ಆ್ಯಪ್ನಗರ

ಮದುವೆಯನ್ನು ಟ್ರಯಲ್‌ ಮಾಡಿ ನೋಡಿ

ನಿಮ್ಮ ವೈವಾಹಿಕ ಬದುಕು ಸುಖವಾಗಿರಬೇಕು ಅಂದರೆ ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವ ಸಂಗಾತಿಯ ಆಯ್ಕೆ ಮುಖ್ಯ ಅದೇ ಉದ್ದೇಶಕ್ಕೆ ಶುರುವಾಗಿದೆ ಟ್ರಯಲ್‌ ಮ್ಯಾರೇಜ್‌...

Vijaya Karnataka 20 Feb 2019, 9:04 am
ಹೌದು, ಇದೀಗ ಇಂಥದ್ದೊಂದು ಕಲ್ಪನೆ ಇತ್ತೀಚೆಗೆ ಗಮನ ಸೆಳೆಯುತ್ತಿದೆ. ಟ್ರಯಲ್‌ ಎನ್ನುವುದು ಕೇವಲ ವಸ್ತುಗಳಿಗೆ ಸೀಮಿತವಾಗದೆ ಸಂಬಂಧಗಳಿಗೂ ಲಗ್ಗೆ ಇಟ್ಟಿದೆ.
Vijaya Karnataka Web marriage 12222


ಏನಿದು?

ಅವಿವಾಹಿತ ಜೋಡಿಗಳು ತಾವು ಮದುವೆಯಾಗಲು ಸಮರ್ಥರೇ, ತಮ್ಮ ನಡುವೆ ಹೊಂದಾಣಿಕೆ, ಸಾಮರಸ್ಯ ಸಾಧ್ಯವೇ ಎಂದು ತಿಳಿದುಕೊಳ್ಳಲು ಒಂದು ನಿರ್ದಿಷ್ಟ ಸಮಯದವರೆಗೆ ಒಟ್ಟಾಗಿ ಒಂದೇ ಸೂರಿನಡಿ ಬಾಳುವುದೇ ಟ್ರಯಲ್‌ ಮ್ಯಾರೇಜ್‌. ವಿದೇಶಗಳಲ್ಲಿ ಖ್ಯಾತವಾಗುತ್ತಿರುವ ಇದು ಭಾರತದ ಮಟ್ಟಿಗೆ ಅಷ್ಟೇನೂ ಪ್ರಚಲಿತದಲ್ಲಿಲ್ಲ. ಕೆಲವರು ಸಹಜೀವನ ಅಥವಾ ಲೀವ್‌-ಇನ್‌ ಅನ್ನೇ ಟ್ರಯಲ್‌ ಮ್ಯಾರೇಜ್‌ ಎಂದು ಭಾವಿಸುತ್ತಾರೆ. ಇವೆರಡರ ಪರಿಕಲ್ಪನೆ ಬೇರೆ ಆದರೂ ಉದ್ದೇಶ ಒಂದೇ. ಒಬ್ಬರಿಗೊಬ್ಬರು ಇಷ್ಟವಾಗುತ್ತಾರೆ. ಮದುವೆಯಾಗಲೂ ನಿರ್ಧರಿಸುತ್ತಾರೆ. ಆದರೆ ಮದುವೆಗೂ ಮುನ್ನ ಆಕೆ ಅಥವಾ ಅವನೊಂದಿಗೆ ತಾನು ಹೊಂದಾಣಿಕೆಯಿಂದಿರಲು ಸಾಧ್ಯವೇ, ತಮ್ಮಿಬ್ಬರ ನಡುವೆ ಸಾಮರಸ್ಯ ಸಾಧ್ಯವೇ ಎಂದು ತಿಳಿದುಕೊಳ್ಳಲು ಮದುವೆಗೂ ಮುಂಚೆ ಟ್ರಯಲ್‌ ಮ್ಯಾರೇಜ್‌ಗೆ ತಮ್ಮನ್ನು ಒಳಪಡಿಸಿಕೊಳ್ಳುತ್ತಾರೆ. ಒಂದೇ ಸೂರಿನಡಿ ಬಾಳುತ್ತಾರೆ. ಪರಸ್ಪರರ ನಡುವೆ ಹೊಂದಾಣಿಕೆ ಸಾಧ್ಯವಿಲ್ಲದಾಗ ಪರಸ್ಪರ ಒಪ್ಪಿಯೇ ಬೇರೆಯಾಗುತ್ತಾರೆ. ಒಮ್ಮೆ ಇಬ್ಬರ ನಡುವೆ ಚೆನ್ನಾಗಿ ಹೊಂದಾಣಿಕೆ, ಸಾಮರಸ್ಯವಿದ್ದರೆ ಮಾತ್ರ ಮದುವೆಯಾಗುತ್ತಾರೆ. ಇದು ಸಾಕಷ್ಟು ಸಾಧಕ, ಬಾಧಕಗಳನ್ನು ಒಳಗೊಂಡಿದೆ. ಸಾಕಷ್ಟು ವಿರೋಧಗಳು ಕೂಡ ಇವೆ.

ವಿರೋಧ ಏಕೆ?

ದಾಂಪತ್ಯ ಸಂಬಂಧ ಕೂಡ ವ್ಯಾಪಾರೀಕರಣವಾಗುಬಹುದು. ಮ್ಯಾರೇಜ್‌ ಎನ್ನುವುದು ಟ್ರಯಲ್‌ ಆಗಿರುವುದರಿಂದ ಸಂಬಂಧಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ಟ್ರಯಲ್‌ ಮ್ಯಾರೇಜ್‌ನಲ್ಲಿ ಸಂಗಾತಿಯನ್ನು ಬಿಟ್ಟು ಬೇರೆ ಯಾರನ್ನಾದರೂ ವರಿಸಿದರೆ ಟ್ರಯಲ್‌ ಮ್ಯಾರೇಜ್‌ನಲ್ಲಿ ಜತೆಗಿದ್ದ ಸಂಗಾತಿಯ ನೆನಪು ಕಾಡಿ ನಿಜವಾದ ಮದುವೆಗೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಸಾಮಾಜಿಕ ಸ್ವಾಸ್ಥ್ಯ ಕೆಡಬಹುದು. ಟ್ರಯಲ್‌ ಮ್ಯಾರೇಜ್‌ ಸಮಯದಲ್ಲಿ ಮಕ್ಕಳಾದಲ್ಲಿ ಆ ಮಕ್ಕಳನ್ನು ನೈತಿಕ ಪ್ರಶ್ನೆ ಕಾಡುತ್ತದೆ. ಹಾಗೂ ಅಂತಹ ಮಕ್ಕಳಿಗೆ ಕಾನೂನಾತ್ಮಕವಾಗಿ ಕೂಡ ಯಾವುದೇ ನ್ಯಾಯ ದೊರೆಯುವುದಿಲ್ಲ. ಟ್ರಯಲ್‌ ಮ್ಯಾರೇಜ್‌ನಲ್ಲಿ ಸಂಗತಿಗಳಲ್ಲಿ ಯಾರೊಬ್ಬರಾದರೂ ಇನ್ನೊಬ್ಬರಿಂದ ದೌರ್ಜನ್ಯಕ್ಕೆ ಒಳಗಾದಲ್ಲಿ ಕೌಟುಂಬಿಕ ಕಾನೂನಿನಿಂದ ನೆರವು ಪಡೆಯಲು ಸಾಧ್ಯವಿಲ್ಲ. ಟ್ರಯಲ್‌ ಮ್ಯಾರೇಜ್‌ ಕಾನೂನಿನ ಚೌಕಟ್ಟಿಗೆ ಒಳಪಡದೇ ಇರುವುದರಿಂದ ವರದಕ್ಷಿಣೆ ಕಿರುಕುಳ ಮುಂತಾದ ಮಾನಸಿಕ ಕಿರುಕುಳ ಉಂಟಾದಲ್ಲಿ ಕಾನೂನಿನ ನೆರವು ಪಡೆಯುವುದು ಕಷ್ಟ ಸಾಧ್ಯ.

ಉಪಯೋಗ

ಮ್ಯಾರೇಜ್‌ ಎನ್ನುವುದೇ ಟ್ರಯಲ್‌ ಆಗಿರುವುದರಿಂದ ಬೇಡವೆಂದಾಗ ಸಂಬಂಧದ ಬಂಧದಿಂದ ಹೊರಬರಬಹುದು. ಟ್ರಯಲ್‌ ಮ್ಯಾರೇಜ್‌ನಲ್ಲಿ ಯಾವುದೇ ಒಪ್ಪಂದ ಇರುವುದಿಲ್ಲ.

ತಮಗೆ ಬೇಕಾದಂತೆ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಅವಕಾಶವಿರುತ್ತದೆ.

ಮದುವೆಯ ನಂತರ ಪರಸ್ಪರ ಹೊಂದಾಣಿಕೆ ಜಾಸ್ತಿ ಇರುತ್ತದೆ. ಹಾಗೂ ಗಂಡ-ಹೆಂದತಿಯ ನಡುವೆ ಜಗಳ, ಮನಸ್ತಾಪಗಳು ಕಡಿಮೆ ಆಗುತ್ತವೆ.

ವಿಚ್ಛೇದನದ ಪ್ರಮಾಣ ಕೂಡ ಕಡಿಮೆ ಆಗುತ್ತದೆ.

ಸಂಗಾತಿಗಳಿಬ್ಬರೂ ಅವರದೇ ಆದ ಆರ್ಥಿಕ ಸ್ವಾತಂತ್ರ ಹಾಗೂ ಸ್ವಾವಲಂಬಿ ಬದುಕು ಇರುತ್ತದೆ. ಯಾರೊಬ್ಬರೂ ಇನ್ನೊಬ್ಬರ ಅವಲಂಬನೆಯಲ್ಲಿ ಬದುಕುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ