ಆ್ಯಪ್ನಗರ

ಬಂಧವನ್ನು ರಕ್ಷಿಸಿದ ರಕ್ಷಾಬಂಧನ

ಒಂದು ಮೊಬೈಲ್‌ಗಾಗಿ ಅಕ್ಕನ ಬಳಿ ಒಂದು ವರ್ಷ ಮಾತುಬಿಟ್ಟೆ. ಅಮ್ಮ ಎಷ್ಟೇ ಹೇಳಿದರು ನಾನು ಮಾತ್ರ ಅಕ್ಕನೊಂದಿಗೆ ಮಾತನಾಡಲೇ ಇಲ್ಲ. ಆದರೆ ನಮ್ಮಿಬ್ಬರ ನಡುವೆ ಮಾತುಕತೆ ಮತ್ತೆ ಶುರುವಾಗಿದ್ದೇ ರಕ್ಷಾಬಂಧನದ ಬಳಿಕ.

Vijaya Karnataka Web 9 Aug 2019, 4:47 pm
ನನ್ನ ಇಬ್ಬರು ಅಕ್ಕಂದಿರಲ್ಲಿದೊಡ್ಡಕ್ಕ ರಶ್ಮಿ ಊರಿನಲ್ಲಿ ಇದ್ದಳು, ನನ್ನ ಎರಡನೇ ಅಕ್ಕ ಉಮಾ ನಮ್ಮೊಂದಿಗೆ ಮಂಗಳೂರಿನಲ್ಲಿ ಇದ್ದಳು. ಎರಡನೇಯ ಅಕ್ಕಳನ್ನು ಇಲ್ಲಿಯವರೆಗೂ ಅಕ್ಕ ಎಂದು ಕರೆದದ್ದು ಬೇರೆಯವರಿಗೆ ಪರಿಚಯ ಮಾಡಿಕೊಡುವಾಗ ಮಾತ್ರ. ಆಕೆಯನ್ನು ಉಮಾ ಎಂದೇ ಯಾವಾಗಲು ಕರೆಯುತ್ತಿದ್ದೆ. ನಾವಿಬ್ಬರೂ ಚಿಕ್ಕಂದಿನಿಂದ ಇಲ್ಲಿಯವರೆಗೂ ಜೊತೆಗೆ ಬೆಳೆದಿದ್ದೇವೆ. ನನ್ನ ದೊಡ್ಡ ಅಕ್ಕ ಮಾತ್ರ ನಮ್ಮೊಂದಿಗೆ ಇರಲಿಲ್ಲ. ಉಮಾ ಮತ್ತು ನಾನು ಒಟ್ಟಿಗೆ ಕಲಿಯುತ್ತ, ನಲಿಯುತ್ತ, ಜಗಳ ಆಡುತ್ತಾ ಬಂದೆವು.
Vijaya Karnataka Web raksha bandan 3


ಜಗಳ ಎನ್ನುವಾಗ ನನಗೆ ನೆನಪಾಗುವುದು ನಾನು ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ಆಕೆಯೊಂದಿಗೆ ಜಗಳವಾಡಿ ಸುಮಾರು ಒಂದು ವರ್ಷ ಮುಖಕ್ಕೆ ಮುಖ ಕೊಟ್ಟು, ಪರಸ್ಪರ ಮಾತನಾಡಿಯೇ ಇರಲಿಲ್ಲ. ಕಾಲೇಜ್ ಗೆ ಹೋಗುವಾಗ ಎದುರು ಸಿಕ್ಕರೂ ಕೂಡ ಸುಮ್ಮನೆ ಬರುತ್ತಿದ್ದೆ. ಆಕೆಯ ಗೆಳತಿಯರು ನಿನ್ನ ತಮ್ಮ ನೋಡಲ್ಲಿ ಎಂದು ಹೇಳಿದಾಗ ಅದನ್ನು ನಾನು ಕೇಳಿಸಿಕೊಂಡರೂ ಕೂಡ ಕೇಳದ ಹಾಗೆ ನಟಿಸಿ ದಾರಿ ಬದಲಾಯಿಸುತಿದ್ದೆ. ಆ ಜಗಳದ ಕಾರಣ ನೀವು ಕೇಳಿದರೆ ನಗಲು ಬಹುದು ಅಥವಾ ಇಷ್ಟು ಚಿಕ್ಕ ವಿಷಯಕ್ಕೆ ಅಷ್ಟು ವರ್ಷ ಮಾತಾನಾಡದೆ ಇರುವುದಾ ಎಂದು ಅನಿಸಬಹುದು.

ವಿಷಯ ಇಷ್ಟೇ, ನಾನು ಪಿಯುಸಿನಲ್ಲಿ ಇದ್ದಾಗ ರಜೆಯಲ್ಲಿ ದುಡಿದು ಒಂದು ಮೊಬೈಲ್ ತೆಗೆದುಕೊಂಡಿದ್ದೆ. ಅದನ್ನು ನಾನು ಬೆಳಿಗ್ಗೆ ಬಳಸಿ ಮನೆಯಲ್ಲಿ ಬಿಟ್ಟು ಕಾಲೇಜ್ ಗೆ ಹೋಗುತಿದ್ದೆ. ನಾನು ಸಂಜೆ ಬಂದು ಯಾವಾಗ ಮೊಬೈಲ್ ಹಿಡಿಯುತ್ತೇನೋ ಎಂದು ಅನಿಸುತ್ತಿತ್ತು. ನನಗಿಂತ ನನ್ನ ಅಕ್ಕ ಮೊದಲು ಕಾಲೇಜ್ ನಿಂದ ಬರುತ್ತಿದ್ದಳು. ಹಾಗಾಗಿ ಆಕೆ ನನ್ನ ಮೊಬೈಲ್ ತೆಗೆದುಕೊಳ್ಳುತಿದ್ದಳು. ಮುನಿಸು ಮೊಬೈಲ್ ಮುಟ್ಟುವ ಬಗ್ಗೆ ಆಗಿರಲಿಲ್ಲ. ಆಕೆ ಮೊಬೈಲ್ ಬಳಸಿ ಚಾರ್ಜ್ ಎಲ್ಲಾ ಕಡಿಮೆ ಮಾಡುತಿದ್ದಳು. ನಾನು ಬಂದ ಮೇಲೆ ನನಗೆ ಕೊಟ್ಟು ಹೋಗುತ್ತಿದ್ದಳು. ನಾನು ಅರ್ಧ ಗಂಟೆ ಬಳಸಿದ ತಕ್ಷಣ ಚಾರ್ಜ್ ಕಾಲಿಯಾಗಿ ಬಿಡುತಿತ್ತು. ಹಾಗಾಗಿ ನಾನು ಆಕೆಯ ಮೇಲೆ ತುಂಬಾ ಸಲ ನೀನು ನನ್ನ ಫೋನ್ ಚಾರ್ಜ್ ಖಾಲಿ ಮಾಡುತ್ತೀಯ, ನೀನು ನನ್ನ ಫೋನ್ ಯೂಸ್ ಮಾಡ್ಬೇಡ ಎಂದು ಹೇಳಿದ್ದೆ' ಆದರೆ ಆಕೆ ಮಾತ್ರ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಲೇ ಇರಲಿಲ್ಲ. ನಾನು ಅವಳಿಗೆ 'ನೀನು ನನ್ನ ಫೋನ್ ಯೂಸ್ ಮಾಡು ಜೊತೆಗೆ ಫ್ರೀ ಇದ್ದಾಗ ಚಾರ್ಜ್ ಕೂಡ ಇಡು ಎಂದು ಕೂಡ ಹೇಳಿದ್ದೆ. ಆಕೆ ನನ್ನ ಮಾತಿಗೆ ಬೆಲೆ ನೀಡದಿದ್ದಾಗ ಆಕೆಯೊಂದಿಗೆ ಮಾತು ಬಿಟ್ಟೆ.

'ಇಬ್ಬರು ಯಾಕೆ ಮಾತಾಡುವುದಿಲ್ಲ, ಏನು ವಿಷಯ? ಕೋಪ ಬಿಟ್ಟು ಮಾತನಾಡಿ' ಎಂದು ಅಮ್ಮ ಆಗಾಗ ಹೇಳುತ್ತಿದ್ದರು ಆದರೆ ನಾನು ಮಾತ್ರ ಕ್ಯಾರೇ ಮಾಡಲಿಲ್ಲ.

ಅಕ್ಕನೊಂದಿಗೆ ಸುಮಾರು ಒಂದು ವರ್ಷದ ನನ್ನ ಮೌನವನ್ನು ಮುರಿದಿದ್ದು ರಕ್ಷಾಬಂಧನ. ಆ ದಿನ ಅಕ್ಕ ನನಗೆ ಮತ್ತು ನನ್ನ ಅಣ್ಣನಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಿದಳು. ಆ ದಿನವೇ ನಾನು ಆಕೆಗೆ ಉಮಾ ಎಂದು ಕರೆದು ನನ್ನ ಹತ್ತಿರ ಇದ್ದ ಸ್ವಲ್ಪ ಹಣವನ್ನು ಆಕೆಗೆ ನೀಡಿದೆನು. ಅಂದಿನಿಂದ ಉಮಾ ಜೊತೆ ನಾನು ಮುನಿಸಿಕೊಂಡಿಲ್ಲ, ಮಾತು ಬಿಟ್ಟಿಲ್ಲ. ಆ ಒಂದು ರಕ್ಷಾಬಂಧನ ನಮ್ಮಿಬ್ಬರ ನಡುವೆ ಮತ್ತೆ ಮೊದಲಿನಂತೆ ಬದಲಾಗಲು ಸಹಾಯ ಮಾಡಿತು. ಇದು ರಕ್ಷಾಬಂಧನ ಎಂದು ಕೇಳಿದಾಗ ನನಗೆ ನೆನಪಾಗುವ ಒಂದು ಸುಂದರ ಕ್ಷಣ.
ಎಲ್ಲರಿಗೂ ರಕ್ಷಾಬಂಧನದ ಹಾರ್ಧಿಕ ಶುಭಾಶಯಗಳು

ಶಂಕರ್ ವಿಶ್ವಕರ್ಮ
ಯೂನಿವರ್ಸಿಟಿ ಕಾಲೇಜು
ಮಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ