ಆ್ಯಪ್ನಗರ

ಬರಹ

ಬರಹ ಈ ಲೇಖನಿಗೇನು ಗೊತ್ತು ಸುಮ್ಮನೇ ಎರಡು ಗೆರೆಗಳ ನಡುವೆ ತುಯ್ಯುತ್ತದೆ ಅವೇ ರಸ್ತೆಗಳ ತಟ್ಟಿ ಬರುವ ಗೂರ್ಖನಂತೆ ಅದದೇ ಅಡ್ಡ ಉದ್ದ ಗೆರೆ ಸೊನ್ನೆ ಸುಳಿ ಗಳಲ್ಲಿ ...

Vijaya Karnataka 19 Jan 2019, 5:31 pm
ಬರಹ
Vijaya Karnataka Web poem
ಬರಹ




ಈ ಲೇಖನಿಗೇನು ಗೊತ್ತು

ಸುಮ್ಮನೇ ಎರಡು ಗೆರೆಗಳ ನಡುವೆ ತುಯ್ಯುತ್ತದೆ

ಅವೇ ರಸ್ತೆಗಳ ತಟ್ಟಿ ಬರುವ ಗೂರ್ಖನಂತೆ

ಅದದೇ ಅಡ್ಡ ಉದ್ದ ಗೆರೆ ಸೊನ್ನೆ ಸುಳಿ

ಗಳಲ್ಲಿ ತಿರುಗುತ್ತದೆ- ದಿನವೂ

ಅದೇ ರುಜು ಮಾಡುವ ನೌಕರನಂತೆ

ಹೆಚ್ಚೆಂದರೆ ಕಾಗುಣಿತ ಬದಲುತ್ತದೆ

ಅಥವಾ ಶಾಯಿಯ ಬಣ್ಣ

ಉದ್ದನೆಯ ಟೋಪಿಯಲ್ಲಿ ತಲೆ

ಹುದುಗಿಸಿ ಬೆಚ್ಚಗೆ ಮಲಗುತ್ತದೆ

ಎರಡು ಗೆರೆಗಳೇ ದಡಗಳಾಗಿ ನಡುವೆ

ಎಂಥೆಂಥ ನದಿಗಳು ಹರಿದಿದ್ದವು

ತಡಸಲಲ್ಲಿ ಧುಮ್ಮಿಕ್ಕಿ ಮೊರೆದಿತ್ತು

ಭರಪೂರ ಮಳೆ ನೀರು

ಎಲ್ಲಿ ಇಂಗಿದವೀಗ- ಯಾರಿಗೆ ಗೊತ್ತು

ಸಹಿ ಮಾಡುತ್ತ ಮಾಡುತ್ತ ಪುಟದಂಚಿಗೆ

ಸರಿದ ನೌಕರ ದಫ್ತರಗಳ ತಿರುವುತ್ತ

ಮಗುಚುತ್ತ ಸರಿದು ಹೋಗುತ್ತಾನೆ

ಕೈ ಸೇರಿದ ಹಾರ ತುರಾಯಿಗಳ

ಹೊತ್ತು ಪೇಲವ ನಗೆ ಹೊತ್ತು

ಯಾರೋ ಸೀಟಿ ಊದಿ ಕೂಗುತ್ತಾರೆ

ಆಟ ಮುಗಿದಿದೆ

ಹೌದು ಹೊತ್ತು ಕಂತಿ ಪುಟ ಮುಗಿಯುತ್ತದೆ

ಗೆರೆಗುಂಟ ಒಂಟಿ ನಡೆದೆವೆ ನಾವು

ಇವಳೇ, ಒಮ್ಮೆ ಕೈಚಾಚಿಬಿಡು

ಗೆರೆಗಳು ಕಳೆದ ಪುಟಕ್ಕೆ ಸರಿಯುವ ಮೊದಲು

ಒಮ್ಮೆ ಕೈ ಕೈ ಹಿಡಿದು ಕೂಡಿಬಿಡೋಣ

ಈಗ ಲೇಖನಿಯ ಷರಾ ಏನಿದೆಯೋ

ಯಾರಿಗೆ ಗೊತ್ತು

ಡಾ.ಗೋವಿಂದ ಹೆಗಡೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ