ಈ ದಿನಗಳಲ್ಲಿ ಲಭಿಸುವ ಕರಬೂಜದ ಹಣ್ಣು ಕೂಡಾ ಹೊರಗಿನಿಂದ ದೃಢವಾದ ಸಿಪ್ಪೆ ಹೊಂದಿರುವ ಆದರೆ ಒಳಭಾಗದಲ್ಲಿ ಮೃದುವಾದ ತಿರುಳನ್ನು ಹೊಂದಿರುವ ನವಿರಾದ ಸಿಹಿಯನ್ನು ಹೊಂದಿರುವ ಫಲವಾಗಿದೆ. ಬೇಸಿಗೆಯಲ್ಲಿ ಈ ತಿರುಳು ಅಪ್ಯಾಯಮಾನ ಮಾತ್ರವಲ್ಲ, ಒಟ್ಟಾರೆ ಆರೋಗ್ಯವನ್ನು ವೃದ್ದಿಸುವ ಹಾಗೂ ನಿರ್ಜಲೀಕರಣದಿಂದ ತಪ್ಪಿಸುವ ಔಷಧಿಯೂ ಆಗಿದೆ. ಈ ಹಣ್ಣಿನ ಸೇವನೆಯಿಂದ ಲಭಿಸುವ ಕೆಲವು ಆರೋಗ್ಯಕರ ಪ್ರಯೋಜನಗಳು ಈ ಕೆಳಗಿನಂತಿವೆ:
ಆರ್ದ್ರತೆಯನ್ನು ಒದಗಿಸುತ್ತದೆ
ಕಲ್ಲಂಗಡಿ ಹಣ್ಣಿನಂತೆಯೇ ಕರ್ಬೂಜವೂ 90% ಕ್ಕೂ ಹೆಚ್ಚು ನೀರಿನಂಶವನ್ನು ಹೊಂದಿರುವ ಫಲವಾಗಿದೆ. ಬೇಸಿಗೆಯಲ್ಲಿ ದೇಹದ ಆರ್ದ್ರತೆಯನ್ನು ಮರುಪೂರಣಗೊಳಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ದೇಹದಲ್ಲಿ ನೀರಿನ ಅಂಶ ಉತ್ತಮವಾಗಿದ್ದಾಗ ತಾಪಮಾನವನ್ನು ನಿಯಂತ್ರಿಸಲು, ಜೀರ್ಣಕ್ರಿಯೆ ಉತ್ತಮಗೊಳಿಸಲು ಹಾಗೂ ಪೋಷಕಾಂಶಗಳನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸಲು ಸಾಧ್ಯವಾಗುತ್ತದೆ.
ಪೋಷಕಾಂಶಗಳಿಂದ ಸಮೃದ್ಧವಾಗಿದೆ
ಕರ್ಬೂಜದಲ್ಲಿ ವಿವಿಧ ಅವಶ್ಯಕ ವಿಟಮಿನ್ನುಗಳು, ಖನಿಜಗಳು ಹಾಗೂ ವಿಟಮಿನ್ ಸಿ, ಪೊಟ್ಯಾಶಿಯಂ ಹಾಗೂ ಬಿ-ವಿಟಮಿನ್ನುಗಳು ಸಮೃದ್ಧವಾಗಿವೆ. ವಿಟಮಿನ್ ಸಿ ನಮ್ಮ ದೇಹದ ಅಂಗಾಂಶಗಳ ದುರಸ್ತಿಗಾಗಿ ಅವಶ್ಯವಾಗಿದೆ. ಅಲ್ಲದೇ ಇದು ಆಂಟಿ ಆಕ್ಸಿಡೆಂಟ್ನಂತೆಯೂ ಕಾರ್ಯನಿರ್ವಹಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಗೆ ನೆರವನ್ನು ನೀಡುತ್ತದೆ. ಜರ್ನಲ್ ಫುಡ್ಸ್ ಎಂಬ ಮಾಧ್ಯಮದ ವರದಿಯ ಪ್ರಕಾರ, ಕರಬೂಜ ಹಣ್ಣು ಮತ್ತು ಬೀಜಗಳಲ್ಲಿ ಬೀಟಾ-ಕ್ಯಾರೋಟಿನ್ (ಪ್ರೊ-ವಿಟಮಿನ್ ಎ), ಫೈಟೊಯೀನ್, ಕ್ವೆರ್ಸೆಟಿನ್ ಮತ್ತು ಕೆಫಿಕ್ ಆಮ್ಲದಂತಹ ಗಣನೀಯ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿರುವ ರಾಸಾಯನಿಕಗಳಿವೆ. ಪೊಟ್ಯಾಶಿಸಿಯಮ್ ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ ಮತ್ತು ಹೃದಯ ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸುತ್ತದೆ, ಜೊತೆಗೇ ಶಕ್ತಿಯ ಉತ್ಪಾದನೆಗೆ ಬಿ ವಿಟಮಿನ್ನುಗಳು ಅಗತ್ಯವಾಗಿವೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸುವುದು ಒಳ್ಳೆಯದು ಅನ್ನೋದು ಇದಕ್ಕೆ
ಕಡಿಮೆ ಕ್ಯಾಲೋರಿಗಳಿವೆ
ಈ ಫಲದಲ್ಲಿ ಅತ್ಯಧಿಕ ಪ್ರಮಾಣದ ನೀರು ಇರುವುದರಿಂದ ಸ್ವಾಭಾವಿಕವಾಗಿ ಒಟ್ಟಾರೆ ಕ್ಯಾಲೋರಿಗಳೂ ಕಡಿಮೆಯೇ ಇರುತ್ತವೆ. ಹಾಗಾಗಿ ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಈ ಫಲ ಅತ್ಯಂತ ಸೂಕ್ತವಾಗಿದೆ. ಇದರ ಸೇವನೆಯಿಂದ ಹೊಟ್ಟೆ ತುಂಬಿರುವ ಭಾವನೆ ಮೂಡುತ್ತದೆ ಹಾಗೂ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಈ ಗುಣಗಳೆಲ್ಲಾ ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಬೇಕಾದ ಆಹಾರಗಳಿಗೆ ಇರಬೇಕಾದ ಗುಣಗಳೇ ಆಗಿರುವುದರಿಂದ ಈ ವ್ಯಕ್ತಿಗಳು ತಪ್ಪದೇ ಈ ಹಣ್ಣನ್ನು ಸೇವಿಸಬೇಕು.
ಜೀರ್ಣಾಂಗಗಳ ಆರೋಗ್ಯವನ್ನು ವೃದ್ಧಿಸುತ್ತವೆ
ಕರಬೂಜದಲ್ಲಿ ಕರಗುವ ನಾರಿನಂಶ ಉತ್ತಮವಾಗಿದೆ ಹಾಗೂ ಇವು ಜಠರ ಮತ್ತು ಕರುಳುಗಳಲ್ಲಿ ಆಹಾರ ಸುಗಮವಾಗಿ ಚಲಿಸಲು ನೆರವಾಗುತ್ತವೆ. ತನ್ಮೂಲಕ ಈ ಅಂಗಗಳ ಆರೋಗ್ಯವನ್ನು ವೃದ್ಧಿಸುತ್ತವೆ ಹಾಗೂ ಮಲಬದ್ದತೆ ಆಗದೇ ಇರಲು ಸಾಧ್ಯವಾಗುತ್ತದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ನಾರಿನಂಶ ಇರುವುದು ಜೀರ್ಣಾಂಗಗಳ ಆರೋಗ್ಯಕ್ಕೆ ಅಗತ್ಯವಾಗಿದೆ ಹಾಗೂ ಜೇನು ಕರಬೂಜ ಈ ಅಗತ್ಯತೆಯನ್ನು ಪೂರ್ಣಗೊಳಿಸುವ ಫಲವಾಗಿದೆ.
ಆರೋಗ್ಯಕರ ತ್ವಚೆಗೆ ನೆರವಾಗುತ್ತದೆ.
ಈ ಫಲದಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿ ಉತ್ತಮಗೊಳ್ಳಲು ಮಾತ್ರವಲ್ಲ, ತ್ವಚೆಯ ಕಾಂತಿ ಹೆಚ್ಚಲೂ ನೆರವಾಗುತ್ತದೆ. ವಿಟಮಿನ್ ಸಿ ತ್ವಚೆಯ ಅಂಗಾಂಶಗಳ ಮೂಲವಾದ ಕೊಲ್ಯಾಜೆನ್ ಎಂಬ ಪ್ರೋಟೀನ್ನ ಉತ್ಪಾದನೆಗೆ ನೆರವಾಗುತ್ತದೆ ಹಾಗೂ ತ್ವಚೆ ಬಿಗಿಯಾಗಿದ್ದು ಕಾಂತಿಯುಕ್ತವೂ ಆಗಿರುತ್ತದೆ. ಜೇನು ಕರಬೂಜದಲ್ಲಿರುವ ಆಂಟಿ ಆಕ್ಸಿಡೆಂಟುಗಳು ತ್ವಚೆಯನ್ನು ಫ್ರೀ ರ್ಯಾಡಿಕಲ್ ಎಂಬ ಕ್ಯಾನ್ಸರ್ಕಾರಕ ಕಣಗಳ ಧಾಳಿಯಿಂದ ರಕ್ಷಿಸುತ್ತವೆ ಹಾಗೂ ವೃದ್ದಾಪ್ಯದ ಲಕ್ಷಣಗಳು ಕಾಣಿಸಿಕೊಳ್ಳುವುದನ್ನು ತಡವಾಗಿಸುತ್ತವೆ.
ಕಣ್ಣಿನ ಆರೋಗ್ಯವನ್ನು ಉತ್ತಮಗೊಳಿಸಬಹುದು
ಕರಬೂಜದಲ್ಲಿ ಲ್ಯೂಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಎರಡು ಬಗೆಯ ಕ್ಯಾರೋಟಿನಾಯ್ದುಗಳಿವೆ. ಇವೆರಡೂ ಕಣ್ಣುಗಳ ಆರೋಗ್ಯವನ್ನು ಕಾಪಾಡಲು ಅಗತ್ಯವಾಗಿವೆ. ಇವು ಕಣ್ಣುಗಳನ್ನು ಪ್ರಖರ ಬೆಳಕಿನ ಅಲೆಗಳಿಂದ ರಕ್ಷಿಸುತ್ತವೆ ಹಾಗೂ ತನ್ಮೂಲಕ ವಯಸ್ಸಿಗೆ ಅನುಗುಣವಾಗಿ ಕಣ್ಣಿನ ಸ್ನಾಯುಗಳು ಶಿಥಿಲಗೊಳ್ಳುವ (macular degeneration) ಮತ್ತು ಕ್ಯಾಟರಾಕ್ಟ್ ಎಂಬ ಕಣ್ಣಿನ ಕಾಯಿಲೆ ಎದುರಾಗುವ ಸಾಧ್ಯತೆಯಿಂದ ರಕ್ಷಿಸುತ್ತದೆ.
ಇದನ್ನೂ ಓದಿ: ಖರ್ಜೂರವನ್ನು ಈ ರೀತಿ ತಿನ್ನೋದ್ರಿಂದ ದೇಹಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ ಎನ್ನುತ್ತಾರೆ ವೈದ್ಯರು
ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ
ಕರಬೂಜದಲ್ಲಿರುವ ಪೊಟ್ಯಾಶಿಯಮ್ ದೇಹದಲ್ಲಿ ಸೋಡಿಯಂನ ಪರಿಣಾಮಗಳನ್ನು ಎದುರಿಸುವ ಮೂಲಕ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೊಟ್ಯಾಶಿಯಮ್ ಸಮೃದ್ಧವಾಗಿರುವ ಆಹಾರಗಳ ಸೇವನೆಯಿಂದ ಪಾರ್ಶ್ವವಾಯು ಎದುರಾಗುವ ಅಪಾಯದ ಸಾಧ್ಯತೆಯನ್ನು ಕಡಿಮೆ ಮಾಡುವುದು, ಸ್ನಾಯುಗಳ ಸಾಂದ್ರತೆಯ ನಷ್ಟದ ವಿರುದ್ಧ ರಕ್ಷಣೆ ಮತ್ತು ಮೂಳೆ ಖನಿಜ ಸಾಂದ್ರತೆಯ ಸಂರಕ್ಷಣೆ ಮೊದಲಾದ ಲಾಭಗಳನ್ನು ಪಡೆಯಬಹುದು. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಎಂಬ ಮಾಧ್ಯಮದ ಪ್ರಕಾರ, ಕಡಿಮೆ ಸೋಡಿಯಂ ಮತ್ತು ಅಗತ್ಯ ಪ್ರಮಾಣದ ಪೊಟ್ಯಾಶಿಯಮ್ ಇರುವ ಆಹಾರದ ಸೇವನೆಯಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ ಎಂದು ವರದಿ ಮಾಡಲಾಗಿದೆ.
ಕರಬೂಜದ ಹಣ್ಣನ್ನು ಈ ವಿಧಗಳಲ್ಲಿ ಸೇವಿಸಬಹುದು
ಉಪಾಹಾರದಂತೆ: ಒಂದು ಬೋಗುಣಿಯಷ್ಟು ಹಣ್ಣಿನ ತಿರುಳನ್ನು ಚಿಕ್ಕದಾಗಿ ಕತ್ತರಿಸಿ ಸೇವಿಸಿ.
ಸಾಲಾಡ್ಗಳಲ್ಲಿ: ನಿಮ್ಮ ನಿತ್ಯದ ಸಾಲಾಡ್ಗಳಲ್ಲಿ ಈ ಹಣ್ಣಿನ ಚಿಕ್ಕ ತುಂಡುಗಳನ್ನು ಮಿಶ್ರಣ ಮಾಡಿ ಸೇವಿಸಿ.
ಸ್ಮೂಥಿಗಳಲ್ಲಿ: ನಿಮ್ಮ ಆಯ್ಕೆಯ ಸ್ಮೂಥಿಯನ್ನು ತಯಾರಿಸುವಾಗ ಕೆಲವು ತುಂಡುಗಳನ್ನು ಹಾಕಿ ಅರೆದು ಸೇವಿಸಿ.
ಸಿಹಿ ಪದಾರ್ಥಗಳಲ್ಲಿ: ಫ್ರೂಟ್ ಸಾಲಾಡ್, ಕಸ್ಟರ್ಡ್ ಮೊದಲಾದ ಸಿಹಿ ಪದಾರ್ಥಗಳಲ್ಲಿ ಈ ಹಣ್ಣನ್ನು ಚಿಕ್ಕ ತುಂಡುಗಳಾಗಿ ಬೆರೆಸಿ ಸೇವಿಸಿ.
ಕರಬೂಜದ ಹಣ್ಣಿನಲ್ಲಿ ಅಧಿಕ ನೀರಿನ ಅಂಶ ಮತ್ತು ಸಮೃದ್ಧ ಪೋಷಕಾಂಶಗಳು ಇರುವುದರಿಂದ ವಿಶೇಷವಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಬಯಸುವರಿಗಾಗಿ ಸಮತೋಲಿತ ಆಹಾರಕ್ಕೆ ಮೌಲ್ಯಯುತವಾದ ಜೊತೆಯಾಗಿದೆ. ಈ ಹಣ್ಣು ರುಚಿಕರ ಮತ್ತು ಪೌಷ್ಟಿಕವೂ ಆಗಿರುವ ಕಾರಣ ನಿಮ್ಮ ನಿತ್ಯದ ಆಹಾರಗಳಲ್ಲಿ ಸೇವಿಸಲು ಯೋಗ್ಯವಾಗಿದೆ.