ಆ್ಯಪ್ನಗರ

ಶೀತ-ಕೆಮ್ಮು ಗುಣಪಡಿಸಲು ಈ ಕಷಾಯ ಮಾಡಿ

ಮಳೆಗಾಲ ಶುರುವಾದರೆ ಶೀತ ಕೆಮ್ಮು ಸಮಸ್ಯೆ ಹೆಚ್ಚಾಗುತ್ತದೆ. ಅದರಲ್ಲೂ ಈಗಂತೂ ರಾಜ್ಯದಲ್ಲಿ ಪ್ರವಾಹ ಬಂದು ಜನರ ಸ್ಥಿತಿ ಶೋಚನೀಯವಾಗಿದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲ ಮನೆಮದ್ದುಗಳು ಪರಿಣಾಮಕಾರಿ. ಇಲ್ಲಿ ಕೆಮ್ಮಿಗೆ ಕಷಾಯ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ.

Vijaya Karnataka Web 13 Aug 2020, 5:09 pm
ಕರುನಾಡು ಮಳೆಯಿಂದ ತತ್ತರಿಸುತ್ತಿದೆ, ಜನರು ಪ್ರವಾಹದಿಂದಾಗಿ ನಲುಗಿ ಹೋಗಿದ್ದಾರೆ. ಇನ್ನು ಕಾಯಿಲೆಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮಿಗೆ ಮಾತ್ರೆಗಳನ್ನು ನುಂಗುವ ಬದಲು ಮನೆಮದ್ದು ಮಾಡಿ ಗುಣಪಡಿಸಿ.
Vijaya Karnataka Web kashaya


ಇಲ್ಲಿ ಕೆಮ್ಮು-ಶೀತ ಕಡಿಮೆ ಮಾಡುವ ಕಷಾಯದ ಬಗ್ಗೆ ಹೇಳಲಾಗಿದೆ. ಇದನ್ನು ಸುಲಭವಾಗಿ ಮಾಡಬಹುದಾಗಿದ್ದು, ಈ ಕಷಾಯ ಮಾಡಿ ಶೀತ, ಕೆಮ್ಮು ಕಾಟದಿಂದ ಪಾರಾಗಿ.

ಬೇಕಾಗುವ ಸಾಮಗ್ರಿ
1 ಚಮಚ ನಿಂಬೆರಸ
ಚಿಟಕೆಯಷ್ಟು ತುರಿದ ಶುಂಠಿ
1 ಕಪ್ ನೀರು
1 ಚಮಚ ಜೇನು
2-3 ಕಾಳುಮೆಣಸು
1 ಚಮಚ ಆ್ಯಪಲ್ ಸಿಡರ್‌ ವಿನಿಗರ್

ಮಾಡುವ ವಿಧಾನ:
ಈ ಎಲ್ಲಾ ಸಾಮಗ್ರಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಆರಿದ ಮೇಲೆ ಒಂದು ಗಾಜಿನ ಬಾಟಲಿನಲ್ಲಿ ಹಾಕಿಟ್ಟು ಮನೆಯಲ್ಲಿ ಯಾರಿಗಾದರು ಕೆಮ್ಮು ಸಮಸ್ಯೆ ಇದ್ದರೆ ಮೂರು ಹೊತ್ತು ಒಂದೊಂದು ಚಮಚ ನೀಡಿ.

ಕಷಾಯದ ಪ್ರಯೋಜನಗಳು:
ಇದರಲ್ಲಿರುವ ಕಾಳುಮೆಣಸು ಸೋಂಕಿನ ವಿರುದ್ಧ ಹೋರಾಡುತ್ತದೆ, ಜೇನು ಕೆಮ್ಮು ಕಡಿಮೆ ಮಾಡುವಲ್ಲಿ ಸಹಕಾರಿ. ಶುಂಠಿ ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಕಾರಿ.
ಈ ಸಿರಪ್ ಕುಡಿದಾಗ ಗಂಟಲು ಕೆರೆತ ಕಡಿಮೆಯಾಗುವುದು.

ಕೆಮ್ಮು-ಶೀತ ಕಡಿಮೆ ಮಾಡುವ ಸರಳ ಮನೆಮದ್ದುಗಳು ಇಲ್ಲಿದೆ ನೋಡಿ

ಶುಂಠಿ
ನಮ್ಮ ಹಿರಿಯರು ಹಿಂದಿನಿಂದಲೂ ಶೀತ ಹಾಗೂ ಕೆಮ್ಮು ಇದ್ದರೆ ಶುಂಠಿ ಕಷಾಯ ಮಾಡಿ ಕುಡಿಯುತ್ತಿದ್ದರು. ಇದು ತುಂಬಾ ಆರೋಗ್ಯಕಾರಿ ಕೂಡ. ನಾವು ಹೆಚ್ಚಿನ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವಂತಹ ಶುಂಠಿಯು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ.

ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಕೆಲವು ತುಂಡು ಶುಂಠಿಯನ್ನು ಜಜ್ಜಿಕೊಂಡು ಅದನ್ನು ಕುದಿಯುವ ನೀರಿಗೆ ಹಾಕಬೇಕು. ಇದನ್ನು ಕುಡಿದರೆ ಕೆಮ್ಮು ಮತ್ತು ಗಂಟಲಿನ ಕಿರಿಕಿರಿ ತಪ್ಪಿಸಬಹುದು. ಜ್ವರ ವೇಳೆ ಕಾಡುವಂತಹ ವಾಕರಿಕೆಯನ್ನು ಇದು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಒಂದು ಗ್ರಾಂ ಶುಂಠಿ ಸೇವಿಸಿದರೆ ಅದರಿಂದ ವಾಕರಿಕೆ ತಡೆಯಬಹುದಾಗಿದೆ.

ಶುಂಠಿ ಚಹಾ ಕುಡಿಯೋದರ ಪ್ರಯೋಜನ ಏನು ಗೊತ್ತಾ?

ಜೇನುತುಪ್ಪ
ನೈಸರ್ಗಿಕದತ್ತವಾಗಿ ಸಿಗುವಂತಹ ಜೇನುತುಪ್ಪವು ತುಂಬಾ ಆರೋಗ್ಯಕಾರಿ ಆಗಿರುವುದು. ಜೇನುತುಪ್ಪದಲ್ಲಿ ವಿವಿಧ ರೀತಿಯ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಜೇನುತುಪ್ಪದ ಜತೆಗೆ ಲಿಂಬೆ ಹಾಕಿ ಚಾ ಕುಡಿದರೆ ಅದರಿಂದ ಗಂಟಲು ನೋವು ಶಮನ ಮಾಡಬಹುದು.

ಕೆಮ್ಮಿಗೆ ಜೇನುತುಪ್ಪವು ತುಂಬಾ ಪರಿಣಮಕಾರಿ ಆಗಿದೆ ಎಂದು ವೈಜ್ಞಾನಿಕವಾಗಿ ಸಾಬೀತು ಆಗಿದೆ. ಸಣ್ಣ ಮಕ್ಕಳಿಗೆ 10 ಗ್ರಾಂನಷ್ಟು ಜೇನುತುಪ್ಪ ಮಲಗುವ ಮೊದಲು ನೀಡಿದರೆ ಕೆಮ್ಮಿನ ತೀವ್ರತೆಯು ಕಡಿಮೆ ಆಗುವುದು ಎಂದು ಕಂಡುಕೊಳ್ಳಲಾಗಿದೆ. ಇದರಿಂದ ಮಕ್ಕಳು ಸುಖ ನಿದ್ರೆ ಮಾಡಬಹುದು ಮತ್ತು ಶೀತದ ಲಕ್ಷಣಗಳನ್ನು ಇದು ನಿವಾರಣೆ ಮಾಡುವುದು.

ಜೇನುತುಪ್ಪ-ಬೆಳ್ಳುಳ್ಳಿ ಎರಡೂ ಆರೋಗ್ಯದ ನೈಸರ್ಗಿಕ ವೈದ್ಯರು!

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ನಾವು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ. ಬೆಳ್ಳುಳ್ಳಿಯಲ್ಲಿ ಇರುವಂತಹ ಅಲಿಸಿನ್ ಎನ್ನುವ ಅಂಶವು ಸೂಕ್ಷ್ಮಾಣು ವಿರೋಧಿ ಗುಣ ಹೊಂದಿದೆ. ಬೆಳ್ಳುಳ್ಳಿಯನ್ನು ಸೇವಿಸಿದರೆ ಅದರಿಂದ ಶೀತದ ಲಕ್ಷಣಗಳು ಕಡಿಮೆ ಆಗುವುದು. ಬೆಳ್ಳುಳ್ಳಿಯು ಅನಾರೋಗ್ಯ ಬರದಂತೆ ತಡೆಯುವುದು ಎಂದು ಹೇಳಲಾಗುತ್ತದೆ.

ಉಪ್ಪು ನೀರು
ಶ್ವಾಸಕೋಶದ ಮೇಲ್ಭಾಗದ ಸೋಂಕನ್ನು ನಿವಾರಣೆ ಮಾಡಲು ನೀವು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಇದು ಶೀತದ ತೀವ್ರತೆ ಕಡಿಮೆ ಮಾಡುವುದು. ಉದಾಹರಣೆಗೆ ಗಂಟಲು ನೋವು ಅಥವಾ ಮೂಗು ಕಟ್ಟಿದ ಸಮಸ್ಯೆ ಇದ್ದರೆ ಇದರಿಂದ ಪರಿಹಾರ ಪಡೆಯಬಹುದು.

ಉಪ್ಪು ನೀರಿನಿಂದ ದಿನಕ್ಕೆ ಮೂರು ಅಥವಾ ನಾಲ್ಕು ಸಲ ಬಾಯಿ ಮುಕ್ಕಳಿಸಿ ಕೊಂಡರೆ ಆಗ ಬ್ಯಾಕ್ಟೀರಿಯಾ ಮತ್ತು ಸೋಂಕುಕಾರಕ ಹೊಂದಿರುವ ಕಫ ಕಡಿಮೆ ಅಥವಾ ಸಡಿಲವಾಗುವುದು. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿಕೊಂಡು ಬಾಯಿ ಮುಕ್ಕಳಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ