ಆ್ಯಪ್ನಗರ

ಶಾಯರಿಯ ಒಲವಿನ ಲೋಕ

ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಶಾಯರಿಗಳಲ್ಲಿ ವ್ಯಕ್ತವಾಗುವ ಒಲವಿನ ಬಗೆಯಂತೂ ಅನುಪಮ. ಇದನ್ನು ಓದಿಯೇ ಸವಿಯಬೇಕು.

Vijaya Karnataka 10 Feb 2019, 5:00 am
ಶಾಯರಿಯ ಒಲವಿನ ಲೋಕ
Vijaya Karnataka Web literary
ಶಾಯರಿಯ ಒಲವಿನ ಲೋಕ


ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಶಾಯರಿಗಳಲ್ಲಿ ವ್ಯಕ್ತವಾಗುವ ಒಲವಿನ ಬಗೆಯಂತೂ ಅನುಪಮ. ಇದನ್ನು ಓದಿಯೇ ಸವಿಯಬೇಕು.


ಹೇಮಂತಕುಮಾರ ದೇಸಾಯಿ


ಶಾಯರಿ ಸಾಹಿತ್ಯದ ವಿಷಯ ವೈವಿಧ್ಯತೆ, ವೈಶ್ಯಾಲ್ಯಕ್ಕೆ ಎಲ್ಲೆ ಎಂಬುದಿಲ್ಲ ಜೀವನದ ಬಹುತೇಕ ಎಲ್ಲ ಮುಖಗಳು, ಆಗು ಹೋಗುಗಳನ್ನು ಕಾವ್ಯರೂಪದಲ್ಲಿ ಉಲಿದಿವೆ ಈ ಶಾಯರಿಗಳು. ಒಲವಿನ ಬಗೆಯನ್ನಂತೂ ಶಾಯರಿಗಳು ಇನ್ನಿಲ್ಲದ ವೈವಿಧ್ಯತೆಯಲ್ಲಿ ತೆರೆದಿಟ್ಟಿವೆ.

ಪ್ರೀತಿಯನ್ನು ಕುರಿತು ಮಿರ್ಜಾ ಗಾಲಿಬ್‌ ಹೇಳುತ್ತಾನೆ:

ಮೂಲ : ಇಷ್ಕ್‌ ಪರ್‌ ಝೋರ್‌ ನಹೀ ಹೈ ಓ ಆತಿಷ್‌ ಘಾಲಿಬ್‌,

ಕೆ ಲಗಾ ಎ ನ ಲಗೇ ಔರ್‌ ಬುಝಾ ಏ ನ ಬನೇ.

ಅನು : ಪ್ರೀತಿ ಮಾಡುವುದಲ್ಲ ತಂತಾನೇ ಆಗುವುದು,

ಹೊತ್ತಿಸ ಬೇಕೆನೆ ಹೊತ್ತಿಸಲಾಗದು, ಹೊತ್ತಿತೋ ಆರಿಸಲಾಗದು -

ಪ್ರೇಮಾಂಕುರದ ಪರಿ ಮತ್ತು ಪ್ರೀತಿಯಲ್ಲಿರುವ ಶಕ್ತಿ,ಆ ಶಕ್ತಿಯ ಮುಂದೆ ಪ್ರೇಮಿಗಳು ಅದೆಷ್ಟು ಅಸಹಾಯಕರು ಎಂಬುದನ್ನು ಮಿರ್ಜಾ ಘಾಲಿಬ್‌ ಎರಡೇ ಸಾಲುಗಳಲ್ಲಿ ಇಷ್ಟೊಂದು ಸುಂದರವಾಗಿ ವರ್ಣಿಸಿದ್ದಾನೆ .

ಮನುಷ್ಯರ ಪ್ರೀತಿ, ವಾತ್ಸಲ್ಯಗಳ ಮುಂದೆ ದೇವರೂ ಸಹ ಒಮ್ಮೊಮ್ಮೆ ಸಂದಿಗ್ಧಕ್ಕೊಳಗಾಗಿ ಬಿಡುತ್ತಾನೆ ಎಂಬುದನ್ನು ಮತ್ತೊಬ್ಬ ಶಾಯರ್‌ ಹೀಗೆ ಹೇಳಿದ್ದಾನೆ.

ಮೂಲ : ಮೈನೆ ಖುದಾ ಸೆ ಏಕ್‌ ದುವಾ ಮಾಂಗಿ,

ದುವಾ ಮೇ ಅಪನಿ ಮೌತ್‌ ಮಾಂಗಿ,

ಖುದಾ ನೇ ಕಹಾ ಮೌತ್‌ ತೊ ತುಝೆ ದೇ ದೂ,

ಪರ್‌ ಉಸ್ಕಾ ಕ್ಯಾ ಜಿಸ್ನೆ ಹರ್‌ ದುವಾ ಮೆ ತೇರಿ ಜಿಂದಗಿ ಮಾಂಗಿ.

ಅನು : ನಾನು ದೇವರಲ್ಲಿ ಬೇಡಿಕೆಯೊಂದನಿಟ್ಟೆ,

ಆ ಬೇಡಿಕೆಯಲಿ ಮರಣವನು ಕೊಡು ಎಂದೆ,

ಕೊಟ್ಟೇನು ನಿನಗೆ ಮರಣವನು,ದೇವರು ಅಂದ

ಆದರೆ,

ಅನುದಿನವೂ ನಿನ್ನಜೀವನವ ಕೇಳುವ ಅವಳಿಗೆ ಏನು ಹೇಳಲಿ ಎಂದ.

ಬದುಕುವ ಛಲ ಬಿಡದಿರು ಎಂಬ ನುಡಿಮುತ್ತನ್ನು ಶಾಯರ್‌ ಒಬ್ಬ ಹೀಗೆ ಹೇಳಿದ್ದಾನೆ.

ಮೂಲ : ಹಾಥೋಂಕೆ ಲಕೀರೊಂಪೆ ಮತ್‌ ಜಾ ಘಾಲಿಬ್‌,

ಕಿಸ್ಮತ್‌ ಉನ್‌ ಕಿ ಭೀ ಹೋತೀ ಹೈ ಜಿನ್‌ ಕೆ ಹಾತ್‌ ನಹೀ ಹೋತೇ.

ಅನು : ಹಸ್ತದಲಿ ಇರುವ ಗೆರೆಗಳ ನಂಬಿ ನೀನು ಬದುಕಬೇಡ,

ಹಸ್ತವೇ ಇಲ್ಲದವರಿಗೂ ಬದುಕು ಇದೆ ಎಂಬುದನ್ನು ಮರೆಯಬೇಡ.

ಜಗದ ಜನರ ಮನಸ್ಸಿನಲ್ಲಿ ತುಂಬಿದ ವಿಷವನ್ನು ಕಂಡು ಮರುಗಿ, ಕೊರಗಿ ಸಂಪೂರಣ್‌ ಸಿಂಘ್‌ ಕಾಲ್ರಾ 'ಗುಲ್ಜಾರ್‌' ಹೇಳುತ್ತಾರೆ, 'ಗಜಬ್‌ ಕಿ ಏಕ್ತಾ ದೇಖೀ ಲೋಗೋಂಕಿ ಜಮಾನೇ ಮೆ,

ಜಿಂದೊಂಕೋ ಗಿರಾನೇ ಮೆ ,ಔರ್‌ ಮುರ್ದೋಂಕೊ ಉಠಾನೆ ಮೆ.

(ಅದ್ಭುತವಾದ ಒಗ್ಗಟ್ಟನು ಕಂಡಿಹೆನು ನಾನು ಈ ಜಗದ ಜನರೊಳು, / ಆವುದೋ ಒಳಿತಿಗಾಗಿ ಅಲ್ಲ, ಮೇಲೇರುವವರ ಕಾಲೆಳೆಯಲು ಸತ್ತವರನು ಮೇಲೆತ್ತಲು.)

ಇನ್ನು ಪ್ರಣಯ , ವೈಯಾರ/ಉನ್ಮಾದ ,ಮಿಲನ/ಅಗಲಿಕೆ ಯಂಥ ಹದಿಹರೆಯದವರ ಆಸಕ್ತಿಗಳಿಗೆ ರೆಕ್ಕೆ ಪುಕ್ಕ ಮೂಡಿಸುತ್ತವೆ, ಬಣ್ಣ ಬಳಿಯುತ್ತವೆ ಈ ಶಾಯರಿಗಳು.

ಸುಂದರ ಯುವತಿಯ ವೈಯಾರವನ್ನು ತುಂಟನೊಬ್ಬ ಹೀಗೆ ವರ್ಣಿಸುತ್ತಾನೆ -

ಮೂಲ : ಖುದಾ ಜಬ್‌ ಹುಸ್ನ್‌ ದೇತಾ ಹೈ ನಜಾಕತ್‌ ಆಹೀ ಜಾತಿ ಹೈ,

ಕದಂ ಚುನ್‌ ಚುನ್‌ ಕರ್‌ ರಖ್ತೀ ಹೊ, ಫಿರ್‌ ಭೀ ಕಮರ್‌ ಬಲಖಾ ಹೀ ಜಾತಿ ಹೈ

ಅನು : ದೇವರು ಸೌಂದರ್ಯವನ್ನು ಕೊಟ್ಟರೆ ಅದರೊಟ್ಟಿಗೆ ಕೋಮಲತೆಯನ್ನೂ ಕೊಟ್ಟೇ ಕೊಡುತ್ತಾನೆ,

ಪ್ರತಿ ಹೆಜ್ಜೆಯನ್ನೂ ನೋಡಿ ನೋಡಿ ನೀನು ಇಡುತ್ತೀಯೇನೋ ಸರಿ,

ಆದರೂ ನಿನ್ನ ಸೊಂಟ ಬಳುಕಿಯೇ ಬಿಡುತ್ತದೆ.

ಹಾಗೆಯೇ ಶಾಯರಿಯ ಹರಹು ಕೂಡ ಪ್ರೀತಿಯಷ್ಟೇ ವಿಶಾಲ. ಅದರ ಸೊಬಗನ್ನು ಸವಿಯಲು ಸಾಕಾಗವು ಹತ್ತಾರು ಪಂಕ್ತಿಗಳು. ಅಗೆದಷ್ಟೂ ಆಳ ಬಗೆದಷ್ಟೂ ಸಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ