ಆ್ಯಪ್ನಗರ

ಮಳೆಗಾಲದಲ್ಲಿ ಕೂದಲಿನ ಆರೈಕೆ ಹೀಗಿರಲಿ

ಮಳೆಗಾಲದಲ್ಲಿ ಕೂದಲು ಒದ್ದೆಯಾಗಿ ಸರಿಯಾಗಿ ಒಣಗದೆ ಇದ್ದರೆ ಕೂದಲಿನ ಸಮಸ್ಯೆ ಪ್ರಾರಂಭವಾಗುವುದು, ಆದ್ದರಿಂದ ಮಳೆಗಾಲದಲ್ಲಿ ಕೂದಲಿನ ಆರೈಕೆ ಕಡೆ ಹೆಚ್ಚಿನ ಗಮನ ಕೊಡಬೇಕು, ಇಲ್ಲಿ ಕೆಲ ಟಿಪ್ಸ್ ನೀಡಿದ್ದೇವೆ ನೋಡಿ.

Vijaya Karnataka 10 Jul 2019, 3:24 pm
ಮಾನ್ಸೂನ್‌ ಸಮಯದಲ್ಲಿ ವಾತಾವರಣದಲ್ಲಿರುವ ತೇವಾಂಶ ಕೂದಲು ಮತ್ತು ತಲೆಯ ಚರ್ಮಕ್ಕೆ ಹಲವು ರೀತಿಯ ತೊಂದರೆಗಳನ್ನು ಉಂಟು ಮಾಡುತ್ತದೆ. ವಾತಾವರಣದಲ್ಲಿ ಉಷ್ಣಾಂಶದ ಜತೆಗೆ ತೇವಾಂಶ ಕೂಡ ಸೇರಿಕೊಳ್ಳುವುದರಿಂದ ಚರ್ಮದ ಮೇಲೆ ಜಿಡ್ಡು ಹೆಚ್ಚಾಗುತ್ತದೆ. ಇದರಿಂದ ಕೂದಲ ಬಲ ಕಳೆದುಕೊಳ್ಳುವುದರ ಜತೆಗೆ ತಲೆ ಹೊಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಕೂದಲು ಉದುರುವಿಕೆ ಮತ್ತು ಒರಟಾಗುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ಈ ರೀತಿಯ ವಾತಾವರಣದಲ್ಲಿ ನಿಮ್ಮ ಕೂದಲಿಗೆ ಆರೈಕೆ ಅಗತ್ಯ.
Vijaya Karnataka Web rainy hair care


ಮಳೆಗಾಲದಲ್ಲೂ ನಾವು ಹೆಚ್ಚ್ಚು ನೀರು ಕುಡಿಯುವ ಮೂಲಕ ನಮ್ಮ ದೇಹಕ್ಕೆ ಹೆಚ್ಚಿನ ನೀರಿನ ಅಂಶ ಲಭ್ಯವಾಗುವಂತೆ ನೋಡಿಕೊಳ್ಳಬೇಕು.

ಮಳೆಗಾಲದಲ್ಲಿ ಸಾಮಾನ್ಯವಾಗಿ ಕರಿದ ಪದಾರ್ಥಗಳು ಮತ್ತು ಆರೋಗ್ಯಕರವಲ್ಲದ ಜಂಕ್‌ಫುಡ್‌ಗಳನ್ನು ತಿನ್ನುವ ಕಡೆಗೆ ಮನಸ್ಸು ಸೆಳೆಯಲಾರಂಭಿಸುತ್ತದೆ. ಆದರೆ ಇದನ್ನು ಆದಷ್ಟೂ ತಡೆಯಬೇಕು. ಏಕೆಂದರೆ ಕೂದಲಿನ ಆರೋಗ್ಯವು ನಮ್ಮ ಆಹಾರ ಕ್ರಮವನ್ನೂ ಅನುಸರಿಸಿರುತ್ತದೆ.

ನಮ್ಮ ದಿನನಿತ್ಯದ ಆಹಾರದಲ್ಲಿ ಪ್ರೊಟೀನ್‌ ಅಂಶ ಹೆಚ್ಚಿರುವಂತಹ ಮೊಟ್ಟೆ, ವಾಲ್‌ನಟ್‌, ಕಡಿಮೆ ಕೊಬ್ಬಿನ ಅಂಶ ಇರುವಂತಹ ಡೈರಿ ಪದಾರ್ಥಗಳು, ದವಸ ಧಾನ್ಯಗಳ ಜತೆಗೆ ಹಸಿರು ತರಕಾರಿಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು.

ಮಳೆಯಲ್ಲಿ ನಿಮ್ಮ ಕೂದಲು ಒದ್ದೆಯಾಗದಂತೆ ನೋಡಿಕೊಳ್ಳಿ. ಮಳೆ ನೀರಿನಲ್ಲಿ ಸಾಮಾನ್ಯವಾಗಿ ಆಸಿಡಿಕ್‌ ಅಂಶವಿರುವುದರಿಂದ ಇದು ನಿಮ್ಮ ಕೂದಲನ್ನು ದುರ್ಬಲವನ್ನಾಗಿಸಿ ಕಳೆಗುಂದಿದಂತೆ ಮಾಡುತ್ತದೆ. ಮಳೆಯಲ್ಲಿ ನೆನೆದ ಸಂದರ್ಭದಲ್ಲಿ ಕೂದಲನ್ನು ಒಣಗಿಸುವಾಗ ಮೈಕ್ರೋ ಫೈಬರ್‌ ಟವೆಲ್‌ ಬಳಕೆ ಮಾಡುವುದು ಉತ್ತಮ.

ಮಳೆಯಲ್ಲಿ ನೆನೆದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಕೂದಲನ್ನು ಗಂಟು ಹಾಕಲು ಹೋಗಬೇಡಿ. ಇದರಿಂದ ಕೂದಲು ನೀರನ್ನು ಹೀರಿಕೊಳ್ಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಕೂದಲು ಬಹುಬೇಗ ಹಾಳಾಗುತ್ತದೆ.

ಮಳೆ ನೀರಿನಲ್ಲಿ ಒದ್ದೆಯಾಗಿ ದುರ್ಬಲಗೊಂಡಿರುವ ಕೂದಲನ್ನು ಬಾಚುವುದನ್ನೂ ಮೊದಲು ತಪ್ಪಿಸಬೇಕು. ಬಾಚುವುದೇ ಆದರೆ ಅಗಲವಾದ ಮುಳ್ಳುಗಳನ್ನು ಹೊಂದಿರುವ ಬಾಚಣಿಗೆಯಲ್ಲಿ ಕೂದಲು ಬಿರುಕಾಗದಂತೆ ಎಚ್ಚರಿಕೆ ವಹಿಸಿ.

ಫಂಗಲ್‌ ಇನ್‌ಫೆಕ್ಷ ನ್‌ ಆಗದಂತೆ ತಡೆಯಲು ಮೊದಲು ಬಾಚಣಿಗೆಯನ್ನು ಹಂಚಿಕೊಳ್ಳುವುದನ್ನು ಬಿಡಬೇಕು. ಎಣ್ಣೆ ಹಚ್ಚಿ ಮಸಾಜ್‌ ಮಾಡುವುದು ಮತ್ತು ತೊಳೆಯುವುದು ಮುಖ್ಯ.

ಎಣ್ಣೆ ಹಚ್ಚಿ ಮಸಾಜ್‌ ಮಾಡುವುದು ನಿಮ್ಮ ಕೂದಲಿಗೆ ಅತ್ಯಂತ ಅಗತ್ಯ. ಇದರಿಂದ ನಿಮ್ಮ ಕೂದಲಿಗೆ ಬೇಕಾದ ಪೋಷಣೆ ಲಭ್ಯವಾಗುತ್ತದೆ. ಈ ಮೂಲಕ ಕೂದಲು ಬಲಿಷ್ಠವಾಗುತ್ತದೆ. ವಾರದಲ್ಲಿ ಎರಡು ದಿನ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡುವುದರಿಂದ ಹೊಳಪು ಹೆಚ್ಚುತ್ತದೆ.

ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ಸಾಮಾನ್ಯವಾಗಿ ಧೂಳು ನಿಮ್ಮ ಕೂದಲನ್ನು ಸೇರಿರುತ್ತದೆ. ಇದರಿಂದ ನಿಮ್ಮ ಕೂದಲು ಕಾಂತಿ ಕಳೆದುಕೊಂಡಿರುತ್ತದೆ. ಮೃದು ಶಾಂಪೂ ಬಳಸಿ ವಾರಕ್ಕೆ ಎರಡು ಬಾರಿ ತಲೆ ಕೂದಲನ್ನು ತೊಳೆಯುವುದು ಉತ್ತಮ.

ಮೆಂತ್ಯವನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಹಾಕಿ. ಆ ನೀರಿನಲ್ಲಿ ನಿಮ್ಮ ಕೂದಲನ್ನು ಮರುದಿನ ತೊಳೆದರೆ ಬಲಿಷ್ಠವಾದ ಮತ್ತು ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ. ಮಳೆಗಾಲದಲ್ಲಿ ಕೂದಲಿಗೆ ಹೊಳಪು ನೀಡುವುದರ ಜತೆಗೆ ಉದುರುವಿಕೆಯನ್ನೂ ತಡೆಯುತ್ತದೆ.

ಮಳೆಗಾಲದಲ್ಲಿ ನಮ್ಮ ತಲೆಯ ಚರ್ಮದಲ್ಲಿ ಹೊಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಾಗಿ ಅರಿಶಿನ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳುವುದರಿಂದ ತಲೆ ಹೊಟ್ಟಿನ ಸಮಸ್ಯೆ ದೂರವಾಗುತ್ತದೆ. ಇದು ಎಲ್ಲ ರೀತಿಯ ಸೋಂಕುಗಳಿಂದಲೂ ರಕ್ಷಿಸುತ್ತದೆ. ವಿಟಮಿನ್‌ ಸಿ ನಿಮ್ಮ ತಲೆಯ ಚರ್ಮ ಭಾಗವನ್ನು ಆರೋಗ್ಯಕರವಾಗಿ ಇಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ