ಆ್ಯಪ್ನಗರ

ಚಳಿಗಾಲದಲ್ಲಿ ಬೆಳಗ್ಗೆ ನೆನೆಸಿಟ್ಟ ಬಾದಾಮಿಗಳನ್ನು ತಿಂದ್ರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!

ಚಳಿಗಾಲದಲ್ಲಿ ಬಾದಾಮಿಯ ಸೇವನೆಯಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಕುಗ್ಗದಂತೆ ಕಾಪಾಡಬಹುದು. ಜೊತೆಗೆ ಜೀರ್ಣಶಕ್ತಿ ಉತ್ತಮಗೊಳ್ಳುವುದನ್ನೂ ಗಮನಿಸಲಾಗಿದೆ.

Vijaya Karnataka Web 27 Dec 2021, 9:56 am
ಬಾದಾಮಿ ದುಬಾರಿಯಾಗಿರುವ ಒಣಫಲವಾದರೂ ಇದರ ಪ್ರಯೋಜನಗಳನ್ನು ಪರಿಗಣಿಸಿದರೆ ನಾವು ಕೊಡುತ್ತಿರುವ ಬೆಲೆ ಕಡಿಮೆ ಎಂದೇ ಹೇಳಬಹುದು. ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಮೆದುಳಿನ ಕ್ಷಮತೆ, ಅರಿವು ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸಲು ನಿತ್ಯವೂ ಬಾದಾಮಿಯನ್ನು ಸೇವಿಸುವಂತೆ, ಅದರಲ್ಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವಂತೆ ತಜ್ಞರು ಸಲಹೆ ಮಾಡುತ್ತಾರೆ.
Vijaya Karnataka Web eating few almonds in morning during winter gives many benefits for health
ಚಳಿಗಾಲದಲ್ಲಿ ಬೆಳಗ್ಗೆ ನೆನೆಸಿಟ್ಟ ಬಾದಾಮಿಗಳನ್ನು ತಿಂದ್ರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!


ಚಳಿಗಾಲದಲ್ಲಿ ಬಾದಾಮಿಯ ಸೇವನೆಯಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಬಲಯುತವಾಗಿರುತ್ತದೆ. ಬಾದಾಮಿಗಳಲ್ಲಿ ಗ್ಲೈಸೆಮಿಕ್ ಲೋಡ್ ಸೊನ್ನೆಯಾಗಿದೆ, ಅಂದರೆ, ತಿಂದ ಬಳಿಕ ರಕ್ತದಲ್ಲಿ ಸಕ್ಕರೆಯ ಮಟ್ಟ ಏರುವ ಸಾಧ್ಯತೆ ಇಲ್ಲವೇ ಇಲ್ಲ.

ಜೊತೆಗೇ ಬಾದಾಮಿಯ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುವುದನ್ನೂ ಗಮನಿಸಲಾಗಿದೆ. ಬಾದಾಮಿಯ ಸೇವನೆಯಿಂದ ಮೆದುಳು ಚುರುಕಾಗುತ್ತದೆ ಎಂದು ತಿಳಿದುಬಂದಿದೆ.

ಬಾದಾಮಿ ತಿನ್ನುವುದರಿಂದ ಮೂಳೆಗಳು ಮತ್ತು ಹಲ್ಲುಗಳು ಕೂಡಾ ಬಲಗೊಳ್ಳುತ್ತವೆ. ಚಳಿಗಾಲದಲ್ಲಿ ಬಾದಾಮಿ ನಿಯಮಿತವಾಗಿ ಸೇವಿಸುವುದರಿಂದ ಲಭಿಸುವ ಪ್ರಯೋಜನಗಳ ಬಗ್ಗೆ ಇಂದಿನ ಲೇಖನದಲ್ಲಿ ವಿವರಿಸಲಾಗಿದೆ, ಬನ್ನಿ, ನೋಡೋಣ:

​ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

  • ಇಂದಿನ ದಿನಗಳಲ್ಲೂ ಮುಂದುವರೆಯುತ್ತಿರುವ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಾದಾಮಿ ಸೇವಿಸುವುದು ಇನ್ನಷ್ಟು ಹೆಚ್ಚು ಅಗತ್ಯವಾಗಿದೆ.
  • ಅಗತ್ಯವಾದ ಪೋಷಕಾಂಶಗಳು ಮತ್ತು ಖನಿಜಗಳಿಂದ ತುಂಬಿರುವ ಬಾದಾಮಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಬಾದಾಮಿಯು ಹಲವು ಬಗೆಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಈ ಮೂಲಕ ಚಳಿಗಾಲದಲ್ಲಿ ಸೂಕ್ಷ್ಮ ರಕ್ತನಾಳಗಳಲ್ಲಿ, ವಿಶೇಷವಾಗಿ ದೇಹದ ತುದಿಭಾಗಗಳಾದ ಕೈ ಬೆರಳು ಮತ್ತು ಕಾಲು ಬೆರಳುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಯಾಗದಂತೆ ತಡೆದು ಆರೋಗ್ಯವನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಬಾದಾಮಿಯಲ್ಲಿ ಪ್ರೋಟೀನ್ ಮತ್ತು ಕಬ್ಬಿಣ ಉತ್ತಮ ಪ್ರಮಾಣದಲ್ಲಿದ್ದು ರಕ್ತಹೀನತೆಯಾಗದಂತೆ ತಡೆಯುತ್ತದೆ.

​ಶಕ್ತಿಯನ್ನು ಒದಗಿಸುತ್ತದೆ

  • ಬಾದಾಮಿಯನ್ನು ನಮ್ಮ ನಿತ್ಯದ ಆಹಾರದಲ್ಲಿ ಆರೋಗ್ಯಕರ ಉಪಾಹಾರವಾಗಿ ಸೇರಿಸಿಕೊಳ್ಳುವುದು ಜಾಣತನದ ಆಯ್ಕೆಯಾಗಿದೆ. ವಿಶೇಷವಾಗಿ, ರಾತ್ರಿ ನೆನೆಸಿಟ್ಟ ಒಂದೆರಡು ಬಾದಾಮಿಗಳನ್ನು ಮರುದಿನ ಪ್ರಥಮ ಆಹಾರವಾಗಿ ಸೇವಿಸಿದರೆ ಗರಿಷ್ಟ ಪ್ರಯೋಜನ ಪಡೆಯಬಹುದು.
  • ಬಾದಾಮಿಯಲ್ಲಿ ವಿಟಮಿನ್ ಗಳು ಹೇರಳವಾಗಿದ್ದು ಅದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಕ್ಷಿಪ್ರಕಾಲದಲ್ಲಿ ನೀಡುತ್ತದೆ. ಅಲ್ಲದೇ ಬಾದಾಮಿಯಲ್ಲಿ ಮೆಗ್ನೀಸಿಯಮ್ ಉತ್ತಮ ಪ್ರಮಾಣದಲ್ಲಿದ್ದು ನಿತ್ಯದ ಕೆಲಸಗಳನ್ನು ಆಯಾಸವಿಲ್ಲದೇ ನಿರ್ವಹಿಸಲು ನೆರವಾಗುತ್ತದೆ.

​ಮೂಳೆಗಳನ್ನು ದೃಢಗೊಳಿಸುತ್ತದೆ

  • ಮೂಳೆಗಳಿಗೆ ಕ್ಯಾಲ್ಸಿಯಂ ಅತಿ ಅವಶ್ಯವಾದ ಖನಿಜವಾಗಿದೆ. ಬಾದಾಮಿಯಲ್ಲಿ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿರುವ ಕಾರಣ ನಿತ್ಯವೂ ಬಾದಾಮಿಯನ್ನು ತಿನ್ನುವ ಅಭ್ಯಾಸದಿಂದ ನಮ್ಮ ಮೂಳೆಗಳು ದೃಢವಾಗಿರುತ್ತವೆ.
  • ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಮೂಳೆಗಳ ಆರೋಗ್ಯವನ್ನು ಉತ್ತಮಗೊಳಿಸಲು ಹಾಗೂ ದೃಢಗೊಳ್ಳಲು ಬಾದಾಮಿಯನ್ನು ನಿತ್ಯವೂ ಬೆಳಗ್ಗಿನ ಸಮಯದಲ್ಲಿ ಮಕ್ಕಳಿಗೆ ತಿನ್ನಲು ನೀಡುವಂತೆ ತಜ್ಞರು ಸಲಹೆ ಮಾಡುತ್ತಾರೆ.

​ಜಾಣತನ ಹೆಚ್ಚಿಸಲು

  • ಬಾದಾಮಿಯಲ್ಲಿ ಕಂಡುಬರುವ ಪ್ರೋಟೀನ್ ಮೆದುಳಿನ ಜೀವಕೋಶಗಳ ಸಂಖ್ಯೆಗಳನ್ನು ಹೆಚ್ಚಿಸಲು ಹಾಗೂ ತಾರ್ಕಿಕವಾಗಿ ಯೋಚಿಸಲು ಸಹಾಯ ಮಾಡುತ್ತದೆ.
  • ಬಾದಾಮಿಯಲ್ಲಿರುವ ವಿಟಮಿನ್ ಇ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳು ಮೆದುಳನ್ನು ಆರೋಗ್ಯವಾಗಿರಿಸಲು ಹಾಗೂ ಮೆದುಳಿನ ಕ್ಷಮತೆಯನ್ನು ವೃದ್ದಿಸಲು ನೆರವಾಗುತ್ತವೆ.
  • ಅಲ್ಲದೇ ಬಾದಾಮಿಯಲ್ಲಿ ಸಮೃದ್ಧವಾಗಿರುವ ಮೆಗ್ನೀಶಿಯಂ ನರವ್ಯವಸ್ಥೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ತನ್ಮೂಲಕ ಜಾಣ್ಮೆಯನ್ನು ಹೆಚ್ಚಿಸುತ್ತದೆ.

​ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ

  • ಮೆದುಳಿನ ಒಟ್ಟಾರೆ ಆರೋಗ್ಯಕ್ಕೆ ಬಾದಾಮಿ ಅತಿ ಅಗತ್ಯ ಎಂದು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ತನ್ಮೂಲಕ ಸ್ಮರಣಶಕ್ತಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ನೆರವಾಗುತ್ತವೆ.
  • ಇದೇ ಕಾರಣಕ್ಕೆ ಬಾದಾಮಿಗೆ ಮೆದುಳಿನ ಆಹಾರ (ಬ್ರೇಯ್ನ್ ಫುಡ್) ಎಂಬ ಅನ್ವರ್ಥನಾಮವನ್ನೂ ನೀಡಲಾಗಿದೆ. ಇದರಲ್ಲಿರುವ ವಿಟಮಿನ್ ಇ ಮೆದುಳಿನ ಕ್ಷಮತೆ ಹೆಚ್ಚಿಸುವ ಜೊತೆಗೇ ತ್ವಚೆಯ ಕಾಂತಿಯನ್ನೂ ಹೆಚ್ಚಿಸುತ್ತದೆ ಮತ್ತು ಕಲಿತ ವಿಷಯಗಳು ದೀರ್ಘಕಾಲದವರೆಗೆ ಸ್ಮರಣೆಯಲ್ಲಿರುವಂತೆ ಮಾಡುತ್ತದೆ.

​ಬಾದಾಮಿಗಳ ಆಯ್ಕೆ

  • ಆದಷ್ಟೂ ಮಟ್ಟಿಗೆ ಇಡಿಯ ಬಾದಾಮಿಗಳನ್ನೇ ಕೊಳ್ಳಿರಿ, ತುಂಡಾಗಿರುವ ಅಥವಾ ಬಾದಾಮಿಯನ್ನು ಸೇರಿಸಲಾಗಿದೆ ಎಂದು ಬರೆದಿರುವ ಉತ್ಪನ್ನಗಳನ್ನು ಕೊಳ್ಳದಿರಿ. ಏಕೆಂದರೆ, ಇವುಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ, ಅದೂ ಕಳಪೆ ಗುಣಮಟ್ಟದ ಅಥವಾ ಅತಿ ಹಳೆಯ ದಾಸ್ತಾನನ್ನು ಬಳಸಲಾಗಿರುತ್ತದೆ.
  • ಇಡಿಯ ಮತ್ತು ದೊಡ್ಡ ಗಾತ್ರದ ಬಾದಾಮಿಗಳು ಕೊಂಚ ದುಬಾರಿ ಅನ್ನಿಸಿದರೂ, ಆರೋಗ್ಯದ ದೃಷ್ಟಿಯಿಂದ ಇವೇ ಸೂಕ್ತವಾಗಿವೆ.
  • ಮಕ್ಕಳಿಗೆ ದಿನಕ್ಕೆ ಒಂದು ಅಥವಾ ಎರಡು ರಾತ್ರಿ ನೆನೆಸಿಟ್ಟ ಬಾದಾಮಿಗಳನ್ನು ಬೆಳಿಗ್ಗೆ ಮೊದಲ ಆಹಾರವಾಗಿ ಸೇವಿಸಲು ನೀಡಿ. ಸಿಪ್ಪೆ ನಿವಾರಿಸಿಯೂ ನೀಡಬಹುದು. ಹಾಗೇ ತಿನ್ನಲು ಇಷ್ಟವಾಗದೇ ಇದ್ದರೆ, ಇದನ್ನು ಅರೆದು ಹಾಲಿನಲ್ಲಿ ಬೆರೆಸಿಯೂ ಮಕ್ಕಳಿಗೆ ಕುಡಿಯಲು ನೀಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ