ಅವಳ ವಯಸ್ಸು ಈ ಜೂನ್ ತಿಂಗಳಿಗೆ ಹದಿನೈದು ತುಂಬಿ ಹದಿನಾರಕ್ಕೆ ಬಿದ್ದಿದೆ. ಮೆಟ್ರಿಕ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೆಯ ರಾರಯಂಕ್ ಪಡೆದು ಪಾಸಾಗಿದ್ದಾಳೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸೈನ್ಸ್ ಓದಲು ಸೀಟು ಸಿಕ್ಕಿದೆ. ಮಗಳ ಸಾಧನೆಯಿಂದ ಖುಷಿಗೊಂಡ ತಂದೆ, ಕಂಡ ಕಂಡವರಿಗೆ ಚಹಾ ಕುಡಿಸುತ್ತ ತನ್ನ ಮಗಳ ಸಾಧನೆಯನ್ನು ಅಭಿಮಾನದಿಂದ ಬಂಧುಮಿತ್ರರಿಗೆ ಹೇಳುತ್ತ ಹೆಮ್ಮೆಪಡುತ್ತಿದ್ದಾನೆ. ಅವಳು ಕಾಲೇಜು ಕಲಿಯಲು ಬೆಂಗಳೂರಿಗೆ ಹೋಗುತ್ತಿದ್ದಾಳೆ. ಅವಳ ಇಚ್ಛೆಯಂತೆ ಒಂದು ಲ್ಯಾಪ್ಟಾಪ್ ಕೊಡಿಸಲಾಗದಿದ್ದರೂ ಮೊಬೈಲ್ ಆದರು ಕೊಡಿಸಬೇಕೆಂದು ಒಂದು ಮೊಬೈಲ್ ಕೊಡಿಸಿದ. ತನ್ನ ಮಗಳು ಯಾವುದೇ ಟ್ಯೂಷನ್ ಕ್ಲಾಸ್ಗೆ ಹೋಗದಿದ್ದರೂ ಟ್ಯೂಷನ್ ಸಂಸ್ಥೆಗಳು ಮನೆಗೆ ಬಂದು ಗಿಫ್ಟು, ಹಣ್ಣು ಕೊಟ್ಟು, ಶಾಲು ಹೊದೆಸಿ ಸನ್ಮಾನ ಮಾಡಿ, ಫೋಟೋ ತೆಗೆಸಿಕೊಂಡು ಅವಳು ತಮ್ಮ ಸಂಸ್ಥೆಯಿಂದಲೇ ರಾರಯಂಕ್ ಪಡೆದಳು ಎಂಬಂತೆ ವಿಷಯವನ್ನು ಅವಳ ಪೋಟೋ, ಮೊಬೈಲ್ ನಂಬರ್ ಸಹಿತ ಪತ್ರಿಕೆಯಲ್ಲಿ ಪ್ರಕಟಿಸುತ್ತಿವೆ. ಅವಳಿಗೋ ಫೋನ್ ಮೇಲೆ ಫೋನ್. ಅಭಿನಂದನೆಯ ಕರೆಗಳು. ಖುಷಿಯೋ ಖುಷಿ.
ಮಂತ್ರಿಯ ಮಗ ಎಂದು ಹೇಳಿಕೊಂಡ ಹುಡುಗನೊಬ್ಬ ಅವಳಿಗೆ ಕರೆ ಮಾಡಿ ಅಭಿನಂಧನೆ ಸಲ್ಲಿಸಿ, ಒಂದು ಲ್ಯಾಪ್ಟಾಪ್ನ್ನು ಗಿಫ್ಟ್ ಎಂದು ಕಳುಹಿಸಿ ಕೊಡುತ್ತಾನೆ. ವ್ಯಾಟ್ಸಾಪ್, ಫೇಸ್ಬುಕ್, ಟ್ವಿಟರ್, ಚಾಟಿಂಗ್ ಮಾಡುತ್ತ ಅವನ ನೆಟ್ನಲ್ಲಿ ಕರಗಿ ಹೋಗುತ್ತಾಳೆ. ವಯಸ್ಸು ಹದಿನಾರು ಮುಗಿದಿಲ್ಲ. ಮಗಳು ವಾಂತಿ ಮಾಡಿಕೊಳ್ಳುತ್ತಿದ್ದಾಳೆ! ಹಗಲು ರಾತ್ರಿ ಓದಿ ರಾರಯಂಕ್ ಪಡೆದ ಮಗಳ ಕೋಣೆಯ ಫ್ಯಾನಿಗೆ ಅಪ್ಪನ ದೇಹ ನೇತಾಡುತ್ತಿದೆ.
-------------------------
ಮೋಡಕಾ ಮಾಲು
'ಭಾಳ ಅಂದ್ರ ಇವಿಷ್ಟೂ ಸಾಮಾನಕ್ಕ ನಾಲ್ವತ್ತ ರೂಪಾಯ ಅಕ್ಕೈತಿ. ನೀವು ಸುಮ್ಮನ ಚೌಕಾಸಿ ಮಾಡಬ್ಯಾಡ್ರಿ' ಎಂದು ಬಾಂಢೆ ಮಾರುವ ಯಲ್ಲೂಸಾ ಗಿರಾಕಿಯೊಂದಿಗೆ ವ್ಯಾಪಾರ ನಡೆಸಿದ್ದ. ಅವಳು ನೋಡಲು ತುಂಬ ಹೈಫೈಯಾಗಿ ಟಾಕುಠೀಕಾಗಿ ಕಾಣುತ್ತಿದ್ದಳು. ಅಂಥವಳು ಮುಚ್ಚಿದ ಚೀಲದಲ್ಲಿ ಮುರುಕು ಸೌಟು, ಕುಕ್ಕರಿನ ಒಡಕು ಮುಚ್ಚಳ, ಹಾಳಾದ ತುರೆಮಣಿ, ಸುಟ್ಟ ಬ್ಯಾಟರಿ ಶೆಲ್ಗಳು, ಟ್ಯೂಬ್ ಲೈಟ್ನ ಚೋಕ್, ತುಕ್ಕು ಹಿಡಿದ ಸಣ್ಣಪುಟ್ಟ ತಗಡಿನ ಡಬ್ಬಗಳು, ನೆಗ್ಗಿ ನುಗ್ಗೆಕಾಯಿಯಾದ ತಂಬಿಗೆ ತಾಟು ಲೋಟಗಳು, ಸೊಟ್ಟಗಾದ ಚಕ್ಕುಲಿ ಒತ್ತಾಳ್ ಹೀಗೆ ಎಣಿಕೆಗೆ ಸಿಗದಷ್ಟು ಮೋಡಕಾ ಸಾಮಾನುಗಳನ್ನು ತುಂಬಿಕೊಂಡು ಬಂದಿದ್ದಳು. ಅಂಗಡಿಗೆ ಬೇರೆ ಗಿರಾಕಿಗಳು ಬರುತ್ತಿದ್ದಂತೆ ಸರಕ್ಕನೆ ಆ ಮೋಡಕಾ ಸಾಮಾನುಗಳನ್ನು ತನ್ನ ಸೆರಗಿನಿಂದ ಮುಚ್ಚಿ ಸುಮ್ಮನೆ ಕುಳಿತು ಬಿಡುತ್ತಿದ್ದಳು. ಗಿರಾಕಿಗಳು ಹೋಗಿ ಅಂಗಡಿಯಲ್ಲಿ ಯಾರು ಇಲ್ಲ ಎಂದು ಖಾತ್ರಿಯಾಗುತ್ತಿದ್ದಂತೆ ಮತ್ತೆ ತನ್ನ ಸೆರಗು ಸರಿಸಿ... ಮಾಲನ್ನು ಹೊರಗೆ ಹಾಕಿ ಚೌಕಾಸಿಗೆ ನಿಲ್ಲುತ್ತಿದ್ದಳು.
ಈತನಿಗೆ ಅವಳು ತಂದ ಗುಜರಿ ಮಾಲಿಗಿಂತ ಅವಳೊಂದಿಗೆ ಮಾತನಾಡುತ್ತ ಸಲುಗೆ, ಸ್ನೇಹ ಇತ್ಯಾದಿ ಇತ್ಯಾದಿ ಬೆಳೆಸಬೇಕೆಂಬ ಕಾತರ ಕಣ್ಣಲ್ಲಿ ಕಾಡುತ್ತಿತ್ತು. ಅವಳಿಗೋ ತನ್ನ ಒನಪು ವೈಯಾರದಿಂದಲೇ ಇವನನ್ನು ಮರಳು ಮಾಡಿ ಗುಜರಿ ಮಾಲನ್ನು ತಳ್ಳಿ ನಾಲ್ಕು ಕಾಸು ಮಾಡಿಕೊಳ್ಳಬೇಕೆಂಬ ತವಕ. ಅಷ್ಟರಲ್ಲಿ ಯಲ್ಲೂಸಾನ ತಂದೆ ಹಬೀಬ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಕರಿಬೆಕ್ಕು ಬಂದಹಾಗೆ ಅಂಗಡಿಯ ಒಳಗೆ ಬಂದುಬಿಟ್ಟ...
---------------------
ಪಾಲಿಕೆ ಬಕೆಟ್
ಸಮಯ ಬೆಳಗಿನ ನಾಲ್ಕು ಗಂಟೆ ಎಂದು ಗಡಿಯಾರ ಕಾಗೆಯಂತೆ ಕರ್ರ್ ಎಂದು ಅಲಾರಾಮ್ ಹೊಡೆದು ಹೇಳುತ್ತಿತ್ತು. ಅದರ ನೆತ್ತಿಯ ಮೇಲೆ ಕುಕ್ಕಿ ಬಾತ್ರೂಂನೊಳಗೆ ಹೊಕ್ಕೆ. ಮೈ ಕೊರೆಯುವ ಮಾಗಿಯ ಚಳಿ ಬಿಸಿನೀರಿಗೆ ಆವಿಯಾಗಿ ಕಿಟಕಿಯಿಂದ ಹೊರಗೆ ಓಡುತ್ತಿತ್ತು. ಹೊಟ್ಟೆಯೊಳಗಿನ ಕರುಳು ಚಳಿಗೆ ಮುರುಟಿದಂತೆ ಆಗುತ್ತಿತ್ತು. ಬಿಸಿಬಿಸಿಯಾದ ಉಪ್ಪಿಟ್ಟು ಕಾಫಿ ಹೊಟ್ಟೆಗೆ ಬೀಳುವಷ್ಟರಲ್ಲಿ ಸಮಯ ಆರು ಗಂಟೆ. ಕೆಲಸವೆಂಬ ನಾಯಿ ಬೆನ್ನ ಹಿಂದೆ ನಿಂತು ಬೊಗಳುತ್ತಿತ್ತು.
ಲಗುಬಗೆಯಿಂದ ಕೆಲಸ ಮುಗಿಸಿಕೊಂಡು ಡಬ್ಬಿಗೆ ಒಂದಿಷ್ಟು ಚಿತ್ರಾನ್ನ ತುಂಬಿಸಿಕೊಂಡು, ಕೈಯಲ್ಲಿ ಕಸ ತುಂಬಿದ ಪ್ಲಾಸ್ಟಿಕ್ ಚೀಲ ಹಿಡಿದು ಬಾಗಿಲು ತೆಗೆದು ಹೊರಗೆ ಹೆಜ್ಜೆ ಇಡುತ್ತೇನೆ, ಬಾಗಿಲ ಮುಂದೆಯೇ ಹೊಚ್ಚ ಹೊಸ ಹಸಿರು ಬಕೆಟ್ ಬಂದು ಕುಳಿತಿತ್ತು! ಇದನ್ನು ಯಾರು ತಂದಿಟ್ಟಿರಬಹುದು ಎಂದು ದಿಗಿಲಾಗಿ ಯೋಚಿಸುವಷ್ಟರಲ್ಲಿ ಪಕ್ಕದ ಮನೆಯವರು 'ಇನ್ನು ಮೇಲೆ ಕಸವನ್ನು ಬೀದಿಯಲ್ಲಿ ಬಿಸಾಡುವಂತಿಲ್ಲ. ಪಾಲಿಕೆಯ ಬಕೆಟ್ನಲ್ಲಿಯೇ ಹಾಕಬೇಕು. ಪ್ರತಿದಿನ ಕಾಪೊರ್ರೇಷನ್ನವರು ಬಂದು ಕಲೆಕ್ಟ್ ಮಾಡುತ್ತಾರೆ' ಎಂದು ಹೇಳಿದರು. ಆಹಾ..! ಎಂತಹ ಒಳ್ಳೆಯ ಸುದ್ದಿ!! ಸದ್ಯ ಒಂದು ಕೆಲಸವಾದರೂ ಕಡಿಮೆಯಾಯಿತಲ್ಲ. 'ಅಚ್ಛೆ ದಿನ್' ಬಾಗಿಲಿಗೇ ಬಂದದ್ದಕ್ಕಾಗಿ ಖುಷಿಯಾಯಿತು.
- ಡಾ. ಮಲ್ಲಿಕಾರ್ಜುನ ಗುಮ್ಮಗೋಳ
ಧಿಧಿ