ಆ್ಯಪ್ನಗರ

ಇಂದೇಕೆ ಅವಳ ನೆನಪು- ಭಾಗ 26: ಸುಮಾಳನ್ನು ಭೇಟಿಯಾದಾಕೆ ಹೇಳಿದ್ದೇನು?; ಮಗುವಿನ ತಂದೆ ಇನ್ನೂ ನಿಗೂಢ!

​​"ಈಗ ನಾನು ಇಲ್ಲಿ ಬಂದಿರುವುದು ಯಾರಿಗಾದರೂ ಗೊತ್ತಾದರೆ ಪರಿಣಾಮ ಏನಾಗಬಹುದು ಎಂದು ಊಹಿಸಿಯೂ ನಾನಿಲ್ಲಿ ಬಂದಿರುವೆ. ಯಾಕೆ ಗೊತ್ತಾ, ಶೇಖರನಿಗಾಗಿ. ಹಾ, ಅವನ ನಡುವೆ ಮತ್ತೆ ಸಂಬಂಧ ಕಲ್ಪಿಸಬೇಡ. ಎಲ್ಲರೂ ನಿನ್ನಂತೆ ಇರುವುದಿಲ್ಲ ಸುಮಾ. ನಿನ್ನ , ನಿನ್ನ ಗೆಳೆಯ ಹಾಗೂ ಸಂಪತ್ ಅವರ ಮಧ್ಯೆ ನಡೆದಿದ್ದು ಎಲ್ಲರ ಮಧ್ಯೆಯೂ ನಡೆಯುವುದಿಲ್ಲ. ನೈತಿಕತೆ ಎನ್ನುವುದು ಬರೀ ಪದ ಮಾತ್ರವಲ್ಲ ಎಂದು ಅರ್ಥ ಮಾಡಿಕೊ" "ಈ ಮಗು ಯಾರದು" ತಡವರಿಸುತ್ತಾ ಕೇಳಿದ ಸುಮಾಳ ಮಾತಿಗೆ ಗಹಗಹಿಸಿ ನಕ್ಕಳು ಅವಳು...

Written byಸಹನಾ ಪ್ರಸಾದ್ | Vijaya Karnataka Web 25 Oct 2021, 3:10 pm
Vijaya Karnataka Web ಧಾರಾವಾಹಿ
ಸಾಂದರ್ಭಿಕ ಚಿತ್ರ
ಸುಮಾ ಎಸೆದ ಹೂದಾನಿಯನ್ನು ಕೈಯಲ್ಲಿ ಹಿಡಿದು, ಅವಳ ಅಳು, ದುಗುಡ ತುಂಬಿದ ಮುಖವನ್ನು ಗಮನಿಸದಂತೆ ಮುಂದೆ ಬಂದಿದ್ದಳು "ಅವಳು". ಮಗುವನ್ನು ಮಾತಾಡಿಸುವಂತೆ ಮೆಲ್ಲನೆ ನುಡಿಯುತ್ತಾ ಹತ್ತಿರ ಬಂದವಳನ್ನು ತಡೆಯಲು ಕೈ ಬೀಸಿದಳು ಸುಮಾ. ಆದರೆ ಎದುರಾಕೆಯ ಬಲಿಷ್ಠ ಕೈಗಳು ಅವಳನ್ನು ಅಲ್ಲಿಯೇ ತಡೆದವು. ಆಕೆಯ ಉಬ್ಬಿದ ಹೊಟ್ಟೆಯತ್ತ ಕ್ರೂರ ದೃಷ್ಟಿ ಬೀರಿದ ಸುಮಾ ಏನು ಮಾಡಲೂ ತೋಚದೆ ತಟಸ್ಥವಾಗಿ ನಿಂತುಬಿಟ್ಟಳು.

" ಸಾಕಲ್ವಾ ಸುಮಾ, ಸಂಪತ್ ಅವರಿಗೆ ನಿನ್ನ ಬದುಕಿನ ಮೇಲೆ ನಿಯಂತ್ರಣ ಕೊಟ್ಟಿದ್ದು? ನೀನು ಕಟ್ಟಿದ ಸುಖದ ಮನೆ, ದಾಂಪತ್ಯ, ಸಂಸಾರ ಯಾವುದೂ ನಿನ್ನದಾಗಲು ಸಾಧ್ಯವಾಗಿಲ್ಲ ಎಂಬುದು ಸತ್ಯ ತಾನೇ? ನಿನ್ನನ್ನು, ನಿನ್ನ ಗಂಡನನ್ನು, ಸಂಸಾರವನ್ನು ಮಾರಿಕೊಂಡರೂ ನೀ ಬಯಸಿದ ಸುಖ, ನೆಮ್ಮದಿ ನಿನ್ನದಾಗಲಿಲ್ಲ. ಹೌದು ತಾನೇ?"
ಇಂದೇಕೆ ಅವಳ ನೆನಪು- ಭಾಗ 24; ಆಸ್ಪತ್ರೆಯಲ್ಲಿ ಸೆಟ್ಟಲ್ಮೆಂಟ್ ಶೇಖರ್; ಮುದುಡಿದಳು ಸುಮಾ!
ಮೆಲ್ಲನೆ ನುಡಿಯುತ್ತಿದ್ದ ಅವಳ ಮುಖವನ್ನು ನೋಡಿ ತನ್ನ ಮೊರೆಯನ್ನು ಬೇರೆಡೆ ತಿರುಗಿಸಿದವಳನ್ನು ಬಲವಂತವಾಗಿ ತನ್ನೆಡೆ ತಿರುಗಿಸಿಕೊಂಡಳಾಕೆ. " ಇನ್ನು ಸಾಕು. ನಿನ್ನ ಬದುಕಿನ ಚುಕ್ಕಾಣಿ ನೀನೆ ನಡೆಸು. ಸಂಪತ್ ಅವರ ಸಹವಾಸ ಸಾಕು ಮಾಡು. ನಿನ್ನ ಫೋಟೋಗಳು, ವೀಡಿಯೊಗಳು ಅವರ ಬಳಿ ಇದೆಯೆಂದು ಹೆದರಿ ನಡುಗಿ, ಅವರು ಹೇಳಿದ್ದನ್ನು ಕೇಳಿದ್ದು ಸಾಕು. ಶೇಖರನಿಗೆ ನಿಜ ಹೇಳಿ ಮಾಡಿದ ತಪ್ಪನ್ನು ಒಪ್ಪಿಕೊ. ನಿನಗೆ ಬೆಂಬಲವಾಗಿ ನಾನಿರುತ್ತೇನೆ. ಈ ನರಕದಿಂದ ಹೊರಬಾ ಸುಮಾ" ಹೇಳುತ್ತಾ ಹೇಳುತ್ತಾ ಅವಳ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯಲು ಶುರುವಾಗಿದ್ದು ನೋಡಿಯೂ ನೋಡದಂತೆ ದುರುಗುಟ್ಟಿದಳು ಸುಮಾ

"ನೀ ಯಾರು ಎಂದು ಮೊದಲು ಹೇಳು" " ಹಾಹಾ, ನಾ ಯಾರು ಎಂದು ನಿನಗೆ ಗೊತ್ತಿಲ್ಲವಾ? ಸಂಪತ್ ಹೆಸರು ಬಚಾವ್ ಮಾಡಲು ನನ್ನ, ನಿನ್ನ ಗಂಡನ ಮಧ್ಯೆ ಸಂಬಂಧವನ್ನೇ ಸೃಷ್ಟಿಸಿದೆ ನೀನು. ಅವರ ಮಕ್ಕಳ ಎದುರು ತಲೆ ತಗ್ಗಿಸಬಾರದು ಎಂದು ನಿನ್ನ ಗಂಡನ ಮೇಲೆ ಅಪವಾದ ಹೊರೆಸಿದೆ. ಯಾವ ಹೆಣ್ಣಿನ ಜತೆಗೂ ಎಲ್ಲೆ ಮೀರದ ಶೇಖರನ ಬಗ್ಗೆ ಎಲ್ಲರೂ ಆಡಿಕೊಳ್ಳುವ ಹಾಗೆ ಮಾಡಿದೆ. ನಾಳೆ ಹುಟ್ಟುವ ನಿನ್ನ ಮಗುವಿಗೆ ಅಪ್ಪನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದರೂ ಪರವಾಗಿಲ್ಲ, ಸಂಪತ್ ಅವರ ಹೆಸರು ಕೆಡಬಾರದು ಎನ್ನುವ ನಿನ್ನ ಯೋಚನೆಗೆ , ಕೆಟ್ಟಬುದ್ಧಿಗೆ ನಾನು ನಿಜಕ್ಕೂ ದಂಗಾಗಿರುವೆ. ಜಗತ್ತು ನನ್ನನ್ನು ನಿನ್ನ ಗಂಡನ ಜತೆ ಸಂಬಂಧವಿಟ್ಟುಕೊಂಡವಳು ಎಂದು ಗುರುತಿಸುವ ಹಾಗೆ ಮಾಡಿ ಸಂಪತ್ ಅವರನ್ನು ಬಚಾವ್ ಮಾಡಿದೆ. ಆದರೆ ಆ ಕೂಪದಲ್ಲಿ ನಾನು, ಶೇಖರ್ ಬಿದ್ದು, ಏಳಲಾಗದೆ ಒದ್ದಾಡುತ್ತಿರುವೆವು"
ಅವಳ ನೋಟ, ಮಾತು ಹರಿತವಾಗುತ್ತಿತ್ತು.
ಶೇಖರ್ ನ ಸಾಂಗತ್ಯಕ್ಕಾಗಿ ಪರಿತಪಿಸಿದ ಸುಮಾಳಿಗೆ ಕಾದಿತ್ತು ಶಾಕ್; ಬಂದಿದ್ದು ಯಾರಾಕೆ?!
" ಈಗ ನಾನು ಇಲ್ಲಿ ಬಂದಿರುವುದು ಯಾರಿಗಾದರೂ ಗೊತ್ತಾದರೆ ಪರಿಣಾಮ ಏನಾಗಬಹುದು ಎಂದು ಊಹಿಸಿಯೂ ನಾನಿಲ್ಲಿ ಬಂದಿರುವೆ. ಯಾಕೆ ಗೊತ್ತಾ, ಶೇಖರನಿಗಾಗಿ. ಹಾ, ಅವನ ನಡುವೆ ಮತ್ತೆ ಸಂಬಂಧ ಕಲ್ಪಿಸಬೇಡ. ಎಲ್ಲರೂ ನಿನ್ನಂತೆ ಇರುವುದಿಲ್ಲ ಸುಮಾ. ನಿನ್ನ , ನಿನ್ನ ಗೆಳೆಯ ಹಾಗೂ ಸಂಪತ್ ಅವರ ಮಧ್ಯೆ ನಡೆದಿದ್ದು ಎಲ್ಲರ ಮಧ್ಯೆಯೂ ನಡೆಯುವುದಿಲ್ಲ. ನೈತಿಕತೆ ಎನ್ನುವುದು ಬರೀ ಪದ ಮಾತ್ರವಲ್ಲ ಎಂದು ಅರ್ಥ ಮಾಡಿಕೊ" "ಈ ಮಗು ಯಾರದು" ತಡವರಿಸುತ್ತಾ ಕೇಳಿದ ಸುಮಾಳ ಮಾತಿಗೆ ಗಹಗಹಿಸಿ ನಕ್ಕಳು ಅವಳು"ನಿನಗೆ ಸಂಬಂಧ ಪಟ್ಟಿದ್ದಲ್ಲ ಅದು, ನಿನ್ನ ಬದುಕನ್ನು ರೂಪಿಸಿಕೋ. ಅನ್ಯಾಯ ಮಾಡಿರುವೆ ನಿನ್ನ ಗಂಡನಿಗೆ. ಅದನ್ನು ಸರಿಪಡಿಸಿಕೊ. ದುಡ್ಡಿನಾಸೆಗೆ ಸಂಪತ್ ಅವರ ಸಂಗ ಮಾಡುವುದನ್ನು ತಕ್ಷಣ ನಿಲ್ಲಿಸು" ತಕ್ಷಣ ತಿರುಗಿ ಬಾಗಿಲಾಚೆ ಹೊರಟವಳ ಕಣ್ಣಲ್ಲಿ ನೀರಿತ್ತು, ಅವಳು ಅದನ್ನು ಮರೆಮಾಚಲು ಯತ್ನಿಸುತ್ತಿದ್ದಾಳೆ ಎಂದು ಸುಮಾಳಿಗೆ ಅರಿವಾಯಿತು.
ಹೊಸ ಧಾರಾವಾಹಿ ಆರಂಭ: ಪ್ರಸಿದ್ಧ ಕಲಾವಿದ, ಅವನ ಸಹನಟಿ, ಅವನ ಹೆಂಡತಿಯ ಕತೆ!
ಅವಳು ಹೊರಟ ಕೆಲವು ಕ್ಷಣಗಳ ನಂತರ ಬಾಗಿಲಾಚೆ ನೋಡಿದಾಗ ಯಾರೂ ಕಾಣಲಿಲ್ಲ. ಸಧ್ಯ ಮಾಧ್ಯಮದವರಿಗೆ ತಿಳಿಯಲಿಲ್ಲ ಎಂದು ನಿಟ್ಟುಸಿರಿಟ್ಟು ಒಳ ಬಂದವಳಿಗೆ ಅಲ್ಲಿಯೇ ಇದ್ದ ಒಬ್ಬಾಕೆ ತನ್ನ ಕ್ಯಾಮೆರಾ ಬಳಸುತ್ತಿದ್ದದ್ದು ಅರಿವಾಗಲೇ ಇಲ್ಲ. ಒಳ ಬಂದವಳ ಕೈ ತನ್ನ ಸೆಲ್ ಫೋನಿನತ್ತ ಹೋದಾಗ ಅದನ್ನು ಗಟ್ಟಿಯಾಗಿ ಹಿಡಿದಿದ್ದು ಶೇಖರ್! ವೀಲ್ ಚೇರಿನ ಮೇಲೆ ಮಂಕಾಗಿ ಕುಳಿತಿರುತ್ತಿದ್ದವ ಈಗ ಕೆಂಡ ಕಾರುತ್ತಾ ತನ್ನೆದುರು ನಿಂತಿದ್ದಾನೆ..!
(ಮುಂದುವರೆಯುವುದು)
ಧಾರಾವಾಹಿ ಕಥೆ : ಸಹನಾ ಪ್ರಸಾದ್
ಲೇಖಕರ ಬಗ್ಗೆ
ಸಹನಾ ಪ್ರಸಾದ್
ಸಹನಾ ಪ್ರಸಾದ್ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಪತ್ರಿಕೆಗಳಲ್ಲಿ 3700ಕ್ಕೂ ಹೆಚ್ಚು ಕತೆ, ಕವಿತೆ, ಪ್ರವಾಸ ಕಥನ, ಹಾಸ್ಯ ಲೇಖನ ಬರೆದಿದ್ದಾರೆ. ವೃತ್ತಿಯಲ್ಲಿ ಸಂಖ್ಯಾ ಶಾಸ್ತ್ರದ ಪ್ರೊಫೆಸರ್. ಹಲವಾರು ಸಂಶೋಧನಾತ್ಮಕ ಲೇಖನಗಳನ್ನೂ ಸಹ ಬರೆದಿದ್ದಾರೆ. ಕನ್ಫರನ್ಸ್, ಸೆಮಿನಾರ್ ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಏಷ್ಯಾ ರಿಸರ್ಚ್ ನ್ಯೂಸ್ ಇವರನ್ನು ಗುರುತಿಸಿದೆ ಹಾಗೂ ವಿಶ್ವ ಹಣಕಾಸು ಸಂಸ್ಥೆ ನೀಡಿದ ಅವಾರ್ಡ್ ಕೂಡ ಇವರ ಪಾಲಿಗಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ