ಕರ್ನಾಟಕದ ತುತ್ತ ತುದಿಯ ಉತ್ತರ ದಿಕ್ಕಿನಲ್ಲಿ ಭಾರತದ ದಖ್ಖನ್ ಪ್ರದೇಶದಲ್ಲಿ ಮೆರೆದಾಡಿದ ಭವ್ಯ ಪರಂಪರೆಯುಳ್ಳ, ಸಿಂಧರ, ಕಲ್ಯಾಣ, ಚಾಲುಕ್ಯರ, ಬಹಮನಿ ಅರಸರ ರಾಜಧಾನಿಯಾಗಿದ್ದ, ಸಾಮಾಜಿಕ ಧಾರ್ಮಿಕ ಕ್ರಾಂತಿಯ ರೂವಾರಿ ಬಸವಣ್ಣ ಮತ್ತಿತರ ಶರಣರ ಕರ್ಮ ಭೂಮಿಯಾಗಿರುವ ಮತ್ತು ಉತ್ತಮ ಹವಾಗುಣ ಹೊಂದಿರುವ ಪುಟ್ಟ ಜಿಲ್ಲೆಯೇ ಬೀದರ್. ಪೂರ್ವದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್, ಮದಕ ಜಿಲ್ಲೆಗಳಿಂದಲೂ ಉತ್ತರ ಪಶ್ಚಿಮದಲ್ಲಿ ಮಹಾರಾಷ್ಟ್ರ ರಾಜ್ಯದ ಸಾಂದೇಡ, ಲಾತೂರ ಜಿಲ್ಲೆಗಳಿಂದಲೂ ಮತ್ತು ದಕ್ಷಿಣದಲ್ಲಿ ಕರ್ನಾಟಕ ರಾಜ್ಯದ ಗುಲ್ಬರ್ಗಾ ಜಿಲ್ಲೆಯಿಂದ ಆವೃತ್ತವಾಗಿದೆ. ಬೀದರ್ ಜಿಲ್ಲೆಯ ವ್ಯಾಪ್ತಿ ಚಿಕ್ಕದಾಗಿದ್ದರೂ ಈ ಜಿಲ್ಲೆಗೆ ಉಜ್ವಲ ಐತಿಹಾಸಿಕ ಪರಂಪರೆಯಿದೆ. ಸಾಮ್ರಾಟ, ಮೌರ್ಯ, ಶಾತವಾಹನ, ರಾಷ್ಟ್ರಕೂಟ, ಕಲ್ಯಾಣ, ಚಾಲುಕ್ಯ, ಕಾಕತೀಯ, ಖಿಲ್ಜಿ ಹಾಗೂ ಹೈದರಾಬಾದ್ ನಿಜಾಮರ ಆಡಳಿತಕ್ಕೊಳಪಟ್ಟಿದ್ದ ಈ ಜಿಲ್ಲೆಯಲ್ಲಿ ವಿಭಿನ್ನ ಜನಾಂಗಗಳ ಕಲೆ, ಸಾಹಿತ್ಯ, ಸಂಸ್ಕೃತಿಗಳಿವೆ. ಪುರಾತನ ಕಾಲದ ನಳಮಹಾರಾಜನು ಆಳ್ವಿಕೆ ಮಾಡುತ್ತಿದ್ದ ವಿದರ್ಭವೇ ಈ ಬಿದರೆ ಹಾಗೂ ಮಹಾಭಾರತದಲ್ಲಿ ಬರುವ ವಿದುರ ನಗರವೇ ಈ ಬೀದರ್ ಎಂಬ ಊಹೆಗಳಿವೆ. ಶಾಸನಗಳಲ್ಲಿ ಬಿದನೂರು ಎಂದು ಈ ಊರನ್ನು ಕರೆಯಲಾಗಿದೆ. ಕಾಲ ಕಾಲಕ್ಕೆ ಬಿದಿರು ಬೆಳೆಯುವ ಪ್ರದೇಶವಾಗಿದ್ದರಿಂದ ಬಿದಿರು, ಬಿದಿರೆ, ಬಿದಿನೂರು ಎಂಬ ಹೆಸರಿದ್ದಿರಬಹುದೆಂಬುದು ಇನ್ನೊಂದು ಊಹೆ. ಮುಸ್ಲಿಂ ಅರಸರ ಕಾಲಕ್ಕೆ ಅಹಮದಾಬಾದ್ ಬೀದರ್ -ಮೊಹಮ್ಮದಾಬಾದ್ ಬೀದರ್ ಎಂದು ಕರೆಯಲ್ಪಟ್ಟಿದ್ದು ಈಗ ಬೀದರ್ ಆಗಿ ಉಳಿದುಕೊಂಡಿದೆ.
ನಮ್ಮ ಕರ್ನಾಟಕ: ಐತಿಹಾಸಿಕ ಪರಂಪರೆಯ ಬೀದರ್
ಕರ್ನಾಟಕದ ತುತ್ತ ತುದಿಯ ಉತ್ತರ ದಿಕ್ಕಿನಲ್ಲಿ ಭಾರತದ ದಖ್ಖನ್ ಪ್ರದೇಶದಲ್ಲಿ ಮೆರೆದಾಡಿದ ಭವ್ಯ ಪರಂಪರೆಯುಳ್ಳ, ಸಿಂದರ, ಕಲ್ಯಾಣ, ...
Vijaya Karnataka 18 Jul 2018, 5:00 am