ಆ್ಯಪ್ನಗರ

ಮಗುವಿಗೆ ಹಾಲೂಣಿಸುವ ತಾಯಿಗೆ ತಿಳಿದಿರಲಿ

ಮಗು ಹುಟ್ಟಿದ ಆರು ತಿಂಗಳವರಿಗೆ ಕಡ್ಡಾಯವಾಗಿ ಎದೆಹಾಲನ್ನು ಮಾತ್ರ ನೀಡಬೇಕು. ಏಕೆಂದರೆ ಈ ಹಂತದಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.

Vijaya Karnataka 3 Aug 2019, 5:00 am
*ಡಾ. ಶಿವಶಂಕರಪ್ರಸಾದ ಎಸ್‌. ದೇವಲಾಪುರ
Vijaya Karnataka Web breastfeeding week 2019
ಮಗುವಿಗೆ ಹಾಲೂಣಿಸುವ ತಾಯಿಗೆ ತಿಳಿದಿರಲಿ



ಮಗು ಹುಟ್ಟಿದ ಆರು ತಿಂಗಳವರಿಗೆ ಕಡ್ಡಾಯವಾಗಿ ಎದೆಹಾಲನ್ನು ಮಾತ್ರ ನೀಡಬೇಕು. ಏಕೆಂದರೆ ಈ ಹಂತದಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.

ತಾಯಿಯ ಎದೆ ಹಾಲಿನಲ್ಲಿರುವ ಪ್ರೊಟೀನ್‌ ಮಗುವಿನ ಮಿದುಳು ಬೆಳವಣಿಗೆಗೆ ಸಹಕಾರಿ. ಇದರಲ್ಲಿರುವ ಕೊಬ್ಬಿನ ಅಂಶವು ಮಗುವಿನ ನರಮಂಡಲ ವ್ಯವಸ್ಥೆ ಅಭಿವೃದ್ಧಿಯಾಗಲು ಸಹಾಯಕ. ಇದರಿಂದ ಭವಿಷ್ಯದಲ್ಲಿ ಶರೀರದಲ್ಲಿ ಉಂಟಾಗುವ ರಕ್ತನಾಳಕ್ಕೆ ಸಂಬಂಧಪಟ್ಟ ರೋಗಗಳ ವಿರುದ್ಧ ಹೋರಾಡಲು ಸಹಾಯಕ. ರಕ್ತಹೀನತೆ, ಅಲರ್ಜಿ, ರಿಕೆಟ್ಸ್‌, ಭೇದಿ, ಉಸಿರಾಟ ಸಮಸ್ಯೆ, ಕಾಮಾಲೆ, ಅಧಿಕ ರಕ್ತದೊತ್ತಡ, ಹೃದ್ರೋಗ ಹಾಗೂ ಜಠರ ರೋಗಗಳನ್ನು ತಡೆಗಟ್ಟಬಹುದು. ತಾಯಿಯ ಹಾಲನ್ನು ಯಥೇಚ್ಛವಾಗಿ ಕುಡಿದ ಮಗುವಿನ ಬುದ್ಧಿಮಟ್ಟವು ಹೆಚ್ಚಾಗಿರುತ್ತದೆ. ಪ್ರಸವ ಪೂರ್ವ ಹೆರಿಗೆಯಾದ ತಾಯಿಯ ಎದೆ ಹಾಲಿನಲ್ಲಿ ಶಕ್ತಿ, ಪ್ರೊಟೀನ್‌, ಕೊಬ್ಬು, ಸೋಡಿಯಂ ಹಾಗೂ ಝಿಂಕ್‌ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ.

ತಾಯಿಗೆ ಲಾಭಗಳು
ಗರ್ಭಧಾರಣೆ ತಡೆಗಟ್ಟಲು ಸಹಾಯಕ. ಸ್ತನ ಹಾಗೂ ಅಂಡಾಣುವಿನ ಕ್ಯಾನ್ಸರ್‌ನಿಂದ ರಕ್ಷ ಣೆ ನೀಡುತ್ತದೆ. ತಾಯಿ ಹಾಗೂ ಮಗುವಿನ ನಡುವೆ ಒಳ್ಳೆಯ ಸಂಬಂಧ ಏರ್ಪಡುತ್ತದೆ. ಮಗುವಿಗೆ ಎದೆ ಹಾಲು ನೀಡುವುದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ. ತಾಯಿಯ ಗರ್ಭಕೋಶ ಸಂಕುಚಿತಗೊಂಡು ಮಾಸು ಹೊರಬರಲು ಸಹಾಯಕ. ತಾಯಿಯ ಶರೀರದ ಕೊಬ್ಬಿನಂಶ ಕರಗಿ ತಾಯಿಯ ಸೌಂದರ್ಯ ಹೆಚ್ಚುತ್ತದೆ.

ತಿಳಿದಿರಲಿ
ಹಾಲೂಣಿಸುವ ವಿಧಾನದ ಬಗ್ಗೆ ಮೊದಲ ಬಾರಿಗೆ ತಾಯಿಯಾದವರಲ್ಲಿ ಗೊಂದಲ ಇರುತ್ತದೆ. ಆದ್ದರಿಂದ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ತಾಯಿಯ ಆತ್ಮವಿಶ್ವಾಸವೇ ಹೆಚ್ಚು ಹಾಲು ಉತ್ಪತ್ತಿಯಾಗಲು ಕಾರಣವಾಗುತ್ತದೆ. ಪ್ರತಿ ಬಾರಿ ಎರಡು ಸ್ತನಗಳಿಂದಲೂ ಹಾಲು ಕುಡಿಸಬೇಕು. ಮಗುವಿನ ಗಲ್ಲ ಸ್ತನಕ್ಕೆ ಸ್ಪರ್ಶಿಸಬೇಕು, ಬಾಯಿ ಅಗಲವಾಗಿ ತೆರೆದಿರಬೇಕು, ಕೆಳಗಿನ ತುಟಿ ಹೊರಭಾಗಕ್ಕೆ ಚಾಚಿರಬೇಕು. ಇದರಿಂದ ಮಗುವಿಗೆ ತನ್ನ ನಾಲಿಗೆಯಿಂದ ಹಾಲಿನ ಗ್ರಂಥಿಗಳನ್ನು ಹೀರಿ ಹಾಲು ಬರುವಂತೆ ಮಾಡಲು ಸಹಾಯಕ. ತಾಯಿ ಮಗುವಿಗೆ ಮೇಲಿಂದ ಮೇಲೆ ಹಾಲು ಕುಡಿಸುತ್ತಿರಬೇಕು. ಮಗುವಿಗೆ ಹಸಿವಾದಾಗ ಹಾಗೂ ಕೇಳಿದಾಗ ಹಾಲು ಕೊಡುವುದು ಒಳ್ಳೆಯದು. ಮಗುವಿಗೆ ಹಾಲೂಣಿಸಲು ತಾಯಿಗೆ ಉತ್ತೇಜನ ನೀಡಬೇಕು. ಕೌಟುಂಬಿಕ ಒತ್ತಡಗಳಿಂದಾಗಿ ತಾಯಿಯ ಹಾಲಿನೋತ್ಪತ್ತಿ ಕಡಿಮೆಯಾಗುವ ಸಂಭವವಿರುತ್ತದೆ ಎಂಬ ಅಂಶ ತಿಳಿದಿರಲಿ.

ತಾಯಿಯ ಆಹಾರ ಸೇವನೆ
ತಾಯಿಯು ಮಧುರ, ಆಮ್ಲ ಹಾಗೂ ಲವಣರಸಾತ್ಮಕ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಬೆಳ್ಳುಳ್ಳಿ, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಬಾದಾಮಿ, ತುಪ್ಪ, ಮೆಂತೆ ಬೀಜ, ಅಳವಿ ಬೀಜ, ಈರುಳ್ಳಿ ಹಾಗೂ ತರಕಾರಿ, ಮೀನು ಮತ್ತು ಮಾಂಸರಸವನ್ನು ಹೇರಳವಾಗಿ ತೆಗೆದುಕೊಳ್ಳಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ