ಆ್ಯಪ್ನಗರ

ಹಬ್ಬಕ್ಕೆ ಪಾಸಿಟಿವ್‌ ಎನರ್ಜಿ ನೀಡುವ ಮನೆ ಅಲಂಕಾರ

ಹೊಸ ಸಂವತ್ಸರವನ್ನು ಸ್ವಾಗತಿಸಲು ಮನೆಯ ವಾತಾವರಣ ಆಹ್ಲಾದಕರವಾಗಿರಬೇಕು. ಮನೆಯಲ್ಲಿ ಧನಾತ್ಮಕ ಶಕ್ತಿ ಎಲ್ಲೆಡೆ ಪ್ರಸರಿಸಲು ಮನೆಯನ್ನು ಶುಚಿಗೊಳಿಸಿ ಸುಂದರವಾಗಿ ಅಲಂಕರಿಸಬೇಕು.

Vijaya Karnataka Web 31 Mar 2019, 3:48 pm
ಯುಗಾದಿಯು ಮನೆಮಂದಿಯೆಲ್ಲಾ ಸಂಭ್ರಮ ಸಡಗರಿಂದ ಆಚರಿಸುವ ಹಬ್ಬ. ಸುಖ, ಸಂತೋಷ, ಶಾಂತಿ, ನೆಮ್ಮದಿ ವರ್ಷ ಪೂರ್ತಿ ಇರಲಿ ಎಂದು ನೂತನ ಸಂವತ್ಸರವನ್ನು ಬರಮಾಡಿಕೊಳ್ಳುವ ಸಂತಸದ ದಿನ. ಮನೆಯ ಮುಂಬಾಗಿಲು, ಪೂಜಾಕೋಣೆ, ಮನೆಯಂಗಳವನ್ನು ಸ್ವಚ್ಛಗೊಳಿಸಿ ಸಿಂಗರಿಸಿದರೆ ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸಬಹುದು.
Vijaya Karnataka Web Ugadi


ಬಾಗಿಲಿಗೆ ಹಸಿರು ತೋರಣ
ಹಸಿರು ಸಮೃದ್ಧಿಯ ಸಂಕೇತ. ಮಾವು ಮತ್ತು ಬೇವಿನ ಎಲೆಗಳನ್ನು ಪವಿತ್ರ ಮತ್ತು ಶುದ್ಧವೆಂದು ಪರಗಣಿಸಲಾಗುತ್ತದೆ. ಅವು ಮನೆಗೆ ಸಕಾರಾತ್ಮಕ ಶಕ್ತಿ ನೀಡುತ್ತದೆ ಎಂಬ ನಂಬಿಕೆ ಇದೆ. ಮುಂಬಾಗಿಲಿಗೆ ಮಾವಿನ ಎಲೆಯ ತೋರಣ ಮಾಡಿ ಕಟ್ಟಿ ಬಾಗಿಲ ಎರಡೂ ತುದಿಗೂ ಬೇವಿನ ಸೊಪ್ಪಿನ ಗೊಂಚಲನ್ನು ಸಿಕ್ಕಿಸಿ ಅಲಂಕರಿಸಬಹುದು.

ಕೇವಲ ಮುಂಬಾಗಿಲಿಗೆ ಮಾತ್ರವಲ್ಲ, ಮನೆಯ ಎಲ್ಲಾ ಬಾಗಿಲುಗಳನ್ನು ಹಸಿರು ತೋರಣಗಳಿಂದ ಸಿಂಗರಿಸಬಹುದು. ಇದರಿಂದ ಸಂಪೂರ್ಣ ಮನೆಯನ್ನು ಹಸಿರುಮಯವಾಗಿಸಬಹುದು. ತೋರಣಕ್ಕೆ ಸೇವಂತಿಗೆ, ಚೆಂಡುಹೂವು, ಗುಲಾಬಿ ಹೂವಿನ ಸುಂದರ ಮಾಲೆ ಅಥವಾ ದಿಂಡನ್ನು ಹಾಕಿ ಕ್ರಿಯಾತ್ಮಕವಾಗಿ ಶೃಂಗರಿಸಿ ಅಥವಾ ಮಾಲೆಗಳನ್ನು ಬಾಗಿಲ ಎರಡೂ ಬದಿ ತೂಗು ಹಾಕಿ ಬಾಗಿಲ ಅಂದವನ್ನು ಮತ್ತಷ್ಟು ಹೆಚ್ಚಿಸಬಹುದು.

ಮನೆಯ ಮುಂದೆ ಇರಲಿ ಬಣ್ಣದ ರಂಗೋಲಿ
ರಂಗೋಲಿಯಲ್ಲಿ ರಂಗನಾಥ ನೆಲೆಸಿರುತ್ತಾನೆ ಎಂಬ ಭಾವನೆ ಇದೆ. ಮನೆಯ ಮುಂಭಾಗವನ್ನು ಶುಚಿಗೊಳಿಸಿ ಹಸನು ಮಾಡಿ ಸುಂದರ ರಂಗೋಲಿ ಬಿಡಿಸಿ. ಅದನ್ನು ಬಣ್ಣ ಬಣ್ಣದ ಹೂವಿನಿಂದ ಅಥವಾ ಬಣ್ಣ ಬಣ್ಣದ ರಂಗೋಲಿ ಪುಡಿಗಳಿಂದ ಡೆಕೋರ್‌ ಮಾಡಿದರೆ ಹಬ್ಬದ ಕಳೆ ಬಾಗಿಲ ಮುಂದೆಯೇ ಕಾಣುತ್ತದೆ. ರಂಗೋಲಿಯ ಚಿತ್ತಾರ ಮನೆಮಂದಿಯ ಮತ್ತು ಹಬ್ಬದಕ್ಕೆ ಬರುವ ಅತಿಥಿ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ.

ಘಮಘಮಿಸುವ ದೇವರ ಕೋಣೆ
ಮನೆಯ ಮುಖ್ಯ ಸ್ಥಾನ ದೇವರ ಕೋಣೆ. ದೇವರ ಕೋಣೆಯನ್ನು ಮತ್ತು ಬಾಗಿಲನ್ನು ಸಂಪೂರ್ಣವಾಗಿ ಶುಚಿಗೊಳಿಸಬೇಕು. ಬಾಗಿಲನ್ನು ಹಿತ್ತಾಳೆಯ ಸಣ್ಣ ಸಣ್ಣ ಗಂಟೆಗಳ ಮಾಲೆಗಳಿಂದ ಅಲಂಕರಿಸಿ. ಹಿತ್ತಾಳೆಯನ್ನು ಪವಿತ್ರ ಮತ್ತು ಅದೃಷ್ಟದ ಸಂಕೇತ ಎನ್ನಲಾಗುತ್ತದೆ. ದೇವರ ಕೋಣೆ ಬಾಗಿಲಿಗೆ ಹಸಿರು ತೋರಣ ಕಟ್ಟೆ ಹೂವಿನ ಹಾರಗಳಿಂದ ಅಲಂಕರಿಸಿ.

ಘಮಘಮಿಸುವ ಮಲ್ಲಿಗೆ ಹೂವಿನ ಮಾಲೆಯಿಂದ ಅಥವಾ ದಿಂಡಿನಿಂದ ದೇವರನ್ನು ಅಲಂಕರಿಸಿ. ಹೂವಿನ ಪರಿಮಳೆ ದೇವರ ಕೋಣೆ ಮಾತ್ರವಲ್ಲದೇ ಇಡೀ ಮನೆಯನ್ನೇ ಸುವಾಸಿತ ಭರಿತಗೊಳಿಸುತ್ತದೆ. ದೇವರ ಮುಂದೆ ಕೂಡ ಹೂವಿನ ರಂಗೋಲಿ ಬಿಡಿಸಿ ಚಂದಗೊಳಿಸಬಹುದು.

ಯುಗಾದಿ ನಮಗೆ ಹೊಸ ವರುಷ. ಹಿಂದಿನಿಂದಲೂ ನಡೆದು ಬಂದಂತಹ ಸಂಪ್ರದಾಯವನ್ನು ತಪ್ಪದೇ ಪಾಲಿಸುತ್ತೇನೆ. ಒಂದು ವಾರ ಮುಂಚಿತವಾಗಿಯೇ ಮನೆಯ ಪ್ರತಿ ಜಾಗವನ್ನು ಶುದ್ಧಗೊಳಿಸಲು ಆರಂಭಿಸುತ್ತೇನೆ. ಹಬ್ಬದ ದಿನದಂದು ಮನೆಯ ಮುಂಭಾಗ, ದೇವರಕೋಣೆ, ಬೃಂದಾವನಗಳನ್ನು ತಾಜಾ ಹೂವಿನಿಂದ ಅಲಂಕರಿಸುತ್ತೇನೆ.
ರಜನಿ, ಗೃಹಿಣಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ