್ತಾನೆ. ಕಾಫಿಹೌಸ್ಗೆ ಹೋದಾಗ ವಿನ್ಸೆಂಟ್ಗೆ ತಡಕಾಡುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಕಾಫಿ ಕುಡಿಯುತ್ತಾ ಕುಳಿತಿದ್ದೆ/ ವಿನ್ಸೆಂಟ್ ಬಂದು ಚಿಂತೆ ಬಿಡಿ ಸಾರ್/ ಪವಾಡವಾಗುತ್ತೆ/ ಹಾರೆಯ ಪೆಟ್ಟಿಗೆ/ ಸೀಳದ ಬಂಡೆ/ ಬೀಜದ ಮೊಳಕೆಗೆ/ ಬಿರಿಯುತ್ತೆ/ ಎಂದ... ಇನ್ನೊಂದು ದಿನ 'ಕಾಫಿ ಇಡುತ್ತಾ/ ವಿನ್ಸೆಂಟ್ ಹೇಳಿದ/ 'ಪ್ರಮಾಣ, ಭರವಸೆ, ನಿರೀಕ್ಷೆ/ ಇಲ್ಲದಿದ್ದರೂ ಕಾಯಬೇಕು ಸಾರ್...' ಅಲ್ಲಿಗೆ ಸಮಾಧಾನವಾಗಲಿಲ್ಲವೇನೋ, 'ಬೇಲಿ ದಾಟಿದರಲ್ಲವೇ/ ಸಾರ್, ಬಯಲು -ಬದುಕು'/ ವಿನ್ಸೆಂಟ್ ಬಿಸಿ ಕಾಫಿ ಕೊಡುತ್ತಾ ಹೇಳಿದ. ಇನ್ನೂ ತಿಳಿಗೊಳಿಸುವಂತೆ 'ಕನ್ನಡಿಯಲ್ಲೂ ಪ್ರತಿಬಿಂಬದ/ ನಿರೀಕ್ಷೆ ಇರಬಾರದು ಸಾರ್' ಎನ್ನುತ್ತಾ ಹಬೆಯಾಡುವ ಕಾಫಿ ಇಟ್ಟು ಹೋದ ವಿನ್ಸೆಂಟ್. ತಡಮಾಡಬೇಡಿ ಎಂದು ಅವಸರಿಸುತ್ತಾ, 'ಬೇಕು ಬೇಡಗಳ ತೊಳಲಾಟದಲ್ಲಿ/ ಸುಂದರ ಗಳಿಗೆಗಳು ಕೈಜಾರುತ್ತವೆ ಸಾರ್'/ ವಿನ್ಸೆಂಟ್ ಕೊಟ್ಟ ಕಾಫಿ ಬಹಳ ಸ್ಟ್ರಾಂಗ್. ಒಮ್ಮೆ ಪ್ರೀತಿಯ ಪರಿಯನ್ನು ರೂಪಕವಾಗಿ ಬಿಡಿಸುತ್ತಾ 'ಮುಷ್ಟಿ ತೆರೆದಾಗಲೂ/ ಚಿಟ್ಟೆ ಜೀವಂತ ಕುಳಿತಿರಬೇಕು/ ಅದು ಪ್ರೀತಿ ಸಾರ್' ಎಂದಿದ್ದ.
ಪುಸ್ತಕದ ಗಾತ್ರ, ಕಾಡುವ ಮುಖಪುಟ, ಸತೀಶ್ ಆಚಾರ್ಯರ ಚಿತ್ರಗಳು, ಎಂ.ಆರ್.ಗುರುಪ್ರಸಾದ್ರ ವಿನ್ಯಾಸವು ಈ ಸಂಕಲನದ ಸಾಧ್ಯತೆಗಳನ್ನು ವಿಸ್ತರಿಸಿದೆ. ಉತ್ತಮ ಅನುವಾದಗಳ ಮೂಲಕ ತಮಿಳು-ಕನ್ನಡದ ಸೇತುವಂತಿರುವ ಕೆ.ನಲ್ಲತಂಬಿ ಅವರ ಕೋಶಿ'ಸ್ ಕವಿತೆಗಳನ್ನು ಒಂದೇ ಗುಕ್ಕಿಗೆ ಓದಬಹುದು. ಆದರೆ, ಜೀರ್ಣಿಸಿಕೊಳ್ಳಲು ಸಮಯ ಬೇಕು. 'ಕಾಫಿ ಜತೆಯಲ್ಲಿ ಗುಟುಕು ಗುಟುಕಾಗಿ ಇಳಿಯುವ ಈ ಕವಿತೆಗಳು ನಿಮ್ಮ ನಿದ್ದೆಯನ್ನು ಕದಿಯಲಿ' ಎನ್ನುವುದು ಸಂಧ್ಯಾರಾಣಿ ಅವರ ಹಾರೈಕೆ.
ಕೋಶಿ'ಸ್ ಕವಿತೆಗಳು(ಕಾಫಿ ಟೇಬಲ್ನಲ್ಲಿ ದಕ್ಕಿದ ಸತ್ಯಗಳು): ಕೆ.ನಲ್ಲತಂಬಿ, ಪುಟ: 40, ಬೆಲೆ: ರೂ.40, ಪ್ರಕಟಣೆ: ಬಹುರೂಪಿ, ಆರ್ಎಂವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು
ಹ ಚ ನಟೇಶ್ ಬಾಬು