ಆ್ಯಪ್ನಗರ

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರದಂತೆ ಮಾಡಲು ಸುಲಭ ಟಿಪ್ಸ್

ಬೇರೆಲ್ಲಾ ತರಕಾರಿಗಳು ಹೊಟ್ಟೆ ಹಸಿದಿರುವವರ ಕಣ್ಣೀರು ಒರಸುತ್ತವೆ. ಆದರೆ ಈರುಳ್ಳಿ ಕಣ್ಣೀರು ಬರಿಸುತ್ತದೆ. ಹೀಗೆ ಮಾಡಿ ನೋಡಿ ಇನ್ನು ಮುಂದೆ ಈರುಳ್ಳಿ ಹೆಚ್ಚುವಾಗ ಅಳುವ ಅಗತ್ಯತೆ ಬರುವುದಿಲ್ಲ.

Vijaya Karnataka Web 7 Sep 2021, 11:01 am
ಯಾವುದೇ ತರಕಾರಿಗಳನ್ನು ಕತ್ತರಿಸಲು ಕೊಟ್ಟರೂ ಅದು ನಮಗೆಲ್ಲಾ ಸುಲಭದ ಕೆಲಸ. ಅವರಿವರ ಬಳಿ ಮಾತನಾಡಿಕೊಂಡು ಅಥವಾ ಟಿವಿ ನೋಡಿಕೊಂಡು ಸುಲಭವಾಗಿ ತರಕಾರಿ ಕತ್ತರಿಸುತ್ತೇವೆ. ಆದರೆ ಈರುಳ್ಳಿಯನ್ನು ಮುಂದೆ ತಂದಿಟ್ಟರೆ, ಅದನ್ನು ಕತ್ತರಿಸದ ಸ್ವಲ್ಪ ಹಿಂದೆ ಮುಂದೆ ನೋಡುತ್ತೇವೆ.
Vijaya Karnataka Web try these simple tips to cut an onion without tearing up
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರದಂತೆ ಮಾಡಲು ಸುಲಭ ಟಿಪ್ಸ್


ಏಕೆಂದರೆ ಈರುಳ್ಳಿ ಹೆಚ್ಚುವಾಗ ಒಬ್ಬರ ಹತ್ತಿರ ಮಾತನಾಡಬೇಕಾದರೂ ಅಳುತ್ತಾ ಮಾತನಾಡಬೇಕು ಅಥವಾ ಟಿವಿಯಲ್ಲಿ ಕಾಮಿಡಿ ಕಾರ್ಯಕ್ರಮ ಬರುತ್ತಿದ್ದರೂ ಕೂಡ ನಗಲು ಸ್ವಾತಂತ್ರವಿರುವುದಿಲ್ಲ. ಅಳುತ್ತಲೇ ಎಂಜಾಯ್ ಮಾಡಬೇಕು. ಇದು ಬಹಳ ಜನರ ಅಷ್ಟೇ ಏಕೆ ಎಲ್ಲರ ದಾರುಣ ನೋವಿನ ಕಥೆ. ಅಷ್ಟಕ್ಕೂ ಬೇರೆ ಯಾವುದೇ ತರಕಾರಿಗಳನ್ನು ಬಿಟ್ಟು ಈರುಳ್ಳಿ ಹೆಚ್ಚುವಾಗ ಮಾತ್ರ ಕಣ್ಣೀರು ಏಕೆ ಬರುತ್ತದೆ ಎಂಬ ವಿಷಯ ನಿಮಗೆ ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ.

ಸಾಮಾನ್ಯವಾಗಿ ನಾವು ಒಂದು ಈರುಳ್ಳಿಯ ಸಿಪ್ಪೆತೆಗೆದು ಅದರ ಒಂದು ಭಾಗ ತೆಗೆದುಕೊಂಡರೆ, ಅದು ಮೂರು ಪದರಗಳಿಂದ ಮಾಡಲ್ಪಟ್ಟಿರುತ್ತದೆ. ಅದರಲ್ಲಿ ಮೊದಲನೆಯ ಅಥವಾ ಮೇಲ್ಭಾಗವನ್ನು ಕತ್ತರಿಸಿದ ಸಂದರ್ಭದಲ್ಲಿ ಅದು ಒಂದು ರೀತಿಯ ನೈಸರ್ಗಿಕ ರಾಸಾಯನಿಕ ಅನಿಲದ ಅಂಶವನ್ನು ಉತ್ಪತ್ತಿ ಮಾಡುತ್ತದೆ.

ಇದು ಬಹಳ ಬೇಗನೆ ಗಾಳಿಯಲ್ಲಿ ಲೀನವಾಗುತ್ತದೆ. ಈರುಳ್ಳಿಯ ಮುಂದೆಯೇ ಕುಳಿತಿರುವ ನಾವು ಅಂತಹ ಅನಿಲ ಮಿಶ್ರಿತ ಗಾಳಿಗೆ ನಮ್ಮ ಕಣ್ಣುಗಳನ್ನು ಒಡ್ಡುವುದರಿಂದ ಮತ್ತು ಅದು ನಮ್ಮ ಕಣ್ಣುಗಳ ಒಳಗಿನ ಸ್ವಲ್ಪ ಹೆಚ್ಚಿನ ಪ್ರಮಾಣದ ನೀರಿನ ಅಂಶದ ಮೇಲೆ ಅಂದರೆ ಕಣ್ಣೀರಿನ ಗ್ರಂಥಿಗಳ ಮೇಲೆ ಪ್ರಭಾವ ಬೀರುವುದರಿಂದ ಕಣ್ಣುಗಳಲ್ಲಿ ವಿಪರೀತ ಉರಿ ಕಂಡು ಬರಲು ಪ್ರಾರಂಭವಾಗುತ್ತದೆ. ಆನಂತರದಲ್ಲಿ ಬೇಡ ಎಂದರೂ ಸುರಿಯುವುದೇ ಜೋಗ ಜಲಪಾತ.

ಆದರೆ ಇಷ್ಟು ದಿನ ಈರುಳ್ಳಿ ಹೆಚ್ಚುವಾಗ ನೀವು ಅತ್ತಿದ್ದು ಸಾಕು. ಇನ್ನು ಮುಂದೆ ಈರುಳ್ಳಿಗೆ ನೀವು ಚಾಲೆಂಜ್ ಮಾಡಿ ಸ್ವಲ್ಪವೂ ಕಣ್ಣೀರು ಹಾಕದಂತೆ ಅದನ್ನು ಸುಲಭವಾಗಿ ಹೆಚ್ಚಿ ಹಾಕಬಹುದು. ಈ ಲೇಖನದಲ್ಲಿ ಅಂತಹ ಟಿಪ್ಸ್ ನಿಮಗಾಗಿ ಇವೆ.

​ಮೂಗಿನ ಬದಲು ಬಾಯಿಯಿಂದ ಉಸಿರಾಡಲು ಪ್ರಾರಂಭ ಮಾಡಿ

  • ಸಾಮಾನ್ಯವಾಗಿ ಗಾಳಿ ಎಂದ ಮೇಲೆ ನಾವು ಉಸಿರಾಡುವುದು ಮೂಗಿನಿಂದಲೇ ಅಲ್ಲವೇ? ಆದರೆ ಈರುಳ್ಳಿ ಹೆಚ್ಚುವಾಗ ಮಾತ್ರ ಈ ಒಂದು ಪ್ರಕ್ರಿಯೆಯನ್ನು ಬದಲಿಸಿಕೊಳ್ಳಿ. ಮೂಗಿನ ಮೂಲಕ ಉಸಿರಾಡುವ ಬದಲು ಸಂಪೂರ್ಣ ಈರುಳ್ಳಿ ಹೆಚ್ಚಿ ಮುಗಿಸುವವರೆಗೆ ಬಾಯಿಯಿಂದ ಉಸಿರಾಡಿ.
  • ಏಕೆಂದರೆ ನೀವು ಮೂಗಿನಿಂದ ಉಸಿರಾಡುವ ಗಾಳಿ ಕಣ್ಣೀರಿನ ಗ್ರಂಥಿಗಳ ಜೊತೆಗೆ ಸಂಪರ್ಕ ಸಾಧಿಸುತ್ತದೆ. ಇನ್ನೊಂದು ತಂತ್ರ ಎಂದರೆ ಈರುಳ್ಳಿಯನ್ನು ಹೆಚ್ಚುವಾಗ ಬಾಯಿತೆರೆದು ಸ್ವಲ್ಪ ನಾಲಿಗೆಯನ್ನು ಈಚೆ ಹಾಕಿ ಹೆಚ್ಚಿ.
  • ಹೀಗೆ ಮಾಡುವುದರಿಂದ ಈರುಳ್ಳಿಯಿಂದ ಬಿಡುಗಡೆಯಾಗುವ ಎಲ್ಲಾ ಅನಿಲದ ಅಂಶವನ್ನು ನಿಮ್ಮ ನಾಲಿಗೆ ಹೀರಿಕೊಳ್ಳುತ್ತದೆ. ಹಾಗಾಗಿ ಅದು ಕಣ್ಣೀರಿನ ಗ್ರಂಥಿಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ನೀವು ಬೇಕು ಎಂದರೂ ನಿಮಗೆ ಕಣ್ಣೀರು ಬರುವುದಿಲ್ಲ.

ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ, ಆರೋಗ್ಯದ ವಿಷಯದಲ್ಲಿ ಎತ್ತಿದ ಕೈ

​ಈರುಳ್ಳಿಯನ್ನು ಕೂಲ್ ಮಾಡಿ

ಇದೊಂದು ಸುಲಭವಾದ ಟೆಕ್ನಿಕ್. ನಿಮಗೆ ಕಣ್ಣೀರು ತರಿಸುವ ಈರುಳ್ಳಿಯನ್ನು ಶಾಂತಿ ಮಾಡಿ. ಅಂದರೆ ಅದನ್ನು ಸುಮಾರು 20 ನಿಮಿಷಗಳ ಕಾಲ ರೆಫ್ರಿಜರೇಟರ್ ನಲ್ಲಿ ಇಟ್ಟು ಆನಂತರ ಹೆಚ್ಚಲು ಪ್ರಾರಂಭ ಮಾಡಿ. ಇದರಿಂದ ಅದರಲ್ಲಿರುವ ಅನಿಲದ ಅಂಶ ಶಾಂತವಾಗುತ್ತದೆ ಮತ್ತು ನೀವು ಹೆಚ್ಚುವಾಗ ನಿಮಗೆ ಕಣ್ಣೀರು ಬರಲು ಸಾಧ್ಯವೇ ಇರುವುದಿಲ್ಲ.

​ಈರುಳ್ಳಿಯನ್ನು ನೀರಿನಲ್ಲಿ ನೆನೆಸುವುದು

  • ಇದು ಕೂಡ ಬಹಳ ಸುಲಭವಾದ ಮತ್ತು ಬಹಳ ಪರಿಣಾಮಕಾರಿಯಾದ ಒಂದು ತಂತ್ರ. ಈರುಳ್ಳಿಯನ್ನು ಹೆಚ್ಚುವಾಗ ಕಣ್ಣೀರು ಬರುವುದನ್ನು ತಪ್ಪಿಸಿಕೊಳ್ಳಲು ನೀವು ಹೀಗೆ ಮಾಡಬಹುದು.
  • ಈರುಳ್ಳಿಯ ಮೇಲ್ಭಾಗದ ಸಿಪ್ಪೆ ತೆಗೆದು ಅದನ್ನು ಅರ್ಧಕ್ಕೆ ಹೋಳು ಮಾಡಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಹಾಕಿ. ಆಗ ಈರುಳ್ಳಿಯಿಂದ ಬಿಡುಗಡೆಯಾಗುವ ಅನಿಲ ನೀರಿನಲ್ಲಿ ಮಿಶ್ರಣವಾಗುತ್ತದೆ ಮತ್ತು ನಿಮ್ಮ ಕಣ್ಣುಗಳಿಗೆ ಕಣ್ಣೀರು ಹಾಕುವ ಪ್ರಮೇಯ ತಪ್ಪುತ್ತದೆ.
  • ಆದರೆ ನೀರಿನಲ್ಲಿ ನೆನೆದಿರುವ ಈರುಳ್ಳಿ ಹೆಚ್ಚುವಾಗ ಕೈಯಿಂದ ಜಾರಿ ಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀರಿನಲ್ಲಿ ನೆನೆಸಿದ ಈರುಳ್ಳಿಯನ್ನು ಹುಷಾರಾಗಿ ಹೆಚ್ಚಿ.

​ಈರುಳ್ಳಿ ಹೆಚ್ಚುವಾಗ ಫ್ಯಾನ್ ಹಾಕಿಕೊಳ್ಳಿ

ಈರುಳ್ಳಿಯಿಂದ ಬಿಡುಗಡೆಯಾಗುವ ಅನಿಲವನ್ನು ನಿಮ್ಮ ಕಣ್ಣುಗಳಿಗೆ ತಾಗದಂತೆ ಬೇರೆ ಕಡೆಗೆ ವರ್ಗಾಯಿಸಲು ನಿಮ್ಮ ಹಾಲಿನಲ್ಲಿರುವ ಫ್ಯಾನ್ ಹಾಕಿಕೊಂಡು ಈರುಳ್ಳಿ ಹೆಚ್ಚಬಹುದು. ಇದರಿಂದ ನಿಮಗೆ ಸ್ವಲ್ಪವೂ ಕಣ್ಣೀರು ಬರುವುದಿಲ್ಲ.

​ಆಪಲ್ ಸೈಡರ್ ವಿನೆಗರ್ ಬಳಕೆ ಮಾಡಿ

  • ಒಂದು ವೇಳೆ ನಿಮ್ಮ ಮನೆಯಲ್ಲಿ ಆಪಲ್ ಸೈಡರ್ ವಿನೆಗರ್ ಇದ್ದರೆ ಅಥವಾ ಬೇರೆ ಯಾವುದೇ ಬಗೆಯ ವಿನೆಗರ್ ಇದ್ದರೆ ಅದನ್ನು ನೀವು ಈರುಳ್ಳಿಯ ಕತ್ತರಿಸಿದ ಹೋಳುಗಳ ಮೇಲೆ ಹಚ್ಚಬಹುದು ಇಲ್ಲವೆಂದರೆ ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಸ್ವಲ್ಪ ವಿನಿಗರ್ ಹಾಕಿ ಈರುಳ್ಳಿಗಳನ್ನು ಅದರಲ್ಲಿ ನೆನೆಹಾಕಿ ಸ್ವಲ್ಪ ಹೊತ್ತು ಬಿಟ್ಟು ಹೆಚ್ಚಬಹುದು.
  • ಇನ್ನೂ ಒಂದು ತಂತ್ರದ ಮೂಲಕ ನೀವು ಈರುಳ್ಳಿ ಹೆಚ್ಚಲು ಬಳಸುವ ಚಾಪಿಂಗ್ ಬೋರ್ಡ್ ಮೇಲೆ ಸಹ ವಿನಗರ್ ಅನ್ನು ಸವರಿ ಅದರಮೇಲೆ ಈರುಳ್ಳಿಯನ್ನು ಹೆಚ್ಚುವುದರಿಂದ ನಿಮಗೆ ಕಣ್ಣೀರು ಬರುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.

ವಿನೆಗರ್‌ನ ಉಪಯೋಗಗಳು ಗೊತ್ತಾದ್ರೆ, ನಿಜಕ್ಕೂ ಅಚ್ಚರಿಪಡುವಿರಿ!

​ಈರುಳ್ಳಿಯನ್ನು ಮೇಲ್ಭಾಗವನ್ನು ಕತ್ತರಿಸಿ ಹಾಕಿ

ಈರುಳ್ಳಿಯ ಮೇಲ್ಭಾಗದಲ್ಲಿ ಮೊದಲೇ ಹೇಳಿದಂತೆ ನಿಮಗೆ ಕಣ್ಣೀರು ತರಿಸುವ ಅಂಶಗಳು ಅಡಗಿರುತ್ತವೆ. ಹಾಗಾಗಿ ಈರುಳ್ಳಿಯ ಸಿಪ್ಪೆ ತೆಗೆದ ನಂತರ ಅದನ್ನು ಕತ್ತರಿಸಿ ಹಾಕಿದರೆ ಅದರಿಂದ ಸಂಪೂರ್ಣವಾಗಿ ನಿಮಗೆ ಮುಕ್ತಿ ಸಿಗುತ್ತದೆ ಮತ್ತು ಈರುಳ್ಳಿ ಹೆಚ್ಚುವಾಗ ನಿಮಗೆ ಕಣ್ಣೀರು ಬರುವುದಿಲ್ಲ. ಸಾಧಾರಣವಾಗಿ ಈರುಳ್ಳಿಯನ್ನು ಅರ್ಧಕ್ಕೆ ಕಟ್ ಮಾಡಿ ಹೆಚ್ಚಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ