ಆ್ಯಪ್ನಗರ

ಪಂಚಮಿಗೆ ಕರೆಯಲು ಬರುವ ಅಣ್ಣನ ನಿರೀಕ್ಷೆಯಲ್ಲಿ ತಂಗಿ

ತಂಗಿಯ ರಕ್ಷಕ ಅಣ್ಣ, ಒಡ ಹುಟ್ಟಿದ ಅಣ್ಣನ ಶ್ರೇಯಸ್ಸು ಬಯಸುವ ತಂಗಿ, ತಂಗಿಯ ಕ್ಷೇಮ ಬಯಸುವ ಅಣ್ಣ ಇವರಿಬ್ಬರ ಪ್ರೀತಿಯನ್ನು ಸಾರಿ ಹೇಳಳು ಪಂಚಮಿ ಹಾಗೂ ರಾಖಿ ಹಬ್ಬ ಬರುತ್ತಿದೆ. ಹೆಣ್ಣು ಮದುವೆಯಾಗಿ ಪತಿ ಮೆನೆಗೆ ಹೋದ ಮೇಲೆ ತವರು ಮನೆಗೆ ಬರುವ ದಿನವನ್ನೇ ಕಾಯುತ್ತಿರುತ್ತಾಳೆ. ಅದಕ್ಕಾಗಿಯೇ ಪಂಚಮಿ ಹಾಗೂ ರಾಖಿ ಹಬ್ಬದ ನಿರೀಕ್ಷೆಯಲ್ಲಿರುತ್ತಾಳೆ.

Vijaya Karnataka Web 5 Aug 2019, 11:12 am
ತವರು ಮನೆ ಎನ್ನುವುದು ಪ್ರತಿಯೊಬ್ಬ ಹೆಣ್ಣು ಮಗಳಿಗೆ ಅಭಿಮಾನದ ಅರಮನೆ, ಸುಖ ಸಂತೋಷದ ಸಿರಿ ಮನೆ,ಹೆಣ್ಣುಮಗಳು ಹುಟ್ಟಿದಾಕ್ಷಣ ಮನೆಯಲ್ಲಿ ನಗುವಿನ ಸುಗ್ಗಿಯ ಆರಂಭ,ತಾಯಿಯ ಗರ್ಭದಲ್ಲಿ ಮೂಡಿದಾಗಿನಿಂದ ಹಿಡಿದು ಹೊರ ಪ್ರಪಂಚಕ್ಕೆ ಕಾಲಿಡುವ ತನಕ ಸುಖ ಸಂತೋಷ ಹೇಳತೀರದು.
Vijaya Karnataka Web brotherhood


ಹೆಣ್ಣು ಮಗು ಹುಟ್ಟಿದಾಕ್ಷಣ ಆ ಮಗು ಕಣ್ಣರಳಿಸಿ ನೋಟಕ್ಕೆ ಸೃಷ್ಟಿಯೇ ಶಿರಬಾಗಿ ನಮಿಸುವುದು, ಹೆಣ್ಣು ಮಗಳು ಅಪ್ಪ ಅಮ್ಮನ ಮುದ್ದಿನ ಮಗಳಾಗಿ, ಅಣ್ಣನ ಪ್ರೀತಿಯ ತಂಗಿಯಾಗಿ ,ಒಟ್ಟಿನಲ್ಲಿ ಮನೆಯವರೆಲ್ಲರ ಕಣ್ಮಣಿಯಾಗಿ ಬೆಳೆಯುವಳು, ಬೇಡಿದ್ದನ್ನು ಕೊಡಿಸಿ ಅಕ್ಕರೆಯಿಂದ ನೋಡಿಕೊಂಡವನು ಅಪ್ಪ ಕಣ್ಣೀರ ಒರೆಸಿ, ಸಾಂತ್ವನ ಹೇಳಿ ಧೈರ್ಯ ತುಂಬುವ ಅಮ್ಮ ಕಾಡಿಸಿ ಪ್ರೀತಿಸುವ ಅಣ್ಣ,ಇವರೆಲ್ಲರ ಪ್ರೀತಿಯಲ್ಲಿ ಬೆಳೆದ ಹೆಣ್ಣು ಕೊನೆಗೊಂದು ದಿನ ಮದುವೆಯಾಗಿ ಬೇರೆ ಮನೆಗೆ ಹೋಗಲೇಬೇಕು.

ಪತಿಯ ಮನೆಯಲ್ಲಿ ಎಲ್ಲ ಸೌಲಭ್ಯಗಳು ಇದ್ದರೂ, ತವರಿನ ಕಡೆಯೇ ಮನಸ್ಸು ಹರಿಯುವದು.ಅಪ್ಪ ಅಮ್ಮನನ್ನು ನೋಡಬೇಕು ಎನ್ನುವ ಬಯಕೆ ಎಂದೂ ತೀರದು. ಪಂಚಮಿ ಹಬ್ಬಕ್ಕೆ ಅಣ್ಣನ ದಾರಿ ಕಾಯುವ ಹೆಣ್ಣು ಮಗಳ ಮನಸ್ಸು ತುಂಬಾ ಭಾವನಾತ್ಮಕವಾದುದು. ಆ ಸಮಯದಲ್ಲಿ ಪತಿಯಾಗಲಿ,ಅತ್ತೆ ಮಾವ ಆಗಲಿ ಏನಾದರೂ ಸ್ವಲ್ಪ ಅಂದರೂ ಮುದ್ದು ಮಗುವಿನಂತೆ ಸೆರಗು ಮುಚ್ಚಿಕೊಂಡು ಅಳುವ ಆ ಹೆಣ್ಣುಮಗಳು ನೋವು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಮದುವೆಯಲ್ಲಿ ಕೊಟ್ಟ ಸೀರೆಯನ್ನು ಮಾಸಿ ಹೋದರೂ ಉಟ್ಟು ನಗುವ ಮನಸ್ಸುಳ್ಳವಳು.

ಪಂಚಮಿ ಹಬ್ಬಕ್ಕೆ ಹೋಗಲು ಅಣ್ಣ ಕರೆಯಲು ಬರುವನೆಂದು ಖುಷಿಯಾಗಿ ಮನೆಗೆಲಸ ಎಲ್ಲಾ ಮುಗಿಸಿ, ಅಣ್ಣನು ಬರುವ ದಾರಿ ಕಾಯುತ್ತ ಕುಳಿತ ಹೆಣ್ಣುಮಗಳಿಗೆ ಹಸಿವು, ನಿದ್ದೆ ಹತ್ತಿರ ಸುಳಿಯುವುದಿಲ್ಲ. ಅಣ್ಣ ಬಂದಾಗ ಸ್ವರ್ಗವೇ ಸಿಕ್ಕಷ್ಟು ಸಂಭ್ರಮ ಪಡುವಳು. ಒಬ್ಬ ಅಣ್ಣ ತಪ್ಪು ಮಾಡಿದಾಗ ತಂಗಿಯೂ ತನ್ನ ತಾಯಿಯ ಸ್ಥಾನದಲ್ಲಿ ಇದ್ದು ಬುದ್ದಿ ಹೇಳುವಳು. ಅದೇ ತಂಗಿ ತಪ್ಪು ಮಾಡಿದಾಗ ಅಣ್ಣನೂ ತನ್ನ ತಂದೆಯ ಸ್ಥಾನದಲ್ಲಿ ಇದ್ದು ಬುದ್ದಿ ಹೇಳುವನು.

ಒಡಹುಟ್ಟಿದವರ ನಡುವೆ ಅದೆಷ್ಟೋ ಮನೆಯೊಳಗಿನ ಮಹಾ ಯುದ್ಧಗಳೇ ನಡೆದಿರುತ್ತವೆ,ಮತ್ತೆ ಅರೆಕ್ಷಣ ಕಾಣದಿರಲಾರದಷ್ಟು ಪ್ರೀತಿಯೂ ತುಂಬಿರುತ್ತದೆ. ತಂಗಿಯೇ ಅಣ್ಣನ ಜೀವನದ ಮೊದಲ ಗೆಳತಿ, ಅಣ್ಣ ತಂಗಿ ಎಂಬ ಸಂಬಂಧ ಅರ್ಥೈಸುವ ಮೊದಲೇ ಅವರಿಬ್ಬರೂ ಸ್ನೇಹಿತರು. ಅನಂತರ ಪ್ರಪಂಚ ತಿಳಿಸುತ್ತದೆ ಅವರು ಅಣ್ಣ-ತಂಗಿ ಎಂದು ರಾಖಿ ಹಬ್ಬ ಬಂತೆಂದರೆ ಅಮ್ಮನಿಗೆ ಮೊದಲು ತನ್ನ ಅಣ್ಣನ ನೆನಪಾಗುತ್ತದೆ. ಆದರೆ ಇಂದು ಇಲ್ಲಿ ಮಕ್ಕಳ ಮೂಲಕ ಹಬ್ಬ ಆಚರಿಸಿ ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಾಳೆ.

ಸೌಮ್ಯ ಗುಂಟ್ರಾಳ
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ
ವಿಶ್ವವಿದ್ಯಾನಿಲಯ, ವಿಜಯಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ