ಪಪ್ಪಾಯಿ ಮತ್ತು ಜೇನಿನ ಫೇಸ್ ಪ್ಯಾಕ್
ಈ ಜೋಡಿಯಲ್ಲಿರುವ ಕಿಣ್ವಗಳಿಗೆ ಚರ್ಮವನ್ನು ಬಿಳಿಚಿಸುವ ಗುಣವಿದೆ. ಈ ಗುಣದಿಂದಾಗಿಯೇ ಈ ಜೋಡಿಯನ್ನು ಅತ್ಯುತ್ತಮ ನೈಸರ್ಗಿಕ ಬಿಳಿಚುಕಾರಕ ಎಂದು ಪರಿಗಣಿಸಬಹುದು. ಇವುಗಳ ಬಳಕೆಯಿಂದ ದೊರಕುವ ಫಲಿತಾಂಶ ಉತ್ತಮವಾಗಿರುತ್ತದೆ. ಕೇವಲ ಬಿಸಿಲಿನ ಝಳಕ್ಕೆ ಕಪ್ಪಗಾಗಿದ್ದ ಭಾಗವನ್ನು ಮಾತ್ರವಲ್ಲ ಹಿಂದಿನ ಚರ್ಮದ ಕಪ್ಪು ಕಲೆಗಳು ಮತ್ತು ಸೂಕ್ಷ್ಮ ಗೆರೆಗಳನ್ನೂ ಇಲ್ಲವಾಗಿಸುತ್ತದೆ.
ತಯಾರಿಸುವ ವಿಧಾನ
- ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಒಳಗಿನ ತಿರುಳನ್ನು ಸುಮಾರು ½ ಕಪ್ ನಷ್ಟು ಪ್ರಮಾಣವನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ ಚನ್ನಾಗಿ ಕಿವುಚಿ. ಇದಕ್ಕೆ ಒಂದು ದೊಡ್ಡ ಚಮಚ ಜೇನನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ಲೇಪವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ ಮತ್ತು ಬಿಸಿಲು ಬಿದ್ದು ಕಪ್ಪಗಾಗಿರುವ ಕೈ, ಕುತ್ತಿಗೆ ಮೊದಲಾದ ಭಾಗಗಳಿಗೆ ತೆಳುವಾಗಿ ಹಚ್ಚಿ. ಕಣ್ಣುಗಳನ್ನು ಮುಚ್ಚಿ ಕಣ್ಣಿನ ಮೇಲ್ಪದರದ ಮೇಲೂ ಹಚ್ಚಿ ಸುಮಾರು ಅರ್ಧ ಘಂಟೆ ಪವಡಿಸಿ.
- ಅರ್ಧ ಘಂಟೆಯ ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.
- ಉತ್ತಮ ಫಲಿತಾಂಶ ದೊರಕುವವರೆಗೂ ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ.
ಲಿಂಬೆ
ಲಿಂಬೆ ಆಮ್ಲೀಯವಾಗಿದ್ದು ಚರ್ಮವನ್ನು ಬಿಳಿಚಿಸಲೂ ನೆರವಾಗುತ್ತದೆ. ಇತರ ಪ್ರಸಾದನಗಳೊಂದಿಗೂ ಬೆರೆಸಿ ಲಿಂಬೆಯನ್ನು ಬಳಸಬಹುದು. ಒಂದು ವೇಳೆ ಹೆಚ್ಚಿನ ಸಮಯ ಅಥವಾ ವ್ಯವಧಾನ ಇಲ್ಲದೇ ಇದ್ದರೆ ತಕ್ಷಣವೇ ನಿರ್ವಹಿಸಬೇಕಾದ ಅವಶ್ಯಕತೆಯನ್ನು ಲಿಂಬೆ ಮಾತ್ರವೇ ಪೂರೈಸಬಲ್ಲುದು.
ತಯಾರಿಸುವ ವಿಧಾನ:
- ಬಿಸಿಲಿಗೆ ಬಿದ್ದು ಕಪ್ಪಗಾಗಿರುವ ಭಾಗಗಳನ್ನು ತಣ್ಣೀರಿನಿಂದ ತೊಳೆದು ಒರೆಸಿ ಸ್ವಚ್ಛವಾಗಿರಿಸಿಕೊಳ್ಳಿ.
- ಈಗ ಒಂದು ಹಣ್ಣಾದ ಲಿಂಬೆ ಹಣ್ಣನ್ನು ಅಡ್ಡಲಾಗಿ ಕತ್ತರಿಸಿ. ಕತ್ತರಿಸಿದ ಭಾಗ ತಾಕುವಂತೆ ಕೊಂಚವೇ ಹಿಂಡುತ್ತಾ ವೃತ್ತಾಕಾರದಲ್ಲಿ ಈ ಎಲ್ಲಾ ಭಾಗಗಳಿಗೆ ಲಿಂಬೆ ರಸ ಸವರುತ್ತಾ ಹೋಗಿ.
- ಕಣ್ಣುಗಳ ಭಾಗದಲ್ಲಿ ಅತೀವ ಎಚ್ಚರಿಕೆ ವಹಿಸಿ. ಸಾಧ್ಯವಾದರೆ ಈ ಕೆಲಸವನ್ನು ಆಪ್ತರು ನಿಮಗಾಗಿ ಮಾಡುವುದೇ ಒಳ್ಳೆಯದು.
- ಕೊಂಚ ಹೊತ್ತು ಹಾಗೇ ಬಿಡಿ. ಕೆಲವರಿಗೆ ಲಿಂಬೆರಸ ಉರಿ ತರಿಸಬಹುದು. ಉರಿ ಎನಿಸಿದರೆ ತಕ್ಷಣವೇ ನೀರಿನಿಂದ ತೊಳೆದುಕೊಳ್ಳಿ ಮತ್ತು ಈ ವಿಧಾನದ ಬದಲು ನಿಮಗೆ ಸೂಕ್ತವಾದ ಬೇರೊಂದು ವಿಧಾನವನ್ನು ಅನುಸರಿಸಿ.
- ಉರಿ ಇಲ್ಲದಿದ್ದರೆ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ನಂತರ ದಪ್ಪ ಟವೆಲ್ಲಿನಿಂದ ಒತ್ತಿಕೊಂಡು ಒಣಗಿಸಿ ತಕ್ಷಣವೇ ನಿಮ್ಮ ನಿತ್ಯದ ತೇವಕಾರಕ (ಮಾಯಿಶ್ಚರೈಸರ್) ಪ್ರಸಾದನವನ್ನು ಲಿಂಬೆರಸ ಹಚ್ಚಿದಲ್ಲೆಲ್ಲಾ ಹಚ್ಚಿಕೊಳ್ಳಿ. ಏಕೆಂದರೆ ಲಿಂಬೆರಸ ಹಚ್ಚಿದಾಗ ಚರ್ಮ ಅತೀವವಾಗಿ ಒಣಗುತ್ತದೆ. ಇದನ್ನು ಸರಿಪಡಿಸಲು ತೇವಕಾರಕ ಅವಶ್ಯವಾಗಿದೆ. ಒಂದರ್ಥದಲ್ಲಿ ಕಲ್ಮಶಗಳನ್ನು ನಿವಾರಿಸಿ ಹೊಸ ತೇವಾಂಶವನ್ನು ಒದಗಿಸುವ ಮೂಲಕ ಚರ್ಮವೂ ಶುದ್ಧಗೊಳ್ಳುತ್ತದೆ.
- ಉತ್ತಮ ಪರಿಣಾಮ ಪಡೆಯಲು ವಾರಕ್ಕೆ ಎರಡರಿಂದ ಮೂರು ಬಾರಿ ನಿರ್ವಹಿಸಿ. ಈ ಮೂಲಕ ಶೀಘ್ರ ಸಮಯದಲ್ಲಿಯೇ ಬಿಸಿಲಿಗೆ ಕಪ್ಪಗಾಗಿದ್ದ ಭಾಗ ಸಹಜವರ್ಣಕ್ಕೆ ಮರಳುತ್ತದೆ. ಬೇಸಿಗೆಯ ಬಿರುಬಿಸಿಲಿಗೆ ಕೂಲ್-ಕೂಲ್ ನ್ಯಾಚುರಲ್ ಫೇಸ್ ಪ್ಯಾಕ್ಗಳು
ಟೊಮಾಟೋ ಮತ್ತು ಮೊಸರಿನ ಫೇಸ್ ಪ್ಯಾಕ್
ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ನೈಸರ್ಗಿಕವಾದ ’ಸತ್ತ ಜೀವಕೋಶಗಳ ಪದರ’ವನ್ನು ನಿವಾರಿಸುವ ಪ್ರಸಾದನವಾಗಿದೆ. ಅಲ್ಲದೇ ಬಿಸಿಲಿನಿಂದ ಕಪ್ಪಗಾಗಿರುವ ಭಾಗವನ್ನು ಸಹಜವರ್ಣಕ್ಕೆ ತರಲು ಮತ್ತು ಸೂಕ್ಶ್ಮ ಗೀರುಗಳನ್ನು ನಿವಾರಿಸಲು ನೆರವಾಗುತ್ತದೆ.
ತಯಾರಿಸುವ ವಿಧಾನ:
- ಒಂದು ದೊಡ್ಡ ಚಮಚ ತಾಜಾ ಮತ್ತು ಸಾದಾ ಮೊಸರನ್ನು ಒಂದು ಬೋಗುಣಿಯಲ್ಲಿ ಹಾಕಿ ಇದಕ್ಕೆ ಈಗ ತಾನೇ ಟೊಮಾಟೋ ತಿರುಳಿನಿಂದ ಸಂಗ್ರಹಿಸಿದ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ದಪ್ಪನೆಯ ಲೇಪವಾಗಿಸಿ.
- ಈ ಲೇಪವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ ಕುತ್ತಿಗೆ ಮತ್ತು ಕೈಗಳಿಗೆ ಎಲ್ಲೆಲ್ಲಿ ಕಪ್ಪಗಾಗಿದೆಯೋ ಅಲ್ಲೆಲ್ಲಾ ದಪ್ಪನಾಗಿ ಹಚ್ಚಿಕೊಳ್ಳಿ.
- ಈ ಲೇಪ ಹಚ್ಚಿ ಸುಮಾರು ಅರ್ಧ ಘಂಟೆಯಾದರೂ ಹಾಗೇ ಬಿಡಬೇಕು. ಈ ಸಮಯದಲ್ಲಿ ಲೇಪ ನೀರಾಗಿ ಇಳಿಯುವ ಕಾರಣ ಇದರಿಂದ ನಿಮ್ಮ ಬಟ್ಟೆ ಮತ್ತು ಹಾಸಿಗೆ ಹೊದಿಕೆಗಳು ಕೊಳೆಯಾಗದಂತೆ ಸೂಕ್ತ ಕ್ರಮ ವಹಿಸಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸಹಜವರ್ಣ ಪಡೆಯುವವರೆಗೂ ವಾರಕ್ಕೆರಡು ಬಾರಿ ಈ ವಿಧಾನ ಅನುಸರಿಸಿ
ಹಾಲು ಮತ್ತು ಅರಿಶಿನ
ಅರಿಶಿನ ಉತ್ತಮ ಸೌಂದರ್ಯ ವರ್ಧಕ ಹಾಗೂ ತ್ವಚೆಗೆ ಆರೈಕೆ ನೀಡುವ ಸಾಮಾಗ್ರಿಯಾಗಿದೆ. ತ್ವಚೆಯ ಕಲೆಗಳನ್ನು ನಿವಾರಿಸುವಲ್ಲಿ ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಪ್ರಮುಖ ಪಾತ್ರ ವಹಿಸುತ್ತದೆ. ಸಹಜವರ್ಣ ಪಡೆಯುವುದು ಮಾತ್ರವಲ್ಲ, ಮುಖದ ಕಾಂತಿಯೂ ಹೆಚ್ಚುತ್ತದೆ. ಹಾಲಿನಲ್ಲಿ ಚರ್ಮಕ್ಕೆ ಅಗತ್ಯವಿರುವ ಪೋಷಕಾಂಶಗಳಿವೆ ಹಾಗೂ ಚರ್ಮದ ಆಳಕ್ಕೆ ಆರ್ದ್ರತೆಯನ್ನು ಒದಗಿಸುತ್ತದೆ. ಇವೆರಡನ್ನೂ ಬಳಸಿದಾಗ ಆರೋಗ್ಯಕರ ಮತ್ತು ಕಲೆಯಿಲ್ಲದ ತ್ವಚೆ ಪಡೆಯಬಹುದು.
ತಯಾರಿಸುವ ವಿಧಾನ:
- ಒಂದು ದೊಡ್ಡ ಚಮಚ ಕಡ್ಲೆಹಿಟ್ಟು, ಚಿಟಿಕೆಯಷ್ಟು ಅರಿಶಿನ ಮತ್ತು ಅಗತ್ಯಕ್ಕೆ ತಕ್ಕಷ್ಟು ಹಸಿ ಹಾಲನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಂದರೆ ಅತಿ ತೆಳ್ಳಗೂ ಅತಿ ದಪ್ಪನೆಯೂ ಅಲ್ಲದ ಲೇಪವಾಗಿಸಿ.
- ಈ ಲೇಪವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ ಕುತ್ತಿಗೆ ಮತ್ತು ಕೈಗಳಿಗೆ ಎಲ್ಲೆಲ್ಲಿ ಕಪ್ಪಗಾಗಿದೆಯೋ ಅಲ್ಲೆಲ್ಲಾ ದಪ್ಪನಾಗಿ ಹಚ್ಚಿಕೊಳ್ಳಿ.
- ಸುಮಾರು 15 ರಿಂದ 20 ನಿಮಿಷ ಹಾಗೇ ಬಿಡಿ ಬಳಿಕ ನಯವಾಗಿ ಉಜ್ಜಿಕೊಳ್ಳುತ್ತಾ ಈ ಲೇಪವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮ ಪಡೆಯಲು ವಾರಕ್ಕೊಮ್ಮೆ ಈ ವಿಧಾನ ಅನುಸರಿಸಿ.
ಸೌತೆ ಕಾಯಿ ಮತ್ತು ಗುಲಾಬಿ ನೀರು
ತ್ವಚೆ ತೀರಾ ಒಣಗಿದ್ದರೆ ಈ ವಿಧಾನ ಸೂಕ್ತವಾಗಿದೆ. ಏಕೆಂದರೆ ಒಣಚರ್ಮಕ್ಕೆ ಅತಿ ಹೆಚ್ಚಿನ ಪ್ರಮಾಣದ ಆರ್ದ್ರತೆಯನ್ನು ಸೌತೆಕಾಯಿ ಮಾತ್ರವೇ ಪೂರೈಸಬಲ್ಲುದು. ಅಲ್ಲದೇ ಚರ್ಮ ಮತ್ತೆ ಗಾಢಗೊಳ್ಳುವುದನ್ನೂ ಸೌತೆ ತಪ್ಪಿಸುತ್ತದೆ. ಗುಲಾಬಿ ನೀರು ಟೋನರ್ ನಂತೆ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಆದ್ರತೆಯನ್ನು ನೀಡಿ ತ್ವಚೆಗೆ ತಾಜಾತನವನ್ನೂ ನೀಡುತ್ತದೆ.
- ತಯಾರಿಸುವ ವಿಧಾನ:
- ಒಂದು ದೊಡ್ಡ ಚಮಚ ಎಳೆ ಸೌತೆಯ ತುರಿಯಿಂದ ಹಿಂಡಿದ ರಸ ಮತ್ತು ಸಮಪ್ರಮಾಣದ ಗುಲಾಬಿ ನೀರನ್ನು ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಿ.
- ಈ ದ್ರಾವಣದಲ್ಲಿ ಹತ್ತಿಯುಂಡೆ ಒಂದನ್ನು ಅದ್ದಿ ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ ಕುತ್ತಿಗೆಯ ಭಾಗಗಳಿಗೆ ಒತ್ತಿಕೊಳ್ಳುತ್ತಾ ಸವರಿ. ಸುಮಾರು ಹತ್ತು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
- ಈ ದ್ರಾವಣವನ್ನು ಕೊಂಚ ಹೆಚ್ಚಾಗಿಯೇ ಮಾಡಿಟ್ಟುಕೊಂಡು ಫ್ರಿಜ್ಜಿನಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ನಿತ್ಯವೂ ಬಿಸಿಲಿನಿಂದ ಮನೆಗೆ ಬಂದ ಬಳಿಕ ಈ ವಿಧಾನವನ್ನು ಅನುಸರಿಸುವ ಮೂಲಕ ತ್ವಚೆಯನ್ನು ಇನ್ನಷ್ಟು ಕಪ್ಪಗಾಗದಂತೆ ರಕ್ಷಿಸಿಕೊಳ್ಳಬಹುದು ಹಾಗೂ ತಾಜಾತವನ್ನೂ ಪಡೆಯಬಹುದು.
ಸುಂದರ ತ್ವಚೆಗಾಗಿ ಜೇನಿನ ಆರೈಕೆ, ಮನೆಯಲ್ಲಿಯೇ ಮಾಡಿ!
ಲೋಳೆಸರ (ಆಲೋವೆರಾ)
ಇದೊಂದು ಅದ್ಭುತ ನೈಸರ್ಗಿಕ ವಿಧಾನವಾಗಿದೆ. ಲೋಳೆಸರದ ತಿರುಳು ತ್ವಚೆಗೆ ತಂಪು ನೀಡುವ ಜೊತೆಗೇ ಗಾಢವರ್ಣವನ್ನು ಹಿಮ್ಮೆಟ್ಟಿಸುವ ಗುಣವನ್ನೂ ಹೊಂದಿದೆ. ಈ ತಿರುಳನ್ನು ನೇರವಾಗಿಯೂ ಹಚ್ಚಿಕೊಳ್ಳಬಹುದು ಅಥವಾ ನಿಮ್ಮ ನೆಚ್ಚಿನ ಇತರ ಮುಖಲೇಪದೊಂದಿಗೂ ಹಚ್ಚಿಕೊಳ್ಳಬಹುದು.
ತಯಾರಿಸುವ ವಿಧಾನ:- ಈಗ ತಾನೇ ಕೊಯ್ದ ಲೋಳೆಸರದ ಕೋಡನ್ನು ಬಿಡಿಸಿ ತಿರುಳನ್ನು ಸಂಗ್ರಹಿಸಿ. ಇದು ಸಾಧ್ಯವಾಗದಿದ್ದರೆ ಲೋಳೆಸರದ ಜೆಲ್ ಇರುವ ಪ್ರಸಾದನವನ್ನೂ ಬಳಸಬಹುದು. ಇದಕ್ಕೆ ಕೆಲವು ತೊಟ್ಟು ಲಿಂಬೆರಸ ಬೆರೆಸಿ ಮಿಶ್ರಣ ಮಾಡಿ.
- ಈ ಲೇಪವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ ಕುತ್ತಿಗೆ ಮತ್ತು ಕೈಗಳಿಗೆ ಎಲ್ಲೆಲ್ಲಿ ಕಪ್ಪಗಾಗಿದೆಯೋ ಅಲ್ಲೆಲ್ಲಾ ದಪ್ಪನಾಗಿ ಹಚ್ಚಿಕೊಳ್ಳಿ. ಸುಮಾರು ಹತ್ತರಿಂದ ರಿಂದ ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.