ಆ್ಯಪ್ನಗರ

ತಿಳಿಗನ್ನಡದಲ್ಲಿ ಯಶೋಧರ ಚರಿತೆ

ತಿಳಿಗನ್ನಡದಲ್ಲಿ ಯಶೋಧರ ಚರಿತೆ ಹಳಗನ್ನಡವಿರಲಿ ಹೊಸಗನ್ನಡವೇ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆಯ ಸೊಗಸು, ಸೊಗಡು ಮತ್ತು ಬಿನ್ನಾಣಗಳನ್ನು ಅರಿಯುವ ಬಗೆ ಹೇಗೆ? ಹೊಸ ...

Vijaya Karnataka 14 Jul 2019, 5:00 am
ತಿಳಿಗನ್ನಡದಲ್ಲಿ ಯಶೋಧರ ಚರಿತೆ
Vijaya Karnataka Web yashodhara charite


ಹಳಗನ್ನಡವಿರಲಿ ಹೊಸಗನ್ನಡವೇ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆಯ ಸೊಗಸು, ಸೊಗಡು ಮತ್ತು ಬಿನ್ನಾಣಗಳನ್ನು ಅರಿಯುವ ಬಗೆ ಹೇಗೆ? ಹೊಸ ತಲೆಮಾರಿನವರು ಹಳಗನ್ನಡವೆಂದಾಕ್ಷ ಣ ಹಾವು ಕಂಡಂತೆ ಬೆಚ್ಚಿ ಬೀಳುತ್ತಾರೆ. ಹಳಗನ್ನಡದಲ್ಲಿ ಪದಗಳನ್ನು ಬಿಡಿಸಿ ಓದುವುದೊಂದು ಕಲೆ. ಕಾವ್ಯದ ಸಾರ ಗ್ರಹಿಸುವ ಶಕ್ತಿ ಒಂದು ಸಲ ಮನಸ್ಸಿಗೆ ಒಲಿದರೆ, ಓದಿನ ಪ್ರೀತಿ ಸಹಜವಾಗಿಯೇ ಚಿಗುರುತ್ತದೆ. ಹಳಗನ್ನಡ ಕಾವ್ಯಗಳತ್ತ ಹೊಸ ಪೀಳಿಗೆಯ ತರುಣ ತರುಣಿಯರನ್ನು ಸೆಳೆಯುವ ಕೆಲಸವನ್ನು ಹಿರಿಯ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಮುಂದುವರಿಸಿದ್ದಾರೆ. ಮಕ್ಕಳಿಗಾಗಿ ಪಂಪ, ಪಂಪನ ವಿಕ್ರಮಾರ್ಜುನವಿಜಯ -ಸಂಗ್ರಹ, ಪಂಪನ ಆದಿಪುರಾಣ-ಸಂಗ್ರಹ, ಶ್ರೀರಾಮಚಾರಣ(ವಾಲ್ಮೀಕಿ ರಾಮಾಯಣದ ಸಂಗ್ರಹ), ಋುಗ್ವೇದ ಸ್ಫುರಣ, ಆಪ್ತಗೀತೆ(ಭಗವದ್ಗೀತೆ) ಬಳಿಕ, ಈಗ 'ಯಶೋಧರ ಚರಿತೆ' ತಿಳಿಗನ್ನಡ ಅವತರಣವನ್ನು ರಚಿಸಿದ್ದಾರೆ. ಈ ಕೃತಿಯ ಮೂಲಕ ಕವಿ ಜನ್ನನ ಕಾವ್ಯವನ್ನು ಹೊಸ ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ. ಎಚ್ಚೆಸ್ವಿಯಿಂದ ಪಾಠ ಕೇಳಲಾಗಲಿಲ್ಲವಲ್ಲ ಎಂದು ಕೊರಗುವ ಮಂದಿಗೆ, ಈ ಪುಸ್ತಕದ ಮೂಲಕ ಪರೋಕ್ಷ ಗುರುವಾಗಿದ್ದಾರೆ. 'ಕಾರಿರುಳೊಳಮೆಳವಿಸಿಲಂ/ ಪೂರಂಬರಿಯಿಪುವು ಬೀದಿಯೊಳ್‌ ನಿಜರುಚಿಯಿಂ/ ಹೀರೆಯ ಪೂವಿನ ಬಣ್ಣದ/ ನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್‌' ಎನ್ನುವ ಹಳಗನ್ನಡದ ಸಾಲುಗಳು, 'ಕಾರಿರುಳಲ್ಲೂ ಎಳೆ ಬಿಸಿಲ/ಪೂರವ ಹರಿಸುತ್ತಿದೆ ಬೀದಿಗೆ ತಮ್ಮ ಹೊಳಪಿಂದ/ ಹೀರೆ ಹೂ ಬಣ್ಣದ ಹೊನ್ನಿನ ಕು/ ಸುರಿಗೆಲಸದೆತ್ತರೆತ್ತರದ ಉಪ್ಪರಿಗೆಗಳು' ಎನ್ನುವ ತಿಳಿಗನ್ನಡ ರೂಪವನ್ನು ಪಡೆದಿವೆ. ಹಳಗನ್ನಡ ಕಾವ್ಯದ ಸೊಬಗನ್ನು ತಿಳಿಗನ್ನಡದಲ್ಲೂ ಉಳಿಸಿಕೊಂಡು ಓದುಗರಿಗೆ ಹಿತವಾಗುವಂತೆ ಎಚ್ಚೆಸ್ವಿ ಮಾಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಜನ್ನನ ಕಾವ್ಯದ ಚೆಲುವು ತಾಜಾತನದ ಗ್ರಹಿಕೆಗಾಗಿ ಕೆಲವು ಸೂಕ್ತಿಗಳನ್ನು ಪಟ್ಟಿ ಮಾಡಿ, ಅವುಗಳನ್ನು ವಿವರಿಸಲಾಗಿದೆ. 'ಯಶೋಧರ ಚರಿತೆಯ ಮಹತ್ವ ಅದರ ಕಸಬುಗಾರಿಕೆಯಲ್ಲಿದೆ. ಜನ್ನನ ರೂಪಕ, ಉಪಮಾನಗಳು ಹೊಸಬಗೆಯವಾಗಿವೆ. ಆಡುಮಾತಿನ ಒಗರು ಕಾವ್ಯದ ಉದ್ದಕ್ಕೂ ಕಂಡುಬರುತ್ತದೆ' ಎನ್ನುವ ಎಚ್ಚೆಸ್ವಿ, ಕಾವ್ಯಾಭ್ಯಾಸಿಗಳಿಗೆ ಮತ್ತು ಕಾವ್ಯ ಕುತೂಹಲಿಗಳಿಗೆ ಉಪಯುಕ್ತವಾದ ಕೊಡುಗೆ ನೀಡಿದ್ದಾರೆ.

ಯಶೋಧರ ಚರಿತೆ(ತಿಳಿಗನ್ನಡ ಅವತರಣ): ಎಚ್‌.ಎಸ್‌.ವೆಂಕಟೇಶಮೂರ್ತಿ, ಪುಟ:136, ಬೆಲೆ:ರೂ.150, ಪ್ರಕಟಣೆ: ಅಭಿನವ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು.


ಹ.ಚ.ನಟೇಶ ಬಾಬು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ