ಡಾ. ಮನೋರಮಾ ಬಿ.ಎನ್.
ಬೂಮೀನ್ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಿಕೇರಿ ಮೇಲ್ ಮಂಜು!
ಮಡಿಕೇರಿಯನ್ನು ವರ್ಣಿಸುವುದಿದ್ದರೆ ಜಿ.ಪಿ. ರಾಜರತ್ನಂ ಅವರು ಬರೆದ ಹಾಡೇ ಮಂಜಿನ ಭಗವದ್ಗೀತೆ. ಮಂಜು ಮತ್ತು ಮಡಿಕೇರಿಗೆ ಬಿಡಿಸಲಾರದ ಅನುಬಂಧ ಎಂಬುದನ್ನು ಬೇರೆ ಹೇಳಬೇಕಿಲ್ಲ, ನೋಡಿ. ನಮ್ಮವರನ್ನೂ ಸೇರಿದಂತೆ ನಮ್ಮೂರಿಗೆ ಬರುವ ಬಂಧು ಮಿತ್ರ ಪ್ರವಾಸಿಗರಿಗೆ ಮಂಜಿನಕೇರಿಯೇ ಮಡಿಕೇರಿಯಾಯಿತೇ ಎಂಬ ತತ್ಸಂಬಂಧಯೋಚನೆ ಹಲವು ಬಾರಿ ಹೊಳೆದಿದೆ.
ಮೂರು ಹೊತ್ತೂ ಮಂಜು ಕಂಡೂ ಕಂಡೂ ಹಳತಾದ ನನ್ನಂಥವರಿಗೆ ರಾಜರತ್ನಂಅವರ ಪದ್ಯದಲ್ಲಿ ವಿಶೇಷ ಏನಿದೆ ಎಂದೆನಿಸುತ್ತಿತ್ತು- ನಾವು ಚಿಕ್ಕವರಿದ್ದಾಗ. ಸೂರ್ಯ ನೆತ್ತಿಗೆ ಬರುವ ಹೊತ್ತಾದರೂ ಮಂಜುಅಡಗುತ್ತಿರಲಿಲ್ಲ. ಒಮ್ಮೊಮ್ಮೆ ಮಧ್ಯಾಹ್ನ, ಸಂಜೆ, ಮಧ್ಯರಾತ್ರೆ.. ಹೀಗೆಲ್ಲಾ ಮಂಜಿನ ಆಟಕ್ಕೆ ಹೊತ್ತುಗೊತ್ತಿಲ್ಲ. ರಾತ್ರೆ ನಿದ್ರೆ ಹತ್ತುವುದರಿಂದ ಮೊದಲ್ಗೊಂಡು ಬೆಳಗ್ಗೆ ಎದ್ದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರೂ ಮಂಜಿನ ಜೊತೆಗೆ ನಮ್ಮದು ಮುಗಿಯದ ಮುಸುಕಿನ ಗುದ್ದಾಟ. ದೊಡ್ಡ, ದೊಡ್ಡ ಬೆಟ್ಟ-ಬಿಲ್ಡಿಂಗ್ಗಳೂ ಮರೆಯಾಗಿ ಎಲ್ಲೆಲ್ಲೂ ಒಂದೇ ಬಣ್ಣ. ಬಿಳಿಯಾದ ಹೊದಿಕೆಯೊಳಗೆ ಅದೆಷ್ಟು ದಿನವಿರುತ್ತಿದ್ದೆವೋ !
ಅಗಲೇ ಬರಲಿ ರಾತ್ರೇ ಬರಲಿ
ಬಿಸಿಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ಕೊಡಲ್ದು
ಮಡಿಕೇರೀಗೆ ಮಂಜು!
ಜನಸಾಂದ್ರತೆ ಕಡಿಮೆಯಾಗಿದ್ದ ಕಾಲಕ್ಕಂತೂ ಮಂಜು ನಡೆಯುವವರ ಪಾಲಿಗೆ ಸ್ನೇಹಿತನೂ ಹೌದು. ಶತ್ರುವೂ ಹೌದು. ನೋಡಿದ್ದನ್ನೇ ನೋಡುವುದೆಂದರೆ ಹೇಗಾದೀತು, ಹೇಳಿ? ಸೂರ್ಯ ಮೂಡಿ ಮೇಲೆದ್ದರೂ ಟಾರ್ಚ್ ಹಿಡಿದು ನಡೆಯದಿದ್ದರೆ ದಾರಿ ಕಾಣುತ್ತಿರಲಿಲ್ಲ. ಮಧ್ಯಾಹ್ನ ಮಲಗಿ ಸಂಜೆ ಎದ್ದವಳಿಗೆ ದಿನವೊಂದು ಕಳೆದು ಬೆಳ್ಳಂಬೆಳಗ್ಗೆ ಆಯಿತೇನೋ ಎಂಬ ಭ್ರಾಂತಿ. ಮಂಜೋ ಮೋಡವೋ ಎಂಬಷ್ಟರ ಮಟ್ಟಿಗೆ ಮಂಜಿನ ಮಬ್ಬುಗಾರಿಕೆ! ಇನ್ನು ಗೊತ್ತಿಲ್ಲದಂತೆಯೇ ಹಿಂಬಾಲಿಸುವ ಮಂಜು ಮಹಾತ್ಮ ಒಮ್ಮೊಮ್ಮೆ ಆಕೃತಿಯಂತೆಯೋ, ಹೊಗೆಯಂತೆಯೋ ತೋರಿ ಬರುವವ. ಮಂಜಿನೊಳಗಿನಿಂದ ಮನುಷ್ಯನೊಬ್ಬ ಮೂಡಿ ಬರುತ್ತಿದ್ದಾನೆಂದು ಇದಿರಿನಿಂದ ಬರುವಾತನಿಗೆ ಖಾತ್ರಿಯಾಯಿತೋ ಸರಿ, ಇಲ್ಲವೇ ಬೆದರುವ ಸರದಿ ಖಂಡಿತಾ. ಇದಿರಿಗೆ ಬಂದವರು ಪರಿಚಿತರೇ ಆಗಿದ್ದರೂ, ಮುಖದ ತುಂಬೆಲ್ಲಾ ಹೊದ್ದ ಮಫ್ಲರು, ಅಂಗಾಂಗಗಳನ್ನು ಅಡಗಿಸಿಟ್ಟ ಸ್ವೆಟರ್ ಕಂಬಳಿಗೆ ಮುಖವೇ ತಿಳಿಯದೆ ಎಲ್ಲರೂಅಪರಿಚಿತರೇ. ಹಾಗಾಗಿ ಮುಗುಮ್ಮಾಗಿ ತಲೆ ಬಗ್ಗಿಸಿ ದಾರಿ ಹುಡುಕುತ್ತಾ ನಡೆಯುವುದೊಂದೇ ಪಥಿಕನಿಗಿದ್ದ ಒಂದೇ ಅನಿವಾರ್ಯ ಅವಕಾಶ.ಅದೃಷ್ಟಕ್ಕೆ ಸಿಕ್ಕರೆ ಬಿಸಿಬಿಸಿ ಕಾಫಿ ಹೀರುವುದು ಜನ್ಮದ ಪುಣ್ಯವಿಶೇಷ.
ನಡಿಯೋದೊಡ್ದೊಡ್ದೇವಲ್ನಂಗೆ
ಪಟ್ಟದ್ ಸುತ್ತಿನ್ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ತಿತ್ತು ಮಂಜು!
ಮಳೆಯ ದೋಸ್ತ್
ಸಾಧಾರಣವಾಗಿ ಧೋಎಂದು ಮಳೆ ಸುರಿದರೆ ಮಂಜಿನ ವಿಳಾಸ ಕಾಣಸಿಗುವುದಿಲ್ಲ. ಆದರೆ ಮಡಿಕೇರಿಯಲ್ಲಿ ಮಳೆ ಇರಲಿ, ಮಂಜೂ ಇರಲಿ ಎಂದು ಬೇರೆ ಹರಕೆ ಹೇಳಬೇಕಿರುತ್ತಿರಲಿಲ್ಲ. ಮಡಿಕೇರಿಯ ಮಳೆಗೆ ಮಂಜೆಂಬುದು ಕರೆಯದೇ ಬರುವ ಖಾಸಾ ದೋಸ್ತ್. ವಾಹನಗಳ ಹೆಡ್ಲೈಟ್ ಮೂತಿ ಸುತ್ತಲೂ ಮಂಜಿನದ್ದೇ ಹೊದಿಕೆ. ಗಾಢ ಕತ್ತಲೆಯ ಆವರಣವನ್ನೂ ಸುಲಭವಾಗಿ ಸೀಳುವ ಪ್ರಕಾಶಮಯ ದೀಪಗಳು ತಮ್ಮ ಇರುವ ಶಕ್ತಿಯನ್ನೆಲ್ಲಾ ಸೇರಿಸಿದರೂ ಬೆಳಕು ಬೀರಲು ಮಂಜಿನ ನಿಗೂಢತೆಯಿಂದ ಸಾಕಷ್ಟು ಪ್ರಯಾಸ ಪಡುತ್ತಿದ್ದವು. ಮಂಜಿನ ಹಮ್ಮು-ಬಿಮ್ಮೇ ಅಂಥದ್ದು.
ಮಂಜಿನ ತಂಪಿಗೆ ಅಲರ್ಜಿ ಉಂಟು ಮಾಡುವ ಒಂದು ಗುಣವಿದೆ. ಹಾಗಾಗಿಯೇ ಮಂಜು ಮತ್ತು ಅದು ತರುತ್ತಿದ್ದ ಚಳಿಗೆæ ಬೆದರಿ ಊರು ಬಿಟ್ಟವರೂ ಇದ್ದಾರೆ. ಮಂಜಿಗೆ ಹೊರ ನಡೆದರೆ ಆ ದಿನವೆಲ್ಲಾ ಮೂಗಿನಲ್ಲಿ ಕಾವೇರಿ ಪ್ರವಾಹವೇ ಸರಿ; ಜೊತೆಗೊಂದಷ್ಟು ಸಿಡಿಲು ಗುಡುಗೆಂಬ ಸೀನುಗಳು ಬೋನಸ್-ಅದರ ದಾಳಿಗೆ ತುತ್ತಾದವರ ಸರ್ವೇಸಾಮಾನ್ಯಅನುಭವ (ನನ್ನನ್ನೂ ಸೇರಿದಂತೆ). ಮಂಜಿನ ದಂಡಿ-ದಾಳಿಯ ಸೂಚನೆ ಸಿಕ್ಕಿದೊಡನೆಯೇ ಬೆಚ್ಚನೆ ಮನೆಯೊಳಗೆ ಸೇರಿಕೊಂಡರೋ ಸರಿ, ಇಲ್ಲವಾದರೆ ಕನಿಷ್ಠಪಕ್ಷ ಉಣ್ಣೆಯ ಸ್ಕಾರ್ಫ್, ಮಫ್ಲರ್, ಸ್ವೆಟರ್ಗಳನ್ನು ಮತುಂಬ ಹೊದ್ದುಕೊಂಡು ಹೋಗದಿದ್ದರೆ ಮಂಜು, ಚಳಿಗೆ ಕಣ್ಣು ಮೂಗೆಲ್ಲಾ ಕೆಂಪಡರಿ ಜ್ವರದವರೆಗೂ ಹೋಗಿ ಖಂಡಿತಾ ಹಾಸಿಗೆಗೆ ಒಂದೆರಡು ದಿನಕ್ಕಾದರೂ ಶರಣಾಗಬೇಕಿರುತ್ತಿತ್ತು. ಹಾಗಾಗಿ ಹರೆಯದ ಹದಿಮನಸ್ಸುಗಳ ಮೈ ಕಾವು ಮಂಜಿನಿಂದಾಗಿ ಏರುವುದು ಎಂಬ ರೊಮ್ಯಾಂಟಿಕ್ ಪರಿಕಲ್ಪನೆ ಬರಿಯ ಸಿನೆಮಾಗಳ ಕನ್ನಡಿಯೊಳಗಣ ಗಂಟಾಗಿಯೇ ನಮಗೆ ತೋರುತ್ತಿತ್ತು. ಇರುವುದರಲ್ಲಿ ಮಕ್ಕಳಿಂದ ಮೊದಲ್ಗೊಂಡು ಹಿರಿಯರೆಲ್ಲಾ 'ಆಹ್' ಎಂದೆನ್ನುತ್ತಾ ಮೈಯ್ಯ ಕಾವನ್ನು ಬಾಯಿಯಿಂದ ಹೊಗೆಯಾಗಿ ಬಿಡುವುದಷ್ಟಕ್ಕೇ ತೃಪ್ತಿ! ಇನ್ನು ಮಂಜುಗೆನೆಯನ್ನು ಸವಿಯುವುದಂತೂ ದೂರದ ಮಾತು.
ಆ ರೋಮಾಂಚನ!
ಅಪರೂಪಕ್ಕೊಮ್ಮೆ ಮಂಜಿನÜ ನಡುವೆ ಸೂರ್ಯರಶ್ಮಿ ತೂರಿಬಂದರೆಅದುನಿಜಕ್ಕೂರೋಮಾಂಚನ!ಎಷ್ಟೋ ದಿನಗಳ ಬಳಿಕ ಕಾರಾಗೃಹದಿಂದ ಹೊರಜಗತ್ತಿಗೆ ಎದ್ದು ಬಂದ ಖೈದಿಯಂತಾ ಅನುಭವ ನಮ್ಮದು. ರೋಮರೋಮಗಳಲ್ಲಿ ಅಡಗಿ ಕುಳಿತ ಚಳಿಯನ್ನು ನಿಧಾನವಾಗಿ ಹೊರಗೆಳೆದು ಕೊಡುವ ಸೂರ್ಯಶಾಖವನ್ನು ಅನುಭವಿಸುವುದು ಯಾವ ಸುಖಕ್ಕೂ ಕಡಿಮೆಯಿಲ್ಲ. ಎಳೆಬಿಸಿಲಿನ ಕೆಂಪಿಗೆ ಹತ್ತಿಯುಂಡೆಗಳನ್ನು ಮಾಡಿ ಇಟ್ಟಂತ ಮಂಜುಕಾಮಿನಿ. ನೆಲದಿಂದೆದ್ದು ಧೂಳಿಯಂತೆ ಮೆಲ್ಲನೆ ಹಾರಿ ಹೋಗುವ ಮಂಜುಗಾಮಿನಿ. ನದಿ, ಕೆರೆ ಪಕ್ಕದಲ್ಲಿದ್ದರೆ ಸೂರ್ಯ ಮೇಲೇರಿದಂತೆ ಆವಿಯಾಗಿ ಹೋಗುವ ಮಂಜು ಆವಿ ಸುಂದರಿ. ಬಿಳಿದೊಗಲಿನ ಚೆಲುವೆ. ಬಿಸಿಯುಸಿರ ಮಲ್ಲಿಗೆ. ಟಾರು ರೋಡುಗಳ ಮೇಲೆ ಮೆಲ್ಲನೆ ನಡೆಯುವ ವಾಹನಗಳ ಬಿಸಿಗೆ ಮಂಜು ಮೇಲೇಳುವ ಚೆಂದವೇ 'ವಾವ್' ಉದ್ಗಾರದ ಹುಟ್ಟಿಗೆ ಕಾರಣವಿದ್ದಿರಬಹುದೇನೋ! ರಸ್ತೆ ಮತ್ತು ಚಕ್ರದ ನಡುವಿನ ಘರ್ಷಣೆಯ ಬಿಸಿಗೆ ಏಳುವ ಮಂಜಿನ ಧೂಮ ಹಾಗೆಯೇ ಹೆದ್ದಾರಿಗುಂಟ ಹಬ್ಬಿದಾಗ ಪ್ರಕೃತಿಯೇ ತೆæರಳುವವರಿಗೆ ಧೂಪ ಹಾಕಿ ಶುಭ ಕೋರುತ್ತಿದೆಯೋ ಎಂಬ ಆಪ್ತಭಾವ! ಘರ್ಷಣೆಯೊಳಗೂ ಒಂದು ಹದವಾಗಿ ಹಬ್ಬುವ ಪ್ರೀತಿ!
ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣಕಣ್ಗೆತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌಂದ್ರೀ ಮಂಜು!
'ಮೂಡಲ ಮನೆಯಾ ಮುತ್ತಿನ ನೀರಿನ' ಎಂಬ ಹಾಡು ಸಾಕ್ಷಾತ್ಕಾರವಾಗುವುದಿದ್ದರೆ ಅದು ಮಡಿಕೇರಿಯಲ್ಲೇ ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ರಾತ್ರೆಯಕಗ್ಗತ್ತಲ ಬೆದರಿಕೆಗೆ ಹಗಲಿನ ಕಂಬನಿಯಾಗಿರಬಹುದೇ ಈ ಮಂಜಿನ ಹನಿ? ಇನ್ನು ಮಂಜು ಕರಗಿ ಗಿಡಗಂಟಿಗಳಲ್ಲೋ, ಹೂಗಳಲ್ಲೋ ಮುತ್ತಿನಂತೆ ಅಲ್ಲಲ್ಲ್ಲಿ ಚೆಲ್ಲಾಡಿದಾಗ ಮಡಿಕೇರಿಯ ಹಾದಿಬೀದಿಗಳೆಲ್ಲಾ ಮೌಕ್ತಿಕಮಯ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮುತ್ತು ರತ್ನಗಳನ್ನೆಲ್ಲಾ ಬೀದಿಬದಿಯಲ್ಲಿ ಸುರುವಿ ಮಾರಾಟ ಮಾಡುತ್ತಿದ್ದರಂತೆ. ಮಡಿಕೇರಿಯೇನುಕಡಿಮೆ? ಇಲ್ಲಿ ದಿನನಿತ್ಯವೂ ಪ್ರಕೃತಿಯೇ ಹರಹಿಡುವ ಮುತ್ತುಗಳ ಖಜಾನೆಯಿದೆ.
ತಾಯಿ ಮೊಗೀನ್ಎತ್ಕೊಂಡಂಗೆ
ಒಂದಕ್ಕೊಂದುಅತ್ಕೊಂಡಂಗೆ
ಮಡಿಕೇರೀನ ಎದೆಗೊತ್ಕೊಂಡಿ
ಜೂಗಾಡ್ತಿತ್ತು ಮಂಜು!
ಹೂಗÜಂಟಿಗಳ ಮೇಲೆ ಬಿದ್ದ ಮಂಜಿನ ಹನಿಗಳನ್ನು ಒಮ್ಮೆ ಆಡಿಸಿದರೆ ಸಾಕು, ಅದು ಮಳೆಯಾಗಿ ಇಡುವ ತಂಪಿನ ಕಚಗುಳಿ ಯಾವ ಫ್ರೀಜರಿನ ನೀರಿಗೂ ಕಡಿಮೆಯಿರುತ್ತಿರಲಿಲ್ಲ. ಮಂಜಿನ ಮುತ್ತುಗಳನ್ನೆಲ್ಲಾ ಆರಿಸಿ ನಾಲಗೆಗೆ ಸವರಿಕೊಳ್ಳುವುದಂತೂ ಪ್ರಕೃತಿ ನಮಗಾಗೆಂದೇ ನೀಡುತ್ತಿದ್ದ ತಂಪು ಪಾನೀಯ.
ಸಂಗೀತಾಭ್ಯಾಸ ಶಿಸ್ತಾಗಿ ಆಗಬೇಕೆಂಬ ನೆವಕ್ಕೋ ಏನೋ ನನ್ನ ಸಂಗೀತದ ಟೀಚರ್ ಹೇಳಿದ್ದ ಒಂದು ವಿಶೇಷ ಸಾಧನೆಗೆ ಮಂಜಿನ ರಹಸ್ಯದ್ದೇ ಪ್ರಮುಖ ಪಾಲಿತ್ತು. 'ಕಂಚಿನಕಂಠ ಬೇಕೆಂದರೆ ರಾತ್ರೆ ತಣ್ಣೀರನ್ನು ಕಂಚಿನ ತಂಬಿಗೆಗೋ, ಲೋಟಕ್ಕೋ ಸುರುವಿ ಒಂದು ಹತ್ತಿ ಬಟ್ಟೆಯನ್ನು ಕಟ್ಟಿ ಹೊರಗಿಟ್ಟು ಬೆಳ್ಳÜಂಬೆಳಗ್ಗೆ ಮಂಜು ಬೀಳುವ ಹೊತ್ತಿಗೆ ಅದನ್ನು ಗಂಟಲಿಗೆ ನೇರ ಹುಯ್ದು ಸಂಗೀತಾಭ್ಯಾಸ ಶುರು ಮಾಡಿತೆಂದರೆ ಕಂಚಿನಕಂಠ ಗ್ಯಾರಂಟಿ' ಎಂದು ಮಿದುಳಿನೊಳಗೆ ಹುಳ ಬಿಟ್ಟಿದ್ದರು. ಆ ಹುಳ ಮಿಂಚಾಗಿ ಓಡಾಡಿ ಸುಮಾರು 4-5 ವರುಷ ಬೆಳಗ್ಗೆ 5 ಗಂಟೆಯಿಂದ ಶಾಲೆಗೆ ಹೋಗುವ ಅರ್ಧಗಂಟೆ ಮುಂಚಿನವರೆಗೂ ಓಡಾಡಿ ಗಂಟಲಲ್ಲಿ ಇಳಿಯುತ್ತಿತ್ತು. ಮಂಜು ಬಿದ್ದ ಕಂಚಿನ ನೀರಿಗೆ ದನಿಯನ್ನೂ ಕಂಚಿನಂತೆ ಕರಗಿಸುವ ಶಕ್ತಿ ಇತ್ತೋಇಲ್ಲವೋ, ಆದರೆ ಮಂಜಿನ ಜೊತೆಗೆ ತಳುಕು ಹಾಕಿದ್ದ ರಹಸ್ಯಕ್ಕಂತೂ ಸಾಧನೆಯ ಛಲ ಬೆಸೆದಿತ್ತು. ಮಂಜಿನೊಳಗಿನಿಂದ ತೂರಿಬರುತ್ತಿದ್ದ ನಡುಗಿಸುವ ಚಳಿಗೆ ಹೊದ್ದು ಮಲಗಬೇಕೆಂದೋ; ತಂಪಗಿನ ನೀರನ್ನು ಗಂಟಲಲ್ಲೆರೆಯುವುದಕ್ಕಿಂತ ಬಿಸಿಬಿಸಿ ಕಾಫಿಯನ್ನು ಗುಟುಕರಿಸಬೇಕೆಂದೋ ಅನಿಸುತ್ತಿತ್ತಾದರೂ ಕಂಚಿನ ಕಂಠದ ಮಂಜಿನ ಗಂಟಲಿನ ಆಸೆಗೆ ಅವೆಲ್ಲಾ ಘಟ್ಟದ ಕೆಳಗಿನ ಮಂಜಿನಂತೆಯೇ ಕರಗಿಹೋಗುತ್ತಿದ್ದವು.
ಬದಲಾಗಿದೆ ಮಂಜು
ಚಾರಣಕ್ಕೆ ಹೊರಟಾಗಲಂತೂ ಮಂಜಿನೊಳಗೆ ಮೆಲ್ಲನೆ ಹೆಜ್ಜೆಯೂರಬೇಕಾದ ಪ್ರಸಂಗ ಅದೆಷ್ಟು ಸಲ ಬಂದಿದೆಯೋ ಏನೋ! ಬ್ರಹ್ಮಗಿರಿಯ ಬೆಟ್ಟ ಹತ್ತುವಾಗ ತೊಡರಿಕೊಳ್ಳುತ್ತಿದ್ದ ಮಂಜು, ರಾಜಾಸೀಟಿನ ಕೆಳಗಿನ ಚೆಲುವಾದ ಗದ್ದೆ-ರಸ್ತೆ ಅಷ್ಟೇಕೆ, ಕೊನೆಗೆ ಇನಿದಾಗಿ ಅಸ್ತಮಿಸುವ ಸೂರ್ಯನನ್ನೇ ತಿಂದುಬಿಡುವ ಮಂಜಿನ ಕಡೆಗೆ ಅಸಾಧ್ಯ ಕೋಪ ಬರುತ್ತಿತ್ತು. ವಾಹನ ಚಲಾಯಿಸುವವರಿಗಂತೂ ಮಡಿಕೇರಿಯ ಮಂಜೆಂಬುದು ಕೂಡಾ ಒಂದು ಸವಾಲು ಆಗಿದ್ದ ದಿನಗಳವು. ಎಷ್ಟೋ ಅಪಘಾತಕ್ಕೆ ಮಂಜೇ ಅಪರಾಧಿಧಿ. ಅದೆಷ್ಟು ಸಲ ಹಿಡಿಶಾಪ ಪಡೆದಿದೆಯೋ ಮಂಜೆಂಬ ಕಂಡೂಕಂಡೂ ಮಾಯವಾಗಿ, ಕೈಗೆ ಸಿಗದೇ ಹೋದ ಶತ್ರುವಾಗದ ಮಿತ್ರ !
ಬಹುಶಃ ಆ ಶಾಪಗಳೇಕ್ರಮೇಣ ನಿಜವಾದವೇ? ಈಗೆಲ್ಲಾ ಪ್ರವಾಸಿಗರು ಮಡಿಕೇರಿಯ ಮಂಜು ಸವಿಯಲು, ಮೈಕಾಯಿಸಿಕೊಳ್ಳಲು ಬರುತ್ತಾರಷ್ಟೇ. ಅರೆಬರೆ ಬಟ್ಟೆತೊಟ್ಟು ಬರಿಮೈಯಲಿ ಓಡಾಡಿ ಮಳೆ ಮಂಜೆಂಬ ನೆನೆಕೆಯಲ್ಲಿ ನೆನೆಯುತ್ತಾರೆ, ಖಯಾಲಿಗೆ ಚಳಿ ಚಳಿಯೆನ್ನುತ್ತಾ ಒಂದೆರಡು ಪೆಗ್ ಏರಿಸುತ್ತಾರೆ, ಕಾವು ಏರಿಸಿಕೊಳ್ಳುತ್ತಾರೆ ಅಷ್ಟೇ! ಆದರೆ ಅವರಿಗೇನು ಗೊತ್ತು? ಈಗ್ಗೆ 15-20 ವರ್ಷಗಳ ಹಿಂದೆ ಸಿಗುತ್ತಿದ್ದ ಅನುಭವ ಇಂದಿನ ಕೊಡಗಿನಲ್ಲಿಲ್ಲ ಎಂದು? ಹಾಗೊಂದು ವೇಳೆ ಸಿಗುತ್ತಿದ್ದರೆ ಖಂಡಿತಾ ಆ ಮಂಜು- ಚಳಿ-ಮಳೆ ನೆನೆಯಲುಅವರನ್ನು ಬಿಡುತ್ತಿರಲಿಲ್ಲ. ಏಕೆಂದರೆ ಆ ಮಡಿಕೇರಿಯ ಮಳೆ-ಮಂಜಿಗೆ ಮೂಳೆಗಳನ್ನು ಮರಗಟ್ಟಿಸುವ ಶಕ್ತಿಯಿದೆ. ಅದರೊಂದಿಗಿನ ಚಳಿಯೆಂಬ ಬಂಧುವಿಗೆ ರಕ್ತ ಹೆಪ್ಪುಗಟ್ಟಿಸುವ ತಾಕತ್ತಿದೆ.
ಬರಬರುತ್ತಾ ಮಂಜು ನಮಗೂ ಹೊಸತಾಗುತ್ತಿದೆ. ಅದಾಗಲೇ ಬಾಲ್ಯದ ಮಂಜಿನ ಪಯಣಕ್ಕೆ ನೆನಪೀಗ ಆ ಹಾಡು ಮಾತ್ರ. ಬಹುಶಃ ಇನ್ನೊಂದಷ್ಟು ವರ್ಷ ಕಳೆದರೆ ರಾಜರತ್ನಂಅವರ ಹಾಡೊಂದಷ್ಟೇ ಉಳಿಯುತ್ತದೆಯೇನೋ! ಮಡಿಕೇರಿಯ ಮೈಯಿಂದ ಕರಗುತ್ತಿರುವ ಮಂಜು ಏರುತ್ತಿರುವ ಕಾವಿಗೆ ಸ್ಪಷ್ಟ ಸೂಚನೆ. ಕಾವೇರಿ ನಾಡಿನೊಳಗಿನ ಆದ್ರ್ರತೆ ಬರಿದಾಗುತ್ತಿದೆಯೇನೋ! ಈಗೇನಿದ್ದರೂ ಮನಸ್ಸು, ಕಣ್ಣು ಆದ್ರ್ರವಾಗಿ ಮಂಜಾಗುವ ಸರದಿ. ಮಂಜು ಮಂಜಾಗುತ್ತಿದೆ. ಮಬ್ಬುಗತ್ತಲಿನ ಕಣ್ಣಲ್ಲಿಯೂ ಮಂಜಿನ ಸುಳುಹಿಲ್ಲ.
ನಾಪತ್ತೆಯಾಗಿದೆ ಮಂಜಿನ ದಿನಗಳು.. ಹುಡುಕಿಕೊಡಿ.
ಮಡಗಿದ್ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ಅಡಗಿದ್ದಂಗೆ
ಸೀತಕ್ ಸಕ್ತಿ ಉಡುಗೋದಂಗೆ
ಅಳ್ಳಾಡಾಲ್ದು ಮಂಜು!
(ಲೇಖಕರು ನೃತ್ಯ ಸಂಶೋಧಕರು, ಬರಹಗಾರ್ತಿ)
ಮಡಿಕೇರಿಗೆ ಕ್ಷೀರಪುರ ಎಂಬ ಪೌರಾಣಿಕ ಹೆಸರಿದೆ. ಹಿಂದಿನಿಂದಲೂ ಹಾಲು- ಮೊಸರು- ಕೆನೆ- ತುಪ್ಪಗಳಿಗೆ ಬರವಿಲ್ಲದೆ ಸಮೃದ್ಧಿಯಾಗಿದ್ದ ಭೂಮಿ ಇದು ಎಂಬ ನೆಲೆಯಲ್ಲಿ ಬಂದ ಹೆಸರಾಗಿರಬಹುದು. ಇಲ್ಲವೇ ಹಾಲಿನ ಬಣ್ಣವನ್ನೇ ಹಾಸಿ ಹೊದ್ದಿರುವ ಭೂಮಿ ಎಂಬರ್ಥದಲ್ಲಿ ಕವಿಸಮಯವಾಗಿಯೂ ಹೆಸರಿಸಲ್ಪಟ್ಟದ್ದಿರಬಹುದು. ಹಿಮಾಲಯವೂ ಕ್ಷೀರಪುರವೇ ತಾನೇ! ಒಟ್ಟಿನಲ್ಲಿ, ದಕ್ಷಿಣಕಾಶಿಯೆಂಬ ಅಭಿದಾನಕ್ಕೆ ಪಾತ್ರವಾದ ಮಡಿಕೇರಿ ಮಂಜಿನ ತವರು ಎನ್ನುವುದಕ್ಕೆ ಹಲವು ಶತಮಾನಗಳ ಇತಿಹಾಸ ಉಲ್ಲೇಖಗಳು ಮಂಜಿನಂತೆಯೇ ನಿಶಬ್ದವಾಗಿ ಹಿಂಬಾಲಿಸಿ ಬಂದಿದೆ. ಕಾವೇರಿ ಹುಟ್ಟೂರಿನ ಮಂಜಿನಲ್ಲೆಲ್ಲಾ ಕಾವೇರಿಯೇ ಹರಿಯುತ್ತಿದ್ದಾಳೆ ಎಂಬ ಭಾವ ನಮ್ಮದು.
ಮಡಿಕೇರಿಯಆತ್ಮವನ್ನೇ ಲೇಖನಿಯ ಇಂಕಿನೊಳಗೆ ಇಳಿಸಿ ರಾಜರತ್ನಂ ಅವರು ಪದ್ಯ ಬರೆದಿದ್ದಾರೆ ಎಂದು ತಿಳಿದದ್ದು ಈಗ್ಗೆ ಮನಸ್ಸು-ಪ್ರಕೃತಿಯ ಮಂಜು ಬಿರಿದಾಗಲೇ. ನವೆಂಬರ್ನ ಚಳಿಗಾಲದ ಈ ಸಮಯಕ್ಕೂ ಮಂಜು ಮುಸುಕುವುದು ಒತ್ತಟ್ಟಿಗಿರಲಿ, ಅದರ ಹಿಂದಿನ ಮಳೆಗಾಲದ ಮಳೆಯೂ ನಮ್ಮ ಎದೆಯೊಳಗಿಳಿದಿಲ್ಲ. ಮೈತುಂಬಾ ಬೆಚ್ಚಗೆ ಹೊದ್ದು ಚುಮುಚುಮು ಚಳಿಗೆ, ಅರೆತೆರೆದ ರಸ್ತೆಗಳಲ್ಲಿ ಹಾಲು ತರಲು ಹೋಗುತ್ತಿದ್ದ ದಿನಗಳನ್ನು ಈಗ ನೆನಪಿಸಿಕೊಳ್ಳಬೇಕಷ್ಟೆ. ಚಳಿಗಾಲದ ಈ ಹೊತ್ತಿಗೂ ಮೈಯೆಲ್ಲಾ ಬೆವರುತ್ತÜದೆ. ಫ್ಯಾನ್ನ ಆಸರೆ ಬೇಡುತ್ತದೆ ಎಂದರೆ ಒಮ್ಮೆ ಯೋಚಿಸಿ, ಪರಿಸರದ, ಮನೆಯ, ಮನದ ಬೇಗೆ ಎಷ್ಟಿರಬಹುದು?